ಯೂಟ್ಯೂಬ್ ನೋಡಿ ನಕಲಿ ವೈದ್ಯನಿಂದ ಶಸ್ತ್ರಚಿಕಿತ್ಸೆ : ಮಹಿಳೆ ಸಾವು

ಬಾರಾಬಂಕಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಯೂಟ್ಯೂಬ್ ವೀಡಿಯೊ ನೋಡಿ ಕಾನೂನು ಬಾಹಿರ ಕ್ಲಿನಿಕ್‌ನ ಮಾಲೀಕ ಮತ್ತು ಆತನ ಸೋದರಳಿಯ ನಡೆಸಿದ ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಕ್ಲಿನಿಕ್‌ನವರು ಯಾವುದೇ ಮಾನ್ಯತೆ ಇಲ್ಲದೆ ಅದನ್ನು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತೇಹಬಹದ್ದೂರ ರಾವತ್ ಅವರ ಪತ್ನಿ ಮುನಿಶ್ರ ರಾವತ್ ಅವರು ಕಲ್ಲು (stone-related ailment) ಬೆಳೆದ ಕಾಯಿಲೆಯಿಂದ ಬಳಲುತ್ತಿದ್ದರು. ಡಿಸೆಂಬರ್ 5 ರಂದು ಅವರ ಪತಿ ಆಕೆಯನ್ನು ಕೋಠಿಯಲ್ಲಿರುವ ‘ಶ್ರೀ ದಾಮೋದರ ಔಷಧಾಲಯ’ಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಕ್ಲಿನಿಕ್ ನಿರ್ವಾಹಕ ಜ್ಞಾನ ಪ್ರಕಾಶ ಮಿಶ್ರಾ ಎಂಬವರು ಹೊಟ್ಟೆಯ ನೋವು ಒಳಗಡೆ ಕಲ್ಲು ಬೆಳೆದಿದ್ದರಿಂದ ಬಂದಿದೆ, ಆಪರೇಷನ್ ಮಾಡಿಸಬೇಕು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಯೂಟ್ಯೂಬ್ ನೋಡಿ ಸರ್ಜರಿ!
ಈ ಶಸ್ತ್ರಚಿಕಿತ್ಸೆಗೆ ಸುಮಾರು 25,000 ರೂ. ವೆಚ್ಚವಾಗುತ್ತದೆ ಎಂದು ಮಿಶ್ರಾ ಅಂದಾಜು ಹೇಳಿದ್ದರು. ಆಪರೇಷನ್‌ಗೂ ಮುನ್ನ ಮಹಿಳೆಯ ಪತಿಯು 20,000 ರೂ. ಠೇವಣಿ ಇರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪತಿ ತಮ್ಮ ದೂರಿನಲ್ಲಿ, “ಮಿಶ್ರಾ ಮದ್ಯದ ಅಮಲಿನಲ್ಲಿದ್ದರು ಮತ್ತು ಯೂಟ್ಯೂಬ್ ವೀಡಿಯೊವನ್ನು ನೋಡಿಕೊಂಡು ಶಸ್ತ್ರಚಿಕಿತ್ಸೆಯನ್ನು ನಡೆಸಿದರು ಎಂದು ಹೇಳಿದ್ದಾರೆ. ಮಿಶ್ರಾ ಅವರು ತಮ್ಮ ಪತ್ನಿಯ ಹೊಟ್ಟೆಯಲ್ಲಿ ಆಳವಾದ ಕಡಿತ ಮಾಡಿ, ಹಲವು ನಾಳಗಳನ್ನು ಕತ್ತರಿಸಿದ್ದಾರೆ. ಇದರ ಪರಿಣಾಮವಾಗಿ ಅವರು ಡಿಸೆಂಬರ್ 6 ರ ಸಂಜೆ ನಿಧನರಾದರು ಎಂದು ಆರೋಪಿಸಿದ್ದಾರೆ.
ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮಿಶ್ರಾ ಅವರ ಸೋದರಳಿಯ ವಿವೇಕಕುಮಾರ ಮಿಶ್ರಾ ಸಹಾಯ ಮಾಡಿದ್ದ. ಈತ ರಾಯ್ ಬರೇಲಿಯ ಆಯುರ್ವೇದ ಆಸ್ಪತ್ರೆಯಲ್ಲಿ ನೌಕರನಾಗಿದ್ದು, ಆತನ ಸರ್ಕಾರಿ ಕೆಲಸದ ನೆಪದಲ್ಲಿ ಈ ಅಕ್ರಮ ಕ್ಲಿನಿಕ್ ಅನ್ನು ಹಲವು ವರ್ಷಗಳಿಂದ ನಡೆಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ ಪ್ರಮಾಣ ವಚನ, 13 ಸಚಿವರಿಂದಲೂ ಪ್ರಮಾಣವಚನ ಸ್ವೀಕಾರ

ವಿಚಾರಣೆಯ ಸಮಯದಲ್ಲಿ, ವೈದ್ಯಕೀಯ ತಂಡವು ಆರೋಪಿಯ ಅರ್ಹತೆಗಳನ್ನು ಪರಿಶೀಲಿಸಿದಾಗ ಆತ ಒಬ್ಬ ನಕಲಿ ವೈದ್ಯ ಮತ್ತು ಆತನ ಕ್ಲಿನಿಕ್ ಆರೋಗ್ಯ ಇಲಾಖೆಯಲ್ಲಿ ನೋಂದಾಯಿಸಲ್ಪಟ್ಟಿಲ್ಲ ಎಂದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಿಂದ ಶಸ್ತ್ರಚಿಕಿತ್ಸೆಯ ವಿಧಾನವನ್ನು ತಿಳಿದುಕೊಂಡ ನಂತರ ಆರೋಪಿಯು ಶಸ್ತ್ರಚಿಕಿತ್ಸೆ ಮಾಡಿದ್ದಾನೆ ಎಂಬ ಕುಟುಂಬದ ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಕ್ಲಿನಿಕ್ ಸೀಜ್, ಆರೋಪಿಗಳ ಬಂಧನಕ್ಕೆ ಶೋಧ
ಸದ್ಯ ಪೊಲೀಸರು ಈ ಕ್ಲಿನಿಕ್ ಅನ್ನು ಸೀಜ್ ಮಾಡಿದ್ದಾರೆ. ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪದ ಮೇಲೆ ಕ್ಲಿನಿಕ್ ನಿರ್ವಾಹಕ ಮತ್ತು ಆತನ ಸೋದರಳಿಯನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ಮುಂದುವರಿದಿವೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement