ಹರ್ಯಾಣ ಐಎನ್‌ಎಲ್‌ಡಿ ಮುಖ್ಯಸ್ಥನ ಗುಂಡಿಕ್ಕಿ ಹತ್ಯೆ : ನಫೆ ಸಿಂಗ್ ಕಾರಿನ ಮೇಲೆ ಬಂದೂಕುಧಾರಿಗಳಿಂದ ದಾಳಿ

ಚಂಡೀಗಢ : ಭಾರತೀಯ ರಾಷ್ಟ್ರೀಯ ಲೋಕದಳ(INLD)ದ ಹರ್ಯಾಣ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ನಫೆ ಸಿಂಗ್ ರಾಠಿ ಅವರನ್ನು ಜಜ್ಜರ್ ಜಿಲ್ಲೆಯಲ್ಲಿ ಭಾನುವಾರ ಸಂಜೆ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅವರೊಂದಿಗೆ ಪ್ರಯಾಣಿಸುತ್ತಿದ್ದ ಪಕ್ಷದ ಮತ್ತೊಬ್ಬ ನಾಯಕ ಕೂಡ ಮೃತಪಟ್ಟಿದ್ದು, ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಕಾರಿನಲ್ಲಿ ಬಂದ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದಾಗ ರಾಠಿ ಮತ್ತು ಅವರ ಸಹಚರರು ವಾಹನದೊಳಗೆ ಇದ್ದರು. ದಾಳಿ ನಡೆಸಿದ ನಂತರ ಕೊಲೆಗಾರರು ಸ್ಥಳದಿಂದ ಪರಾರಿಯಾಗಿದ್ದಾರೆ.
ಗಾಯಾಳುಗಳನ್ನು ತಕ್ಷಣ ವೈದ್ಯಕೀಯ ಚಿಕಿತ್ಸೆಗಾಗಿ ಬ್ರಹ್ಮ ಶಕ್ತಿ ಸಂಜೀವನಿ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಐಎನ್‌ಎಲ್‌ಡಿ ಅಧ್ಯಕ್ಷರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಐಎನ್‌ಎಲ್‌ಡಿಯ ಮಾಧ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಸಿಹಾಗ್, ಶೂಟೌಟ್‌ನಲ್ಲಿ ನಫೆ ಸಿಂಗ್ ರಾಠಿ ಸಾವಿಗೀಡಾಗಿರುವುದನ್ನು ಖಚಿತಪಡಿಸಿದ್ದಾರೆ.ನಫೆ ಸಿಂಗ್ ರಾಠಿ ಅವರು ದಾಳಿ ನಡೆದ ಬಹದ್ದೂರ್‌ಗಢದಿಂದ ಐಎನ್‌ಎಲ್‌ಡಿ ಶಾಸಕರಾಗಿ ಈ ಹಿಂದೆ ಆಯ್ಕೆಯಾಗಿದ್ದರು. ಆಘಾತಕಾರಿ ದಾಳಿಯ ನಂತರ ರಾಜ್ಯ ಪೊಲೀಸರು ಅಲರ್ಟ್ ಆಗಿದ್ದಾರೆ. ಅಪರಾಧದ ಸ್ಥಳಕ್ಕೆ ಹಲವಾರು ತಂಡಗಳನ್ನು ತ್ವರಿತವಾಗಿ ನಿಯೋಜಿಸಿದ್ದಾರೆ ಮತ್ತು ದಾಳಿಕೋರರ ಆಗಮನದ ಮಾರ್ಗ ಮತ್ತು ನಂತರದ ತಪ್ಪಿಸಿಕೊಳ್ಳುವ ಮಾರ್ಗದ ಬಗ್ಗೆ ನಿರ್ಧರಿಸಲು ಅಧಿಕಾರಿಗಳು ಸುತ್ತಮುತ್ತಲಿನ ವಿವಿಧ ಸ್ಥಳಗಳಿಂದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

“ಈ ಪ್ರಕರಣದಲ್ಲಿ ಭಾಗಿಯಾಗಿರುವ ಒಬ್ಬ ಆರೋಪಿಯನ್ನೂ ಬಿಡಲಾಗುವುದಿಲ್ಲ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ” ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ತಿಳಿಸಿದ್ದಾರೆ.
ದಾಳಿಯ ಹಿಂದೆ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ನಿಕಟ ಸಹಚರ ಕಲಾ ಜಥೇದಿ ಅವರ ಕೈವಾಡವಿದೆ ಎಂದು ಶಂಕಿಸಲಾಗಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.
ಐಎನ್‌ಎಲ್‌ಡಿ ನಾಯಕ ಅಭಯ್ ಚೌತಾಲಾ ಅವರು ನಫೆ ಸಿಂಗ್ ರಾಠಿ ಅವರು ತಿಂಗಳ ಹಿಂದೆ “ಲಿಖಿತವಾಗಿ ಕೇಳಿದ್ದರೂ” ಅವರಿಗೆ ಭದ್ರತೆಯನ್ನು ಒದಗಿಸಿಲ್ಲ ಎಂದು ಆರೋಪಿಸಿದ್ದಾರೆ. ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಕೂಡ ಘಟನೆಯ ಕುರಿತು ಮನೋಹರ್ ಲಾಲ್ ಖಟ್ಟರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಫೆ ಸಿಂಗ್ ರಾಠಿ ಅವರು ಹರಿಯಾಣ ವಿಧಾನಸಭೆಯಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಹರಿಯಾಣ ಮಾಜಿ ಶಾಸಕರ ಸಂಘದ ರಾಜ್ಯಾಧ್ಯಕ್ಷರೂ ಆಗಿದ್ದರು. ರಾಠಿ ಒಮ್ಮೆ ರೋಹ್ಟಕ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಎರಡು ಬಾರಿ ಬಹದ್ದೂರ್‌ಗಢ ಮುನ್ಸಿಪಲ್ ಕೌನ್ಸಿಲ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕಳೆದ ವರ್ಷ ಹರಿಯಾಣದ ಮಾಜಿ ಸಚಿವ ಮಂಗೇ ರಾಮ ರಾಠಿ ಅವರ ಪುತ್ರ ಜಗದೀಶ ರಾಠಿ ಆತ್ಮಹತ್ಯೆ ಮಾಡಿಕೊಂಡಾಗ ಅವರ ಹೆಸರು ಹೆಡ್ಲೈನ್ಸ್‌ ಪಡೆಯಿತು. ನಫೆ ಸಿಂಗ್ ರಾಠಿ ವಿರುದ್ಧ ಕುತಂತ್ರದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ನಂತರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಠಿ ಮತ್ತು ಅವರ ಸೋದರಳಿಯ ಸೋನು ವಿರುದ್ಧ ಕಿರುಕುಳದ ಆರೋಪಗಳನ್ನು ಹೊರಿಸಲಾಯಿತು. ಜನವರಿ 24, 2023 ರಂದು ರಾಠಿ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತು.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement