ವೀಸಾ ಅವಧಿ ಮುಗಿದದ್ದು ಗೊತ್ತಿದ್ರೂ ಆಶ್ರಯ ; ಪಾಕ್ ಮಹಿಳೆ ಜೊತೆ ಮದುವೆಯಾಗಿದ್ದನ್ನು ಮುಚ್ಚಿಟ್ಟ ಸಿಆರ್‌ಪಿಎಫ್ ಜವಾನ ಕೆಲಸದಿಂದ ವಜಾ

ನವದೆಹಲಿ: ಪಾಕಿಸ್ತಾನಿ ಮಹಿಳೆಯೊಂದಿಗಿನ ತಾನು ಮದುವೆಯಾಗಿದ್ದನ್ನು “ಮುಚ್ಚಿಟ್ಟಿದ್ದಕ್ಕಾಗಿ” ಕೇಂದ್ರ ಮೀಸಲು ಪೊಲೀಸ್ ಪಡೆಯು ತನ್ನ ಜವಾನ ಮುನೀರ್ ಅಹ್ಮದ್ ಅವರನ್ನು ಸೇವೆಯಿಂದ ವಜಾಗೊಳಿಸಿದೆ.
ಅವರ ಕೃತ್ಯವು ರಾಷ್ಟ್ರೀಯ ಭದ್ರತೆಗೆ ಹಾನಿಕಾರಕವಾಗಿದೆ ಎಂದು ಕಂಡುಬಂದಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ. ಈ ಜವಾನನ್ನು ಕೊನೆಯದಾಗಿ ದೇಶದ ಪ್ರಮುಖ ಆಂತರಿಕ ಭದ್ರತಾ ಪಡೆ ಪ್ಯಾರಾಮಿಲಿಟರಿ ಸಿಆರ್‌ಪಿಎಫ್‌ (CRPF)ನ 41 ನೇ ಬೆಟಾಲಿಯನ್‌ನಲ್ಲಿ ನಿಯೋಜಿಸಲಾಗಿತ್ತು.
“ಅವರ ಕ್ರಮಗಳು ಸೇವಾ ನಡವಳಿಕೆಯ ಉಲ್ಲಂಘನೆ ಮತ್ತು ರಾಷ್ಟ್ರೀಯ ಭದ್ರತೆಗೆ ಹಾನಿಕಾರಕವೆಂದು ಕಂಡುಬಂದಿದೆ” ಎಂದು ಸಿಆರ್‌ಪಿಎಫ್‌ (CRPF) ಹೇಳಿದೆ.
ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರು ಸಾವಿಗೀಡಾದ ಭಯೋತ್ಪಾದಕ ದಾಳಿಯ ನಂತರ, ಭಾರತವು ಹೆಚ್ಚಿನ ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ರದ್ದುಗೊಳಿಸಿತು ಮತ್ತು ನಿರ್ದಿಷ್ಟ ಅವಧಿಯೊಳಗೆ ದೇಶವನ್ನು ತೊರೆಯುವಂತೆ ಸೂಚಿಸಿದೆ.

ಅಹ್ಮದ್ ಅವರ ಪಾಕಿಸ್ತಾನ ಮೂಲದ ಪತ್ನಿ ಮೆನಾಲ್ ಖಾನ್ ಅವರು ಗಡೀಪಾರು ಆದೇಶಗಳನ್ನು ಪಡೆದರು ಮತ್ತು ಹೈಕೋರ್ಟ್‌ ಅವರಿಗೆ ಭಾರತದಲ್ಲಿ ಉಳಿಯಲು 10 ದಿನಗಳ ವರೆಗೆ ಅನುಮತಿ ನೀಡಿದ ನಂತರ ಅವರು ಅಟ್ಟಾರಿ-ವಾಘಾ ಗಡಿಗೆ ಬಂದವರು ಮರಳಿದರು.
2017 ರಲ್ಲಿ ಸಿಆರ್‌ಪಿಎಫ್‌ ಪಡೆಗೆ ಸೇರಿದ ಜಮ್ಮುವಿನವರಾದ ಅಹ್ಮದ್ ತಾನು ಪಾಕಿಸ್ತಾನದ ಮಹಿಳೆಯನ್ನು ಮದುವೆಯಾಗುವ ಉದ್ದೇಶ ಹೊಂದಿರುವುದಾಗಿ ಪತ್ರ ಬರೆದು ತಮ್ಮ ಇಲಾಖೆಗೆ ತಿಳಿಸಿದ್ದರು, ಆದರೆ ಇಲಾಖೆಯಿಂದ ಈ ಬಗ್ಗೆ ಅಧಿಕೃತ ಅನುಮೋದನೆಗೆ ಕಾಯದೆ ಮದುವೆಯಾಗಿದ್ದಾರೆ ಎಂದು ಸಿಆರ್‌ಪಿಎಫ್ ಮೂಲಗಳು ತಿಳಿಸಿವೆ. ಕಳೆದ ವರ್ಷ ಮೇ 24 ರಂದು ಈ ದಂಪತಿಗಳು ವೀಡಿಯೊ ಕರೆಯ ಮೂಲಕ ವಿವಾಹವಾಗಿದ್ದರು.
ಮಿನಾಲ್‌ ಖಾನ್ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದು ಅಹ್ಮದ್ ಅವರೊಂದಿಗೆ ವಾಸಿಸಲು ಪ್ರಾರಂಭಿಸಿದರು. ಮಾರ್ಚ್ 22 ರಂದು ಅವರ ವೀಸಾ ಅವಧಿ ಮುಗಿದಿತ್ತು, ಆದರೂ ಅವರು ಭಾರತದಲ್ಲಿ ವಾಸಿಸುವುದನ್ನು ಮುಂದುವರೆಸಿದರು ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

ವಿಚಾರಣೆ ನಡೆಸುವ ಅಗತ್ಯವಿಲ್ಲದ ನಿಯಮಗಳ ಅಡಿಯಲ್ಲಿ ಅವರನ್ನು “ಸೇವೆಯಿಂದ ವಜಾಗೊಳಿಸಲಾಗಿದೆ” ಎಂದು ಅಧಿಕೃತ ಮೂಲಗಳು ಪಿಟಿಐಗೆ ತಿಳಿಸಿವೆ.
“ಮುನೀರ್ ಅಹ್ಮದ್ ಅವರನ್ನು ಪಾಕಿಸ್ತಾನಿ ಪ್ರಜೆಯೊಂದಿಗಿನ ವಿವಾಹವನ್ನು ಮುಚ್ಚಿಟ್ಟಿದ್ದಾರೆ ಮತ್ತು ಆಕೆಯ ವೀಸಾ ಅವಧಿ ಮುಗಿದಿದ್ದರೂ ಅದು ಗೊತ್ತಿದ್ದೂ ಆಕೆಗೆ ಆಶ್ರಯ ನೀಡಿದ್ದಕ್ಕಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಸಿಆರ್‌ಪಿಎಫ್‌ ಹೇಳಿದೆ. “ಅವರ ಕ್ರಮಗಳು ಸೇವಾ ನಡವಳಿಕೆಯ ಉಲ್ಲಂಘನೆ ಮತ್ತು ರಾಷ್ಟ್ರೀಯ ಭದ್ರತೆಗೆ ಹಾನಿಕಾರಕವೆಂದು ಕಂಡುಬಂದಿದೆ” ಎಂದು ಸಿಆರ್‌ಪಿಎಫ್ ವಕ್ತಾರ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಎಂ ದಿನಕರನ್ ಹೇಳಿದ್ದಾರೆ.
26 ಜನರು ಸಾವನ್ನಪ್ಪಿದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ತೆಗೆದುಕೊಂಡ ರಾಜತಾಂತ್ರಿಕ ಕ್ರಮಗಳ ಭಾಗವಾಗಿ ಭಾರತವು ಪಾಕಿಸ್ತಾನಿ ಪ್ರಜೆಗಳನ್ನು ದೇಶ ತೊರೆಯುವಂತೆ ಸೂಚಿಸಿದ ನಂತರ ಮೆನಾಲ್ ಖಾನ್ ಜೊತೆ ಅಹ್ಮದ್ ಅವರ ವಿವಾಹ ಬೆಳಕಿಗೆ ಬಂದಿತು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement