ಹೊನ್ನಾವರ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವೇದ ವಿದ್ವಾಂಸರಾದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿಯ ಶಿವರಾಮ ಭಟ್ಟ ಅಲೇಖ (೮೮) ಸೋಮವಾರ ವಯೋ ಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಸಾಮವೇದದ ರಾಣಾಯನಿ ಶಾಖೆಯ ಕುರಿತು ವಿಶೇಷ ಅಧ್ಯಯನ ನಡೆಸಿದ್ದಕ್ಕಾಗಿ ಅವರಿಗೆ ರಾಷ್ಟ್ರಪತಿ ಪುರಸ್ಕಾರ ದೊರೆತಿದೆ. ಆಗಿನ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು.
ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಸಾಮವೇದದಲ್ಲಿ ನಾಲ್ಕು ಶಾಖೆಗಳಿದ್ದು ಅವುಗಳಲ್ಲಿ ದೇಶದಲ್ಲಿಯೇ ರಾಣಾಯನೀಯ ಶಾಖೆ ಹೊನ್ನಾವರ ತಾಲೂಕಿನ ಹೊಸಾಕುಳಿ ಭಾಗದಲ್ಲಿ ಮಾತ್ರ. ವಿಶೇಷವಾಗಿ ಕಂಡುಬರುತ್ತದೆ. ಉಳಿದ ಶಾಖೆಗಳ ಅನುಯಾಯಿಗಳು ದೇಶದ ಬೇರೆ ಬೇರೆ ರಾಜ್ಯಗಳಲ್ಲಿದ್ದಾರೆ. ಇಂತಹ ವಿರಳವಾದ ಸಾಮವೇದದ ರಾಣಾಯನೀಯ ಶಾಖೆಯ ಕುರಿತು ವಿಶೇಷ ಅಧ್ಯಯನ ಮಾಡಿದ್ದರು. ಈ ವಿಶೇಷ ಅಧ್ಯಯನಕ್ಕಾಗಿ ಅವರಿಗೆ ೧೯೯೮ರಲ್ಲಿ ರಾಷ್ಟ್ರಪತಿ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.
ಪೌರೋಹಿತ್ಯ ವೃತ್ತಿಯನ್ನು ಕೈಗೊಂಡಿದ್ದ ಅವರಿಗೆ ಅಪಾರ ಶಿಷ್ಯ ಬಳಗವನ್ನು ಹೊಂದಿದ್ದಾರೆ. ಕಾಂಚಿ ಶ್ರೀಗಳ ವೇದ ರಕ್ಷಣಾ ಟ್ರಸ್ಟ್ ನಲ್ಲಿ ಅಧ್ಯಾಪಕರಾಗಿದ್ದರು. ಅನೇಕ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಸಾಮವೇದ ರಾಣಾಯನೀಯ ಶಾಖೆಯ ಪಾಠ ಹೇಳಿ ಸಾಮವೇದ ವಿದ್ವಾಂಸರನ್ನು ನಾಡಿಗೆ ಕೊಟ್ಟಿದ್ದಾರೆ. ತಿರುಪತಿಯ ಟಿಟಿಡಿ ವೇದ ರಕ್ಷಣಾ ಸಂಸ್ಥೆಯು ೧೫೦ ತಾಸುಗಳಷ್ಟು ಸಂಪೂರ್ಣ ಸಾಮವೇದವನ್ನು ಇವರಿಂದ ಗಾಯನರೂಪದಲ್ಲಿ ಧ್ವನಿ ಮುದ್ರಿಸಿಕೊಂಡಿದೆ.
ಉಡುಪಿಯ ರಾಷ್ಟ್ರ ಕವಿ ಗೋವಿಂದ ಪೈ ಕೇಂದ್ರ ಹಾಗೂ ವೈಟ್ ಫೀಲ್ಡ್ ನ ಶ್ರೀ ಸಾಯಿಬಾಬಾ ಸಂಸ್ಥೆಯವರು ಇವರಿಂದ ಸಾಮವೇದದ ಧ್ವನಿ ಮುದ್ರಿಸಿಕೊಂಡಿದ್ದರು.
ಅತ್ಯಂತ ನಿಗರ್ವಿಯಾಗಿದ್ದ ಅವರು ಸರಳ-ಸಜ್ಜನಿಕೆ ವ್ಯಕ್ತಿತ್ವದವರಾಗಿದ್ದರು. ವಾಗ್ಮಿಯಾಗಿದ್ದ ಅವರು ಅನೇಕ ರಾಜ್ಯ, ರಾಷ್ಟ್ರ ಮಟ್ಟದ ಸಂಸ್ಕೃತ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿದ್ದರು. ಸಂಗೀತಕ್ಕೆ ಸಾಮವೇದ ಹೇಗೆ ಮೂಲ ಎಂಬ ವಿಷಯ ಸೇರಿದಂತೆ ಹಲವಾರು ವಿಷಯಗಳನ್ನು ವಿಚಾರಗೋಷ್ಠಿಗಳಲ್ಲಿ ಮಂಡಿಸಿದ್ದಾರೆ.ಮುಗ್ವಾದ ಶ್ರೀ ರಾಘವೇಶ್ವರ ಭಾರತೀ ಸಂಸ್ಕೃತ ಮಹಾವಿದ್ಯಾಲಯದ ಆಡಳಿತ ಮಂಡಳಿಗೆ ೩೨ ವರ್ಷಗಳ ದೀರ್ಘ ಕಾಲದ ವರೆಗೆ ಅಧ್ಯಕ್ಷರಾಗಿದ್ದರು. ಇದಲ್ಲದೇ ಕವಲಕ್ಕಿ ಶ್ರೀ ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾಗಿದ್ದರು. ಇದಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಅಲೇಖ ಶಿವರಾಮ ಭಟ್ಟ ಅವರ ನಿಧನಕ್ಕೆ ಶ್ರೀ ರಾಘವೇಂದ್ರ ಭಾರತೀ ವಿದ್ಯಾ ಸಂಸ್ಥೆಯ ಅಧ್ಯಕ್ಷರು, ಸಮಿತಿ ಸದಸ್ಯರು, ಶ್ರೀ ರಾಘವೇಂದ್ರ ಭಾರತೀ ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ವಿ.ಜಿ ಹೆಗಡೆ ಗುಡ್ಗೆ, ಪ್ರಾಚಾರ್ಯರಾದ ಡಾ.ನಾಗಪತಿ ಭಟ್ಟ, ಸೇರಿದಂತೆ ಹಲವಾರು ಗಣ್ಯರು, ಸಾರ್ವಜನಿಕರು, ಶಿಷ್ಯವೃಂದದವರು ತೀವ್ರ ಸಂತಾಪ ಸೂಚಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ