ಮಾಲೆಗಾಂವ್ ಸ್ಫೋಟ | ಮೋಹನ ಭಾಗವತರ ಬಂಧಿಸಲು ಆದೇಶಿಸಲಾಗಿತ್ತು’: ನಿವೃತ್ತ ಎಟಿಎಸ್ ಅಧಿಕಾರಿ ಸ್ಫೋಟಕ ಮಾಹಿತಿ

ಮುಂಬೈ: 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಏಳು ಜನರನ್ನು ಖುಲಾಸೆಗೊಳಿಸಿದ ನಂತರ, ಈ ಪ್ರಕರಣದ ಮಾಜಿ ತನಿಖಾ ಅಧಿಕಾರಿಯೊಬ್ಬರು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತನಿಖೆಯ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ ಭಾಗವತ್ ಅವರನ್ನು ಬಂಧಿಸಲು ಆದೇಶಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
ʼಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆಯೇ ನಕಲಿ. ಇದನ್ನು ʼಕೇಸರಿ ಭಯೋತ್ಪಾದನೆʼ ಎಂಬುದಾಗಿ ಬಿಂಬಿಸುವ ಯತ್ನ ನಡೆದಿತ್ತುʼ ಎಂದು ಮಾಜಿ ಎಟಿಎಸ್ ಅಧಿಕಾರಿ, ನಿವೃತ್ತ ಇನ್ಸ್‌ಪೆಕ್ಟರ್ ಮೆಹಿಬೂಬ್ ಮುಜಾವರ್ ಹೇಳಿದ್ದಾರೆ. ಈ ಪ್ರಕರಣದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್ ಅವರನ್ನು ಬಂಧಿಸಲು ನನಗೆ ಆದೇಶಿಲಾಗಿತ್ತು ಎಂದು ಅವರು ಹೇಳಿದ್ದಾರೆ.
ಸ್ಫೋಟದ ತನಿಖೆ ನಡೆಸಿದ ಎಟಿಎಸ್ ತಂಡದ ಭಾಗವಾಗಿದ್ದ ಮೆಹಬೂಬ್ ಮುಜಾವರ್, ತನಿಖೆಯನ್ನು “ತಪ್ಪು ದಿಕ್ಕಿನಲ್ಲಿ” ಕೊಂಡೊಯ್ಯುವ ಪ್ರಯತ್ನ ನಡೆದಿತ್ತು ಮತ್ತು ಇದನ್ನು ಆಕ್ಷೇಪಿಸಿದ್ದಕ್ಕಾಗಿ ತನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಯಿತು ಎಂದು ಹೇಳಿಕೊಂಡಿದ್ದಾರೆ.

ಮುಂಬೈನ ವಿಶೇಷ ನ್ಯಾಯಾಲಯವು ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ ಪುರೋಹಿತ ಸೇರಿದಂತೆ ಎಲ್ಲಾ ಏಳು ಆರೋಪಿಗಳನ್ನು “ಯಾವುದೇ ವಿಶ್ವಾಸಾರ್ಹ ಮತ್ತು ಬಲವಾದ” ಪುರಾವೆಗಳಿಲ್ಲ ಎಂಬ ಕಾರಣಕ್ಕೆ ಖುಲಾಸೆಗೊಳಿಸಿದ ಒಂದು ದಿನದ ನಂತರ ಮಾಜಿ ಎಟಿಎಸ್ ಅಧಿಕಾರಿಯ ಈ ಹೇಳಿಕೆಗಳು ಬಂದಿವೆ.
ಸೆಪ್ಟೆಂಬರ್ 29, 2008 ರಂದು ಮುಂಬೈನಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ಮಾಲೆಗಾಂವ್‌ನ ಜನನಿಬಿಡ ಮಾರುಕಟ್ಟೆಯಲ್ಲಿ ಮೋಟಾರ್ ಸೈಕಲ್‌ನಲ್ಲಿ ಅಳವಡಿಸಲಾಗಿದ್ದ ಬಾಂಬ್ ಸ್ಫೋಟಗೊಂಡು ಆರು ಜನರು ಸಾವಿಗೀಡಾಗಿದ್ದರು. ಮಹಾರಾಷ್ಟ್ರ ಎಟಿಎಸ್ ಸ್ಫೋಟವನ್ನು ದೇಶದ ಅತ್ಯುನ್ನತ ಭಯೋತ್ಪಾದನಾ ನಿಗ್ರಹ ಸಂಸ್ಥೆಯಾದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಹಸ್ತಾಂತರಿಸುವ ಮೊದಲು ತನಿಖೆ ನಡೆಸಿತ್ತು.
“ನನ್ನ ಮೇಲಧಿಕಾರಿಗಳು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ ಭಾಗವತ್ ಅವರನ್ನು ಬಂಧಿಸಲು ಆದೇಶಿಸಿದ್ದರು” ಎಂದು ಮುಜಾವರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. “ಮಾಲೆಗಾಂವ್ ಸ್ಫೋಟದ ಆಗಿನ ಮುಖ್ಯ ತನಿಖಾಧಿಕಾರಿ ಪರಮ್ ಬೀರ್ ಸಿಂಗ್  ಹಾಗೂ ಅವರಿಗಿಂತ ಮೇಲಿನವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಬಂಧಿಸಲು ನನಗೆ ಆದೇಶಿಸಿದ್ದರು ಎಂದು ಮೆಹಬೂಬ್ ಮುಜಾವರ್ ಹೇಳಿಕೊಂಡಿದ್ದಾರೆ. ಈ ಪ್ರಕರಣದ ಮೂಲಕ ʼಕೇಸರಿ ಭಯೋತ್ಪಾದನೆʼ ಎಂಬ ಹಸಿ ಸುಳ್ಳನ್ನು ಸತ್ಯವಾಗಿ ಬಿಂಬಿಸುವ ಪ್ರಯತ್ನ ನಡೆದಿತ್ತು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ ಪ್ರಮಾಣ ವಚನ, 13 ಸಚಿವರಿಂದಲೂ ಪ್ರಮಾಣವಚನ ಸ್ವೀಕಾರ

ಈ ಸ್ಫೋಟ ಪ್ರಕರಣದಲ್ಲಿ ಮೋಹನ ಭಾಗವತ್ ಅವರನ್ನು ಬಂಧಿಸುವಂತೆ ಮೇಲಿಂದ  ಆದೇಶ ಬಂದರೂ ನಾನು ಆದೇಶಗಳನ್ನು ಪಾಲಿಸಲಿಲ್ಲ. ಮೋಹನ ಭಾಗವತ ಅವರಂತಹ ಉನ್ನತ ವ್ಯಕ್ತಿತ್ವವುಳ್ಳವರ ಬಂಧನ ನನ್ನ ಸಾಮರ್ಥ್ಯಕ್ಕೆ ಮೀರಿದ್ದಾಗಿತ್ತು. ನಾನು ಆ ಆದೇಶ ಪಾಲಿಸಲಿಲ್ಲ. ಮಾಲೆಗಾಂವ್ ಬಾಂಬ್ ಸ್ಫೋಟದ ಬಗ್ಗೆ ಸುಳ್ಳು ತನಿಖೆ ನಡೆಸಲು ಪ್ರಯತ್ನ ನಡೆದಿತ್ತು. ಆದರೆ ನಾನು ಅದಕ್ಕೆ ಸಿದ್ಧನಾಗಿರಲಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಯಿತು. ನಂತರ ನನ್ನ ಹೆಸರನ್ನು ತೆರವುಗೊಳಿಸಲಾಯಿತು” ಎಂದು ಮುಜಾವರ್ ಹೇಳಿದರು. ಮುಜಾವರ್ ಅವರನ್ನು ಅಂದಿನ ರಾಜ್ಯ ಸರ್ಕಾರ ಅಮಾನತುಗೊಳಿಸಿತ್ತು.

ಮುಜಾವರ್‌ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “2008 ರ ಪಿತೂರಿಯನ್ನು ಬಹಿರಂಗಪಡಿಸಲಾಗಿದೆ. ಅಂದಿನ ಸರ್ಕಾರವು ಹಿಂದೂ ಭಯೋತ್ಪಾದನೆ ಮತ್ತು ಕೇಸರಿ ಭಯೋತ್ಪಾದನೆಯಂತಹ ಪದಗಳನ್ನು ಸೃಷ್ಟಿಸಿತು. ಇಸ್ಲಾಮಿಕ್ ಭಯೋತ್ಪಾದನೆಯ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಮಯದಲ್ಲಿ, ಸರ್ಕಾರಕ್ಕೆ ಮತ ಹಾಕಿದವರನ್ನು ಕೋಪಗೊಳ್ಳುವಂತೆ ಮಾಡಲು ಸಾಧ್ಯವಿರಲಿಲ್ಲ. ಅದಕ್ಕಾಗಿಯೇ ಹಿಂದೂ ಭಯೋತ್ಪಾದನಾ ಸಿದ್ಧಾಂತವನ್ನು ರಚಿಸಲಾಯಿತು ಎಂದು ಹೇಳಿದ್ದಾರೆ.ಆರಂಭದಲ್ಲಿ ಘಟನೆಯ ತನಿಖೆ ನಡೆಸಿದ್ದ ಎಟಿಎಸ್, ‘ಅಭಿನವ್ ಭಾರತ’ ಎಂಬ ಬಲಪಂಥೀಯ ಉಗ್ರಗಾಮಿ ಗುಂಪಿನೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳು ಈ ಸ್ಫೋಟವನ್ನು ನಡೆಸಿದ್ದಾರೆ ಎಂದು ಆರೋಪಿಸಿತ್ತು ಮತ್ತು ಸ್ಫೋಟದಲ್ಲಿ ಬಳಸಲಾದ ಮೋಟಾರ್ ಸೈಕಲ್ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಕರ್ನಲ್ ಪುರೋಹಿತ ಸೇರಿದಂತೆ ಇತರ ಆರೋಪಿಗಳಿಗೆ ಸೇರಿದೆ ಎಂದು ಹೇಳಿಕೊಂಡಿತ್ತು. ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ದೊಡ್ಡ ಪಿತೂರಿ ನಡೆದಿದೆ ಎಂದು ಅದು ಆರೋಪಿಸಿತ್ತು.

ಪ್ರಮುಖ ಸುದ್ದಿ :-   ಬಂಗಾಳ ರಾಜಕೀಯದಲ್ಲಿ ಸುನಾಮಿ ; ದೀದಿಗೆ ಬಿಗ್ ಶಾಕ್ : ಟಿಂಎಂಸಿ ಶಾಸಕರ ಬೆಂಬಲದಿಂದಲೇ ವಿಧಾನಸಭೆ ವಿಪಕ್ಷದ ನಾಯಕನಾದ ಉಚ್ಚಾಟಿತ ಶಾಸಕ..!

ಆದಾಗ್ಯೂ, ತನಿಖೆಯನ್ನು ವಹಿಸಿಕೊಂಡ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಎಟಿಎಸ್ ತನಿಖೆಯಲ್ಲಿ ಪ್ರಮುಖ ನ್ಯೂನತೆಗಳನ್ನು ಕಂಡುಹಿಡಿದು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿಯಲ್ಲಿ ಆರೋಪಗಳನ್ನು ಕೈಬಿಟ್ಟು, ಕೆಲವು ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿತು.
2018 ರಲ್ಲಿ ಪ್ರಾರಂಭವಾದ ವಿಚಾರಣೆಯಲ್ಲಿ, ಪ್ರಾಸಿಕ್ಯೂಷನ್ 323 ಸಾಕ್ಷಿಗಳನ್ನು ಹಾಜರುಪಡಿಸಿತು. ಅವರಲ್ಲಿ 37 ಮಂದಿ ಪ್ರತಿಕೂಲ ಸಾಕ್ಷಿಗಳಾದರು. ಆರೋಪಗಳನ್ನು ಸಾಬೀತುಪಡಿಸಲು “ಪ್ರಬಲ ಮತ್ತು ವಿಶ್ವಾಸಾರ್ಹ ಪುರಾವೆಗಳ” ಕೊರತೆಯನ್ನು ಉಲ್ಲೇಖಿಸಿ ಎನ್‌ಐಎ ವಿಶೇಷ ನ್ಯಾಯಾಲಯವು ಎಲ್ಲಾ ಏಳು ಆರೋಪಿಗಳನ್ನು ಖುಲಾಸೆಗೊಳಿಸಿತು.
ಬಾಂಬ್ ಅನ್ನು ಮೋಟಾರ್ ಸೈಕಲ್‌ನಲ್ಲಿ ಅಳವಡಿಸಲಾಗಿದೆಯೇ, ಬೈಕ್ ಠಾಕೂರ್‌ಗೆ ಸೇರಿದೆಯೇ ಅಥವಾ ಪುರೋಹಿತ್ ಸ್ಫೋಟಕಗಳನ್ನು ಸಂಗ್ರಹಿಸಿದ್ದಾರೆಯೇ ಅಥವಾ ಜೋಡಿಸಿದ್ದಾರೆಯೇ ಎಂಬುದನ್ನು ಸ್ಥಾಪಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಧೀಶರು ಗಮನಿಸಿದರು. “ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ” ಮತ್ತು “ಸುಮ್ಮನೆ ಅನುಮಾನ” ಅಥವಾ “ನೈತಿಕ ಗ್ರಹಿಕೆ”ಯ ಆಧಾರದ ಮೇಲೆ ಶಿಕ್ಷೆ ವಿಧಿಸಲಾಗುವುದಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement