ಭುವನೇಶ್ವರ : ಭಯಾನಕ ಘಟನೆಯೊಂದರಲ್ಲಿ, ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಹಳ್ಳಿಯೊಂದರಲ್ಲಿ 70 ವರ್ಷದ ಮಹಿಳೆಯೊಬ್ಬರು ಆನೆ ದಾಳಯಿಂದ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಲ್ಲದೆ, ಅಂತ್ಯಕ್ರಿಯೆ ಸಮಯದಲ್ಲಿಯೂ ಮತ್ತೆ ಆಗಮಿಸಿದ ಅದೇ ಕಾಡಾನೆ ದಾಳಿಗೆ ಆಕೆಯ ಶವ ತುತ್ತಾಗಿ ವಿರೂಪಗೊಂಡಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ವೃದ್ಧೆ ಆನೆ ದಾಳಿಯಿಂದ ಸಾವಿಗೀಡಾದ ನಂತರ ವೃದ್ಧೆಯ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆಯುತ್ತಿರುವಾಗ ಮತ್ತೆ ಕಾಡು ಆನೆ ಆಕೆಯ ಮೃತದೇಹದ ಮೇಲೆ ದಾಳಿ ಮಾಡಿ ಅಲ್ಲಿಂದ ಹೋಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಮಾಯಾ ಮುರ್ಮು ಎಂಬ ವೃದ್ಧೆ ಗುರುವಾರ ಬೆಳಗ್ಗೆ ರಾಯ್ಪಾಲ್ ಗ್ರಾಮದ ಕೊಳವೆಬಾವಿಯಿಂದ ನೀರು ತರುತ್ತಿದ್ದಾಗ ದಾಲ್ಮಾ ವನ್ಯಜೀವಿ ಅಭಯಾರಣ್ಯದಿಂದ ಗ್ರಾಮಕ್ಕೆ ಬಂದ ಕಾಡಾನೆ ದಾಳಿ ಮಾಡಿದೆ. ಬೃಹತ್ ಆನೆ 70 ವರ್ಷದ ಮಹಿಳೆಯನ್ನು ತುಳಿದು ಸಾಯಿಸಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜೆ, ಮಾಯಾ ಮುರ್ಮು ಅವರ ಕುಟುಂಬ ಸದಸ್ಯರು ಅವಳ ಅಂತಿಮ ವಿಧಿಗಳನ್ನು ನಡೆಸುತ್ತಿದ್ದಾಗ, ಹಠಾತ್ ಅಲ್ಲಿಗೆ ಆಗಮಿಸಿದ ಆನೆ ಚಿತೆ ಮೇಲೆ ಇರಿಸಿದ್ದ ಶವವನ್ನು ತೆಗೆದು ಕೆಳಗೆ ಬೀಳಿಸಿ ತುಳಿದು ಮತ್ತೆ ಕಾಡಿಗೆ ಹಿಂತಿರುಗಿದೆ ಎಂದು ವರದಿಯಾಗಿದೆ. ಈ ಘಟನೆ ನಡೆದು ಕೆಲವು ಗಂಟೆಗಳ ನಂತರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ