ಸುಪೌಲ್ (ಬಿಹಾರ): ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ರೈತರೊಬ್ಬರು ಸುಮಾರು ಐದು ಅಡಿಗಳಷ್ಟು ಉದ್ದದ ಜೀವಂತ ಮೊಸಳೆಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿರುವ ಅಪರೂಪದ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಭತ್ತದ ಗದ್ದೆಯಲ್ಲಿ ಕಾಣಿಸಿಕೊಂಡ ಈ ಮೊಸಳೆಯನ್ನು ಸ್ಥಳೀಯರು ಅತ್ಯಂತ ಧೈರ್ಯ ತೋರಿ ಯಾವುದೇ ಅಪಾಯವಾಗದಂತೆ ರಕ್ಷಿಸಿ, ನಂತರ ಅರಣ್ಯ ಇಲಾಖೆಯ ವಶಕ್ಕೆ ಒಪ್ಪಿಸಿದ್ದಾರೆ.
ಸುಪೌಲ್ ಜಿಲ್ಲೆಯ ಗ್ರಾಮವೊಂದರಲ್ಲಿ ರೈತರು ಎಂದಿನಂತೆ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಅನಿರೀಕ್ಷಿತವಾಗಿ ಗದ್ದೆಯ ಬೆಳೆಗಳ ನಡುವೆ ಮೊಸಳೆಯೊಂದು ಕಾಣಿಸಿಕೊಂಡಿದೆ. ಮೊಸಳೆಯನ್ನು ಕಂಡು ಆರಂಭದಲ್ಲಿ ಗ್ರಾಮಸ್ಥರಲ್ಲಿ ಭೀತಿ ಹಾಗೂ ಆತಂಕ ಮೂಡಿತಾದರೂ, ಎಲ್ಲರೂ ಸೇರಿ ಒಟ್ಟಾಗಿ ಅದನ್ನು ಸುರಕ್ಷಿತವಾಗಿ ಹಿಡಿಯಲು ನಿರ್ಧರಿಸಿದರು.
ರೈತ ಅಮಿತಕುಮಾರ ಎಂಬವರು ಇತರ ಗ್ರಾಮಸ್ಥರ ಸಹಾಯದಿಂದ, ಮೊಸಳೆಗೆ ಯಾರ ಮೇಲೂ ದಾಳಿ ಮಾಡದಂತೆ ಅದರ ಬಾಯಿಯನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿದರು.
ಯಾವುದೇ ತಕ್ಷಣಕ್ಕೆ ವಾಹನ ಲಭ್ಯವಿಲ್ಲದ ಕಾರಣ, ಸಾಹಸಿ ರೈತ ಅಮಿತಕುಮಾರ ಸುಮಾರು ಐದು ಅಡಿ ಉದ್ದದ ಮೊಸಳೆಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ನೇರವಾಗಿ ಹತ್ತಿರದ ಅರಣ್ಯ ಇಲಾಖೆ ಕಚೇರಿಯತ್ತ ನಡೆದರು. ಆದರೆ ಅಲ್ಲಿ ಯಾವುದೇ ಅಧಿಕಾರಿಗಳು ಇರಲಿಲ್ಲ. ಹೀಗಾಗಿ ಅವರು ಅಲ್ಲಿಂದ ನೇರವಾಗಿ ಭೀಮನಗರ ಪೊಲೀಸ್ ಠಾಣೆಗೆ ಮೊಸಳೆ ಹೊತ್ತು ಕಾಲ್ನಡಿಗೆಯಲ್ಲೇ ತೆರಳಿದರು.
ಈ ಅಸಾಮಾನ್ಯ ದೃಶ್ಯವನ್ನು ಕಂಡ ದಾರಿಹೋಕರು ಮತ್ತು ಸ್ಥಳೀಯರು ಬೆರಗಾದರು. ಕೆಲವರು ತಮ್ಮ ಮೊಬೈಲ್ ಫೋನ್ಗಳಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದು, ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿ ಸಖತ್ ವೈರಲ್ ಆಗಿವೆ.
ಅರಣ್ಯ ಇಲಾಖೆಗೆ ಹಸ್ತಾಂತರ:
ಪೊಲೀಸರ ಮೂಲಕ ಮಾಹಿತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಠಾಣೆಗೆ ಆಗಮಿಸಿ ಮೊಸಳೆಯನ್ನು ತಮ್ಮ ವಶಕ್ಕೆ ಪಡೆದರು.ಅಧಿಕಾರಿಗಳು ಮೊಸಳೆಯ ಆರೋಗ್ಯ ತಪಾಸಣೆ ನಡೆಸಿ, ಅದು ಐದು ಅಡಿ ಉದ್ದವಿದ್ದು ಸಂಪೂರ್ಣ ಆರೋಗ್ಯಕರ ಸ್ಥಿತಿಯಲ್ಲಿದೆ ಎಂದು ಖಚಿತಪಡಿಸಿದರು. ಬಳಿಕ ಅರಣ್ಯ ಸಿಬ್ಬಂದಿ ಮೊಸಳೆಯನ್ನು ಸುರಕ್ಷಿತವಾಗಿ ಕೋಸಿ ನಡಿಗೆಗೆ ಬಿಡುಗಡೆ ಮಾಡಿದರು.


ನಿಮ್ಮ ಕಾಮೆಂಟ್ ಬರೆಯಿರಿ