ವಿಡಿಯೋ |ಮೈಸೂರು : ಮನೆಗೆ ನುಗ್ಗಿ ಮಂಚದ ಕೆಳಗೆ ಅವಿತಿದ್ದ ಚಿರತೆ, ಧೈರ್ಯ ತೋರಿ ಮಂಚದ ಮೇಲಿದ್ದ ಅತ್ತೆ ಹೊರತಂದ ಸೊಸೆ

ಮೈಸೂರು : ಚಿರತೆಯೊಂದು ಮನೆಯೊಳಗೆ ನುಗ್ಗಿ ಬೆಡ್‌ರೂಂ ಸೇರಿಕೊಂಡು ಮಂಚದ ಕೆಳಗೆ ಅಡಗಿದ ವಿದ್ಯಮಾನ ಮೈಸೂರು ನಗರದ ಸಿದ್ದಾರ್ಥ ನಗರದಲ್ಲಿ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ. ಸುಮಾರು 4 ವರ್ಷದ ಈ ಚಿರತೆಯನ್ನು ಅರಣ್ಯ ಇಲಾಖೆಯ ಚಿರತೆ ಕಾರ್ಯಪಡೆ (Leopard Task Force) ಯಶಸ್ವಿಯಾಗಿ ಸೆರೆಹಿಡಿಯುವ ಮೂಲಕ ದೊಡ್ಡ ಅನಾಹುತವೊಂದು ತಪ್ಪಿದೆ.
ಮೈಸೂರು ನಗರದ ಸಿದ್ಧಾರ್ಥ ಲೇಔಟ್‌ನಲ್ಲಿ ಶುಕ್ರವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಿದ್ದಾರ್ಥ ನಗರದ ನಿವಾಸಿ ಸುರೇಶ ಎಂಬವರು ತಮ್ಮ ಮನೆಯ ಬಾಗಿಲು ತೆರೆದಿಟ್ಟು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮನೆಯ ಮುಂಭಾಗದ ಬಾಗಿಲು ತೆರೆದಿದ್ದನ್ನು ಕಂಡ ಚಿರತೆ, ಯಾರಿಗೂ ತಿಳಿಯದಂತೆ ನೇರವಾಗಿ ಒಳಗಿನ ಕೊಠಡಿಯೊಂದಕ್ಕೆ ನುಗ್ಗಿ ಮನೆಯೊಳಗೆ ನುಗ್ಗಿ ರೂಂ ಸೇರಿಕೊಂಡಿತ್ತು. ಇದಕ್ಕೂ ಮೊದಲು ಬಡಾವಣೆಯ ನಿವಾಸಿಗಳು ಚಿರತೆಯನ್ನು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಸಿಬ್ಬಂದಿ ಬಡಾವಣೆಯಲ್ಲಿ ಹುಡುಕಾಟ ನಡೆಸಿದರೂ ಚಿರತೆ ಪತ್ತೆಯಾಗಿರಲಿಲ್ಲ.

ಸಮಯಪ್ರಜ್ಞೆ: 90 ವರ್ಷದ ವೃದ್ಧೆಯ ರಕ್ಷಣೆ
ಮನೆಯಲ್ಲಿ ಕೆಲಸ ಮಾಡುವ ಮಹಿಳೆ (Maid) ರೂಮಿನ ಮೂಲೆಯಲ್ಲಿದ್ದ ಚಿರತೆಯನ್ನು ಗಮನಿಸಿ ತಕ್ಷಣ ಮಾಲೀಕ ಸುರೇಶ ಅವರನ್ನು ಎಚ್ಚರಿಸಿದ್ದಾರೆ. ಚಿರತೆ ಮಂಚದ ಕೆಳಗೆ ಮೇಲೆ ಆರಾಮವಾಗಿ ಮಲಗಿತ್ತು. ಅದರ ಮೇಲೆ  90 ವರ್ಷದ ವೃದ್ಧೆ ಮಲಗಿದ್ದರು. ಚಿರತೆ ಮಂಚದ ಕೆಳಗೆ ಪಕ್ಕದಲ್ಲೇ ಇದ್ದರೂ ಸುರೇಶ ಅವರ ಪತ್ನಿ ಸಮಯಪ್ರಜ್ಞೆ ಮೆರೆದು ಸಾಹಸ ಮಾಡಿ ಕೆಲವೇ ಸೆಕೆಂಡ್‌ಗಳ ಅಂತರದಲ್ಲಿ ಹಾಸಿಗೆಯ ಮೇಲಿದ್ದ ತಮ್ಮ 90 ವರ್ಷದ ಅತ್ತೆಯನ್ನು ಎತ್ತಿಕೊಂಡು ಹೊರಬಂದಿದ್ದಾರೆ. ನಂತರ ಸುರೇಶ ಅವರು ಬೆಡ್‌ರೂಂ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡುವ ಮೂಲಕ ಚಿರತೆಯನ್ನು ಒಳಗೆ ಬಂಧಿಸಿದರು. ಅದೃಷ್ಟವಶಾತ್‌ ಚಿರತೆ ಯಾರಿಗೂ ಹಾನಿ ಮಾಡಲಿಲ್ಲ.

ಪ್ರಮುಖ ಸುದ್ದಿ :-   ಸಿಜೆಪಿ ಪ್ರತಿಭಟನಾಕಾರರ ವಿರುದ್ಧದ ಎಲ್ಲ ಎಫ್‌ಐಆರ್‌ ರದ್ದು ಮಾಡಿದ ಸುಪ್ರೀಂ ಕೋರ್ಟ್‌ ; ಆದರೆ ಕೆಲವರಿಗೆ ವಿನಾಯಿತಿ ಇಲ್ಲ...

ಕಾರ್ಯಾಚರಣೆ ಮತ್ತು ಸೆರೆ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಚಿರತೆ ಕಾರ್ಯಪಡೆ ಮತ್ತು ಮೈಸೂರು ಮೃಗಾಲಯದ ಪಶುವೈದ್ಯರಾದ ಶಶಿಧರ ಅವರು ಕಾರ್ಯಾಚರಣೆ ಆರಂಭಿಸಿದರು. ಮೊದಲ ಬಾರಿಗೆ ನೀಡಿದ ಅರಿವಳಿಕೆ ಮದ್ದು (Dart) ಚಿರತೆಯ ಮೇಲೆ ಪರಿಣಾಮ ಬೀರಲಿಲ್ಲ. ಎರಡನೇ ಬಾರಿಗೆ ಇಂಜೆಕ್ಷನ್‌ ಅದರ ಮೈಗೆ ಶೂಟ್‌ ಮಾಡಿದ ನಂತರ ಚಿರತೆ ಪ್ರಜ್ಞೆ ತಪ್ಪಿತು. ಕೊನೆಯಲ್ಲಿ ಮಂಚದ ಕೆಳಗೆ ಅವಿತಿದ್ದ ಚಿರತೆಯನ್ನು ನೆಟ್ (ಬಲೆ) ಬಳಸಿ ಸುರಕ್ಷಿತವಾಗಿ ಸೆರೆಹಿಡಿಯಲಾಯಿತು.
“ಈ ಚಿರತೆಯು ಸಮೀಪದ ಚಾಮುಂಡಿ ಬೆಟ್ಟ ಅಥವಾ ವರಕೋಡು ಗ್ರಾಮದ ಅರಣ್ಯ ಪ್ರದೇಶದಿಂದ ಬಂದಿರುವ ಸಾಧ್ಯತೆಯಿದೆ. ಸೆರೆಹಿಡಿಯಲಾದ ಚಿರತೆಯನ್ನು ಮರಳಿ ಕಾಡಿಗೆ ಬಿಡಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಪರಮೇಶ್ವರ ಅವರು ತಿಳಿಸಿದ್ದಾರೆ.
ಮನೆ ಮಾಲೀಕರ ಪ್ರತಿಕ್ರಿಯೆ
“ನಾನು ಗಾಳಿ ಬರಲೆಂದು ಬಾಗಿಲು ತೆರೆದಿಟ್ಟು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಚಿರತೆ ಯಾವಾಗ ಒಳಗೆ ಬಂತು ಎಂಬುದು ನನಗೆ ತಿಳಿಯಲೇ ಇಲ್ಲ” ಎಂದು ಸುರೇಶ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸುರೇಶ ಅವರ ಪತ್ನಿ ಮಾತನಾಡಿ, “ನಾನು ಅತ್ತೆಯ ಬಳಿ ಹೋಗಿ ಬಂದರೂ ಚಿರತೆ ಇರುವುದು ನನ್ನ ಗಮನಕ್ಕೆ ಬಂದಿರಲಿಲ್ಲ, ಅದೃಷ್ಟವಶಾತ್ ಅದು ನಮಗೆ ಯಾವುದೇ ಹಾನಿ ಮಾಡಲಿಲ್ಲ” ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಸಮುದ್ರ ಮಟ್ಟ ಏರಿಕೆಯಿಂದ ಮುಂಬೈ, ಕೋಲ್ಕತ್ತಾದ 1.4 ಕೋಟಿ ಜನರು ಮನೆ ಕಳೆದುಕೊಳ್ಳಬಹುದು : ವಿಶ್ವಸಂಸ್ಥೆ ವರದಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement