ಮಂಗಳೂರು: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ದಕ್ಷಿಣ ಕನ್ನಡದ ಹಲvew ಅನಾಹುತಗಳು ಸಂಭವಿಸಿವೆ. ಕೆಲವೆಡೆ ಗುಡ್ಡ ಕುಸಿತ (Landslide) ಉಂಟಾಗಿದೆ. ಮಳೆ ಸಂಬಂಧಿ ಅನಾಹುತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ದೇರಳಕಟ್ಟೆ ಮೊಂಟೆಪದವಿನ ಪಂಬದ ಹಿತ್ಲುವಿನಲ್ಲಿ ಗುಡ್ಡ ಕುಸಿದು ಮಣ್ಣು ಮನೆಗಳ ಮೇಲೆ ಬಿದ್ದಿದೆ. ಮನೆಗಳ ಅಡಿಯಲ್ಲಿ ಒಂದೇ ಕುಟುಂಬದ ಸಿಲುಕಿಕೊಂಡಿದ್ದಾರೆ. ಅವರಲ್ಲಿ ಓರ್ವ ಮಹಿಳೆ ಸಾವಿಗೀಡಾಗಿದ್ದಾರೆ. ಓರ್ವರನ್ನು ಮಣ್ಣಿನಡಿಯಿಂದ ರಕ್ಷಸಲಾಗಿದೆ ಎಂದು ಹೇಳಲಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಸಿದ ಮನೆಯಡಿ ತಾಯಿ ಹಾಗೂ ಇಬ್ಬರು ಮಕ್ಕಳು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆದಿದೆ.
ದೇರಳಕಟ್ಟೆ ಮೊಂಟೆಪದವಿನ ಪಂಬದ ಹಿತ್ಲುವಿನಲ್ಲಿ ಕಾಂತಪ್ಪ ಪೂಜಾರಿ ಎಂಬವರ ಮನೆ ಮೇಲೆ ಗುಡ್ಡ ಕುಸಿದಿದ್ದು, ಕಾಂತಪ್ಪ ಪೂಜಾರಿ ಎಂಬವರ ಪತ್ನಿ ಪ್ರೇಮ ಪೂಜಾರಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಒಳಗೆ ಮಲಗಿದ್ದ ತಾಯಿ ಮಗುವಿನ ಮೇಲೆ ಮನೆಯ ಮೇಲ್ಚಾವಣಿ ಬಿದ್ದಿದೆ. ಗೋಡೆಯ ಅರ್ಧಭಾಗ ಇಬ್ಬರ ದೇಹದ ಮೇಲೆ ಬಿದ್ದಿದ್ದು, ರಕ್ಷಣಾ ತಂಡ ಇಬ್ಬರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಿದೆ. ಅಶ್ವಿನಿ ಎಂಬ ಮಹಿಳೆ ಹಾಗೂ ಆಕೆಯ ಒಂದು ವರ್ಷದ ಮಗು ಆರುಷ್ ಮನೆಯ ಮೇಲ್ಛಾವಣಿ ಅಡಿ ಸಿಲುಕಿದ್ದಾರೆ. ಮಗುವಿನ ಕೈ ಹಾಗೂ ಮುಖ ಹೊರಗೆ ಕಾಣುತ್ತಿದ್ದು ತಾಯಿ ಮಗುವನ್ನು ರಕ್ಷಣಾ ತಂಡ ಸಂಪರ್ಕಿಸಿದೆ. ಒಳಗಡೆ ಸಿಲುಕಿ ನರಳುತ್ತಿರುವ ತಾಯಿ, ಮಗುವಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ.
ಕಾಂಪೌಂಡ್ ಕುಸಿದು ಬಾಲಕಿ ಸಾವು
ದೇರಳಕಟ್ಟೆ ಸಮೀಪದ ಮೊಂಟೆಪದವು ಕೋಡಿ ಎಂಬಲ್ಲಿ ಗುಡ್ಡ ಕುಸಿದು, ಕಾಂಪೌಂಡ್ ಗೋಡೆ ಮನೆ ಮೇಲೆ ಬಿದ್ದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ನಡೆದಿದೆ. ಕಾನಕರೆ ನಿವಾಸಿ ನೌಶಾದ್ ಎಂಬುವರ ಮನೆ ಮೇಲೆ ಮಣ್ಣುಬಿದ್ದ ಪರಿಣಾಮ ಪುತ್ರಿ ನಹೀಮಾ (10) ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ನೌಶಾದ ಅವರ ಮನೆಯ ಹಿಂಬದಿಯ ಕಾಂಪೌಂಡ್ ಗೋಡೆ ಕುಸಿದು ಮನೆ ಮೇಲೆ ಮಣ್ಣು ಬಿದ್ದಿದೆ. ಮನೆಯ ಕಿಟಕಿ ಬಾಲಕಿಯ ಮೇಲೆ ಬಿದ್ದು ಗಂಭೀರ ಗಾಯಗೊಂಡ ಬಾಲಕಿ ನಹೀಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾಳೆ.
ಉಳ್ಳಾಲ ತಾಲೂಕಿನ ಎರಡು ಕಡೆ ಭಾರೀ ಮಳೆಗೆ ಎರಡು ಕಡೆ ಮನೆಗಳ ಮೇಲೆ ಗುಡ್ಡ ಕುಸಿದ ಬಗ್ಗೆ ವರದಿಯಾಗಿದೆ. ಭಾರೀ ಮಳೆಯಿಂದ ಉಳ್ಳಾಲ, ಕಲ್ಲಾಪು, ಬಗಂಬಿಲ, ಪಿಲಾರ್, ಅಂಬಿಕಾರಸ್ತೆ, ಕೋಟೆಕಾರು, ತಲಪಾಡಿ, ಪಾವೂರು, ಹರೇಕಳ, ಉಳಿಯ ಪ್ರದೇಶಗಳು ಜಲಾವೃತಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಡೆಬಿಡದೆ ಮಳೆಯಾಗ್ತಿರುವ ಹಿನ್ನೆಲೆ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ