ಕುರುಕ್ಷೇತ್ರ : ಮಾನವೀಯತೆಯನ್ನೇ ಬೆಚ್ಚಿಬೀಳಿಸುವಂತಹ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿಯೊಬ್ಬಳು ತನ್ನ ಪತಿಯನ್ನು ಕ್ರೂರವಾಗಿ ಹತ್ಯೆ ಮಾಡಿ, ಆತನ ಹೊಟ್ಟೆಯನ್ನು ಬಗೆದು ಕರುಳುಗಳನ್ನು ಹೊರತೆಗೆದಿರುವ ಆರೋಪಿತ ಘಟನೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದಿದೆ. ಬಳಿಕ ಘಟನೆ ಬಹಿರಂಗವಾಗುತ್ತಿದ್ದಂತೆ ಆತಂಕಗೊಂಡ ಆಕೆ ಬಾಡಿಗೆ ಮನೆಯ ಮಹಡಿಯಿಂದ ಜಿಗಿದಿದ್ದು, ಗಾಯಗೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಮೃತ ವ್ಯಕ್ತಿಯನ್ನು ರಾಜೇಶ ಎಂದು ಗುರುತಿಸಲಾಗಿದ್ದು, ಪತ್ನಿ ವಿಮಲಾ ದೇವಿ ಜೊತೆ ಕುರುಕ್ಷೇತ್ರದ ಪೆಹೋವಾ ರಸ್ತೆಯಲ್ಲಿರುವ ರಾಜ್ ಪ್ಯಾಲೆಸ್ ಸಮೀಪದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು. ಘಟನೆ ನಡೆದ ದಿನ ಸಂಜೆ ಸುಮಾರು 5 ಗಂಟೆ ವೇಳೆಗೆ ದಂಪತಿಯ ನಡುವೆ ತೀವ್ರ ಜಗಳ ಮತ್ತು ಕೂಗಾಟ ಕೇಳಿಬಂದಿದೆ ಎಂದು ಮನೆಯ ಮಾಲೀಕ ರಿಂಕು ತಿಳಿಸಿದ್ದಾರೆ.
ಕೂಗಾಟ ಕೇಳಿ ಮೇಲ್ಮಹಡಿಗೆ ಧಾವಿಸಿದ ರಿಂಕು ಕಂಡ ದೃಶ್ಯ ಸಿನಿಮಾ ಕಥೆಯನ್ನೇ ನೆನಪಿಸುವಂತಿತ್ತು. ರಾಜೇಶ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಆತನ ಹೊಟ್ಟೆಗೆ ಗಂಭೀರ ಗಾಯಗಳಾಗಿದ್ದವು. ಇದೇ ವೇಳೆ ರಾಜೇಶ ದೇಹದಿಂದ ಹೊರಬಂದಿದ್ದ ಕರುಳುಗಳನ್ನು ವಿಮಲಾ ದೇವಿ ಒಂದು ಚೀಲದಲ್ಲಿ ತುಂಬುತ್ತಿರುವುದನ್ನು ತಾನು ಕಂಡಿದ್ದಾಗಿ ರಿಂಕು ಪೊಲೀಸರಿಗೆ ತಿಳಿಸಿದ್ದಾರೆ.
ಮನೆಯ ಮಾಲೀಕನನ್ನು ಕಂಡ ಕೂಡಲೇ ವಿಮಲಾ ದೇವಿ ಗಾಬರಿಗೊಂಡು ಮಹಡಿಯಿಂದ ಕೆಳಗೆ ಜಿಗಿದಿದ್ದಾಳೆ. ಜಿಗಿತದಿಂದ ಗಂಭೀರವಾಗಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಆಕೆಯ ಹೇಳಿಕೆ ದಾಖಲಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಧಾಂಪುರ ಗ್ರಾಮದ ಮೂಲದ ರಾಜೇಶ ಕಳೆದ ಸುಮಾರು ಒಂದು ವರ್ಷದಿಂದ ಪತ್ನಿ ಜೊತೆ ಕುರುಕ್ಷೇತ್ರದಲ್ಲಿ ವಾಸಿಸುತ್ತಿದ್ದ. ಪೆಹೋವಾ ರಸ್ತೆಯಲ್ಲಿರುವ ನೀರು ವ್ಯಾಪಾರ ಸಂಸ್ಥೆಯ ಸರಬರಾಜು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ.
ಹತ್ಯೆಗೀಡಾದ ರಾಜೇಶ ಮರಣೋತ್ತರ ಪರೀಕ್ಷೆಯ ವರದಿ ಪ್ರಕರಣದ ಭೀಕರತೆಯನ್ನು ಇನ್ನಷ್ಟು ಬಹಿರಂಗಪಡಿಸಿದೆ. ವರದಿಯ ಪ್ರಕಾರ, ರಾಜೇಶನ ಹೊಟ್ಟೆಯನ್ನು ಸುಮಾರು 35 ಸೆಂಟಿಮೀಟರ್ಗಳಷ್ಟು ಉದ್ದವಾಗಿ ಸೀಳಲಾಗಿದ್ದು, ಚೂಪಾದ ಆಯುಧಗಳಿಂದ ಆಳವಾದ ಗಾಯಗಳನ್ನು ಮಾಡಲಾಗಿದೆ. ಪರಿಣಾಮವಾಗಿ ಆತನ ಕರುಳುಗಳು ಹೊಟ್ಟೆಯ ಹೊರಭಾಗಕ್ಕೆ ಬಂದಿದ್ದವು.
ಇದಷ್ಟೇ ಅಲ್ಲದೆ, ಮೃತನ ದೇಹದಲ್ಲಿ ಯಕೃತ್ತಿನ (ಲಿವರ್) ಒಂದು ದೊಡ್ಡ ಭಾಗ ಹಾಗೂ ಬಲ ಮೂತ್ರಪಿಂಡ (ಕಿಡ್ನಿ) ಕಾಣೆಯಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಈ ಅಂಗಾಂಗಗಳು ಹೇಗೆ ನಾಪತ್ತೆಯಾದವು ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನಾ ಸ್ಥಳದಿಂದ ವಿವಿಧ ಗಾತ್ರದ ಮೂರು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಠಾಣಾಧಿಕಾರಿ ಸುರಿಂದರ ಸಿಂಗ್ ಹಾಗೂ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿತು. ವಿಧಿವಿಜ್ಞಾನ ತಜ್ಞರ ತಂಡವು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ.
ಮನೆಯ ಮಾಲೀಕ ರಿಂಕು ನೀಡಿರುವ ಮಾಹಿತಿಯ ಪ್ರಕಾರ, ವಿಮಲಾ ದೇವಿ ಸಾಂಪ್ರದಾಯಿಕ ಚಿಕಿತ್ಸೆಗಳು ಹಾಗೂ ದೆವ್ವ ಬಿಡಿಸುವ (ಎಕ್ಸಾರ್ಸಿಸಂ) ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಳು. ಜೊತೆಗೆ ದಂಪತಿಯ ನಡುವೆ ಆಗಾಗ ಜಗಳಗಳು ನಡೆಯುತ್ತಿರುತ್ತಿದ್ದವು ಎನ್ನಲಾಗಿದೆ. ಆದರೆ ಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ರಾಜೇಶ ಮತ್ತು ವಿಮಲಾ ದೇವಿ ಹಲವು ವರ್ಷಗಳ ಹಿಂದೆ ವಿವಾಹವಾಗಿದ್ದರೂ ಅವರಿಗೆ ಮಕ್ಕಳಿರಲಿಲ್ಲ. ಅವರ ವೈವಾಹಿಕ ಸಂಬಂಧ, ಹಿಂದಿನ ಕಲಹಗಳು ಹಾಗೂ ಈ ಭೀಕರ ಘಟನೆಯ ಹಿಂದಿನ ಸಂದರ್ಭಗಳ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಮಹಿಳೆಯ ಹೇಳಿಕೆ, ವಿಧಿವಿಜ್ಞಾನ ಸಾಕ್ಷ್ಯಗಳು ಹಾಗೂ ಮರಣೋತ್ತರ ಪರೀಕ್ಷಾ ವರದಿಯ ಆಧಾರದ ಮೇಲೆ ಮುಂದಿನ ತನಿಖೆ ನೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ