ನವದೆಹಲಿ : ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಹಲವಾರು ಮಾಜಿ ಮುಖ್ಯಮಂತ್ರಿಗಳು ಸ್ಪರ್ಧಿಸಿದ್ದರು. ಪ್ರಮುಖ ಸ್ಪರ್ಧಿಗಳಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಚರಂಜಿತ್ ಸಿಂಗ್ ಚನ್ನಿ, ಮನೋಹರ್ ಲಾಲ್ ಖಟ್ಟರ್, ಬಸವರಾಜ ಬೊಮ್ಮಾಯಿ, ಭೂಪೇಶ ಬಾಘೇಲ್, ಜಗದೀಶ ಶೆಟ್ಟರ್, ಅಖಿಲೇಶ ಯಾದವ್, ಶಿವರಾಜ್ ಸಿಂಗ್ ಚೌಹಾಣ್, ಎಚ್.ಡಿ.ಕುಮಾರಸ್ವಾಮಿ ಮತ್ತು ದಿಗ್ವಿಜಯ್ ಸಿಂಗ್ ಸೇರಿದ್ದಾರೆ. ಇವರಲ್ಲಿ ಕೆಲವರು ಗೆಲುವಿನ ನಗೆ ಬೀರಿದರೆ ಕೆಲವರು ಸೋತಿ ನಿರಾಸೆ ಅನುಭವಿಸಿದ್ದಾರೆ. ಒಟ್ಟು 12 ಮಾಜಿ ಮುಖ್ಯಮಂತ್ರಿಗಳು ಸ್ಪರ್ಧಿಸಿದ್ದು, 8 ಮಾಜಿ ಮುಖ್ಯಮಂತ್ರಿಗಳು ಗೆಲುವು ಸಾಧಿಸಿದ್ದಾರೆ. ನಾಲ್ವರು ಸೋಲನುಭವಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಲ್ಲಿ ಯರ್ಯಾರು ಗೆಲುವು ಸಾಧಿಸಿದ್ದಾರೆ ಹಾಗೂ ಯಾರ್ಯಾರು ಸೋಲನುಭವಿಸಿದ್ದಾರೆ ಎಂಬುದು ಇಲ್ಲಿದೆ.
ಚರಣಜಿತ್ ಸಿಂಗ್ ಚನ್ನಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಚನ್ನಿ ಅವರು ಜಲಂಧರ ಲೋಕಸಭಾ ಕ್ಷೇತ್ರದಲ್ಲಿ 1,75,993 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಮನೋಹರ ಲಾಲ ಖಟ್ಟರ್: ಹರಿಯಾಣದ ಕರ್ನಾಲ್ ಕ್ಷೇತ್ರದಲ್ಲಿ ಹರ್ಯಾಣಾ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಅಭ್ಯರ್ಥಿ ಮನೋಹರಲಾಲ ಖಟ್ಟರ್ ಅವರು 2,00,000ಕ್ಕೂ ಹೆಚ್ಚು ಮತಗಳಿಂದ ಜಯಗಳಿಸಿದ್ದಾರೆ.
ಬಸವರಾಜ ಬೊಮ್ಮಾಯಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಕ್ಷೇತ್ರದಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ವಿರುದ್ಧ 43,513 ಮತಗಳಿಂದ ಗೆದ್ದಿದ್ದಾರೆ.
ಭೂಪೇಶ ಬಘೇಲ್: ಸೋಲಿನ ಮೇಲೆ ಸೋಲು ಕಾಣುತ್ತಿರುವ ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಹಾಗೂ ರಾಜನಂದಗಾಂವ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ 44,411 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.
ಜಗದೀಶ ಶೆಟ್ಟರ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಬೆಳಗಾವಿ ಕ್ಷೇತ್ರದಲ್ಲಿ 1,78,437 ಮತಗಳಿಂದ ಭರ್ಜರಿ ಜಯಗಳಿಸಿದ್ದಾರೆ.
ಅಖಿಲೇಶ ಯಾದವ್: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಅಭ್ಯರ್ಥಿಯಾದ ಅಖಿಲೇಶ ಯಾದವ ಅವರು ತಮ್ಮ ಪಕ್ಷದ ಭದ್ರಕೋಟೆಯಾದ ಕನೌಜ್ನಲ್ಲಿ 1,70,992 ಮತಗಳಿಂದ ಭರ್ಜರಿ ಜಯಗಳಿಸಿದ್ದಾರೆ.
ಶಿವರಾಜ ಸಿಂಗ್ ಚೌಹಾಣ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ವಿದಿಶಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶಿವರಾಜ ಸಿಂಗ್ ಚೌಹಾಣ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ವಿರುದ್ಧ 821,408 ಮತಗಳ ದಾಖಲೆಯ ಅಂತರದ ಜಯಗಳಿಸಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
ದಿಗ್ವಿಜಯ ಸಿಂಗ್: ಸೋಲಿನ ಮೇಲೆ ಸೋಲನ್ನು ಅನುಭವಿಸುತ್ತಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಮಧ್ಯಪ್ರದೇಶದ ರಾಜ್ಗಢದಿಂದ ಲೋಕಸಭೆ ಚುನಾವಣೆಯಲ್ಲಿ 1,46,089 ಮತಗಳಿಂದ ಪರಾಭವಗೊಂಡಿದ್ದಾರೆ.
ಸರ್ಬಾನಂದ ಸೋನೋವಾಲ್ : ಅಸ್ಸಾಂನ ಮಾಜಿ ಮುಖ್ಯಮಂತ್ರಿ ಹಾಗೂ ದಿಬ್ರುಗಢ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸರ್ಬಾನಂದ ಸೋನೋವಾಲ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ವಿರುದ್ಧ 2,79,321 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ವಿರುದ್ಧ 2.84 ಲಕ್ಷ ಮತಗಳ ಅಂತದಿಂದ ಭರ್ಜರಿ ಜಯಗಳಿಸಿದ್ದಾರೆ.
ಒಮರ್ ಅಬ್ದುಲ್ಲಾ : ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಬಾರಾಮುಲ್ಲಾ ಕ್ಷೇತ್ರದ ನ್ಯಾಶನಲ್ ಕಾನ್ಫರೆನ್ಸ್ ಅಭ್ಯರ್ಥಿ ಒಮರ್ ಅಬುಲ್ಲಾ ಅವರು ತಮ್ಮ ಪ್ರತಿಸ್ಪರ್ಧಿ ಸ್ವತಂತ್ರ ಅಭ್ಯರ್ಥಿ ಶೇಕ್ ಅಬ್ದುಲ್ ರಶೀದ್ ವಿರುದ್ಧ 2,04,142 ಮತಗಳಿಂದ ಸೋಲನುಭವಿಸಿದ್ದಾರೆ.
ಮೆಹಬೂಬಾ ಮುಫ್ತಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಅನಂತನಾಗ್-ರಾಜೌರಿ ಕ್ಷೇತ್ರದ ಪಿಡಿಪಿ ಅಭ್ಯರ್ಥಿ ಮೆಹಬೂಬಾ ಮುಫ್ತಿ ಸೋಲನುಭವಿಸಿದ್ದಾರೆ. ಅವರು ಜಮ್ಮು ಮತ್ತು ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್ ಅಭ್ಯರ್ಥಿ ವಿರುದ್ಧ 2,36,730 ಮತಗಳಿಂದ ಸೋತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ