ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ; ನಾಳೆ ಬಿಜೆಪಿ ಸೇರುವುದಾಗಿ ಘೋಷಣೆ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನ ಮತ್ತು ಪರಿಷತ್ ಸದಸ್ಯತ್ವಕ್ಕೆ ಬಸವರಾಜ ಹೊರಟ್ಟಿ ಸೋಮವಾರ ರಾಜೀನಾಮೆ ನೀಡಿದ್ದಾರೆ ಹಾಗೂ ನಾಳೆ, ಮಂಗಳವಾರ ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ.
ಇಂದು,ಸೋಮವಾರ ವಿಧಾನಸೌಧದ ಸಭಾಪತಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿ, ಸಭಾಪತಿ ಸ್ಥಾನಕ್ಕೆ ಹಾಗೂ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು. ಹಾಗೂ ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸಚಿವಾಲಯದ ಆಡಳಿತದಲ್ಲಿ ಪ್ರಾಮಾಣಿಕ ಪಾರದರ್ಶಕತೆಗೆ ಆದ್ಯತೆ ನೀಡಿದ್ದೇನೆ. ಈಗಿನ ಕಲುಷಿತ ರಾಜಕಾರಣದಿಂದ ನಮ್ಮಂತವರಿಗೆ ನೋವಾಗಿದೆ. ಆದರೆ ಮನಸ್ಸಿಲ್ಲದಿದ್ದರೂ ರಾಜಕೀಯದಲ್ಲಿ ಇರಬೇಕಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಬಿಜೆಪಿ ಸೇರ್ಪಡೆ ಆಗುವುದಕ್ಕೆ ಯಾವುದೇ ಷರತ್ತು ಹಾಕಿಲ್ಲ. ಕೇಂದ್ರ ಸಚಿವ ಅಮಿತ್ ಶಾ ಭೇಟಿ ಸಂದರ್ಭದಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದು ಬಸವರಾಜ ಹೊರಟ್ಟಿ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಬಿಜೆಪಿ ರಾಜಕೀಯ ನಿಲುವಿನ ಬಗ್ಗೆ ಆಕ್ಷೇಪ ಇಲ್ಲ. ನನಗೆ ಎಲ್ಲ ಪಕ್ಷದವರು ಸಹಕಾರ ಕೊಟ್ಟಿದ್ದಾರೆ. 1980ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜಕೀಯ ಪ್ರವೇಶ ಮಾಡಿದೆ. 1986 ಜನತಾದಳ, ಲೋಕ ಶಕ್ತಿಯಲ್ಲಿದ್ದೆ. 2000ನೇ ಇಸವಿಯಲ್ಲಿ ನಾನು ದೇವೇಗೌಡರ ಜೊತೆ ಸೇರಿಕೊಂಡೆ. ದೇವೇಗೌಡರ ಮಾರ್ಗದರ್ಶನದಲ್ಲಿ ಬೆಳೆದೆ. ಹೆಚ್​ಡಿ ಕುಮಾರಸ್ವಾಮಿ ಅವರೂ ಅಧಿಕಾರಕ್ಕೆ ಬರಲು ಸಹಕಾರ ನೀಡಿದರು. ದೇವೇಗೌಡರ ಕುಟುಂಬದ ಸದಸ್ಯನ ರೀತಿ ನನ್ನನ್ನು ನೋಡಿಕೊಂಡರು.ಮುಂದೆಯೂ ಅವರ ಮಾರ್ಗದರ್ಶನ ನನಗೆ ಸಿಗಲಿದೆ ಅಂತ ಭಾವಿಸಿದ್ದೇನೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

ಆಕಸ್ಮಿಕವಾಗಿ ಕೆಲ ಬದಲಾವಣೆ ಆಗುತ್ತಿದೆ. ಅನಿವಾರ್ಯವಾಗಿ ಬಿಜೆಪಿಗೆ ಹೋಗುತ್ತಿದ್ದೇನೆ. ನಮ್ಮ ರಾಷ್ಟ್ರದಲ್ಲಿ ಯಾವ ಪಕ್ಷದಲ್ಲಿ ಜಾತಿ ಇಲ್ಲ ಹೇಳಿ? ಎಲ್ಲಾ ಪಕ್ಷಗಳಲ್ಲೂ ಜಾತಿಯನ್ನು ಮುಂದೆ ತಂದು, ಗೆಲ್ಲೋಕೆ ಎಷ್ಟು ದುಡ್ಡಿದೆ ಎಂದು ಕೇಳ್ತಾರೆ. ದೇವೇಗೌಡರ ಮೇಲೆ ಆಗಲಿ ಕುಮಾರಸ್ವಾಮಿ ಮೇಲೆ ಆಗಲಿ ನನಗೆ ಬೇಸರ ಇಲ್ಲ. ಆದರೆ ದೇವೇಗೌಡರನ್ನು ಭೇಟಿ ಮಾಡಿ ಮಾತನಾಡುವ ಧೈರ್ಯ ನನಗಿಲ್ಲ. ಹಾಗಾಗಿ ಹತ್ತು ಪುಟಗಳ ಒಂದು ಪತ್ರ ಬರೆದಿದ್ದೇನೆ. ಕುಮಾರಸ್ವಾಮಿ ಅವರಿಗೆ ಈ ವಿಚಾರ ತಿಳಿಸಿದ್ದೇನೆ. ಅವರೇ ಖುದ್ದಾಗಿ ನಮ್ಮ ಮನೆಗೆ ಬಂದು ಮಾತಾಡಿದ್ದಾರೆ. ಅವರಿಗೆ ನನ್ನ ನಿಲುವನ್ನು ತಿಳಿಸಿದ್ದೇನೆ ಎಂದು ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ಘೋಷಿಸಿದ್ದೇನೆ. ಸಭಾಪತಿಯಾಗಿ 30 ಸಭೆ ನಡೆಸಿದ್ದೇನೆ. ಏನು ಸಭೆ ಮಾಡಿದ್ದೀನಿ, ಅದರ ಪ್ರತಿಫಲ ಏನು ಎಂಬ ಬಗ್ಗೆ ಪುಸ್ತಕ ಮಾಡಿದ್ದೇವೆ. ಕೆಲವೊಮ್ಮೆ ಪ್ರತಿಭಟನೆ ಸಂದರ್ಭದಲ್ಲಿ ಮಾತ್ರ ಸದನವನ್ನು ಮುಂದೂಡಿದ್ದೇವೆ. ರಾಜ್ಯಸಭೆ ನಡೆಯುವಾಗ ನಾವು ದೆಹಲಿಗೆ ಹೋಗಿದ್ದೆವು. ಅದರಂತೆ ಪ್ರಶ್ನೋತ್ತರ ಅವಧಿ, ಎಲ್ಲಾ ಕಾರ್ಯ ಮಾಡಿದ್ದೇನೆ. ಶಿಮ್ಲಾದಲ್ಲಿ ನಡೆದ ಕಾರ್ಯಗಾರದಲ್ಲಿ ಭಾಗಿಯಾಗಿದ್ದೆ. ಬಸವಣ್ಣನವರ ಅನುಭವ ಮಂಟಪ ಮಾಡಿದ್ದೇವೆ. ಬೆಳಗಾವಿಯಲ್ಲಿ ಎರಡು ದಿನ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ ಚರ್ಚೆಗೆ ಅವಕಾಶ ನೀಡಿದ್ದೆವು. ಡಿ ಗ್ರೂಪ್‌ನವರಿಗೆ ಯೂನಿಫಾರಂ ನೀಡಿದರೂ ಹಾಕುತ್ತಿರಲಿಲ್ಲ. ಅವರಿಗೆ ಯೂನಿಫಾರಂ ಹಾಕದಿದ್ದರೆ ಸಂಬಳ ಕಟ್ ಮಾಡೋದಾಗಿ ಹೇಳಿ ಯೂನಿಫಾರಂ ಕಡ್ಡಾಯ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement