ಈ ಹಳ್ಳಿಗಳಲ್ಲಿವೆ ʼಕಳ್ಳತನʼ ಕಲಿಸುವ ʼಶಾಲೆʼ ಗಳು ; ₹2 ಲಕ್ಷ ಪಾವತಿಸಿದ್ರೆ ಈ ʼಶಾಲೆʼಗಳಲ್ಲಿ ಪಿಕ್‌ ಪಾಕೆಟ್‌, ದರೋಡೆಯಲ್ಲಿ ʼಪದವಿʼ…!!

ಭೋಪಾಲ್: ಮಕ್ಕಳ ಭವಿಷ್ಯ ಉತ್ತಮವಾಗಿರಲಿ ಎಂದು ತಂದೆ ತಾಯಿಗಳು ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಅತ್ಯುತ್ತಮ ಶಾಲೆಗೆ ಸೇರಿಸಿ ಓದಿಸುತ್ತಾರೆ. ಆದರೆ ಮಧ್ಯಪ್ರದೇಶದ ಈ ಹಳ್ಳಿಗಳಲ್ಲಿ ಮಾತ್ರ ಕೆಲ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಕಳ್ಳತನ ಮಾಡಲು ಬೇಕಾದ ತರಬೇತಿ ಪಡೆಯಲು ಭಾರಿ ಶುಲ್ಕ ನೀಡಿ ಸೇರಿಸುತ್ತಾರಂತೆ…! ಮಧ್ಯಪ್ರದೇಶದ ಮೂರು ಹಳ್ಳಿಗಳಾದ ಕಡಿಯಾ, ಗುಲ್ಖೇಡಿ ಮತ್ತು ಹುಲ್ಖೇಡಿ ಅಪರಾಧಿಗಳ “ನರ್ಸರಿ” ಅಥವಾ ಶಾಲೆಗಳು ಎಂದೇ ರಾಷ್ಟ್ರವ್ಯಾಪಿ ಕುಖ್ಯಾತಿ ಗಳಿಸಿವೆ.
ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ ಸುಮಾರು 117 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ರಾಜ್‌ಗಢ್ ಜಿಲ್ಲೆಯ ಈ ಹಳ್ಳಿಗಳು “ಕಳ್ಳತನ, ದರೋಡೆ ಮತ್ತು ಡಕಾಯಿತಿ ಕಲೆಗಳಲ್ಲಿ” ಮಕ್ಕಳಿಗೆ ʼತರಬೇತಿʼ ನೀಡಲು ಹೆಸರುವಾಸಿಯಾಗಿವೆ..! ಪೋಲೀಸರು ಅಧಿಕಾರವನ್ನು ಹೊಂದಿದ್ದರೂ ಸಹ, ಈ ಪ್ರದೇಶದಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಾರಂತೆ. ಈ ಬಗ್ಗೆ ಎನ್‌ಡಿಟಿವಿ ವಿಸ್ತೃತವಾಗಿ ವರದಿ ಪ್ರಕಟಿಸಿದೆ.

ವರದಿ ಪ್ರಕಾರ, ಸುಮಾರು 12 ಅಥವಾ 13 ವರ್ಷ ವಯಸ್ಸಿನ ಮಕ್ಕಳನ್ನು ಅಪರಾಧ ಚಟುವಟಿಕೆಗಳಲ್ಲಿ ತರಬೇತಿ ನೀಡಲು ಅವರ ತಂದೆ-ತಾಯಿಗಳು ಈ ಗ್ರಾಮಗಳಿಗೆ ಕಳುಹಿಸುತ್ತಾರೆ. ಪೋಷಕರು, ಗ್ಯಾಂಗ್ ನಾಯಕರನ್ನು ಭೇಟಿಯಾದ ನಂತರ ತಮ್ಮ ಮಗುವಿಗೆ ಯಾರು ಅತ್ಯುತ್ತಮ “ಶಿಕ್ಷಣ” ನೀಡಬಹುದು ಎಂದು ನಿರ್ಧರಿಸುತ್ತಾರೆ. ಈ ಕಠೋರ ಪಠ್ಯಕ್ರಮದಲ್ಲಿ ದಾಖಲಾಗಲು, ಕುಟುಂಬಗಳು ಅವರಿಗೆ ₹ 2 ಲಕ್ಷದಿಂದ ₹ 3 ಲಕ್ಷದವರೆಗಿನ ಶುಲ್ಕ ಪಾವತಿಸಬೇಕಾಗುತ್ತದೆ.
ಜೇಬುಗಳ್ಳತನ, ಸರಗಳ್ಳತನ, ಜನಸಂದಣಿ ಇರುವ ಸ್ಥಳಗಳಲ್ಲಿ ಹಣದ ಬ್ಯಾಗ್ ಕಸಿದುಕೊಳ್ಳುವುದು, ವೇಗವಾಗಿ ಓಡುವುದು, ಪೊಲೀಸರಿಂದ ತಪ್ಪಿಸಿಕೊಳ್ಳುವುದು, ಸಿಕ್ಕಿಬಿದ್ದರೆ ಹೊಡೆತಗಳನ್ನು ಸಹಿಸಿಕೊಳ್ಳುವುದು ಮುಂತಾದ ವಿವಿಧ ಅಪರಾಧ ಕೌಶಲ್ಯಗಳನ್ನು ಮಕ್ಕಳಿಗೆ ಇಲ್ಲಿ ಮಕ್ಕಳಿಗೆ ಕಲಿಸಲಾಗುತ್ತದೆ. ಗ್ಯಾಂಗ್‌ನಲ್ಲಿ ಒಂದು ವರ್ಷ ತರಬೇತಿ ಪೂರ್ಣಗೊಂಡ ನಂತರ, ಮಗುವಿನ ಪೋಷಕರು ಗ್ಯಾಂಗ್ ಲೀಡರ್‌ನಿಂದ ವಾರ್ಷಿಕ ₹ 3 ರಿಂದ ಲಕ್ಷ ₹ 5 ಲಕ್ಷ ಹಣವನ್ನು ಪಡೆಯುತ್ತಾರೆ.

ಅತ್ಯಂತ ಕುತಂತ್ರ ಕಳ್ಳರ ಸೃಷ್ಟಿ
ಈ ಹಳ್ಳಿಗಳು ಕೆಲವು ಅತ್ಯಂತ ಕುತಂತ್ರ ಕಳ್ಳರನ್ನು ಸೃಷ್ಟಿಸಿವೆ, ಅವರ ಅಪರಾಧ ಚಟುವಟಿಕೆಗಳು ಭಾರತದಾದ್ಯಂತ ಹೆಡ್‌ಲೈನ್‌ಗಳನ್ನು ಪಡೆದಿವೆ.
ಆಗಸ್ಟ್ 8 ರಂದು ಜೈಪುರದ ಹಯಾತ್ ಹೋಟೆಲ್‌ನಲ್ಲಿ ನಡೆದ ಅದ್ದೂರಿ ಡೆಸ್ಟಿನೇಶನ್ ವೆಡ್ಡಿಂಗ್ ವೇಳೆ ಅಪ್ರಾಪ್ತ ಕಳ್ಳನೊಬ್ಬ ₹ 1.5 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ₹ 1 ಲಕ್ಷ ನಗದು ಇದ್ದ ಬ್ಯಾಗ್‌ನೊಂದಿಗೆ ಪರಾರಿಯಾಗಿದ್ದ. ಾದು ಹೈದರಾಬಾದ್ ಮೂಲದ ಉದ್ಯಮಿಯೊಬ್ಬರ ಮಗನ ಅದ್ಧೂರಿ ಮದುವೆ ಕಾರ್ಯಕ್ರಮವಾಗಿತ್ತು.
ಮದುವೆ ಕಾರ್ಯಕ್ರಮದಲ್ಲಿ ವಧುವರರನ್ನು ಆಶೀರ್ವದಿಸುವಾಗ ವರನ ತಾಯಿ ತನ್ನ ಬಿಳಿ ಚೀಲವನ್ನು ಹತ್ತಿರ ಇರಿಸಿದ್ದರು. ಈ ಅವಕಾಶವನ್ನು ಬಳಸಿಕೊಂಡ ಅಪ್ರಾಪ್ತ ಕಳ್ಳ ಆ ಚೀಲವನ್ನು ಕದ್ದು, ಬೆಲೆಬಾಳುವ ವಸ್ತುಗಳನ್ನು ದೋಚಿದ್ದ.
ಕಳ್ಳತನ ಮಾಡಿದ ನಂತರ ಆತನ ಗ್ಯಾಂಗ್ ರಾಜ್‌ಗಢ್ ಜಿಲ್ಲೆಯ ಕಡಿಯಾ ಗ್ರಾಮಕ್ಕೆ ಪರಾರಿಯಾಗಿತ್ತು. ಅನುಮಾನವನ್ನು ತಪ್ಪಿಸಲು, ಅವರು ಕದ್ದ ಆಭರಣಗಳನ್ನು ತ್ವರಿತವಾಗಿ ಸಾಗಿಸಿ ಮಾರಾಟ ಮಾಡಿದ್ದಾರೆ ಮತ್ತು ನಂತರ ಧಾರ್ಮಿಕ ಯಾತ್ರೆಯಾದ ಕನ್ವರ್ ಯಾತ್ರೆಯಲ್ಲಿ ಭಾಗವಹಿಸುವ ಮೂಲಕ ದಿಕ್ಕುತಪ್ಪಿಸಲು ಪ್ರಯತ್ನಿಸಿದ್ದಾರೆ.
ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಪೊಲೀಸರು ತನಿಖೆ ನಡೆಸದಿದ್ದರೆ ಅವರ ಯೋಜನೆ ಯಶಸ್ವಿಯಾಗುತ್ತಿತ್ತೇನೋ..? ಅಂತಿಮವಾಗಿ, ಕಳ್ಳತನದಲ್ಲಿ ಭಾಗಿಯಾಗಿದ್ದ ಅಪ್ರಾಪ್ತನನ್ನು ಬಂಧಿಸಲಾಯಿತು, ನಂತರ ಅದರಲ್ಲಿ ಭಾಗಿಯಾದವರು ಸೆರೆ ಸಿಕ್ಕರು.

ಪ್ರಮುಖ ಸುದ್ದಿ :-   ಮಾದಕ ವಸ್ತು ಪ್ರಕರಣ : ನಟ ಶ್ರೀಕಾಂತ ಬಂಧನ

ವಿಶೇಷವಾಗಿ ಕಡಿಯಾ, ಗುಲ್ಖೇಡಿ ಮತ್ತು ಹುಲಖೇಡಿ ಗ್ರಾಮಗಳನ್ನು ಸಾಮಾನ್ಯವಾಗಿ ಕಳ್ಳತನದ “ನರ್ಸರಿಗಳು” ಅಥವಾ “ಶಾಲೆಗಳು” ಎಂದೇ ಹೇಳಲಾಗುತ್ತದೆ. ಅಲ್ಲಿ ಮಕ್ಕಳನ್ನು ಚಿಕ್ಕ ವಯಸ್ಸಿನಿಂದಲೇ ವೃತ್ತಿಪರ ಕಳ್ಳರನ್ನಾಗಿ ತಯಾರು ಮಾಡಲಾಗುತ್ತದೆ. ಹೆಚ್ಚಿನ ಕಳ್ಳತನಗಳನ್ನು ಅಪ್ರಾಪ್ತ ವಯಸ್ಕರು ನಡೆಸುತ್ತಾರೆ, ಈ ಆಳವಾಗಿ ಬೇರೂರಿರುವ ಕ್ರಿಮಿನಲ್ ಸಂಸ್ಕೃತಿಯನ್ನು ಎದುರಿಸಲು ಇದು ಇನ್ನಷ್ಟು ಸವಾಲಾಗಿದೆ ಎಂದು ಬೋಡಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಮಕುಮಾರ ಭಗತ್ ಹೇಳುತ್ತಾರೆ.
ಅಪರಿಚಿತ ವ್ಯಕ್ತಿಗಳು ಗ್ರಾಮಕ್ಕೆ ಪ್ರವೇಶಿಸಿದರೆ ವಿಶೇಷವಾಗಿ ಕ್ಯಾಮೆರಾ ಅಥವಾ ಮೊಬೈಲ್ ಫೋನ್ ಅನ್ನು ಗಮನಿಸಿದರೆ ನಿವಾಸಿಗಳು ತಕ್ಷಣ ಜಾಗೃತರಾಗುತ್ತಾರೆ.
ಈ ಗ್ರಾಮಗಳ 300 ಕ್ಕೂ ಹೆಚ್ಚು ಮಕ್ಕಳು ವಿವಿಧ ರಾಜ್ಯಗಳಲ್ಲಿ ಮದುವೆ ಸಮಾರಂಭಗಳಲ್ಲಿ ಕಳ್ಳತನದಲ್ಲಿ ತೊಡಗಿಕೊಂಡಿದ್ದಾರೆ. ಈ ಗ್ಯಾಂಗ್‌ಗಳು ಹೆಚ್ಚು ಸಂಘಟಿತವಾಗಿವೆ, ತಮ್ಮ ಅಪರಾಧಗಳನ್ನು ಕೈಗೊಳ್ಳಲು ನವೀನ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೊದಲು ಸಂಪೂರ್ಣ ತಯಾರಿ ನಡೆಸುತ್ತವೆ ಎಂದು ಭಗತ್‌ ಹೇಳುತ್ತಾರೆ.

ಮಕ್ಕಳನ್ನು ಬಾಡಿಗೆಗೆ ತೆಗೆದುಕೊಳ್ಳುವ ಹಳ್ಳಿಯ ಶ್ರೀಮಂತ ವ್ಯಕ್ತಿಗಳು…
ಹಳ್ಳಿಯೊಳಗಿನ ಶ್ರೀಮಂತ ವ್ಯಕ್ತಿಗಳು ಬಡ ಮಕ್ಕಳನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಾರೆ. ಹಳ್ಳಿಯೊಳಗಿನ ಶ್ರೀಮಂತ ವ್ಯಕ್ತಿಗಳು ಹರಾಜು ಪ್ರಕ್ರಿಯೆಗಳ ಮೂಲಕ 1-2 ವರ್ಷಗಳವರೆಗೆ ಬಡ ಮಕ್ಕಳನ್ನು ಬಾಡಿಗೆಗೆ ಪಡೆಯುತ್ತಾರೆ. ಹರಾಜು ₹ 20 ಲಕ್ಷದವರೆಗೆ ತಲುಪುತ್ತದೆಯಂತೆ. ಒಮ್ಮೆ ತರಬೇತಿ ಪಡೆದ ನಂತರ, ಈ ಮಕ್ಕಳು ಹೆಚ್ಚಾಗಿ ಅವರನ್ನು ಬಾಡಿಗೆಗೆ ಪಡೆದದ್ದಕ್ಕಿಂತ ಐದರಿಂದ ಆರು ಪಟ್ಟು ಹೆಚ್ಚು ಹಣ ಗಳಿಸುತ್ತಾರೆ, ನಂತರ ಅವರನ್ನು ಗ್ಯಾಂಗ್‌ಗಳಿಂದ ಬಿಡುಗಡೆ ಮಾಡಲಾಗುತ್ತದೆ.
ಈ ಕ್ರಿಮಿನಲ್ ಕಾರ್ಯಾಚರಣೆಯ ಪ್ರಮಾಣವು ದೊಡ್ಡದಾಗಿದೆ, ಈ ಗ್ರಾಮಗಳ 2,000 ಕ್ಕೂ ಹೆಚ್ಚು ವ್ಯಕ್ತಿಗಳ ಮೇಲೆ ದೇಶಾದ್ಯಂತ ಪೊಲೀಸ್ ಠಾಣೆಗಳಲ್ಲಿ 8,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳುತ್ತಾರೆ. ಈ ಮಕ್ಕಳು ಸಾಮಾನ್ಯವಾಗಿ ಕಡಿಮೆ ವಿದ್ಯಾವಂತ ಮತ್ತು ಬಡ ಕುಟುಂಬಗಳಿಂದ ಬರುತ್ತಾರೆ, ಆದರೆ ಅವರು ಶ್ರೀಮಂತರೊಂದಿಗೆ ಬೆರೆಯಲು ಉತ್ತಮವಾಗಿ ಡ್ರೆಸ್‌ ಮಾಡಿಕೊಳ್ಳುತ್ತಾರೆ, ಉನ್ನತ ಮಟ್ಟದ ಕಾರ್ಯಕ್ರಮಗಳಲ್ಲಿ ನುಸುಳಲು ಇದು ಅವರಿಗೆ ಅನುವು ಮಾಡಿಕೊಡುತ್ತದೆ.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement