ಢಾಕಾ: ಅವಾಮಿ ಲೀಗ್ ಪಕ್ಷದ ನಾಯಕಿ ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ತೊರೆದ ನಂತರ ಬಾಂಗ್ಲಾದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಅವಾಮಿ ಲೀಗ್ ಪಕ್ಷದ ನಾಯಕರ ಒಡೆತನದ ಹೋಟೆಲ್ ಗೆ ಗುಂಪೊಂದು ಬೆಂಕಿ ಹಚ್ಚಿ ಇಂಡೋನೇಷ್ಯಾ ಪ್ರಜೆ ಸೇರಿದಂತೆ ಕನಿಷ್ಠ 24 ಜನರನ್ನು ಸಜೀವ ದಹನ ಮಾಡಿದೆ ಎಂದು ಸ್ಥಳೀಯ ಪತ್ರಕರ್ತರು ಮತ್ತು ಆಸ್ಪತ್ರೆ ಮೂಲಗಳು ಮಂಗಳವಾರ ತಿಳಿಸಿವೆ.
ಜೋಷೋರ್ ಜಿಲ್ಲೆಯ ಜಿಲ್ಲಾ ಅವಾಮಿ ಲೀಗ್ ಪ್ರಧಾನ ಕಾರ್ಯದರ್ಶಿ ಶಾಹಿನ್ ಚಕ್ಲದಾರ್ ಒಡೆತನದ ಜಬೀರ್ ಇಂಟರ್ನ್ಯಾಶನಲ್ ಹೋಟೆಲ್ಗೆ ಗುಂಪು ಸೋಮವಾರ ತಡರಾತ್ರಿ ಬೆಂಕಿ ಹಚ್ಚಿದ್ದರಿಂದ 24 ಜನರು ಸಜೀವವಾಗಿ ದಹನವಾಗಿದ್ದಾರೆ ಎಂದು ವರದಿ ತಿಳಿಸಿದೆ.
ಮೃತರಲ್ಲಿ ಇಂಡೋನೇಷಿಯಾದ ಪ್ರಜೆಯೂ ಸೇರಿದ್ದಾರೆ ಎಂದು ವರದಿಯಾಗಿದೆ.ಜೋಶೋರ್ ಜನರಲ್ ಆಸ್ಪತ್ರೆಯ ವೈದ್ಯರು ಅವರು 24 ಶವಗಳು ಬಂದಿವೆ ಎಂದು ದೃಢಪಡಿಸಿದ್ದಾರೆ. ಹೊಟೇಲ್ ಭಗ್ನಾವಶೇಷಗಳೊಳಗೆ ಹೆಚ್ಚಿನ ದೇಹಗಳು ಪತ್ತೆಯಾಗಬಹುದೆಂದು ಆತಂಕ ವ್ಯಕ್ತವಾಗಿದೆ.
ಅವಾಮಿ ಲೀಗ್ (ಎಎಲ್) ಆಡಳಿತವನ್ನು ವಿರೋಧಿಸಿದ ಅಪರಿಚಿತ ಜನಸಮೂಹವು ಹೋಟೆಲ್ನ ನೆಲ ಮಹಡಿಗೆ ಬೆಂಕಿ ಹಚ್ಚಿತು, ಅದು ತ್ವರಿತವಾಗಿ ಮೇಲಿನ ಮಹಡಿಗಳಿಗೆ ಹರಡಿತು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ರಾಜಧಾನಿಯ ಬಂಗಬಂಧು ಅವೆನ್ಯೂನಲ್ಲಿರುವ ಅವಾಮಿ ಲೀಗ್ ಕೇಂದ್ರ ಕಚೇರಿ ಸೇರಿದಂತೆ ಅನೇಕ ಅವಾಮಿ ಲೀಗ್ ನಾಯಕರು ಮತ್ತು ಕಾರ್ಯಕರ್ತರ ನಿವಾಸಗಳು ಮತ್ತು ವ್ಯಾಪಾರ ಸಂಸ್ಥೆಗಳನ್ನು ಉದ್ರಿಕ್ತ ಗುಂಪು ಧ್ವಂಸಗೊಳಿಸಿದೆ.
ಹಸೀನಾ ರಾಜೀನಾಮೆ ನೀಡಿದ ನಂತರ ಸೋಮವಾರ ಬಾಂಗ್ಲಾದೇಶವು ಅಸ್ತವ್ಯಸ್ತಗೊಂಡಿತು, ಅವರು ದೇಶ ತೊರೆದು ಭಾರತಕ್ಕೆ ಬಂದಿಳಿದಾಗ ಸೇನೆಯು ಅವರ ಅಧಿಕಾರದ ನಿರ್ವಾತವನ್ನು ತುಂಬಲು ಮುಂದಾಯಿತು.
ಹಸೀನಾ ಅವರ ನಿರ್ಗಮನದ ಸುದ್ದಿ ಹರಡುತ್ತಿದ್ದಂತೆ, ಈಗಾಗಲೇ ಜರ್ಜರಿತವಾಗಿರುವ ಬಾಂಗ್ಲಾದೇಶದ ಢಾಕಾ ಮತ್ತು ದೇಶದ ಇತರ ಭಾಗಗಳಲ್ಲಿ ತಾಜಾ ಹಿಂಸಾಚಾರಗಳು ಭುಗಿಲೆದ್ದವು. ಗುಂಪುಗಳು ಸರ್ಕಾರಿ ಆಸ್ತಿಯನ್ನು ಧ್ವಂಸಗೊಳಿಸಿದವು ಮತ್ತು ಹಸೀನಾ ಅವರ ಸರ್ಕಾರಿ ನಿವಾಸಕ್ಕೆ ನುಗ್ಗಿ ಒಳಾಂಗಣವನ್ನು ಲೂಟಿ ಮಾಡಿತು.
ನಿಮ್ಮ ಕಾಮೆಂಟ್ ಬರೆಯಿರಿ