ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದ ಇಸ್ಲಾಮಿಕ್ ಧರ್ಮಗುರುವಿನ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಪಶ್ತೂನ್ ಸಮುದಾಯವು ಭಾರತೀಯ ಸೇನೆಯ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಭಾರತೀಯ ಪ್ರವಾಸಿಗರು ಸಾವಿಗೀಡಾದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚಿದ ಉದ್ವಿಗ್ನತೆಯ ಮಧ್ಯೆ ಈ ವೀಡಿಯೊ ಹೊರಬಿದ್ದಿದೆ.
‘ನಾವು ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುವುದಿಲ್ಲ’
ವೀಡಿಯೊದಲ್ಲಿ, ಮುಸ್ಲಿಮ್ ಧರ್ಮಗುರು ಸ್ಥಳೀಯ ಜನಸಮೂಹವನ್ನು ಉದ್ದೇಶಿಸಿ ಪಾಷ್ಟೋ ಭಾಷೆಯಲ್ಲಿ ಮಾತನಾಡಿದ್ದು, “ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ನಾವು ಪಶ್ತೂನ್ಗಳು ತಕ್ಷಣವೇ ಪಾಕಿಸ್ತಾನ ಸೇನೆಯ ವಿರುದ್ಧ ಭಾರತೀಯ ಸೇನೆಯ ಬೆಂಬಲಕ್ಕೆ ನಿಲ್ಲುತ್ತೇವೆ. ಅವರು ನಮ್ಮ ಪಶ್ತೂನ್ಗಳ ವಿರುದ್ಧ ಬಹಳಷ್ಟು ದೌರ್ಜನ್ಯಗಳನ್ನು ಎಸಗಿದ್ದಾರೆ. ಮತ್ತು ನಾವು ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಹೇಳುತ್ತೇವೆ ಎಂದು ನೀವು ಭಾವಿಸುತ್ತೀರಾ? ಅದು ಎಂದಿಗೂ ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ನೀವು ಪಶ್ತೂನ್ಗಳಿಗೆ ತುಂಬಾ ಹಾನಿ ಮಾಡಿದ್ದೀರಿ, ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ ಎಂದು ನೀವು ಭಾವಿಸುತ್ತೀರಾ? ನಾವು ನಿಮಗಾಗಿ “ಜಿಂದಾಬಾದ್” ಎಂದು ಜಪಿಸುತ್ತೇವೆ ಎಂದು ನೀವು ಭಾವಿಸುತ್ತೀರಾ? ನಾನು ಸರಿಯೋ ತಪ್ಪೋ? ನೀವು ನಮ್ಮ ಭೂಮಿಯನ್ನು ದಬ್ಬಾಳಿ ಮಾಡಿದ್ದೀರಿ. ನೀವು ಪಶ್ತೂನ್ಗಳಾದ ನಮ್ಮ ಮೇಲೆ ದಬ್ಬಾಳಿ ಮಾಡಿದ್ದೀರಿ” ಎಂದು ಖೈಬರ್ ಪಖ್ತುಂಖ್ವಾ ಮೌಲಾನಾ ವೀಡಿಯೊದಲ್ಲಿ ಹೇಳುವುದನ್ನು ಕೇಳಬಹುದು.
“ನೀವು ಯಾವ ಪಶ್ತೂನ್ ಮಗುವನ್ನು ಕಣ್ಣೀರು ಸುರಿಸುವಂತೆ ಮಾಡಿಲ್ಲ? ಓ ದೇವರೇ, ಈ ಸೈನಿಕರ ಮಕ್ಕಳು ಪಶ್ತೂನ್ ಮಕ್ಕಳು ಅಳುವ ರೀತಿಯಲ್ಲಿ ಅಳುತ್ತಾರೆಯೇ? ಅವರು ಈಗ ತಮ್ಮ ಮನೆಗಳಲ್ಲಿ ದುಃಖಿಸಲಿ. ಸ್ವಾತ್ ಮತ್ತು ಮಲಕಂಡ್ನಲ್ಲಿ, ಪ್ರತಿ ಕುಟುಂಬವು ಶೋಕದಲ್ಲಿದೆ. ಪ್ರತಿ ಕುಟುಂಬವು ಎರಡು ಅಥವಾ ಮೂರು ಜನರನ್ನು ಕಳೆದುಕೊಂಡಿದೆ. ಪಶ್ತೂನ್ಗಳು ನಿಮ್ಮನ್ನು ಬೆಂಬಲಿಸುತ್ತಾರೆ ಎಂದು ನೀವು ಭಾವಿಸುತ್ತೀರಾ? ಎಂದು ಧರ್ಮಗುರು ಪ್ರಶ್ನಿಸಿದ್ದಾರೆ.
ಧರ್ಮಗುರು ಪಾಶ್ತೂನ್ ಪ್ರದೇಶಗಳಲ್ಲಿ ಪಾಕಿಸ್ತಾನದ ಆಡಳಿತದ ಹಿಂದಿನ ಮಿಲಿಟರಿ ಕಾರ್ಯಾಚರಣೆಗಳು, ಜನರ ನಾಪತ್ತೆಗಳು ಮತ್ತು ಆರ್ಥಿಕ ನಿರ್ಲಕ್ಷ್ಯವನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.
ನಾನು ಜೈಲಿನಲ್ಲಿದ್ದಾಗ ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡಲಿ ಎಂದು ಪ್ರಾರ್ಥನೆ ಮಾಡುತ್ತಿದ್ದೆ. ದೇವರ ಮೇಲೆ ನನಗೆ ನಂಬಿಕೆ ಇದೆ. ನಮ್ಮ ಮೇಲೆ ದಾಳಿ ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಅವರು ಹೇಳಿದ್ದಾರೆ. ಈ ವಿಡಿಯೋವನ್ನು ಸಾರ್ವಜನಿಕ ಸಭೆಯ ಸಮಯದಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ವರದಿಯಾಗಿದೆ, ಆದರೂ ಈ ವೀಡಿಯೊದ ನಿಖರವಾದ ದಿನಾಂಕ ಮತ್ತು ಸ್ಥಳವನ್ನು ದೃಢೀಕರಿಸಲಾಗಿಲ್ಲ. ಈ ವೀಡಿಯೊದ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ.
ಆನ್ಲೈನ್ನಲ್ಲಿ ಜನಪ್ರಿಯತೆ ಗಳಿಸುತ್ತಿದೆ…
X (ಹಿಂದೆ ಟ್ವಿಟರ್) ನಲ್ಲಿ ಹಲವಾರು ಬಳಕೆದಾರರು ಹಂಚಿಕೊಂಡ ನಂತರ ಈ ವೀಡಿಯೊ ವ್ಯಾಪಕ ಜನಪ್ರಿಯತೆ ಗಳಿಸಿತು, ಇದು ಭಾರತ ಮತ್ತು ಪಾಕಿಸ್ತಾನಿ ಬಳಕೆದಾರರ ಗಮನ ಸೆಳೆಯಿತು. ಕೆಲವು ಭಾರತೀಯ ಬಳಕೆದಾರರು ಅವರ ಹೇಳಿಕೆಯನ್ನು ಶ್ಲಾಘಿಸಿದರೆ, ಇತರರು ಸಂದೇಶದ ಹಿಂದಿನ ಸತ್ಯಾಸತ್ಯತೆ ಮತ್ತು ಉದ್ದೇಶವನ್ನು ಪ್ರಶ್ನಿಸಿದ್ದಾರೆ. ಪಶ್ತೂನ್ ಜನರಲ್ಲಿ ಪಾಕ್ ಆಡಳಿತದ ಬಗ್ಗೆ ಹೆಚ್ಚುತ್ತಿರುವ ಅಸಮಾಧಾನದ ಬಗ್ಗೆ ಹಲವಾರು ಪಾಕಿಸ್ತಾನಿ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ಮಿಲಿಟರಿ ಬಗ್ಗೆ ಪಶ್ತೂನ್ ಅಸಮಾಧಾನ
ವಿಶೇಷವಾಗಿ ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನದ ಕೆಲವು ಭಾಗಗಳಲ್ಲಿ ಪಶ್ತೂನ್ ಜನಸಮೂಹದ ಮೇಲೆ ಪಾಕಿಸ್ತಾನ ಸೇನೆಯು ಮಾನವ ಹಕ್ಕುಗಳ ಉಲ್ಲಂಘನೆಯನ್ನು ದೀರ್ಘಕಾಲದಿಂದ ಆರೋಪಿಸಲಾಗುತ್ತಿದೆ. ನಾಗರಿಕ ಹಕ್ಕುಗಳ ಚಳುವಳಿಯಾದ ಪಶ್ತೂನ್ ತಹಾಫುಜ್ ಚಳುವಳಿ (PTM), ಮಿಲಿಟರಿಯ ಆಪಾದಿತ ದಮನ ಕ್ರಮಗಳು, ಅಕ್ರಮ ಬಂಧನಗಳು ಮತ್ತು ಬಲವಂತದ ಕಣ್ಮರೆಗಳ ವಿರುದ್ಧ ಧ್ವನಿ ಎತ್ತಿದೆ.
ಪಹಲ್ಗಾಮ್ನಲ್ಲಿ 26 ಭಾರತೀಯ ಪ್ರವಾಸಿಗರನ್ನು ಕೊಂದ ಮಾರಕ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚಿನ ಉದ್ವಿಗ್ನತೆಯ ಮಧ್ಯೆ ಈ ವೀಡಿಯೊ ಬಂದಿದೆ.
ಪಾಕಿಸ್ತಾನ Vs ಪಶ್ತೂನ್ ಸಂಘರ್ಷ ಯಾಕೆ?
ಪಶ್ತೂನ್ಗಳು ಇರಾನಿನ ಜನಾಂಗೀಯ ಗುಂಪಾಗಿದ್ದು ಇವರನ್ನು ಪಖ್ತೂನ್ಗಳು ಅಥವಾ ಪಠಾಣ್ಗಳು ಎಂದು ಸಹ ಕರೆಯಲಾಗುತ್ತದೆ. ಅವರು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಾರೆ. ಪಶ್ತೂನ್ಗಳು ಪೂರ್ವ ಇರಾನಿನ ಭಾಷೆಯಾದ ಪಾಷ್ಟೋವನ್ನು ಮಾತನಾಡುತ್ತಾರೆ.
ಪಶ್ತೂನ್ಗಳು ಪಾಕಿಸ್ತಾನವನ್ನು ವಿರೋಧಿಸಲು ಮುಖ್ಯ ಕಾರಣ ಡುರಾಂಡ್ ಗಡಿ (Durand Line) ರೇಖೆ. ಪಾಕಿಸ್ತಾನ ಮತ್ತು ಅಫ್ಘಾನ್ ಮಧ್ಯೆ 2,670 ಕಿ.ಮೀ ಉದ್ದದ ಗಡಿ ರೇಖೆ ಹಾದು ಹೋಗಿದೆ. ಅಫ್ಘಾನಿಸ್ತಾನದಲ್ಲಿ ಪಶ್ತೂನ್ ಬುಡಕಟ್ಟು ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಾಕಿಸ್ತಾನದ ಗಡಿ ಭಾಗದಲ್ಲಿಯೂ ಪಶ್ತೂನ್ ಜನ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಕೆಲ ಸಂಬಂಧಿಕರು ಅಫ್ಘಾನಿಸ್ತಾನ ಭಾಗದಲ್ಲಿದ್ದರೆ ಇನ್ನು ಕೆಲವರು ಪಾಕಿಸ್ತಾನದಲ್ಲಿದ್ದಾರೆ. ಈ ಕಾರಣಕ್ಕೆ ಅಫ್ಘಾನಿಸ್ತಾನ ಈವರೆಗೆ ಇದನ್ನು ಗಡಿ ರೇಖೆ ಎಂಬುದನ್ನು ಒಪ್ಪಿಕೊಂಡಿಲ್ಲ. ಇಸ್ಲಾಮಾಬಾದ್: ಭಾರತದ (India) ವಿರುದ್ಧ ಉಗ್ರರನ್ನು ಛೂ ಬಿಡುತ್ತಿರುವ ಪಾಕಿಸ್ತಾನಕ್ಕೆ (Pakistan) ಈಗ ಅಲ್ಲಿಯೇ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಒಂದು ವೇಳೆ ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ ನಾವು ಭಾರತದ ಜೊತೆ ನಿಲ್ಲಬೇಕು ಎಂದು ಪಶ್ತೂನ್ ಮುಸ್ಲಿಮರಿಗೆ (Pashtun Muslims) ಕರೆ ನೀಡಲಾಗಿದೆ.
1947ರಲ್ಲಿ ಪಾಕಿಸ್ತಾನ ರಚನೆಯಾದ ಬಳಿಕ 2017ರವರೆಗೆ ಈ ಫೆಡರಲಿ ಅದಮಿಸ್ತರ್ಡ್ ಟ್ರೈಬಲ್ ಪ್ರದೇಶ (Federally Administered Tribal Areas) ಎಂದು ಕರೆಸಿಕೊಳ್ಳುವ ಪ್ರದೇಶದ ನಿಯಂತ್ರಣ ಪಾಕಿಸ್ತಾನದ ಬಳಿ ಇರಲಿಲ್ಲ. 2018ರಲ್ಲಿ ಪಾಕಿಸ್ತಾನದ ಸಂಸತ್ತು ಮಸೂದೆ ಪಾಸ್ ಮಾಡಿ ಅದು ತನ್ನ ಭಾಗ ಎಂದು ಘೋಷಿಸಿತು. ಈ ಪ್ರದೇಶವನ್ನು ಖೈಬರ್ ಪಖ್ತುಂಕ್ವಾದ ಜೊತೆ ವಿಲೀನಗೊಳಿಸಿತು. ಪಾಕಿಸ್ತಾನದ ಈ ನಿರ್ಧಾರ ತಾಲಿಬಾನ್ ಮತ್ತು ಪಶ್ತೂನ್ ಜನಾಂಗದವರ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ವಿಚಾರದ ಬಗ್ಗೆ ಸಂಘರ್ಷ ನಡೆಯುತ್ತಿದೆ. ಹಲವು ಪಶ್ತೂನ್ ನಾಯಕರನ್ನು ಪಾಕಿಸ್ತಾನ ಬಂಧಿಸಿ ಜೈಲಿನಲ್ಲಿರಿಸಿದೆ.
ದಿನಗಳ ಹಿಂದೆ, ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನಿ ಸೇನೆ ಮತ್ತು ಪಾಕಿಸ್ತಾನಿ ಪೊಲೀಸರ ನಡುವೆ ನಡೆದ ಪ್ರಮುಖ ಘರ್ಷಣೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು 26 ಜೀವಗಳನ್ನು ಬಲಿತೆಗೆದುಕೊಂಡ ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನದ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಪಾಕಿಸ್ತಾನದ ಆಂತರಿಕ ಭದ್ರತಾ ಉದ್ವಿಗ್ನತೆಯನ್ನು ಬಹಿರಂಗಪಡಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ