ಚೆನ್ನೈ: ಕಳೆದ ದಿನದಿಂದ ಸುರಿದ ಭಾರೀ ಮಳೆಯ ನಂತರ ತಿರುನಲ್ವೇಲಿ ಮತ್ತು ತೂತುಕುಡಿ ಸೇರಿದಂತೆ ದಕ್ಷಿಣ ತಮಿಳುನಾಡಿನ ಹಲವಾರು ಪ್ರದೇಶಗಳಲ್ಲಿನ ಹಳ್ಳಿಗಳು, ಪಟ್ಟಣಗಳು, ರಸ್ತೆಗಳು ಮತ್ತು ಹೆದ್ದಾರಿಗಳು ಜಲಾವೃತಗೊಂಡು ನದಿಗಳನ್ನು ಹೋಲುತ್ತಿವೆ. ಧಾರಾಕಾರ ಮಳೆಯಿಂದ ತತ್ತರಿಸಿರುವ ತಮಿಳುನಾಡಿನ ನಾಲ್ಕು ದಕ್ಷಿಣ ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಈ ಪ್ರದೇಶದಲ್ಲಿ ಭಾರೀ ಮಳೆ ಮುಂದುವರಿದ ಕಾರಣ ಸೋಮವಾರ ಟುಟಿಕೋರಿನ್ ವಿಮಾನ ನಿಲ್ದಾಣದಲ್ಲಿ ಕನಿಷ್ಠ ಎಂಟು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ತಮಿಳುನಾಡಿನ ತೂತುಕುಡಿ ಜಿಲ್ಲೆಯ ರೈಲು ನಿಲ್ದಾಣಗಳಲ್ಲಿ 800 ಕ್ಕೂ ಹೆಚ್ಚು ಪ್ರಯಾಣಿಕರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ತಿರುನಲ್ವೇಲಿ, ಟುಟಿಕೋರಿನ್, ತೆಂಕಶಿ ಮತ್ತು ಕನ್ಯಾಕುಮಾರಿ ನಾಲ್ಕು ಜಿಲ್ಲೆಗಳ 7,434 ಜನರನ್ನು 84 ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ರಾಜ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರಿಗೆ ಸಹಾಯ ಮಾಡಲು ಒಟ್ಟು 425 ವಿಪತ್ತು ಪ್ರತಿಕ್ರಿಯೆ ತಂಡದ ಸದಸ್ಯರನ್ನು ನಿಯೋಜಿಸಲಾಗಿದೆ.
ಏತನ್ಮಧ್ಯೆ, ತೂತುಕುಡಿ ಜಿಲ್ಲೆಯ ಕಾಯಲ್ಪಟ್ಟಿಣಂನಲ್ಲಿ ಅತಿ ಹೆಚ್ಚು 95 ಸೆಂ.ಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ.
ತೂತುಕುಡಿ ಜಿಲ್ಲೆಯ ದೇವಾಲಯಗಳ ಪಟ್ಟಣವಾದ ತಿರುಚೆಂದೂರ್ನಲ್ಲಿಯೂ 62 ಸೆಂ.ಮೀ ನಿಂದ 69 ಸೆಂ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.
ತಿರುನಲ್ವೇಲಿ ಜಿಲ್ಲೆಯ ಮಂಜೋಲೈ (55 ಸೆಂ.ಮೀ.) ಮತ್ತು ತೆಂಕಶಿ ಜಿಲ್ಲೆಯ ಗುಂಡಾರ್ ಅಣೆಕಟ್ಟು (51 ಸೆಂ.ಮೀ) ಸೇರಿದಂತೆ ಹಲವಾರು ಪ್ರದೇಶಗಳಲ್ಲಿ 50 ಸೆಂ.ಮೀ ಗಿಂತ ಹೆಚ್ಚಿನ ಮಳೆ ದಾಖಲಾಗಿದೆ ಎಂದು ಐಎಂಡಿ ಬುಲೆಟಿನ್ ತಿಳಿಸಿದೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ನಾಲ್ವರು ಸಚಿವರಾದ ಉದಯನಿಧಿ ಸ್ಟಾಲಿನ್, ಇವಿ ವೇಲು, ಪಿ ಮೂರ್ತಿ ಮತ್ತು ಆರ್ ಎಸ್ ರಾಜಕಣ್ಣಪ್ಪನ್ ಅವರನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆಗೆ ನಿಯೋಜಿಸಿದ್ದಾರೆ.
ರಾಜ್ಯದ ಮಳೆ ಪರಿಸ್ಥಿತಿ ಕುರಿತು ತಿಳಿಸಲು ಮಂಗಳವಾರ ಭೇಟಿಯಾಗಲು ಸಮಯಾವಕಾಶ ಕೋರಿ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಇತ್ತೀಚೆಗೆ ಮೈಚಾಂಗ್ ಚಂಡಮಾರುತದ ಪ್ರಭಾವದಿಂದಾಗಿ ಚೆನ್ನೈನಲ್ಲಿ ಕೈಗೊಳ್ಳಲಾಗುತ್ತಿರುವ ಪರಿಹಾರ ಕಾರ್ಯಗಳಿಗೆ ಹಣಕಾಸಿನ ನೆರವು ಕೋರಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ