ರಾಹುಲ್ ಗಾಂಧಿ ವಿರುದ್ಧ ಎಎಪಿಯ ಅವಹೇಳನಕಾರಿ ಪೋಸ್ಟ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್‌

ನವದೆಹಲಿ : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಅದರ ದೆಹಲಿಯ ಉನ್ನತ ನಾಯಕತ್ವದ ವಿರುದ್ಧ ಆಮ್ ಆದ್ಮಿ ಪಕ್ಷದ (ಎಎಪಿ) ‘ಅಪ್ರಾಮಾಣಿಕ’ ಎಂದು ಗೇಲಿ ಮಾಡಿ ಪೋಸ್ಟರ್‌ ಅಂಟಿಸಿದ್ದಕ್ಕೆ ಕೆರಳಿರುವ ಕಾಂಗ್ರೆಸ್ ಪಕ್ಷವು ಶನಿವಾರ ಚುನಾವಣೆ ಆಯೋಗ (EC)ಕ್ಕೆ ತನ್ನ ದೂರನ್ನು ದಾಖಲಿಸಿದೆ.
ಕಾಂಗ್ರೆಸ್ ನಾಯಕರ ನಿಯೋಗವು ವಕೀಲರ ತಂಡದ ಜೊತೆ ತೆರಳಿ ಚುನಾವಣಾ ಆಯೋಗಕ್ಕೆ ತಮ್ಮ ಪ್ರತಿಭಟನೆಯನ್ನು ಸಲ್ಲಿಸಿತು ಮತ್ತು ‘ಅವಹೇಳನಕಾರಿ’ ಪದವನ್ನು ತೆಗೆದುಹಾಕಲು ಆಡಳಿತಾರೂಢ ಎಎಪಿಗೆ ತುರ್ತು ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿತು. ಶನಿವಾರ ಬೆಳಿಗ್ಗೆ ಎಎಪಿ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಬಿಡುಗಡೆ ಮಾಡಿದ ಪೋಸ್ಟರ್‌ಗಳನ್ನು ಚುನಾವಣಾ ಕಾಲದಲ್ಲಿ ಕಾಂಗ್ರೆಸ್ ನಾಯಕರ ಪ್ರತಿಷ್ಠೆಯನ್ನು ಹಾಳುಮಾಡುವ ಮತ್ತು ಕೆಸರೆರಚಾಟದಲ್ಲಿ ತೊಡಗುವ ಮೂಲಕ ರಾಜಕೀಯ ಲಾಭ ಪಡೆಯುವ ಭೀಕರ ಪ್ರಯತ್ನ ಎಂದು ಕಾಂಗ್ರೆಸ್ ಬಣ್ಣಿಸಿದೆ.

ತನ್ನ ನಾಯಕರ ಇಮೇಜ್‌ಗೆ ಧಕ್ಕೆ ತರುವ ಏಕೈಕ ಉದ್ದೇಶದಿಂದ ಈ ಪೋಸ್ಟ್ ಮಾಡಲಾಗಿದ್ದು, ಇದು ಆಧಾರರಹಿತ ಮತ್ತು ದುರುದ್ದೇಶಪೂರಿತವಾಗಿದೆ ಎಂದು ಅದು ಹೇಳಿಕೊಂಡಿದೆ. ಎಎಪಿ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡ ನಂತರ ವಿವಾದ ಭುಗಿಲೆದ್ದಿತು. ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರನ್ನು ಮಾತ್ರ ‘ಸ್ವಚ್ಛ ಮತ್ತು ಪ್ರಾಮಾಣಿಕ’ ನಾಯಕ ಎಂದು ಬಿಂಬಿಸುವುದರೊಂದಿಗೆ ಉಳಿದವರೆಲ್ಲರನ್ನು ‘ಅಪ್ರಾಮಾಣಿಕ’ ರಾಜಕಾರಣಿಗಳು ಎಂದು ಬಣ್ಣಿಸಿದ್ದಕ್ಕೆ ಕಾಂಗ್ರೆಸ್‌ ನಾಯಕರು ಸೇರಿದಂತೆ ಹಲವು ನಾಯಕರು ಆಕ್ಷೇಪಿಸಿದ್ದಾರೆ.
ಆ ವೈರಲ್ ಪೋಸ್ಟ್‌ನಲ್ಲಿ ಕನಿಷ್ಠ ಮೂರು ಪ್ರಮುಖ ಕಾಂಗ್ರೆಸ್ ನಾಯಕರು ಕಾಣಿಸಿಕೊಂಡಿದ್ದಾರೆ, ಇದರಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದ ಖಜಾಂಚಿ ಅಜಯ ಮಾಕನ್ ಮತ್ತು ನವದೆಹಲಿ ಕ್ಷೇತ್ರದಿಂದ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಸಂದೀಪ್ ದೀಕ್ಷಿತ್ ಸೇರಿದ್ದಾರೆ.

ಪ್ರಮುಖ ಸುದ್ದಿ :-   ಹೈದರಾಬಾದ್‌ ಕ್ರಿಕೆಟ್‌ ಸ್ಟೇಡಿಯಂ ಸ್ಟ್ಯಾಂಡ್‌ ನಿಂದ ಮೊಹಮ್ಮದ್ ಅಜರುದ್ದೀನ್ ಹೆಸರು ತೆಗೆದುಹಾಕಲು ಆದೇಶ...

ಈ ಪೋಸ್ಟ್ ಕೇಜ್ರಿವಾಲ್ ಅವರನ್ನು ‘ಏಕಾಂಗಿ ಯೋಧ’ ಎಂದು ಶ್ಲಾಘಿಸಿದೆ ಮತ್ತು ಅವರನ್ನು ‘ಬಿಜೆಪಿ ನಾಯಕರು ಸೇರಿದಂತೆ ಎಲ್ಲರನ್ನೂ ಒಟ್ಟಿಗೆ ಎದುರಿಸಬಲ್ಲವನು’ ಎಂದು ಬಿಂಬಿಸಿದೆ. ಈ ಪೋಸ್ಟ್ ಗಮನ ಸೆಳೆಯುತ್ತಿದ್ದಂತೆ, ಇದು ಇಂಡಿಯಾ ಮೈತ್ರಿಕೂಟದ ಪಾಲುದಾರರಾದ ಎಎಪಿ ಮತ್ತು ಕಾಂಗ್ರೆಸ್ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದೆ.
ಚುನಾವಣಾ ಆಯೋಗಕ್ಕೆ ನೀಡಿದ ದೂರಿನಲ್ಲಿ, ಕಾಂಗ್ರೆಸ್ ಪಕ್ಷವು ಎಎಪಿ ಸ್ಮೀಯರ್ ಕ್ಯಾಂಪೇನ್ ನಡೆಸುತ್ತಿದೆ ಎಂದು ಹೇಳಿದೆ. ಇದು ಮಾದರಿ ನೀತಿ ಸಂಹಿತೆಯ ಘೋರ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಪಕ್ಷವು ಹೇಳಿದೆ ಮತ್ತು ಸಂಬಂಧಿತ ಪೋಸ್ಟ್ ಅನ್ನು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಿಂದ ತೆಗೆದುಹಾಕಲು ಮತ್ತು ಅಂತಹ ‘ದುರುದ್ದೇಶಪೂರಿತ’ ಪ್ರಚಾರದಿಂದ ಅವರನ್ನು ತಡೆಯಲು ಎಎಪಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದೆ. ಎಎಪಿ ಪಕ್ಷದ ನಾಯಕರು ಭ್ರಷ್ಟಾಚಾರದ ಆರೋಪದಲ್ಲಿ ತಿಂಗಳುಗಟ್ಟಲೆ ಜೈಲಿನಲ್ಲಿ ಕಳೆದಿದ್ದಾರೆ ಎಂದು ಕಾಂಗ್ರೆಸ್‌ ಟೀಕಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement