ಬೆಂಗಳೂರು: ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ 2025-26ನೇ ಸಾಲಿಗೆ ದಾಖಲೆಯ 4.09 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಅನ್ನು ಮಂಡಿಸಿದ್ದಾರೆ. ಇದರಲ್ಲಿ 19,262 ಕೋಟಿ ರೂ. ರಾಜಸ್ವ ಕೊರತೆಯನ್ನು ಅವರು ಉಲ್ಲೇಖಿಸಿದ್ದಾರೆ. ಈ ಬಾರಿಯೂ ಪಂಚ ಗ್ಯಾರಂಟಿಗೆ 51,034 ಕೋಟಿ ರೂ. ಅನುದಾನ ನೀಡಲಾಗಿದೆ. ಹಾಗೂ ಕೆಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಹೀಗಾಗಿ ಇನ್ನೂ ಹೆಚ್ಚಿನ ಸಾಲದೊಂದಿಗೆ 4,09,549 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿದ್ದಾರೆ. ಅವರು 1.16 ಲಕ್ಷ ಕೋಟಿ ರೂ. ಸಾಲ ಪಡೆಯುವುದಾಗಿಯೂ ಘೋಷಿಸಿದ್ದಾರೆ. ಇದರಿಂದ ಕರ್ನಾಟಕದ ಒಟ್ಟು ಸಾಲ 2026ರ ಮಾರ್ಚ್ ಅಂತ್ಯಕ್ಕೆ ₹7,64,655 ಕೋಟಿಗೆ ಏರಿಕೆಯಾಗಲಿದೆ.
2025-26ರ ಆಯವ್ಯಯದಲ್ಲಿ ಒಟ್ಟು ₹4,09,549 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ. ಇದರಲ್ಲಿ ₹3,11,739 ಕೋಟಿ ರಾಜಸ್ವ ವೆಚ್ಚ, 71,336 ಕೋಟಿ ರೂ. ಬಂಡವಾಳ ವೆಚ್ಚ ಮತ್ತು 26,474 ಕೋಟಿ ರೂ.ಗಳ ಸಾಲ ಮರುಪಾವತಿ ಒಳಗೊಂಡಿದೆ. 2025-26ನೇ ಸಾಲಿನಲ್ಲಿ 19,262 ಕೋಟಿ ರೂ. ರಾಜಸ್ವ ಕೊರತೆಯನ್ನು ಅಂದಾಜಿಸಲಾಗಿದ್ದು, ಇದು ಜಿ.ಎಸ್.ಡಿ.ಪಿ.ಯ ಶೇ. 0.63ರಷ್ಟು ಆಗುತ್ತದೆ. ವಿತ್ತೀಯ ಕೊರತೆ 90,428 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಇದು ಜಿ.ಎಸ್.ಡಿ.ಪಿಯ ಶೇ. 2.95ರಷ್ಟಾಗಲಿದೆ.
ಸಾಲದ ಮೊರೆ…
2025-26 ಸಾಲಿನಲ್ಲಿ ಅಂದಾಜು 1,16,000 ಕೋಟಿ ರೂ. ಸಾಲ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. 2024-25 ಸಾಲಿನಲ್ಲಿ 1,05,246 ಕೋಟಿ ರೂ. ಸಾಲ ಪಡೆಯಲಾಗಿತ್ತು. ಈ ಬಾರಿ ಇನ್ನೂ 10,754 ಕೋಟಿ ರೂ. ಹೆಚ್ಚುವರಿ ಸಾಲ ಪಡೆಯಲು ನಿರ್ಧರಿಸಲಾಗಿದೆ.
ಯಾರಿಂದ ಸಾಲ ಪಡೆಯಲಿದ್ದಾರೆ..?
ಕೇಂದ್ರ ಸರ್ಕಾರದ ಸಾಲ – 7000 ಕೋಟಿ ರೂ.
ಮಾರುಕಟ್ಟೆ ಸಾಲ – 1,05,000 ಕೋಟಿ ರೂ.
ಎಲ್ಐಸಿ/ಎನ್ಸಿಸಿಎಫ್/ಎನ್ಸಿಡಿಸಿ/ಆರ್ಐಡಿಎಫ್ನಿಂದ ಸಾಲ – 4000 ಕೋಟಿ ರೂ.
ವಿವಿಧ ಬಂಡವಾಳ ಜಮೆ – 36 ಕೋಟಿ ರೂ.
ಮುಂಗಡಗಳ ವಸೂಲಿ – 134 ಕೋಟಿ ರೂ.
ಒಟ್ಟು ಸಾಲ – 1,16,170 ಕೋಟಿ ರೂ.ಗಳಾಗಿದೆ.
2025-26ರ ಅಂತ್ಯಕ್ಕೆ ರಾಜ್ಯದ ಒಟ್ಟು ಹೊಣೆಗಾರಿಕೆಗಳು (ಸಾಲಗಳು) ₹7,64,655 ಕೋಟಿ ಎಂದು ಅಂದಾಜಿಸಲಾಗಿದ್ದು, ಇದು ಜಿ.ಎಸ್.ಡಿ.ಪಿ ಯ ಶೇ. 24.91ರಷ್ಟು ಆಗಲಿದೆ. 2025-26ನೇ ಸಾಲಿಗೆ ರಾಜ್ಯದ ವಿತ್ತೀಯ ಕೊರತೆ ಮತ್ತು ಒಟ್ಟು ಹೊಣೆಗಾರಿಕೆಗಳನ್ನು, ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡದಂತೆ ಪಾಲನೆ ಮಾಡಲಾಗಿದೆ ಹಾಗೂ ವಿತ್ತೀಯ ಶಿಸ್ತನ್ನು ಕಾಯ್ದುಕೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಆದಾಯ ಸಂಗ್ರಹ
2025-26ನೇ ಸಾಲಿಗೆ ಒಟ್ಟು 2,92,477 ಕೋಟಿ ರೂ.ಗಳ ರಾಜಸ್ವ ಸ್ವೀಕೃತಿಯನ್ನು ಅಂದಾಜಿಸಲಾಗಿದೆ. ಇದರಲ್ಲಿ ₹2,08,100 ಕೋಟಿ ಸ್ವಂತ ತೆರಿಗೆಯಿಂದ ಬರಲಿದೆ ಎಂದು ನಿರೀಕ್ಷಿಸಲಾಗಿದ್ದು, ₹16,500 ಕೋಟಿ ತೆರಿಗೆಯೇತರ ರಾಜಸ್ವದಿಂದ ಬರಲಿದೆ ಮತ್ತು ಕೇಂದ್ರ ಸರ್ಕಾರದ ಸ್ವೀಕೃತಿ ₹67,877 ಕೋಟಿ ಇದರಲ್ಲಿ ಸೇರಿವೆ.
ನಿಮ್ಮ ಕಾಮೆಂಟ್ ಬರೆಯಿರಿ