ಮೆಹ್ಸಾನಾ (ಗುಜರಾತ್): ಘಟನೆಯ ವಿಲಕ್ಷಣ ತಿರುವಿನಲ್ಲಿ, ವ್ಯಕ್ತಿಯೊಬ್ಬರು ಸತ್ತಿದ್ದಾರೆಂದು ನಂಬಿ ಅವರ ಅಂತ್ಯಕ್ರಿಯೆ ನಡೆಸಿದ ನಂತರ ಕುಟುಂಬದವರು ಅವರ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಅದೇ ವ್ಯಕ್ತಿ ಆಗಮಿಸಿದಾಗ ಅಲ್ಲಿದ್ದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ…!
ಗುಜರಾತದ ಮೆಹ್ಸಾನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸತ್ತಿದ್ದಾರೆಂದು ಭಾವಿಸಲಾಗಿದ್ದ 43 ವರ್ಷದ ಬ್ರಿಜೇಶ್ ಸುತಾರ್ ಅವರು ತಮ್ಮದೇ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜೀವಂತವಾಗಿ ಕಾಣಿಸಿಕೊಂಡಿದ್ದಾರೆ…!!
ಬ್ರಿಜೇಶ್ ಸುತಾರ್ ಅಕ್ಟೋಬರ್ 27 ರಂದು ನರೋಡಾದ ತಮ್ಮ ಮನೆಯಿಂದ ನಾಪತ್ತೆಯಾಗಿದ್ದರು. ಅವರ ಕುಟುಂಬವು ಅವರನ್ನು ಎಲ್ಲೆಡೆ ಹುಡುಕಿದೆ, ಆದರೆ ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ, ಅವರು ಪೊಲೀಸರಿಗೆ ಬ್ರಿಜೇಶ್ ಸುತಾರ್ ಅವರು ನಾಪತ್ತೆಯಾದ ಬಗ್ಗೆ ದೂರು ನೀಡಿದರು.
ನವೆಂಬರ್ 10 ರಂದು, ಅಂದರೆ ಬೃಜೇಶ್ ಸುತಾರ್ ಅವರು ನಾಪತ್ತೆಯಾದ ಸುಮಾರು ಎರಡು ವಾರಗಳ ನಂತರ, ಸಾಬರಮತಿ ಸೇತುವೆಯ ಬಳಿ ಶವವೊಂದು ಪತ್ತೆಯಾಗಿದೆ. ನಂತರ ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಗುರುತಿಸಲು ಅವರ ಕುಟುಂಬದ ಸದಸ್ಯರನ್ನು ಕರೆಸಲಾಯಿತು. ದೇಹದ ಮೈಕಟ್ಟು ಸುತಾರ್ ಅವರ ದೇಹವನ್ನು ಹೋಲುತ್ತಿದ್ದುದರಿಂದ ಅವರ ಸಂಬಂಧಿಕರು ಅದು ಬೃಜೇಶ್ ಸುತಾರ್ ಅವರ ಶವ ಎಂದು ಭಾವಿಸಿದರು.
ನಂತರ ಶವವನ್ನು ಕೊಂಡೊಯ್ದು ಮೃತ ದೇಹದ ಅಂತ್ಯಕ್ರಿಯೆ ನೆರವೇರಿಸಿದರು. ಮಾರನೇ ದಿನ ಅಗಲಿದ ಬೃಜೇಶ್ ಅವರ ಸ್ಮರಣಾರ್ಥ ಶುಕ್ರವಾರ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿತ್ತು. ನಂತರ ಯಾರೂ ಊಹಿಸದ ವಿದ್ಯಮಾನ ನಡೆಯಿತು. ತಮ್ಮದೇ ನೆನಪಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬ್ರಿಜೇಶ್ ಕಾಲಿಟ್ಟರು, ಸಮಾರಂಭದಲ್ಲಿ ಅವರನ್ನು ಜೀವಂತವಾಗಿ ನೋಡಿದ ಅವರ ಕುಟುಂಬ ಸದಸ್ಯರು ಆಘಾತಕ್ಕೊಳಗಾದರು. ನಂತರ ವಿಷಯ ತಿಳಿದ ಪೊಲೀಸರೂ ಆಘಾತಕ್ಕೆ ಒಳಗಾದರು.
ಆಗಿದ್ದೇನು..?
ಹಣಕಾಸಿನ ಹೂಡಿಕೆಯಿಂದ ನಷ್ಟಕ್ಕೆ ಒಳಗಾಗಿ ಮಾನಸಿಕ ಖಿನ್ನತೆ ಮತ್ತು ತೀವ್ರ ಒತ್ತಡ ಎದುರಿಸುತ್ತಿದ್ದ ಬೃಜೇಶ್ ನಂತರ ನಾಪತ್ತೆಯಾಗಿದ್ದ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
“ನಾವು ಬೃಜೇಶ್ ಅವರನ್ನು ಎಲ್ಲೆಡೆ ಹುಡುಕಿದೆವು. ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಪೊಲೀಸರು ನಮಗೆ ದೇಹವನ್ನು ತೋರಿಸಿದರು, ಅದು ಊದಿಕೊಂಡಿತ್ತು, ನಾವು ಆ ದೇಹವನ್ನು ಬೃಜೇಶ್ ಮೃತದೇಹ ಎಂದು ತಪ್ಪಾಗಿ ಗುರುತಿಸಿ ಅದಕ್ಕೆ ಅಂತ್ಯಸಂಸ್ಕಾರವನ್ನು ಮಾಡಿದ್ದೇವೆ” ಎಂದು ಬ್ರಿಜೇಶ್ ಅವರ ತಾಯಿ ಹೇಳಿದರು.
ಬೃಜೇಶ್ ಜೀವಂತವಾಗಿ ಕಾಣಿಸಿಕೊಂಡ ನಂತರ ಇದೀಗ ಪೊಲೀಸರಿಗೆ ಈಗ ಸಂದಿಗ್ಧ ಪರಿಸ್ಥಿತಿ ತಲೆದೋರಿದೆ. ಹಾಗಾದರೆ ಯಾರ ದೇಹವನ್ನು ಸುಡಲಾಯಿತು ಎಂಬ ಈಗ ದೊಡ್ಡ ಪ್ರಶ್ನೆಗೆ ಕಾರಣವಾಗಿದೆ. ಪೊಲೀಸರು ಈಗ ಅಂತ್ಯಕ್ರಿಯೆ ನಡೆಸಲಾದ ಶವ ಯಾರದ್ದು ಎಂದು ತನಿಖೆ ನಡೆಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ