ನವದೆಹಲಿ: ಅಪಹಾಸ್ಯದ ಮತ್ತೊಂದು ವಿದ್ಯಮಾನದಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತದ ಆಪರೇಶನ್ ಸಿಂಧೂರಕ್ಕೆ ಪ್ರತೀಕಾರವಾಗಿ ತಾನು ಭಾರತದ ವಿರುದ್ಧ ನಡೆಸಿದ ಆಪರೇಷನ್ ಬನ್ಯಾನ್ ಅಲ್-ಮಾರ್ಸಸ್ ಕಾರ್ಯಾಚರಣೆ ಚಿತ್ರವೆಂದು ಹೇಳಿಕೊಂಡು ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ವರ್ಣಚಿತ್ರವೊಂದನ್ನು ಉಡುಗೊರೆಯಾಗಿ ನೀಡಿ ವ್ಯಾಪಕವಾಗಿ ನಗೆಪಾಟಲಿಗೀಡಾಗಿದ್ದಾರೆ. ಯಾಕೆಂದರೆ ಭಾರತದ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯ ಫೋಟೋ ಎಂದು ಹೇಳಿಕೊಂಡಿರುವ ಈ ಫೋಟೋ ವಾಸ್ತವವಾಗಿ 2019ರ ಚೀನಾದ ಮಿಲಿಟರಿ ಕವಾಯತಿನ ಸ್ನ್ಯಾಪ್ಶಾಟ್ ಫೋಟೊ ಆಗಿದೆ…!
ಕಳೆದ ವಾರ ಮುನೀರ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ, ಆಪರೇಷನ್ ಬನ್ಯನ್ ಅಲ್-ಮಾರ್ಸಸ್ ಎಂದು ಕರೆಯಲ್ಪಡುವ ಸೇನಾ ಕಾರ್ಯಾಚರಣೆ ಮೂಲಕ ಭಾರತದೊಂದಿಗಿನ ನಾಲ್ಕು ದಿನಗಳ ಮಿಲಿಟರಿ ಸಂಘರ್ಷದ ಸಮಯದಲ್ಲಿ ಪಾಕ್ ಸೇನಾ ಮುಖ್ಯಸ್ಥರು ತೋರಿದ “ದೂರದೃಷ್ಟಿ” ಕ್ರಮಕ್ಕೆ ಅವರನ್ನು ಗೌರವಿಸುವ ಉದ್ದೇಶದಿಂದ ಈ ಫೋಟೊವನ್ನು ಶೆಹಬಾಜ್ ಷರೀಫ್ ಉಡುಗೊರೆಯಾಗಿ ನೀಡಿದ್ದರು. ಆದರೆ ಹದ್ದಿನ ಕಣ್ಣಿನ ನೆಟಿಜನ್ಗಳು ಈ ಚಿತ್ರವನ್ನು ತ್ವರಿತವಾಗಿ ನಕಲಿ ಎಂದು ಕಂಡುಹಿಡಿದರು ಮತ್ತು ಅದನ್ನು ವರ್ಷಗಳ ಹಿಂದೆ ಚೀನಾದ ಸೇನೆ ನಡೆಸಿದ ಸೇನಾ ಕವಾಯತಿನ ಫೋಟೋ ಎಂದು ಗುರುತಿಸಿದರು.
X ಬಳಕೆದಾರರು ಪಾಕಿಸ್ತಾನವು ಮಿಲಿಟರಿ ಯಶಸ್ಸನ್ನು ಬಿಂಬಿಸಲು ಡಿಜಿಟಲ್ ಮಾಡಿದ ನಕಲಿ ಚಿತ್ರ ಎಂದು ಹೇಳಿ ಪಾಕಿಸ್ತಾನಿ ನಾಯಕತ್ವವನ್ನು ಟೀಕಿಸಿದ್ದಾರೆ. “ಪಾಕಿಸ್ತಾನದ ಇತ್ತೀಚಿನ ಮೇರುಕೃತಿ: ಶೆಹಬಾಜ್ ಷರೀಫ್ 2019 ರ ಚೀನೀ ಕವಾಯತಿನ ಫೋಟೋಶಾಪ್ ಮಾಡಿದ ವರ್ಣಚಿತ್ರವನ್ನು ಪಾಕಿಸ್ತಾನದ ವಿಫಲ ಮಾರ್ಷಲ್ ಅಸಿಮ್ ಮುನೀರ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ನೀವು ಯುದ್ಧಭೂಮಿಯಲ್ಲಿ ಗೆಲ್ಲಲು ಸಾಧ್ಯವಾಗದಿದ್ದಾಗ, ನೀವು ಈ ತರಹದ ವರ್ಣಚಿತ್ರದ ನಕಲಿ ಮಾಡಿಯಾದರೂ ಗೆಲ್ಲುತ್ತೀರಿ ಎಂದು ಊಹಿಸುತ್ತೀರಿ, ಆದರೆ ಅದು ನಕಲಿ ಎಂಬುದು ಎಲ್ಲರಿಗೂ ಗೊತ್ತಾಗಿದೆ” ಎಂದು ಒಬ್ಬ ಬಳಕೆದಾರರು ಪಾಕಿಸ್ತಾನವನ್ನು ಅಣಕಿಸಿದ್ದಾರೆ.
“ಪಾಕಿಸ್ತಾನದ ಪ್ರಧಾನಿ ಅಸಿಮ್ ಮುನೀರ್ಗೆ 2019 ರ ಚೀನೀ ಕವಾಯತಿನ ಫೋಟೋವನ್ನು ಉಡುಗೊರೆಯಾಗಿ ನೀಡುತ್ತಾರೆ, ಇದು ‘ಆಪರೇಶನ್ ಬನ್ಯನ್ ಅಲ್ ಮಾರ್ಸಸ್’ ಎಂದು ಹೇಳಿಕೊಳ್ಳುತ್ತಾರೆ. ಪಾಕಿಸ್ತಾನ ಈಗ ತನ್ನದೇ ಆದ ಮಿಲಿಟರಿ ಕಾರ್ಯಾಚರಣೆಯನ್ನು ಸಂಭಮಿಸಲು ಆರು ವರ್ಷದ ಹಿಂದಿನ ಚೀನಾದ ಸೇನಾ ಕವಾಯತಿನ ಫೋಟೋವನ್ನು ಬಳಸುತ್ತಿದೆ. ಅವರಿಗೆ ತಮ್ಮದೇ ಆದ ಮಿಲಿಟರಿ ಕಾರ್ಯಾಚರಣೆಯ ದೃಶ್ಯಗಳು ಸಿಗುತ್ತಿಲ್ಲ. ನಿಜವಾಗಿಯೂ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ತಮ್ಮ ಇಡೀ ರಾಷ್ಟ್ರವನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಮತ್ತೊಬ್ಬರು ಬರೆದಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸೇಡು ತೀರಿಸಿಕೊಳ್ಳಲು ಭಾರತ ಪ್ರಾರಂಭಿಸಿದ ಆಪರೇಷನ್ ಸಿಂಧೂರದ ಭಾಗವಾಗಿ ಮೇ 10–14 ರ ನಾಲ್ಕು ದಿನಗಳ ಭಾರತದ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನವು ತೀವ್ರ ಹಿನ್ನೆಡೆ ಅನುಭವಿಸಿದ ನಂತರ ಪಾಕಿಸ್ತಾನವು ತನ್ನನ್ನು ತಾನು ಬಿಂಬಿಸಿಕೊಳ್ಳಲು ಹತಾಶ ಪ್ರಯತ್ನ ನಡೆಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ