ಕೊಚ್ಚಿ: ತಮ್ಮ ಮಗಳಿಗೆ ಕಣ್ಣಿನ ದೃಷ್ಟಿ ಪುನಃ ಬರುತ್ತದೆ ಎಂದು ನಂಬಿಕೆ ಕಳೆದುಕೊಂಡಿದ್ದ ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರ ಮಗಳಿಗೆ ಭಾರತದ ಆಯುರ್ವೇದ ಕಳೆದುಕೊಂಡಿದ್ದ ಕಣ್ಣಿನ ದೃಷ್ಟಿ ಮರಳಿ ಬರುವಂತೆ ಮಾಡಿದೆ..! ಇದನ್ನು ಸ್ವತಃ ಕೀನ್ಯಾದ ಮಾಜಿ ಪ್ರಧಾನಿಯವರೇ ಹೇಳಿದ್ದಾರೆ.
ಕೇರಳದ ಎರ್ನಾಕುಲಂನ ಕೂತಟ್ಟುಕುಲಂನಲ್ಲಿರುವ ಆಯುರ್ವೇದ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ತಮ್ಮ ಮಗಳಿಗೆ ದೃಷ್ಟಿ ಮರಳಿ ಪಡೆಯಲು ಸಹಾಯ ಮಾಡಿದ್ದಕ್ಕಾಗಿ ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಈ ವರ್ಷದ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ವೇಳಾಪಟ್ಟಿಯ ನಡುವೆಯೂ ಮಾಜಿ ಪ್ರಧಾನಿ ಮಗಳ ಚಿಕಿತ್ಸೆಗಾಗಿ ಕೇರಳಕ್ಕೆ ಭೇಟಿ ನೀಡಿದ್ದರು.
ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರು ತಮ್ಮ ಮಗಳು ಕಳೆದುಕೊಂಡಿದ್ದ ದೃಷ್ಟಿ ಬರುವಂತೆ ಮಾಡಿದ್ದಕ್ಕಾಗಿ ಕೇರಳದ ಆಸ್ಪತ್ರೆಗೆ ಧನ್ಯವಾದ ಹೇಳಿದ್ದಾರೆ. ತನ್ನ ಮಗಳು ರೋಸ್ಮರಿ ಒಡಿಂಗಾ ಅವರ ಆಯುರ್ವೇದ ಚಿಕಿತ್ಸೆಗಾಗಿ ಫೆಬ್ರವರಿ 7 ರಂದು ಭಾರತಕ್ಕೆ ಆಗಮಿಸಿರುವುದಾಗಿ ಮಾಜಿ ಪ್ರಧಾನಿ ಹೇಳಿದ್ದು ಈ ಆಯುರ್ವೇದ ಚಿಕಿತ್ಸೆಯನ್ನು ಆಫ್ರಿಕಾಕ್ಕೆ ತರುವ ಸಾಧ್ಯತೆ ಬಗ್ಗೆ ಚಿಂತನೆ ನಡೆಸಿರುವುದಾಗಿ ಹೇಳಿದ್ದಾರೆ.
ಕೇರಳದ ಕೊಚ್ಚಿಯಲ್ಲಿ ತಮ್ಮ ಮಗಳ ಕಣ್ಣಿನ ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸಿರುವುದಾಗಿ ಮಾಧ್ಯಮಗಳೊಂದಿಗೆ ನಡೆದ ಸಂವಾದದಲ್ಲಿ ಅವರು ತಿಳಿಸಿದ್ದಾರೆ. ಮೂರು ವಾರಗಳ ಚಿಕಿತ್ಸೆಯ ನಂತರ ತನ್ನ ಮಗಳ ದೃಷ್ಟಿ ಗಮನಾರ್ಹವಾಗಿ ಸುಧಾರಿಸಿದೆ ಎಂದು ಅವರು ಹೇಳಿದರು.
ಒಡಿಂಗಾ ಅವರು, “ಈ ಸಾಂಪ್ರದಾಯಿಕ ಪರಿಹಾರಗಳನ್ನು ತೆಗೆದುಕೊಳ್ಳುವ ಮೂಲಕ, ತನ್ನ ಮಗಳು ಈಗ ತನ್ನ ದೃಷ್ಟಿಯನ್ನು ಮರಳಿ ಪಡೆದಿದ್ದಾಳೆ, ಇದು ನಮಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡಿದೆ. ನಾನು ಈ ಚಿಕಿತ್ಸಾ ವಿಧಾನವನ್ನು (ಆಯುರ್ವೇದ) ಆಫ್ರಿಕಾಕ್ಕೆ ತರಲು ಮತ್ತು ನಮ್ಮ ಸ್ಥಳೀಯ ಸಸ್ಯವರ್ಗವನ್ನು ಚಿಕಿತ್ಸೆಗಳಿಗೆ ಬಳಸುವ ಸಾಧ್ಯತೆಯ ಬಗ್ಗೆ ನಾನು ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿದ್ದೇನೆ” ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ, ಸೆಕ್ಯುರಿಟಿ ಮತ್ತು ಹ್ಯೂಮನ್ ಇಂಟೆಲಿಜೆನ್ಸ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನ್ನಿಸ್ ನ್ಯಾಂಬಾನೆ ಟ್ವಿಟ್ಟರ್ನಲ್ಲಿ, “ರೈಲಾ ಒಡಿಂಗಾ ಭಾರತದ ಕೇರಳ ರಾಜ್ಯಕ್ಕೆ ಆಗಮಿಸಿದ್ದಾರೆ. ಬಾಬಾ ಕೇರ್ ಎಲ್ಲಾ ಕೀನ್ಯಾದವರಿಗೆ ಉತ್ತಮ ಗುಣಮಟ್ಟದ, ಕಡಿಮೆ-ವೆಚ್ಚದ ಆರೋಗ್ಯ-ಸೇವೆಗೆಯನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ಪುತ್ರಿ ರೋಸ್ಮರಿ ಒಡಿಂಗಾ ಆಪ್ಟಿಕ್ ನರ ಕಾಯಿಲೆಯಿಂದ 2017 ರಲ್ಲಿ ದೃಷ್ಟಿ ಕಳೆದುಕೊಂಡಿದ್ದರು. ಹಲವಾರು ಮಾಧ್ಯಮ ಮೂಲಗಳ ಪ್ರಕಾರ, ಆಕೆಯ ದೃಷ್ಟಿಹೀನತೆಯ ನಂತರ ದಕ್ಷಿಣ ಆಫ್ರಿಕಾ, ಇಸ್ರೇಲ್ ಮತ್ತು ಚೀನಾದಲ್ಲಿ ಚಿಕಿತ್ಸೆಯನ್ನು ಪಡೆದಿದ್ದರು, ಆದರೆ ಯಾವುದೇ ಚಿಕಿತ್ಸೆಯು ಯಶಸ್ವಿಯಾಗಲಿಲ್ಲ. ರೈಲಾ ಒಡಿಂಗಾ ನಂತರ ಕೇರಳದ ಆಯುರ್ವೇದದ ಬಗ್ಗೆ ಸ್ನೇಹಿತನ ಮೂಲಕ ತಿಳಿದುಕೊಂಡರು. ರೋಸ್ಮರಿ ಒಡಿಂಗಾ ಅವರು 2019 ರಲ್ಲಿ ಕೂತಟ್ಟುಕುಲಂನಲ್ಲಿರುವ ಶ್ರೀಧರೀಯಮ್ ಆಯುರ್ವೇದಿಕ್ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆಯನ್ನು ಪ್ರಾರಂಭಿಸಿದರು. ಅವರು ಮನೆಗೆ ಹಿಂದಿರುಗುವ ಮೊದಲು ಒಂದು ತಿಂಗಳ ಕಾಲ ಕೇರಳದಲ್ಲಿ ಚಿಕಿತ್ಸೆ ಪಡೆದರು. ಮನೆಯಲ್ಲಿ ಔಷಧಿ ತೆಗೆದುಕೊಳ್ಳುತ್ತಲೇ ಇದ್ದರು. ವೈದ್ಯಕೀಯ ಹೇಳಿಕೆಯ ಪ್ರಕಾರ, ರೋಸ್ಮರಿ ಒಡಿಂಗಾ ಅವರು ಚಿಕಿತ್ಸೆ ಮತ್ತು ತಪಾಸಣೆಗಳನ್ನು ಮುಂದುವರೆಸಿದ ನಂತರ ತಮ್ಮ ದೃಷ್ಟಿಯನ್ನು ಮರಳಿ ಪಡೆದಿದ್ದಾರೆ. ಮೂರು ವಾರಗಳ ಕಾಲ ಅವರನ್ನು ಮುಂದಿನ ಆರೈಕೆಗಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ