ಕಾರವಾರ: ಪ್ರಧಾನಿ ನರೇಂದ್ರ ಮೋದಿ ನಡೆಸಿದ 91ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಾರಗೋಡ ಗ್ರಾಮದ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಅವರನ್ನು ಶ್ಲಾಘಿಸಿದ್ದಾರೆ.
ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆಯುರ್ವೇದಿಕ್ ಔಷಧಿಗಳ ಮಹತ್ವ, ಜೇನು ಕೃಷಿ, ಜಾತ್ರೆ- ಸಂಸ್ಕೃತಿಗಳ ಬಗ್ಗೆ ಮಾತನಾಡಿರುವ ಅವರು ಜೇನು ಕೃಷಿಯಲ್ಲಿ ಬೇರೆಬೇರೆ ರಾಜ್ಯಗಳ ಜೇನು ಕೃಷಿ ಸಾಧಕರನ್ನ ಪರಿಚಯಿಸಿದ್ದಾರೆ.
ವಿವಿಧೆಡೆಯ ಜೇನು ಕೃಷಿಕರು, ಆಯುರ್ವೇದಿಕ್ ಗಿಡಮೂಲಿಕೆ ಬೆಳೆಗಾರರನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಅವರು ಶಿರಸಿ ತಾಲೂಕಿನ ತಾರಗೋಡದ ಹೆಗಡೆ ಮಧುಕೇಶ್ವರ ಅವರ ಜೇನು ಕೃಷಿ ಸಾಧನೆ ಕೊಂಡಾಡಿದ್ದಾರೆ.
ಸರ್ಕಾರದ ಸಹಾಯಧನ ಸೌಲಭ್ಯ ಪಡೆದಿದ್ದ ಮಧುಕೇಶ್ವರ ಹೆಗಡೆ ಕಳೆದ 35 ವರ್ಷದ ಹಿಂದೆ ಕೇವಲ 50 ಜೇನು ಪೆಟ್ಟಿಗೆ ಇಟ್ಟುಕೊಂಡು ಜೇನು ಕೃಷಿ ಪ್ರಾರಂಭಿಸಿದ ಅವರು ಈಗ 1,500 ಜೇನು ಕುಟುಂಬ ಇರುವ ಪೆಟ್ಟಿಗೆಯನ್ನು ನಿರ್ವಹಿಸುತ್ತಿದ್ದಾರೆ. ವಾರ್ಷಿಕ ಸರಾಸರಿ 4.5 ಟನ್ ಜೇನುತುಪ್ಪ ಉತ್ಪಾದಿಸುತ್ತಿದ್ದಾರೆ ಎಂದು ಕೊಂಡಾಡಿದ್ದಾರೆ.
ವಲಸ್ಪತಿ ಜೇನುತುಪ್ಪ ಉತ್ಪಾದಿಸುವ ಅವರು ನೇರಳೆ ಜೇನುತುಪ್ಪ, ತುಳಸಿ ಜೇನುತುಪ್ಪ, ಆಮ್ಲ ಜೇನುತುಪ್ಪ, ಅಂಟವಾಳ ಜೇನುತುಪ್ಪ, ಮಲ್ಲ್ಟಿಫ್ಲೋರಾ ಜೇನುತುಪ್ಪ ಸೇರಿದಂತೆ ಹಲವು ವಿಧದ ವನಸ್ಪತಿ ಜೇನು ತುಪ್ಪಗಳನ್ನು ಉತ್ಪಾದಿಸುತ್ತಾರೆ. ಇದಲ್ಲದೇ ನಿಸರಿ ಜೇನು ಕೃಷಿ ಸಹ ಮಾಡುತ್ತಿದ್ದು, ಜೇನಿನ ಮಕರಂದಗಳನ್ನು ಸಂಗ್ರಹಿಸಿ ಔಷಧಿಗೆ ಸಹ ಬಳಕೆ ಮಾಡುತ್ತಿದ್ದಾರೆ.
ಇವರ ಜೇನು ಹುಳುಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿಟ್ಟು ತುಪ್ಪ ತಯಾರಿಸುತ್ತಿದ್ದಾರೆ ಎಂದು ಮಧುಕೇಶ್ವರ ಅವರ ಜೇನು ಕೃಷಿ ಕುರಿತು ಪ್ರಧಾನಿಯವರು ಪ್ರಸ್ತಾಪಿಸಿ ಇವರ ಸಾಧನೆಯನ್ನು ಬಣ್ಣಿಸಿದ್ದಾರೆ.
ವಿವಿಧ ನಮೂನೆಯ ಜಾಮೂನ್ ಜೇನು, ತುಳಸಿ ಜೇನು, ಆಮ್ಲಾ ಜೇನು, ಜೊತೆಗೆ ವನಸ್ಪತಿ ಜೇನನ್ನೂ ತಯಾರಿಸುತ್ತಿದ್ದಾರೆ. ಜೇನುಕುಟುಂಬ ನಿರ್ವಹಣೆ, ಅದರ ಉಪ ಉತ್ಪನ್ನಗಳಿಂದ ಮಧುಕೇಶ್ವರ ಎಂಬ ತಮ್ಮ ಹೆಸರನ್ನು ಅನ್ವರ್ಥಕ ಮಾಡಿಕೊಂಡಿದ್ದಾರೆ.
ಕೃಷಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಜೇನು ಕೃಷಿ ಬಗ್ಗೆ ಉಚಿತ ವಸತಿ ಸೌಕರ್ಯ ನೀಡಿ ತರಬೇತಿ ಹಾಗೂ ಮಾಹಿತಿಯನ್ನು ನೀಡುತ್ತಾ ಬಂದಿದ್ದಾರೆ.
ಪ್ರಧಾನಿ ಹೆಸರು ಉಲ್ಲೇಖಿಸಿರುವ ಕುರಿತು ಸಂತಸ ಹಂಚಿಕೊಂಡ ಮಧುಕೇಶ್ವರ ಹೆಗಡೆಯವರು, ಜೇನು ಕೃಷಿ ಮೂಲಕ ಪ್ರಧಾನ ಮಂತ್ರಿಯವರು ನನ್ನನ್ನು ಗುರುತಿಸುವಂತೆ ಮಾಡಿದೆ. ಮೋದಿಯವರಂತಹ ಪ್ರಧಾನಿ ನನ್ನ ಹೆಸರನ್ನು ಉಲ್ಲೇಖಿಸಬಹುದು ಎಂಬ ನಿರೀಕ್ಷೆ ಇರಲಿಲ್ಲ. ನನಗೆ ಅಚ್ಚರಿಯ ಜತೆ ಸಂತಸವಾಯಿತು ಎಂದು ಹೇಳಿಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ