ನವದೆಹಲಿ: ಆಪರೇಶನ್ ಸಿಂಧೂರ ಕಾರ್ಯಾಚರಣೆಯ ಸಮಯದಲ್ಲಿ ಭಾರತ ಹಾರಿಸಿದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯಲ್ಲಿ ಪರಮಾಣು ಸಿಡಿತಲೆ ಇರಬಹುದೇ ಎಂದು ನಿರ್ಧರಿಸಲು ತಮ್ಮ ದೇಶದ ಸೇನೆಗೆ ಕೇವಲ 30 ರಿಂದ 45 ಸೆಕೆಂಡುಗಳ ಸಮಯ ಮಾತ್ರ ಇತ್ತು ಎಂದು ಪಾಕಿಸ್ತಾನದ ಉನ್ನತ ರಾಜಕಾರಣಿಯೊಬ್ಬರು ಒಪ್ಪಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕಿಸ್ತಾನದ ಜೊತೆ ಸಂಬಂಧ ಹೊಂದಿರುವ ಭಯೋತ್ಪಾದಕರು 26 ಪ್ರವಾಸಿಗರನ್ನು ಕೊಂದ ನಂತರ ಭುಗಿಲೆದ್ದ ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಪರಮಾಣು ಯುದ್ಧದ ಅಪಾಯವು ಹೆಚ್ಚು ಇತ್ತು ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಲಹೆಗಾರರಾದ ರಾಣಾ ಸನಾವುಲ್ಲಾ ಸುದ್ದಿವಾನಿಯ ಚರ್ಚೆಯೊಂದರಲ್ಲಿ ಹೇಳಿದ್ದಾರೆ.
“ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ ಬ್ರಹ್ಮೋಸ್ ಕ್ಷಿಪಣಿ ಹಾರಿಸಿದಾಗ, ಒಳಬರುವ ಕ್ಷಿಪಣಿಯಲ್ಲಿ ಪರಮಾಣು ಅಸ್ತ್ರ ಇರಬಹುದೇ ಎಂದು ವಿಶ್ಲೇಷಿಸಲು ಪಾಕಿಸ್ತಾನದ ಸೇನೆಗೆ ಕೇವಲ 30-45 ಸೆಕೆಂಡುಗಳು ಮಾತ್ರ ಇದ್ದವು. ಇದರ ಬಗ್ಗೆ ಕೇವಲ 30 ಸೆಕೆಂಡುಗಳಲ್ಲಿ ಏನನ್ನಾದರೂ ನಿರ್ಧರಿಸುವುದು ಅಪಾಯಕಾರಿ ಪರಿಸ್ಥಿತಿಯಾಗಿತ್ತು” ಎಂದು ಸನಾವುಲ್ಲಾ ಪಾಕಿಸ್ತಾನಿ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದರು.
ನೂರ್ ಖಾನ್ ರಾವಲ್ಪಿಂಡಿಯ ಚಕ್ಲಾಲಾದಲ್ಲಿರುವ ಪಾಕಿಸ್ತಾನ ವಾಯುಪಡೆಯ (ಪಿಎಎಫ್) ಪ್ರಮುಖ ವಾಯುನೆಲೆಯಾಗಿದೆ. “ಅವರು ಪರಮಾಣು ಅಸ್ತ್ರ ಬಳಸದೆ ಒಳ್ಳೆಯದನ್ನು ಮಾಡಿದ್ದಾರೆಂದು ನಾನು ಹೇಳುತ್ತಿಲ್ಲ, ಆದರೆ ಅದೇ ಸಮಯದಲ್ಲಿ ಈ ಭಾಗದ ಜನರು ಅದನ್ನು ತಪ್ಪಾಗಿ ಅರ್ಥೈಸಿಕೊಂಡಿರಬಹುದು, ಇದು ಜಾಗತಿಕ ಪರಮಾಣು ಯುದ್ಧಕ್ಕೆ ನಾಂದಿ ಹಾಡಬಹುದಾದ ಮೊದಲ ಪರಮಾಣು ಶಸ್ತ್ರಾಸ್ತ್ರದ ಉಡಾವಣೆಗೆ ಕಾರಣವಾಗಬಹುದು” ಎಂದು ಅವರು ಹೇಳಿದರು.
‘ಆಪರೇಷನ್ ಸಿಂಧೂರ’ ಸಮಯದಲ್ಲಿ ಭಾರತವು ಹಲವಾರು ಪಾಕಿಸ್ತಾನಿ ವಾಯುನೆಲೆಗಳ ಮೇಲೆ ದಾಳಿ ಮಾಡಿತು, ರನ್ವೇಗಳು, ಹ್ಯಾಂಗರ್ಗಳು ಮತ್ತು ಕಟ್ಟಡಗಳಿಗೆ ಹಾನಿ ಮಾಡಿತು, ಇದು ಪಾಕಿಸ್ತಾನಕ್ಕೆ ಭಾರಿ ಹೊಡೆತವನ್ನು ನೀಡಿತು. ಉಪಗ್ರಹ ಚಿತ್ರಗಳು ಸರ್ಗೋಧಾ, ನೂರ್ ಖಾನ್ (ಚಕ್ಲಾಲಾ), ಭೋಲಾರಿ, ಜಕೋಬಾಬಾದ್, ಸುಕ್ಕೂರ್ ಮತ್ತು ರಹೀಂ ಯಾರ್ ಖಾನ್ ವಾಯುನೆಲೆಗಳಲ್ಲಿ ವ್ಯಾಪಕ ಹಾನಿಯನ್ನುಂಟು ಮಾಡಿದ್ದು ಕಂಡುಬಂದಿವೆ.
ಭಾರತ ನೂರ್ ಖಾನ್ ಮೇಲೆ ದಾಳಿ ಮಾಡಿದ್ದು ಇದೇ ಮೊದಲಲ್ಲ. 1971 ರ ಯುದ್ಧದ ಸಮಯದಲ್ಲಿ, ಭಾರತೀಯ ವಾಯುಪಡೆಯ (IAF) 20 ನೇ ಸ್ಕ್ವಾಡ್ರನ್ ತಮ್ಮ ಹಾಕರ್ ಹಂಟರ್ಗಳೊಂದಿಗೆ ವಾಯುನೆಲೆ ಮೇಲೆ ದಾಳಿ ನಡೆಸಿತ್ತು.
ಇದಲ್ಲದೆ, ಭಾರತೀಯ ಸೇನೆಯು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಲಷ್ಕರ್-ಎ-ತೈಬಾ (LeT), ಜೈಶ್-ಎ-ಮೊಹಮ್ಮದ್ (JeM) ಮತ್ತು ಹಿಜ್ಬುಲ್ ಮುಜಾಹಿದ್ದೀನ್ನಂತಹ ಭಯೋತ್ಪಾದಕ ಗುಂಪುಗಳ ಬಹು ಶಿಬಿರಗಳನ್ನು ನಾಶಪಡಿಸಿತು ಮತ್ತು ‘ಆಪರೇಷನ್ ಸಿಂಧೂರ’ ಸಮಯದಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸತ್ತರು.
ಭಾರತದ ರಾತ್ರಿಯ ಕಾರ್ಯಾಚರಣೆಗಳ ನಂತರ, ಪಾಕಿಸ್ತಾನಿ ಸೇನೆಯು ಭಾರತದ ಗಡಿ ಭಾಗಗಳ ಮೇಲೆ ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಹಾರಿಸಿತು, ಅವುಗಳನ್ನು ಯಶಸ್ವಿಯಾಗಿ ತಡೆಹಿಡಿಯಲಾಯಿತು. ನಂತರ ಭಾರತವು ಪಾಕಿಸ್ತಾನದ ಪ್ರದೇಶದೊಳಗೆ ನುಗ್ಗಿ ಆಯ್ದ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿತು. ನಾಲ್ಕು ದಿನಗಳ ತೀವ್ರ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ ತಕ್ಷಣದಿಂದ ಜಾರಿಗೆ ಬರುವಂತೆ ಮಿಲಿಟರಿ ಸಂಘರ್ಷ ನಿಲ್ಲಿಸಲು ಎರಡೂ ದೇಶಗಳು ಕದನ ವಿರಾಮ ಒಪ್ಪಂದಕ್ಕೆ ಬಂದವು.
ನಿಮ್ಮ ಕಾಮೆಂಟ್ ಬರೆಯಿರಿ