ಯೂಟ್ಯೂಬ್, ಟ್ವಿಟರ್ ಮತ್ತು ಫೇಸ್ಬುಕ್ಗಳಲ್ಲಿ ಭಾರತ-ಪಾಕಿಸ್ತಾನದ ‘ಕಾಮೆಂಟ್ʼಗಳ ಯುದ್ಧದಲ್ಲಿ ಹಸುವಿನ ಮಲ-ಮೂತ್ರದ ಬಗ್ಗೆ ಭಾರತೀಯರನ್ನು ಜರೆಯುತ್ತಿದ್ದ ಪಾಕಿಸ್ಥಾನ ಈಗ ಇದೇ ಹಾದಿಯಲ್ಲಿ ಹೆಜ್ಜೆ ಇಟ್ಟಿದೆ..!!
ಈಗ ಪಾಕಿಸ್ಥಾನದಲ್ಲಿ ಕೋಷ್ಟಕಗಳು ತಿರುಗಲಾರಂಭಿಸಿವೆ. ಭಾರತ ಮಾತ್ರವಲ್ಲ, ಪಾಕಿಸ್ಥಾನ ಕೂಡ ಇದೇ ಹಾದಿ ಅನುಸರಿಸಲು ಆರಂಭಿಸದೆ ಎಂದರೆ ಯಾರೂ ನಂಬುವುದಿಲ್ಲ. ಆದರೆ ಪಾಕಿಸ್ಥಾನ ಸಹ ಭಾರತವನ್ನು ಇದೇ ಹಾದಿಯಲ್ಲಿ ಅನುಸರಿಸಲು ಹೊರಟಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ಆಕಳ ಹಾಲು, ಸೆಗಣಿ ಹಾಗೂ ಮೂತ್ರದ ಉಪಯೋಗದ ಬಗ್ಗೆ ಮಾತನಾಡುವುದು ಈಗ ಆರಂಭವಾಗಿದೆ.
ಇದೇನು ಹೊಸ ಕ್ರಾಂತಿ: ಇಂದು ಪಾಕಿಸ್ಥಾನ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟೇ ಗೋವಿನ ಕುರಿತು ಆ ದೇಶದ ನಿಲುವು ಬದಲಾಗಲು ಕಾರಣ. ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಈಗ ಅಪ್ನಾ ಸಮಯ ಆ ಗಯಾ, ಒಂದು ಕ್ರಾಂತಿ ನಡೆಯುತ್ತಿದೆ ಎಂದು ಹೇಳಿದ್ದಾರೆ. ಅದು ಹಸುಗಳಿಂದಾಗುವ ಆರ್ಥಿಕ ಕ್ರಾಂತಿ ಎಂದೂ ಹೇಳಿದ್ದಾರೆ. ಈ ಆರ್ಥಿಕ ಕ್ರಾಂತಿಗೆ ಪಾಕಿಸ್ಥಾನದ ಪರಮಾಪ್ತ ಮಿತ್ರ ಚೀನಾ ಸಹಾಯ ಮಾಡಲಿದೆಯಂತೆ. ಪಾಕಿಸ್ತಾನದ ಹಸುಗಳು ಈಗ ಹಾಲು ನೀಡುವದಕ್ಕಿಂತ ಆರು ಪಟ್ಟು ಹೆಚ್ಚು ಹಾಲು ನೀಡಲು ಚೀನಾ ಸಹಾಯ ಮಾಡುತ್ತದೆಯಂತೆ.
ಗೋವಿನ ಜಪ ಯಾಕೆ?..: ಚೀನಾದ ಸಹಾಯದಿಂದ ಪಾಕಿಸ್ಥಾನದಲ್ಲಿ ಹಾಲಿನ ಹೊಳೆಯನ್ನೇ ಹರಿಸುವ ಆಲೋಚನೆ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಅವರದ್ದು. ಈ ಮೊದಲು ನೀಡಿದ್ದಕ್ಕಿಂತ ಹೆಚ್ಚು ಹಾಲುಗಳನ್ನು ಹಸುಗಳಿಂದ ಪಡೆಯುತ್ತಾರಂತೆ. ಆದರೆ ಇಷ್ಟೇ ಆದರೆ ಅದೇನು ಅಷ್ಟು ದೊಡ್ಡ ವಿಷಯವಾಗುತ್ತಿರಲಿಲ್ಲ. ಆದರೆ ಹಸುವಿನ ಮೂತ್ರ ಹಾಗೂ ಸೆಗಣಿ ಬಗ್ಗೆ ಭಾರತೀಯರ ಬಗ್ಗೆ ಅವಹೇಳನ ಮಾಡುತ್ತಿದ್ದ ಪಾಕಿಸ್ಥಾನ ಈಗ ಹಸುವಿನ ಸೆಗಣಿ ಹಾಗೂ ಮೂತ್ರದಿಂದ ತಯಾರಾಗುವ ಇಂಧನದಿಂದ (ಗೋಬರ್ ಗ್ಯಾಸ್) ಅಲ್ಲಿನ ಬಸ್ಸುಗಳನ್ನು ಓಡಿಸುತ್ತದೆಯಂತೆ. ಅಂದರೆ ಹಸುವಿನ ಸೆಗಣಿ ಈಗ ಪಾಕಿಸ್ತಾನವನ್ನು ಉಳಿಸುವ ಆಶಾಕಿರಣವಾಗಿದೆ. ಪಾಕಿಸ್ಥಾನದ ಹವಾಮಾನ ಬದಲಾವಣೆಯ ರಾಜ್ಯ ಸಚಿವ ಜರ್ತಾಜ್ ಗುಲ್ ಈಗಾಗಲೇ ಪ್ರಧಾನಿ ಇಮ್ರಾನ್ ಖಾನ್ ಅವರಿಂದ ಒಪ್ಪಿಗೆ ಪಡೆದು ಹಸುವಿನ ಸಗಣಿ ಹಾಗೂ ಮೂತ್ರದಿಂದ ತಯಾರಾದ ಗ್ಯಾಸ್ನಿಂದ (ಇಂಧನ) ಬಸ್ಸುಗಳನ್ನು ಓಡಿಸುವ ಮಾತನಾಡುತ್ತಿದ್ದಾರೆ. ಅದು ಕೂಡ ಶೂನ್ಯ ಮಾಲಿನ್ಯ ಹೊರಸೂಸುವಿಕೆಯೊಂದಿಗೆ ಎಂದು ಅವರು ಹೇಳುತ್ತಿದ್ದಾರೆ..!
ಪಾಕಿಸ್ಥಾನದ ಆರ್ಥಿಕ ಪರಿಸ್ಥಿತಿ ಕುಸಿದ ಪರಿಣಾಮ ವಿದೇಶಗಳ ನ್ಯಾಯಾಲಯದ ಹೋರಾಟಗಳ ಹಣ ಪಾವತಿಸಲು ಸಹ ಪಾಕಿಸ್ಥಾನಕ್ಕೆ ಕಷ್ಟಸಾಧ್ಯವಾಗಿದೆ. ಆ ದೇಶದ ಆರ್ಥಿಕತೆ ಕುಸಿದ ಪರಿಣಾಮ ಪಾಕಿಸ್ಥಾನ ಸರ್ಕಾರದ ಆಸ್ತಿಗಳು, ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ ಇನ್ವೆಸ್ಟ್ಮೆಂಟ್ ಲಿಮಿಟೆಡ್ ಒಡೆತನದ ನ್ಯೂಯಾರ್ಕಿನ ರೂಸ್ವೆಲ್ಟ್ ಹೋಟೆಲ್ ಮತ್ತು ಪ್ಯಾರಿಸ್ನ ಸ್ಕ್ರೈಬ್ ಹೋಟೆಲ್ ಕೈತಪ್ಪುವ ಹಾದಿಯಲ್ಲಿದೆ. ಗುತ್ತಿಗೆ ಪಾವತಿಸದ ಕಾರಣ ಮಲೇಷ್ಯಾದಲ್ಲಿ ಪಾಕಿಸ್ಥಾನದ ಪಿಐಎ (ಪಾಕಿಸ್ಥಾನ ಇಂಟರ್ನ್ಯಾಶನಲ್ ಏರ್ಲೈನ್ಸ್) ವಿಮಾನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಹೀಗಾಗಿ ಈಗ ಪಾಕಿಸ್ಥಾನಕ್ಕೆ ಕೊಟ್ಟಿಗೆಯಲ್ಲಿ ಬೆಳಕು ಕಾಣುತ್ತಿದೆ..! ಪಾಕಿಸ್ಥಾನದ ಆರ್ಥಿಕತೆ ಸರಿಪಡಿಸುವ ನಿಟ್ಟಿನಲ್ಲಿ ಗೋವುಗಳ ಮೇಲೆ ಈಗ ನಂಬಿಕೆ ಬಂದಿದೆ..!!
ಚೀನಾ ಮತ್ತು ಹಾಲೆಂಡ್ನ ಹಸುಗಳು ತಮ್ಮ ಪಾಕಿಸ್ಥಾನದ ಹಸುಗಳಿಗಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಹಾಲು ನೀಡುತ್ತವೆ ಎಂದು ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಆದರೆ ಪಾಕಿಸ್ಥಾನದಲ್ಲಿ ಹಸುಗಳ ಮಾಲೀಕರು ಇದನ್ನು ಒಪ್ಪುತ್ತಿಲ್ಲ. ಪಾಕಿಸ್ಥಾನದ ಹಸುಗಳು ಪ್ರತಿ ಹಾಲು ಹಿಂಡುವ ಅವಧಿಗೆ ಕೇವಲ ಆರು ಲೀಟರ್ ಹಾಲು ನೀಡುತ್ತವೆ ಎಂಬ ತಮ್ಮ ದೇಶದ ಪ್ರಧಾನಿಯ ಮಾತನ್ನು ಒಪ್ಪುತ್ತಿಲ್ಲ. ಪಾಕಿಸ್ಥಾನದ ಕೆಲ ಸ್ಥಳೀಯ ಪ್ರಬೇಧಗಳು ಒಮ್ಮೆ ಹಾಲು ಹಿಂಡಿದರೆ 22 ಲೀಟರ್ ವರೆಗೆ ನೀಡುತ್ತವೆ ಎನ್ನುತ್ತಾರೆ ಅವರು.
ಒಟ್ಟಿನಲ್ಲಿ ಗೋವುಗಳ ಮೂತ್ರ ಹಾಗೂ ಸೆಗಣಿ ಬಗ್ಗೆ ಭಾರತೀಯರು ತಾಳಿರುವ ನಿಲುವಿನ ಬಗ್ಗೆ ಟ್ವಿಟರ್, ಫೇಸ್ ಬುಕ್, ವಾಟ್ಸ್ಅಪ್ಗಳಲ್ಲಿ ಟೀಕೆ-ಟಪ್ಪಣಿ ಮಾಡಿ ಮೂಗು ಮುರಿಯುತ್ತಿದ್ದ ಪಾಕಿಸ್ಥಾನಿಯರು ಕೂಡ ಈಗ ಇದೇ ಹಾದಿ ಅನುಸರಿಸಲು ಹೊರಟಿದ್ದಾರೆ…!
ನಿಮ್ಮ ಕಾಮೆಂಟ್ ಬರೆಯಿರಿ