ನಯಾ ಪೈಸೆ ತೆಗೆದುಕೊಳ್ಳದೆ 138 ದಂಪತಿಗಳ ವಿಚ್ಛೇದನ ತಡೆದಿದ್ದ ವಕೀಲನಿಗೆ ಈಗ ವಿಚ್ಛೇದನ ನೀಡಿದ ಪತ್ನಿ…! ಕಾರಣ ತಿಳಿದರೆ ದಿಗ್ಭ್ರಮೆ…!!

ಅಹಮದಾಬಾದ್: ಒಮ್ಮೊಮ್ಮೆ ಜೀವನದಲ್ಲಿ ನಾವು ಒಂದು ಬಯಸಿದರೆ ದೈವವು ಇನ್ನೊಂದು ಬಗೆಯುತ್ತದೆ. ನಾವು ಏನಾಗಬಾರದು ಎಂದು ಬಯಸುತ್ತೇವೆಯೇ ಒಮ್ಮೊಮ್ಮೇ ಜೀವನದಲ್ಲಿ ಅದೇ ನಡೆಯುತ್ತದೆ. ಗುಜರಾತಿನಲ್ಲೂ ಇಂಥದ್ದೇ ಒಂದು ಘಟನೆ ನಡೆದಿದೆ. 16 ವರ್ಷಗಳಿಗಿಂತ ಹೆಚ್ಚು ವೃತ್ತಿ ಪರ ಅನುಭವ ಇರುವ ವಕೀಲರೊಬ್ಬರು ಈವರೆಗೆ 138 ಜೋಡಿಗಳ ವಿಚ್ಛೇದನ ತಡೆದಿದ್ದಾರೆ. ಒಂದೇ ಒಂದು ಪೈಸೆ ಹಣ ತೆಗೆದುಕೊಳ್ಳದೆ ರಾಜಿ ಸಂಧಾನದ ಮೂಲಕವೇ 138 ಜೋಡಿಗಳ ವಿಚ್ಛೇದನವನ್ನು ತಡೆದು ಸತಿ-ಪತಿಯರನ್ನು ಒಂದಾಗಿಸಿದ್ದಾರೆ. ಆದರೆ ಈಗ ಅವರ ಪತ್ನಿಯೇ ಅವರಿಗೆ ವಿಚ್ಛೇದನಕ್ಕೆ ಕೋರ್ಟ್‌ ಮೆಟ್ಟಿಲೇರಿದ್ದಾಳೆ..!
ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಪ್ರಕರಣಗಳನ್ನು ವಾದಿಸಿದ್ದಾರೆ. ಅದರಲ್ಲಿ ವಿಚ್ಛೇದನ ಪ್ರಕರಣಗಳು ಪ್ರಮುಖವಾಗಿವೆ. ವಿಚ್ಛೇದನ ಕೋರಿ ತನ್ನ ಬಳಿ ಬರುವ ದಂಪತಿ ಕೂರಿಸಿ ಅವರು ಕೌನ್ಸೆಲಿಂಗ್ ಮಾಡುತ್ತಾರೆ. ಬೇರೆಯಾಗದಂತೆ ಮನವರಿಕೆ ಮಾಡಿ ನ್ಯಾಯಾಲಯಕ್ಕೆ ಹೋಗದಂತೆ ಮಾಡಿ ಮನೆಗೆ ಕಳುಹಿಸುತ್ತಾರೆ. ಒಂದು ವೇಳೆ ಹೋದರೂ ಅಲ್ಲಿಯೂ ಅವರನ್ನು ಒಂದಾಗಿಸಲು ಪ್ರಯತ್ನಿಸುತ್ತಾರೆ. ಹೀಗೆ ಅವರು ಕುಟುಂಬಗಳು ಒಡೆಯದಂತೆ ತಡೆಯುವುದರಲ್ಲಿಯೇ ಸಂತೋಷ ಕಾಣುತ್ತಾರೆ. ಅಂಥವರಿಗೆ ಈಗ ಪತ್ನಿಯಿಂದ ಆಘಾತ ಎದುರಾಗಿದೆ. ಅವರ ಪತ್ನಿ ವಿಚ್ಛೇದನ ನೀಡಿದ್ದಾಳೆ ಎಂದು ವರದಿಯಾಗಿದೆ.

ಆಗಿದ್ದೇನು..?
ವಕೀಲರು ಅಹಮದಾಬಾದ್ ಹೈಕೋರ್ಟ್‌ನಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ 16 ವರ್ಷಗಳ ವೃತ್ತಿಜೀವನದಲ್ಲಿ ಅನೇಕ ಪ್ರಕರಣಗಳನ್ನು ವಾದಿಸಿದರು. ಈ ಅವಧಿಯಲ್ಲಿ ಅವರ ಬಳಿ ಬಂದ 138 ಜೋಡಿಗಳು ವಿಚ್ಛೇದನ ಪಡೆಯದಂತೆ ಮನವರಿಕೆ ಮಾಡಿ ತಡೆದಿದ್ದಾರೆ. ಅವರೆಲ್ಲ ಈಗ ನೆಮ್ಮದಿಯಿಂದ ಬದುಕುತ್ತಿದ್ದಾರೆ. ತನ್ನ ಬಳಿ ಬಂದವರನ್ನು ವಿಚ್ಛೇದನಕ್ಕೆ ಬಿಡದ ಕಾರಣ ಅವರಿಗೆ ಪ್ರಕರಣಗಳು ಕಡಿಮೆಯಾದವು. ವಿಚ್ಛೇದನ ಪಡೆಯಲು ನ್ಯಾಯವಾದಿಯ ಪತ್ನಿ ನೀಡಿರುವ ಕಾರಣವೂ ಅವರ ಈ ಸಮಾಜ ಸೇವೆ. ತಮ್ಮ ಬಳಿ ಬರುವ ದಂಪತಿಗೆ ಬುದ್ಧಿಮಾತು ಹೇಳುವ ವಕೀಲ, ಅವರಿಂದ ಹಣ ಪಡೆಯುತ್ತಿಲ್ಲ. ಹಣ ಮಾಡುವವರ ನಡುವೆ ಗಂಡನ ಈ ವರ್ತನೆ ಹೆಂಡತಿಗೆ ಅಸಹನೀಯ ಎನಿಸಿದೆ. ಹೆಸರಾಂತ ವಕೀಲರಾದರೂ ಹಣ ಇಲ್ಲದಿದ್ದರೆ ಸಂಸಾರ ನಡೆಸುವುದು ಹೇಗೆ? ಹಣಕಾಸಿನ ಮುಗ್ಗಟ್ಟು ಈ ವಕೀಲನ ಕುಟುಂಬವನ್ನು ಕಾಡಿದೆ. ಬಂದವರಿಗೆ ಕೌನ್ಸೆಲಿಂಗ್ ನೀಡಿದರೂ ಅವರಿಂದ ಯಾವುದೇ ಶುಲ್ಕ ಪಡೆಯದ ಮಾಡದ ಕಾರಣ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಶುರುವಾಗಿದೆ. ಇದೇ ವಿಚಾರವಾಗಿ ಮನೆಯಲ್ಲಿ ನಿರಂತರ ಜಗಳಗಳು ನಡೆದಿವೆ. ಏನೇ ಆದರೂ ತನ್ನ ಗಂಡ ಬದಲಾಗುವುದಿಲ್ಲ ಎಂದು ಅರಿತ ಹೆಂಡತಿ, ವಿಚ್ಛೇದನ ಪಡೆಯಲು ಕೋರ್ಟ್ ಮೆಟ್ಟಿಲೇರಿದ್ದಾಳೆ.

ಪ್ರಮುಖ ಸುದ್ದಿ :-   ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕೆ ವಿರೋಧ : ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಪಕ್ಷದ ರಾಷ್ಟ್ರೀಯ ವಕ್ತಾರೆ ರಾಧಿಕಾ ಖೇರಾ

ಮಗಳಿಗೆ ತಂದೆಯೇ ರೋಲ್‌ ಮಾಡೆಲ್‌….
ವಕೀಲರಿಗೆ ಒಬ್ಬ ಮಗಳಿದ್ದಾಳೆ. ಅವಳೂ ಕಾನೂನು ವಿಷಯ ಓದುತ್ತಿದ್ದಾಳೆ. ಜಗಳದ ಕಾರಣದಿಂದ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆ ವೇಳೆ ಮಗಳು ತನ್ನ ತಾಯಿಯೊಂದಿಗೆ ಇದ್ದಾಳೆ. ವಿಚ್ಛೇದನ ಪ್ರಕ್ರಿಯೆ ನಂತರ ಅವಳು ತಂದೆಯೊಂದಿಗೆ ಇರುವುದಾಗಿ ಹೇಳಿದ್ದಾಳೆ. ತನ್ನ ತಂದೆಯೇ ತನ್ನ ರೋಲ್ ಮಾಡೆಲ್ ಎಂದು ಅವಳು ಹೇಳುತ್ತಾಳೆ. ಆಕೆಯ ಇಚ್ಛೆಯಂತೆ ನ್ಯಾಯಾಲಯವೂ ಆಕೆಗೆ ತಂದೆಯೊಂದಿಗೆ ಇರಲು ಅನುಮತಿ ನೀಡಿದೆ. ಈ ಪ್ರಕರಣದಲ್ಲಿ ಮತ್ತೊಂದು ವಿಶೇಷತೆಯೂ ಇದೆ. ಸಾಮಾನ್ಯವಾಗಿ ವಿಚ್ಛೇದನದ ನಂತರ ಪತ್ನಿಗೆ ಪತಿ ಜೀವನಾಂಶ ನೀಡಬೇಕಾಗುತ್ತದೆ. ಆದರೆ ಈ ಮಹಿಳೆ ತನ್ನ ಗಂಡನಿಂದ ಜೀವನಾಂಶ ಕೇಳಿಲ್ಲ ಎಂಬುದು ಗಮನಾರ್ಹ.
ಶುಲ್ಕ ರಹಿತ ವಕೀಲ
ವಿಚ್ಛೇದನಕ್ಕಾಗಿ ತನ್ನ ಬಳಿಗೆ ಬರುವವರಿಂದ ವಕೀಲರು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಇದಕ್ಕೊಂದು ವಿಚಿತ್ರ ಕಾರಣವಿದೆ. ಅವರ ಹತ್ತಿರದ ಸಂಬಂಧಿ ಈ ಹಿಂದೆ ವಿಚ್ಛೇದನ ಪಡೆದಿದ್ದರು ಎಂದು ಹೇಳಲಾಗಿದೆ. ಅಂದಿನಿಂದ ಯಾವುದೇ ದಂಪತಿ ತನ್ನ ಬಳಿ ಬಂದು ವಿಚ್ಛೇದನ ಕೇಳಿದರೂ ಒಂದು ರೂಪಾಯಿ ಕೂಡ ವಸೂಲಿ ಮಾಡದೆ ಅವರು ಕೌನ್ಸೆಲಿಂಗ್ ಮಾಡುತ್ತಿದ್ದರು. ಈ 16 ವರ್ಷಗಳ ವೃತ್ತಿ ಜೀವನದಲ್ಲಿ 138 ಜೋಡಿಗಳ ಮನವೊಲಿಸಿ ವಿಚ್ಛೇದನ ಪಡೆಯದಂತೆ ತಡೆದಿದ್ದಾರೆ.ಇದಲ್ಲದೆ, ಪತಿ-ಪತ್ನಿ ಒಟ್ಟಿಗೆ ಇರಲು ವಿಚ್ಛೇದನದ ವಿರುದ್ಧದ ಅಭಿಯಾನವನ್ನು ಸಹ ನಡೆಸಿದ್ದಾರೆ. ಆದರೆ ಪತ್ನಿಯನ್ನು ಒಪ್ಪಿಸಲು ಸಾಧ್ಯವಾಗಿಲ್ಲ ಎಂದು ವಿಷಾದ ಅವರಿಗಿದೆ.

ಪ್ರಮುಖ ಸುದ್ದಿ :-   ವೀಡಿಯೊ | ಜನವರಿಯಲ್ಲಿ ಉದ್ಘಾಟನೆಯಾದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ಇದೇ ಮೊದಲ ಬಾರಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement