ಕರಾಚಿ : ಬಹಳ “ನಾಚಿಕೆ ಸ್ವಭಾವ”ದ ಹದಿಹರೆಯದ ಪಾಕಿಸ್ತಾನಿ ಹುಡುಗಿಯೊಬ್ಬಳು ಭಾರತೀಯ ವ್ಯಕ್ತಿಯನ್ನು ಭೇಟಿಯಾಗಲು ಮತ್ತು ಮದುವೆಯಾಗಲು ಬೆಂಗಳೂರಿಗೆ ಹೇಗೆ ಪ್ರಯಾಣಿಸಿದಳು ಎಂಬ ಕುತೂಹಲಕಾರಿ ಕಥೆಯನ್ನು ಆಕೆಯ ಚಿಕ್ಕಪ್ಪ ಈಗ ಬಹಿರಂಗಪಡಿಸಿದ್ದಾರೆ. ಅವಳು ವಿಮಾನ ಟಿಕೆಟ್ ಖರೀದಿಸಲು ತನ್ನ ಆಭರಣಗಳನ್ನು ಮಾರಿದ್ದಾಳೆ ಹಾಗೂ ಸ್ನೇಹಿತರಿಂದ ಹಣವನ್ನು ಸಾಲ ಪಡೆದಿದ್ದಾಳೆ ಎಂದು ಅವರು ಹೇಳಿದ್ದಾರೆ.
ಮೊದಲು ದುಬೈಗೆ ಹಾಗೂ ನಂತರ ಅಲ್ಲಿಂದ ಕಠ್ಮಂಡುವಿಗೆ ಹೋಗಿ ಅಲ್ಲಿಂದ ಭಾರತಕ್ಕೆ ತೆರಳಿದಳು ಎಂದು ಅವರು ಹೇಳಿದ್ದಾರೆ.
ಇಕ್ರಾ ಜೀವನಿ ಎಂದು ಗುರುತಿಸಲಾದ ಹುಡುಗಿಯನ್ನು ಕಳೆದ ತಿಂಗಳು ಬೆಂಗಳೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಅಲ್ಲಿ ಅವಳು ಹಿಂದೂ ವ್ಯಕ್ತಿ ಮುಲಾಯಂ ಸಿಂಗ್ ಯಾದವ್ ಜೊತೆ ವಾಸಿಸುತ್ತಿದ್ದಳು. ಕಳೆದ ಭಾನುವಾರ ವಾಘಾ ಗಡಿಯಲ್ಲಿ ಆಕೆಯನ್ನು ಪಾಕಿಸ್ತಾನದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಇವರಿಬ್ಬರು ಆನ್ಲೈನ್ ಗೇಮ್ ಲುಡೋ ಆಡುವಾಗ ಪರಸ್ಪರ ಪರಿಚಿತರಾದರು. ಮತ್ತು ಅಲ್ಲಿಂದ ಇವರ ಮಧ್ಯೆ ಪ್ರೀತಿ ಬೆಳೆಯಿತು. ನಂತರ ಮದುವೆಯಾಗಲು ನಿರ್ಧರಿಸಿದರು. ಇದರ ಬೆನ್ನಲ್ಲೇ ಆಕೆ ಕೆಲವು ತಿಂಗಳ ಹಿಂದೆ ದುಬೈಗೆ ಹೋಗಿ, ಅಲ್ಲಿಂದ ನೇಪಾಳ ತಲುಪಿ ಅಲ್ಲಿ ಮುಲಾಯಂ ಸಿಂಗ್ ಯಾದವ್ ಜೊತೆ ಮದುವೆಯಾದಳು.
ಭಾರತೀಯ ಅಧಿಕಾರಿಗಳು ಅವಳನ್ನು ಪಾಕಿಸ್ತಾನಿ ಅಧಿಕಾರಿಗಳಿಗೆ ಹಸ್ತಾಂತರಿಸಿದ ನಂತರ ಅವಳು ಈಗ ಮನೆಗೆ ಮರಳಿದ್ದಾಳೆ ಎಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕುಟುಂಬದ ಮೂಲಗಳು ತಿಳಿಸಿವೆ.
ಕುತೂಹಲಕಾರಿ ಪ್ರೇಮ ಕಥೆ…
ಕಳೆದ ಸೆಪ್ಟೆಂಬರ್ನಲ್ಲಿ ಕಾಲೇಜಿಗೆ ಹೋದ ನಂತರ ಇಕ್ರಾ ಇದಕ್ಕಿದ್ದಂತೆ ನಾಪತ್ತೆಯಾದಾಗ ಈ ಕುತೂಹಲಕಾರಿ ಕಥೆ ಪ್ರಾರಂಭವಾಯಿತು. ಇಕ್ರಾಳೊಂದಿಗೆ ಮಾತನಾಡಲು ಪ್ರಯತ್ನಿಸಿದ ಮನೆಯವರು ಅದರಲ್ಲಿ ಯಶಸ್ವಿಯಾಗಲಿಲ್ಲ.
ಬಹಳ ನಾಚಿಕೆ ಸ್ವಭಾವದ ಅವಳು ಒಬ್ಬಳೇ ಭಾರತಕ್ಕೆ ಹೋಗಲು ಹೇಗೆ ಧೈರ್ಯ ಮಾಡಿದಳು ಎಂಬುದು ನಮಗೆ ಇನ್ನೂ ತಿಳಿದಿಲ್ಲ. ಎಲ್ಲರಂತೆ ಇದು ನಮಗೂ ರಹಸ್ಯಮಯವಾಗಿದೆ” ಎಂದು ಇಕ್ರಾ ಚಿಕ್ಕಪ್ಪ ಹೇಳಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ನಡೆದ ಘಟನೆಯ ಆಘಾತದಿಂದ ಕುಟುಂಬ ಇನ್ನೂ ಚೇತರಿಸಿಕೊಂಡಿಲ್ಲ ಎಂದು ಕುಟುಂಬದ ಮೂಲವೊಂದು ತಿಳಿಸಿದೆ.
16 ವರ್ಷದ ಇಕ್ರಾ ಕರಾಚಿಯಿಂದ ದುಬೈಗೆ, ಅಲ್ಲಿಂದ ಕಠ್ಮಂಡುವಿಗೆ ಮತ್ತು ಅಲ್ಲಿಂದ ಭಾರತಕ್ಕೆ ಹೇಗೆ ಪ್ರಯಾಣ ಬೆಳೆಸಿದಳು ಎಂಬ ಪ್ರಶ್ನೆಗಳು ಇನ್ನೂ ಹಾಗೆಯೇ ಉಳಿದಿವೆ. “ಅವಳು ಈ ದೀರ್ಘ ಮತ್ತು ಅಪಾಯಕಾರಿ ಪ್ರಯಾಣವನ್ನು ಕೈಗೊಂಡಳು ಏಕೆಂದರೆ ಅವಳು ಮುಸ್ಲಿಂ ಸಾಫ್ಟ್ವೇರ್ ಇಂಜಿನಿಯರ್ ಸಮೀರ್ ಅನ್ಸಾರಿ ಎಂದು ಭಾವಿಸಿದ ಭಾರತೀಯ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು” ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವಾಸ್ತವವಾಗಿ ಾವಳು ಪ್ರೀತಿಸುತ್ತಿದ್ದ ಅನ್ಸಾರಿ 26 ವರ್ಷದ ಮುಲಾಯಂ ಸಿಂಗ್ ಯಾದವ್, ಬೆಂಗಳೂರಿನಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದು, ಆನ್ಲೈನ್ ಲುಡೋ ಆಟಗಳನ್ನು ಆಡುವಾಗ ಇಕ್ರಾಳಿಗೆ ಪರಿಚಯವಾಗಿದ್ದಾನೆ.
ಇಕ್ರಾ ತನ್ನ ಆಭರಣಗಳನ್ನು ಮಾರಿ ತನ್ನ ಕಾಲೇಜು ಸ್ನೇಹಿತರಿಂದ ದುಬೈಗೆ ವಿಮಾನ ಟಿಕೆಟ್ ಖರೀದಿಸಲು ಮತ್ತು ನಂತರ ಕಠ್ಮಂಡುವಿಗೆ ಪ್ರಯಾಣಿಸಲು ಹಣವನ್ನು ಸಾಲ ಪಡೆದಿದ್ದಳು. ಅಲ್ಲಿಂದ ಉತ್ತರ ಪ್ರದೇಶದ ಯಾದವ್ ಇಕ್ರಾಳನ್ನು ಭಾರತ-ನೇಪಾಳ ಗಡಿಯ ಮೂಲಕ ಬೆಂಗಳೂರಿಗೆ ಕರೆತರಲು ವ್ಯವಸ್ಥೆ ಮಾಡಿದ್ದ. ಭಾರತಕ್ಕೆ ವೀಸಾ ಪಡೆಯಲು ಅವಳಿಗೆ ಸಾಧ್ಯವಾಗದ ಕಾರಣ ಇಕ್ರಾ ದುಬೈಗೆ ತೆರಳಿ, ಅಲ್ಲಿಂದ ಕಠ್ಮಂಡುಗೆ ಹೋಗಿದ್ದಾಳೆ ಎಂದು ಆಕೆಯ ಚಿಕ್ಕಪ್ಪ ಅಫ್ಜಲ್ ಜೀವಾನಿ ಹೇಳಿದ್ದಾರೆ.
ಅವಳು ಯಾದವ್ ಜೊತೆ ಮನೆಯಲ್ಲಿ ಇದ್ದ ಪ್ರದೇಶದಲ್ಲಿ ನೆರೆಹೊರೆಯವರು ಹಿಂದೂಗಳ ಮನೆಯಲ್ಲಿ ಆಕೆ ನಮಾಜ್ ಮಾಡುತ್ತಿರುವುದನ್ನು ನೋಡಿ ಪೊಲೀಸರಿಗೆ ದೂರು ನೀಡಿದ ನಂತರ ಇಕ್ರಾಳನ್ನು ಭಾರತದ ಪೊಲೀಸರು ಅವಳನ್ನು ವಶಕ್ಕೆ ಪಡೆದರು ಎಂದು ಅವರು ಹೇಳಿದರು.
“ಅಲ್ಲಿ ರವಾ ಎಂಬ ಹಿಂದೂ ಹೆಸರಿನಲ್ಲಿ ವಾಸಿಸುತ್ತಿದ್ದ ಹುಡುಗಿ ಹಿಂದೂಗಳ ಮನೆಯಲ್ಲಿ ನಮಾಜ್ ಮಾಡುವುದನ್ನು ನೋಡಿ ನೆರೆಹೊರೆಯವರು ಅನುಮಾನಗೊಂಡರು” ಎಂದು ಅಫ್ಜಲ್ ಹೇಳಿದರು.
ದೂರಿನ ನಂತರ ಭಾರತೀಯ ಪೊಲೀಸರು ಇಕ್ರಾಳನ್ನು ವಶಕ್ಕೆ ಪಡೆದ ನಂತರ ಆಕೆಯನ್ನು ಸರ್ಕಾರದ ಮಹಿಳಾ ಆಶ್ರಯ ಮನೆಯಲ್ಲಿ ಇರಿಸಿದರು. ಮತ್ತು ಅಲ್ಲಿ ಆಕೆ ಭಾರತಕ್ಕೆ ಹೇಗೆ ಬಂದಳು ಎಂಬುದರ ಕುರಿತು ಪೊಲೀಸರು ಮತ್ತು ಗುಪ್ತಚರ ಸಿಬ್ಬಂದಿ ಅವಳನ್ನು ಪ್ರಶ್ನಿಸಿದರು.ಯಾದವ್ ಅವಳ ಹೆಸರನ್ನು ರವಾ ಎಂದು ಬದಲಾಯಿಸಿದ ನಂತರ ಇಕ್ರಾಗೆ ಆಧಾರ್ ಕಾರ್ಡ್ ಸಹ ಮಾಡಿಸಿದ್ದ ಮತ್ತು ನಂತರ ಅವಳು ಭಾರತೀಯ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದಳು.
ಆದರೆ ಆಕೆ ಪುನಃ ಮನೆಗೆ ಮರಳಿ ಬರುವಂತೆ ಮಾಡಿದ್ದಕ್ಕಾಗಿ ನಾವು ಪಾಕಿಸ್ತಾನ ಮತ್ತು ಭಾರತ ಸರ್ಕಾರಗಳಿಗೆ ಯಾವಾಗಲೂ ಕೃತಜ್ಞರಾಗಿರುತ್ತೇವೆ ಎಂದು ಅಫ್ಜಲ್ ಹೇಳಿದರು.
ಬಾಲಕಿ ಭಾರತದಿಂದ ಪಾಕಿಸ್ತಾನಕ್ಕೆ ಹಿಂದಿರುಗಿದಾಗಿನಿಂದ ನಿರಂತರವಾಗಿ ನಮ್ಮ ಕ್ಷಮೆ ಕೇಳುತ್ತಿದ್ದಾಳೆ ಎಂದು ಅವರು ಹೇಳಿದ್ದಾರೆ. ಆನ್ಲೈನ್ ಲುಡೋ ಗೇಮ್ಗಳನ್ನು ಆಡುತ್ತಿರುವಾಗ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರು ಭೇಟಿಯಾದಾಗ ಭಾರತೀಯ ವ್ಯಕ್ತಿ ಮುಸ್ಲಿಂ ಹುಡುಗನಂತೆ ನಟಿಸುವ ಮೂಲಕ ಇಕ್ರಾಳನ್ನು ವಂಚಿಸಿದ್ದಾನೆ ಎಂದು ಅವರು ದೂರಿದ್ದಾರೆ.
ದಕ್ಷಿಣ ಸಿಂಧ್ ಪ್ರಾಂತ್ಯದ ಹೈದರಾಬಾದ್ ನಗರದ ಶಾಹಿ ಬಜಾರ್ನಲ್ಲಿ ಜೀವನಿ ಕುಟುಂಬ ವ್ಯಾಪಾರ ವಹಿವಾಟು ಹೊಂದಿದೆ. ಬೆಂಗಳೂರಿಗೆ ಬಂದು ಯಾದವನನ್ನು ಭೇಟಿಯಾದ ನಂತರ ಇಕ್ರಾಳಿಗೆ ತನ್ನ ಪ್ರಮಾದ ಗೊತ್ತಾಯಿತು. ಹೀಗಾಗಿ ಅವಳು ತನ್ನ ತಾಯಿಗೆ ಎಲ್ಲವನ್ನೂ ತಿಳಿಸಲು ವಾಟ್ಸಾಪ್ನಲ್ಲಿ ಕರೆ ಮಾಡಲು ಪ್ರಾರಂಭಿಸಿದಳು. ಕುಟುಂಬದವರು ಅವಳ ಕರೆ ಮಾಡಿದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು ಮತ್ತು ಅವರು ಪಾಕಿಸ್ತಾನದ ವಿದೇಶಾಂಗ ಕಚೇರಿಯೊಂದಿಗೆ ಅಗತ್ಯವಿರುವ ಚಾನಲ್ಗಳ ಮೂಲಕ ಸಂಪರ್ಕದಲ್ಲಿದ್ದರು. ನಂತರ ಅವರು ಭಾರತೀಯ ಅಧಿಕಾರಿಗಳನ್ನು ಸಂಪರ್ಕಿಸಿ ಹುಡುಗಿಯನ್ನು ಹುಡುಕಲು ಸಹಾಯ ಮಾಡುವಂತೆ ಕೇಳಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವ್ಯಸನ ಮತ್ತು ಸಾಮಾಜಿಕ ಮಾಧ್ಯಮದ ಪರಿಣಾಮಗಳ ಬಗ್ಗೆ ಪರಿಣತಿ ಹೊಂದಿರುವ ಮನೋವೈದ್ಯರಾದ ಡಾ. ಫಾತಿಮಾ ಸೆಹಗಲ್ ಅವರು, ಇಕ್ರಾ ಪ್ರಕರಣವು ತನಗೆ ದೊಡ್ಡ ಆಶ್ಚರ್ಯವಲ್ಲ ಏಕೆಂದರೆ ಇದು ಆನ್ಲೈನ್ನಲ್ಲಿ ಬೆಳೆಯುವ ಸ್ನೇಹದ ಶಕ್ತಿಯಾಗಿದೆ ಎಂದು ತಿಳಿಸಿದರು.
ಯಾರಾದರೂ, ವಿಶೇಷವಾಗಿ ಸಂಪ್ರದಾಯವಾದಿ ಕುಟುಂಬದ ಹಿನ್ನೆಲೆಯಿಂದ ಬಂದು ಅಂತರ್ಮುಖಿಯಾಗಿದ್ದರೆ ಅವನು ಅಥವಾ ಅವಳು ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಸುಲಭವಾಗಿ ಸ್ನೇಹಕ್ಕೆ ಆಕರ್ಷಿತರಾಗುತ್ತಾರೆ ಮತ್ತು ಅವರು ಆನ್ಲೈನ್ನಲ್ಲಿ ಭೇಟಿಯಾದ ಯಾರೊಂದಿಗಾದರೂ ಬಲವಾದ ನಂಬಿಕೆ, ಭಾವನಾತ್ಮಕ ಬಂಧ ಬೆಳೆಸಿಕೊಳ್ಳುತ್ತಾರೆ ಎಂದು ಅವರು ಹೇಳಿದಳು.
ಅಂತಹ ಹುಡುಗಿ ಅಥವಾ ಹುಡುಗ ತಮ್ಮ ಮಾತುಗಳನ್ನು ಕೇಳುವ, ತಮ್ಮನ್ನು ಪ್ರೋತ್ಸಾಹಿಸುವ ಮತ್ತು ತಮ್ಮ ಬಗ್ಗೆ ಪ್ರೀತಿಯನ್ನು ವ್ಯಕ್ತಪಡಿಸುವ ಯಾರೊಂದಿಗಾದರೂ ಸ್ನೇಹ ಬೆಳೆಸಿದಾಗ ಅವರು ಅವರೊಂದಿಗೆ ಚಲನಚಿತ್ರದಂತಹ ಭವಿಷ್ಯವನ್ನು ದೃಶ್ಯೀಕರಿಸಲು ಪ್ರಾರಂಭಿಸುತ್ತಾರೆ ಎಂದು ಫಾತಿಮಾ ಹೇಳಿದರು.
ಅದಕ್ಕಾಗಿಯೇ ಈ ದಿನಗಳಲ್ಲಿ ಪೋಷಕರು ಸಾಮಾಜಿಕ ಮಾಧ್ಯಮದ ಕೆಟ್ಟ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ತಮ್ಮ ಮಕ್ಕಳಿಗೆ ಅವುಗಳ ಬಗ್ಗೆ ತಿಳಿವಳಿಕೆ ನೀಡುವುದು ತುಂಬಾ ಅವಶ್ಯಕವಾಗಿದೆ” ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ