ಖಾನಾಪುರ | ಡಿಜಿಟಲ್ ಅರೆಸ್ಟ್‌ ಮಾಡಿ 50 ಲಕ್ಷ ರೂ. ವಂಚನೆ, ಹಣಕ್ಕಾಗಿ ಮತ್ತೆ ಬೆದರಿಕೆ : ಸೈಬರ್‌ ವಂಚಕರ ಕಾಟಕ್ಕೆ ವೃದ್ಧ ದಂಪತಿ ಆತ್ಮಹತ್ಯೆ

ಬೆಳಗಾವಿ: ಸೈಬರ್‌ ವಂಚಕರ (Cyber Crime) ಕಾಟ ತಾಳಲಾರದೇ ವೃದ್ಧ ದಂಪತಿ ಗುರುವಾರ ತಡರಾತ್ರಿ ಆತ್ಮಹತ್ಯೆಗೆ (Suicide) ಶರಣಾದ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ.
ಫ್ಲೇವಿಯಾನಾ ನಜರೆತ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರೆ, ಡಯಾಗೊ ಚಾಕುವಿನಿಂದ ಕುತ್ತಿಗೆ ಕೊಯ್ದು ಸೂಸೈಡ್‌ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮುನ್ನ ದಂಪತಿ ಇಂಗ್ಲಿಷ್‌ನಲ್ಲಿ ಬರೆದ ಡೆತ್‌ನೋಟ್‌ ಸಿಕ್ಕಿದೆ. ಬೀಡಿ ಗ್ರಾಮದ ನಿವಾಸಿಗಳಾದ ಡಿಯೋಗ್ಜೆರಾನ್ ಸಂತಾನ್ ನಜರೆತ್ (82) ಮತ್ತು ಅವರ ಪತ್ನಿ ಫ್ಲಾವಿಯಾನಾ (79) ಅವರಿಗೆ ಮಕ್ಕಳಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಬರ್ ವಂಚಕರು ಬೆದರಿಕೆ ಕರೆ ಮಾಡಿ ಬೆದರಿಸಿ ಡಯಾಗೊ ಅವರಿಂದ 50 ಲಕ್ಷ ರೂ. ಹೆಚ್ಚು ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಸುಮ್ಮನಾಗದೇ ಮತ್ತೆ ಹಣಕ್ಕಾಗಿ ಪೀಡಿಸುತ್ತಿದ್ದರು. ಇದರಿಂದ ತಮ್ಮ ಜೀವನವನ್ನು ಕೊನೆಗೊಳಿಸಲು ದಂಪತಿ ನಿರ್ಧರಿಸಿದ್ದರು. ತಮ್ಮ ಡೆತ್ ನೋಟ್‌ನಲ್ಲಿ, ದಂಪತಿ ಕೆಲವು ವ್ಯಕ್ತಿಗಳಿಂದ ಸಾಲ ಪಡೆದಿರುವುದಾಗಿ ಉಲ್ಲೇಖಿಸಿದ್ದಾರೆ. ಅದನ್ನು ತಮ್ಮ ಆಸ್ತಿಗಳನ್ನು ಮಾರಿ ಮರುಪಾವತಿಸಬೇಕೆಂದು ಹೇಳಿದ್ದಾರೆ ಎಂದು ತಿಳಿಸಿದರು.

ಡಿಯೋಗ್ಜೆರಾನ್ ಅವರು ಬಿಟ್ಟುಹೋದ ಎರಡು ಪುಟಗಳ ಕೈಬರಹದ ಡೆತ್ ನೋಟ್‌ ನಲ್ಲಿ ಯಾರೊಬ್ಬರ ಕರುಣೆಯಿಂದ ಬದುಕಲು ಬಯಸುವುದಿಲ್ಲವಾದ್ದರಿಂದ ಸಾವಿಗೆ ಯಾರನ್ನೂ ದೂಷಿಸಬೇಡಿ ಎಂದು ವಿನಂತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಗುರುವಾರ ಬೆಳಕಿಗೆ ಬಂದಿದ್ದು, ನೆರೆಹೊರೆಯವರು ಫ್ಲಾವಿಯಾನಾ ಹಾಸಿಗೆಯ ಮೇಲೆ ನಿರ್ಜೀವವಾಗಿದ್ದನ್ನು ಕಂಡುಕೊಂಡರೆ, ಡಿಯೊಗ್ಜೆರಾನ್ ಅವರ ದೇಹವು ಅವರ ಮನೆಯ ನೀರಿನ ತೊಟ್ಟಿಯಲ್ಲಿ ಪತ್ತೆಯಾಗಿದೆ ಎಂದು ಅವರು ಹೇಳಿದರು.
ಮಹಾರಾಷ್ಟ್ರದ ಸರ್ಕಾರಿ ಸಚಿವಾಲಯದ ನಿವೃತ್ತ ಉದ್ಯೋಗಿ ಡಿಯೋಗ್ಜೆರೋನ್ ಕುತ್ತಿಗೆಗೆ ಚೂರಿಯಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮಣಿಕಟ್ಟಿನ ಮೇಲೂ ಗಾಯಗಳು ಪತ್ತೆಯಾಗಿವೆ. ಫ್ಲೇವಿಯಾನಾ ನಿದ್ರೆ ಮಾತ್ರೆ ಸೇವಿಸಿರುವ ಶಂಕೆ ಇದೆ, ಆದರೂ ದೃಢೀಕರಣ ಶವಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ ನೇಮಕ

ಡೆತ್ ನೋಟ್‌ನಲ್ಲಿ, ಕೆಲ ದಿನಗಳ ಹಿಂದೆ ದೆಹಲಿ ಕ್ರೈಂ ಬ್ರ‍್ಯಾಂಚ್‌ನಿಂದ ನಮಗೆ ವಿಡಿಯೋ ಕರೆ ಬಂದಿತ್ತು. ಆ ಕರೆಯಲ್ಲಿ ನೀವು ಅಪರಾಧ ಒಂದರಲ್ಲಿ ಭಾಗಿಯಾಗಿದ್ದೀರಿ ಎಂದು ಬೆದರಿಕೆ ಹಾಕಲಾಗಿತ್ತು. ಬಳಿಕ 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಭಯಗೊಂಡು ನಾವು ಅವರು ಹೇಳಿದ ಖಾತೆಗೆ ಹಣ ಹಾಕಿದ್ದೆವು.
ಹಣ ಪಾವತಿ ಮಾಡಿದ ಬಳಿಕವೂ ಮತ್ತೆ ವೀಡಿಯೊ ಕಾಲ್ ಮಾಡಿ ಮತ್ತೆ ಹಣ ನೀಡಬೇಕು, ಒಂದು ವೇಳೆ ಹಣ ನೀಡದಿದ್ದರೆ ಅರೆಸ್ಟ್‌ ಮಾಡುತ್ತೇವೆ ಎಂದು ಬೆದರಿಸಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿದ್ದಾರೆ. ಡೆತ್ ನೋಟ್‌ನಲ್ಲಿ ದಂಪತಿ ತಮ್ಮ ದೇಹವನ್ನು ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆಗೆ ದಾನ ಮಾಡುವಂತೆ ಮನವಿ ಮಾಡಿದ್ದಾರೆ ಡಿಯೊಗ್ಜೆರಾನ್ ಸುಮಿತ್ ಬಿಸ್ರಾ ಮತ್ತು ಅನಿಲ ಯಾದವ್ ಎಂಬ ಇಬ್ಬರು ವ್ಯಕ್ತಿಗಳನ್ನು ಹೆಸರಿಸಿದ್ದಾರೆ.

“ಈಗ ನನಗೆ 82 ವರ್ಷ, ಮತ್ತು ನನ್ನ ಹೆಂಡತಿಗೆ 79 ವರ್ಷ, ನಮಗೆ ಬೆಂಬಲ ನೀಡುವವರು ಯಾರೂ ಇಲ್ಲ, ಯಾರ ಕರುಣೆಯಿಂದ ನಾವು ಬದುಕಲು ಬಯಸುವುದಿಲ್ಲ, ಆದ್ದರಿಂದ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದು ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ.
ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಅವರ ದೇಹವನ್ನು ವೈದ್ಯಕೀಯ ಸಂಸ್ಥೆಗೆ ದಾನ ಮಾಡಬೇಕೆಂಬ ಆಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ತನಿಖೆಯ ಭಾಗವಾಗಿ ಪೊಲೀಸರು ಮೊಬೈಲ್ ಫೋನ್, ಚಾಕು ಮತ್ತು ಆತ್ಮಹತ್ಯೆ ಪತ್ರವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
“ಡೆತ್ ನೋಟ್ ಮತ್ತು ಪ್ರಾಥಮಿಕ ವಿಚಾರಣೆಯ ಆಧಾರದ ಮೇಲೆ, ನಾವು ನೋಟ್‌ನಲ್ಲಿ ಹೆಸರಿಸಲಾದ ಇಬ್ಬರು ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಸೈಬರ್ ವಂಚನೆ ಪ್ರಕರಣವನ್ನು ದಾಖಲಿಸಿದ್ದೇವೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ನಿಂದ ನಾಲ್ವರಿಗೆ ಟಿಕೆಟ್‌ ಘೋಷಣೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement