ಢಾಕಾ/ನವದೆಹಲಿ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ವಿರುದ್ಧದ ವ್ಯವಸ್ಥಿತ ದಾಳಿಗಳು ಮುಂದುವರಿದಿವೆ. 2025ರ ಜೂನ್ನಿಂದ ಡಿಸೆಂಬರ್ ನಡುವಿನ ಕೇವಲ ಆರು ತಿಂಗಳ ಅವಧಿಯಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಕನಿಷ್ಠ 71 ಧರ್ಮ ನಿಂದನೆ(Blasphemy) ಪ್ರಕರಣಗಳು ವರದಿಯಾಗಿವೆ ಎಂದು ‘ಹ್ಯೂಮನ್ ರೈಟ್ಸ್ ಕಾಂಗ್ರೆಸ್ ಫಾರ್ ಬಾಂಗ್ಲಾದೇಶ ಮೈನಾರಿಟೀಸ್’ (HRCBM) ತನ್ನ ಇತ್ತೀಚಿನ ವರದಿಯಲ್ಲಿ ಆಘಾತಕಾರಿ ಮಾಹಿತಿ ನೀಡಿದೆ.
ರಂಗಪುರ, ಚಟ್ಟೋಗ್ರಾಮ, ಖುಲ್ನಾ, ಸಿಲ್ಹೆಟ್ ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಈ ಘಟನೆಗಳು ನಡೆದಿವೆ. ಇದು ಕೇವಲ ಬಿಡಿ ಘಟನೆಗಳಲ್ಲ, ಬದಲಿಗೆ ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಒಂದು ವ್ಯವಸ್ಥಿತ ಸಂಚು ಎಂದು ವರದಿ ಹೇಳಿದೆ.
ಫೇಸ್ಬುಕ್ನಲ್ಲಿ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಲಾಗಿದೆ ಎಂಬ ಆರೋಪದ ಮೇಲೆ ಹೆಚ್ಚಿನ ದಾಳಿಗಳು ನಡೆದಿವೆ. ತನಿಖೆಯಲ್ಲಿ ಇವುಗಳಲ್ಲಿ ಹೆಚ್ಚಿನವು ಹ್ಯಾಕ್ ಮಾಡಲಾದ ಖಾತೆಗಳು ಅಥವಾ ನಕಲಿ ಪೋಸ್ಟ್ಗಳು ಎಂದು ತಿಳಿದುಬಂದಿದೆ.
ದೇವನಿಂದನೆ ಅಥವಾ ಧರ್ಮ ನಿಂದನೆ ಆರೋಪ ಕೇಳಿಬಂದ ತಕ್ಷಣವೇ ಗುಂಪು ದಾಳಿ (Mob Violence) ನಡೆಸಲಾಗುತ್ತಿದೆ. ಜುಲೈ 27ರಂದು ರಂಗಪುರದಲ್ಲಿ 17 ವರ್ಷದ ಬಾಲಕನ ಬಂಧನದ ನಂತರ, ಸುಮಾರು 22 ಹಿಂದೂ ಮನೆಗಳನ್ನು ಧ್ವಂಸಗೊಳಿಸಲಾಗಿದೆ.
ಸೈಬರ್ ಭದ್ರತಾ ಕಾಯ್ದೆಯಡಿ ಅನೇಕ ಹಿಂದೂ ವಿದ್ಯಾರ್ಥಿಗಳನ್ನು ಶಾಲಾ-ಕಾಲೇಜುಗಳಿಂದ ಉಚ್ಚಾಟಿಸಲಾಗಿದೆ ಅಥವಾ ಪೊಲೀಸ್ ವಶಕ್ಕೆ ನೀಡಲಾಗಿದೆ.
ಡಿಸೆಂಬರ್ 18, 2025 ರಂದು ಮೈಮೆನ್ಸಿಂಗ್ನಲ್ಲಿ 30 ವರ್ಷದ ಹಿಂದೂ ವ್ಯಕ್ತಿಯನ್ನು ಉದ್ರಿಕ್ತ ಗುಂಪು ಹೊಡೆದು ಕೊಂದಿದ್ದಲ್ಲದೆ, ಆತನ ದೇಹಕ್ಕೆ ಬೆಂಕಿ ಹಚ್ಚಿದ ಭೀಕರ ಘಟನೆಯನ್ನು ವರದಿ ಉಲ್ಲೇಖಿಸಿದೆ. ಖುಲ್ನಾದಲ್ಲಿ ಅಪ್ರಾಪ್ತ ಬಾಲಕನೊಬ್ಬನನ್ನು ಭದ್ರತಾ ಸಿಬ್ಬಂದಿಯ ಮುಂದೆಯೇ ಹತ್ಯೆ ಮಾಡಲಾದ ಘಟನೆಯೂ ವರದಿಯಾಗಿದೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಾಗುತ್ತಿರುವ ಈ ನಿರಂತರ ದೌರ್ಜನ್ಯದ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಈಗಾಗಲೇ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಪಸಂಖ್ಯಾತರ ರಕ್ಷಣೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತ ಒತ್ತಾಯಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ