ಕೋಲ್ಕತ್ತಾ : ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರಿಗೆ ಹಿಡಿದುಕೊಡಲು ಆತನ ಅಕ್ಕನೇ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವರದಿಯಾಗಿದೆ.
ರೋಜಿನಾ ಶೇಖ್ ಎಂಬ ಆ ಮಹಿಳೆ ತನ್ನ ಸಹೋದರನಿಗೆ ತನ್ನನ್ನು ಭೇಟಿಯಾಗುವಂತೆ ಬರಲು ಹೇಳಿ ನಂತರ ಪೊಲೀಸರನ್ನು ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ‘ದಿ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಇದನ್ನು ಸಾಮೂಹಿಕ ಅತ್ಯಾಚಾರ ಪ್ರಕರಣ ಎಂದು ಪರಿಗಣಿಸಲಾಗಿತ್ತು, ಆದರೆ ಮಂಗಳವಾರ ಸಂಜೆ, ಇದು ಕೇವಲ ಅತ್ಯಾಚಾರ ಪ್ರಕರಣ ಎಂದು ಪೊಲೀಸರು ತಿಳಿಸಿದ್ದಾರೆ. ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಶುಕ್ರವಾರ, ಒಡಿಶಾದ ವೈದ್ಯಕೀಯ ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಊಟಕ್ಕೆ ಹೊರ ಹೊರಟಾಗ ಆಕೆಯ ಶಿಕ್ಷಣ ಸಂಸ್ಥೆಯ ಸಮೀಪದ ಅರಣ್ಯದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು.
ಆಕೆ ಚಿಕಿತ್ಸೆ ಪಡೆಯುವಾಗ ನೀಡಿದ ಹೇಳಿಕೆಯಲ್ಲಿ, ಆರೋಪಿಗಳು ತನ್ನ ಫೋನ್ ಕಸಿದು, ಸ್ನೇಹಿತನಿಗೆ ಕರೆ ಮಾಡಲು ಒತ್ತಾಯಿಸಿದರು ಮತ್ತು ಆತ ಬಾರದಿದ್ದಾಗ, ಆಕೆಯನ್ನು ಕಾಡಿನೊಳಗೆ ಎಳೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ತಿಳಿಸಿದ್ದಾಳೆ. ಐವರು ಆರೋಪಿಗಳು ಮತ್ತು ಆಕೆಯ ಸ್ನೇಹಿತನನ್ನು ಮಂಗಳವಾರದಂದು ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ದು ಘಟನೆಯ ಮರುಸೃಷ್ಟಿ ಮಾಡಲಾಯಿತು.
ವರದಿಯ ಪ್ರಕಾರ, ರೋಜಿನಾ ಶೇಖ್ ಅವರು ಸೋಮವಾರ ದುರ್ಗಾಪುರದ ಅಂಡಾಲ್ ಪ್ರದೇಶದ ಸೇತುವೆಯ ಕೆಳಗೆ ತನ್ನ ಸಹೋದರ ಸಫಿಕ್ ಎಂಬಾತನಿಗೆ ಭೇಟಿಯಾಗಲು ಬರುವಂತೆ ತಿಳಿಸಿದ್ದರು. ನಂತರ ಆಕೆ ಪೊಲೀಸ್ ತಂಡವನ್ನು ಸ್ಥಳಕ್ಕೆ ಕರೆದೊಯ್ದರು. ನಂತರ ತನ್ನ ಸಹೋದರನಿಗೆ ಶರಣಾಗುವಂತೆ ಮತ್ತು ಕಾನೂನನ್ನು ಕ್ರಮ ಎದುರಿಸುವಂತೆ ಹೇಳಿದ್ದಾರೆ.
ಶುಕ್ರವಾರದಿಂದ ಆತ ತಲೆಮರೆಸಿಕೊಂಡಿದ್ದ
ಪೊಲೀಸ್ ವಾಹನದಲ್ಲಿ ಅವನನ್ನು ಭೇಟಿಯ ಸ್ಥಳದಿಂದ ಪೊಲೀಸ್ ಠಾಣೆಗೆ ಕರೆದೊಯ್ಯುವಾಗ ತನ್ನ ಸಹೋದರ “ಭಯದಿಂದ ನಡುಗುತ್ತಿದ್ದ” ಎಂದು ಆಕೆ ತಿಳಿಸಿದ್ದಾರೆ. ಶರಣಾಗುವ ಮೂಲಕ ಸರಿಯಾದ ಕೆಲಸ ಮಾಡಿದ್ದಾನೆ, ಮತ್ತು ತಪ್ಪಿತಸ್ಥನಲ್ಲದಿದ್ದರೆ ಭಯಪಡುವ ಅಗತ್ಯವಿಲ್ಲ ಎಂದು ತಾನು ಆತನಿಗೆ ಧೈರ್ಯ ತುಂಬಿದೆ ಎಂದು ಅಕ್ಕ ಹೇಳಿದ್ದಾರೆ.
ಸಫಿಕ್ ಮತ್ತು ಮತ್ತೊಬ್ಬ ಆರೋಪಿ ಶೇಖ್ ನಾಸಿರುದ್ದೀನ್ನನ್ನು ಸೋಮವಾರ ಬಂಧಿಸಲಾಯಿತು. ಇನ್ನು ಮೂವರು, ಶೇಖ್ ರಿಯಾಜುದ್ದೀನ್, ಅಪು ಬರೂಯಿ ಮತ್ತು ಫಿರ್ದೌಸ್ ಶೇಖ್ ಎಂಬವರನ್ನು ಭಾನುವಾರ ಬಂಧಿಸಲಾಗಿದೆ ಎಂದು ವರದಿ ಹೇಳಿದೆ.
ಅತ್ಯಾಚಾರ ನಡೆದ ದಿನದಿಂದ ಪೊಲೀಸರು ತಮ್ಮ ಮನೆಗೆ ಬರುತ್ತಿದ್ದುದರಿಂದ ಕುಟುಂಬಕ್ಕೆ “ಕೆಟ್ಟ ಹೆಸರು” ಬಂದಿತ್ತು, ಆದರೆ “ಈಗ ಮುಂದೆ ಹಾಗಾಗದು” ಎಂದು ಸಹೋದರಿ ಪತ್ರಿಕೆಗೆ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ