ಹೊನ್ನಾವರ: ಖ್ಯಾತ ತಬಲಾ ವಾದಕ ಎನ್‌.ಎಸ್‌.ಹೆಗಡೆ ಹಿರೇಮಕ್ಕಿ ನಿಧನ

ಹೊನ್ನಾವರ: ಖ್ಯಾತ ತಬಲಾ ವಾದಕ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿಯ  ಹಿರೇಮಕ್ಕಿ ಎನ್‌.ಎಸ್‌.ಹೆಗಡೆ ಹಿರೇಮಕ್ಕಿ ಶನಿವಾರ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.
ಅವರು ಪತ್ನಿ ಹಾಗೂ ಅಪಾರ ಶಿಷ್ಯ ವೃಂದ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಆಕಾಶವಾಣಿಯ ಶ್ರೇಣಿ ಕಲಾವಿದರಾಗಿದ್ದ ಅವರಿಗೆ ಉತ್ತರ ಕನ್ನಡದ ಕರಾವಳಿಯಲ್ಲಿ ಅನೇಕ ತಬಲಾ ಪಟುಗಳನ್ನು ತಯಾರು ಮಾಡಿದ ಕೀರ್ತಿ ಸಲ್ಲುತ್ತದೆ.
ಹೊನ್ನಾವರದ ಕಲಾ ಸಂಗಮ, ಕೂಜಳ್ಳಿಯ ಸ್ವರ ಸಂಗಮ, ಕುಮಟಾದ ಗಂಧರ್ವ ಕಲಾ ಕೇಂದ್ರ ಮೊದಲಾದ ಸಂಗೀತ ಶಾಲೆಗಳಲ್ಲಿ ತಬಲಾ ಶಿಕ್ಷಕರಾಗಿ ನೂರಾರು ವಿದ್ಯಾರ್ಥಿಗಳಿಗೆ ತಬಲಾ ಕಲಿಸಿದ್ದಾರೆ.

ನೂರಾರು ಸಂಗೀತ ಕಾರ್ಯಕ್ರಮಗಳಲ್ಲಿ ಗಾಯನ ಹಾಗೂ ವಾದನ ಕಾರ್ಯಕ್ರಮಗಳಿಗೆ ಸಾಥ್‌ ಸಂಗತ್‌ ಮಾಡಿದ್ದಾರೆ. ಅನೇಕ ತಬಲಾ ಸೋಲೋ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ತಮ್ಮ ಆರಂಭಿಕ ತಬಲಾ ಶಿಕ್ಷಣವನ್ನು ಹೊನ್ನಾವರ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿದ್ದ ಪಂಡಿತ ಎಸ್‌.ಎಂ.ಭಟ್‌ ಕಟ್ಟಿಗೆ ಅವರಲ್ಲಿ ಪಡೆದ ಅವರು, ನಂತರ ಶಿರಸಿ ತಾಲೂಕಿನ ಕಲ್ಗುಂಡಿಕೊಪ್ಪದ ಶ್ರೀಪಾದ ರಾವ್‌ ಅವರ ಬಳಿ ಶಿಕ್ಷಣ ಮುಂದುವರಿಸಿದರು. ನಂತರ ಧಾರವಾಡದ ಆಕಾಶವಾಣಿ ನಿಲಯ ಕಲಾವಿದರಾಗಿದ್ದ ಪಂಡಿತ್‌ ಜಿ.ಎನ್‌ ಪರ್ವತೀಕರ ಅವರಲ್ಲಿ ಹೆಚ್ಚಿನ  ತಬಲಾ ಶಿಕ್ಷಣ ಪಡೆದಿದ್ದರು. ತಬಲಾ ವಿದ್ವತ್‌ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದ ಅವರು ನಂತರ ತಬಲಾ ವಾದಕರಾಗಿ ನಾಡಿನ ಹೆಸರಾಂತ ಕಲಾವಿದರಿಗೆ ಸಾಥ್‌ ಸಂಗತ್‌ ಮಾಡಿದ್ದಾರೆ. ನೂರಾರು ವಿದ್ಯಾರ್ಥಿಗಳಿಗೆ ತಬಲಾ ಕಲಿಸಿದ್ದಾರೆ.
ಸಂತಾಪ: ತಬಲಾ ವಾದಕ ಎನ್.ಎಸ್‌.ಹೆಗಡೆ ಹಿರೇಮಕ್ಕಿ ನಿಧನಕ್ಕೆ ಕುಮಟಾದ ಗಂಧರ್ವ ಕಲಾಕೇಂದ್ರ ಪದಾಧಿಕಾರಿಗಳು , ಕೂಜಳ್ಳಿಯ ಸ್ವರ ಸಂಗಮ ಬಳಗದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

4.4 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement