ಕೇರಳಕ್ಕೆ ಮುಂಗಾರು ಪ್ರವೇಶ: 8 ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಣೆ

ತಿರುವನಂತಪುರಂ: ನೈಋತ್ಯ ಮುಂಗಾರು ಗುರುವಾರ ಕೇರಳವನ್ನು ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ದೃಢಪಡಿಸಿದೆ. ಇದು ವಾಡಿಕೆಗಿಂತ ಮೂರು ದಿನ ವಿಳಂಬವಾಗಿದೆ.
ಮುಂಗಾರು ಮಾರುತಗಳ ಆಗಮನದಿಂದಾಗಿ ಕೇರಳ ಮತ್ತು ಲಕ್ಷದ್ವೀಪದಾದ್ಯಂತ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಈಗಾಗಲೇ ಕೇರಳದ ಹಲವು ಜಿಲ್ಲೆಗಳಲ್ಲಿ ಭಾರಿ ಹಾಗೂ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಿಸಿದೆ.
ಸಾಮಾನ್ಯವಾಗಿ ಕೇರಳಕ್ಕೆ ಮುಂಗಾರು ಪ್ರವೇಶಿಸಿದ 2 ರಿಂದ 3 ದಿನಗಳಲ್ಲಿ (ಅಂದರೆ ಜೂನ್ ಮೊದಲ ವಾರದ ಅಂತ್ಯದೊಳಗೆ) ಮುಂಗಾರು ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳನ್ನು ಪ್ರವೇಶಿಸುತ್ತದೆ. ಜೂನ್ ಎರಡನೇ ವಾರದ ಆರಂಭದ ವೇಳೆಗೆ ಮುಂಗಾರು ಮಾರುತಗಳು ಇಡೀ ಕರ್ನಾಟಕವನ್ನು ವ್ಯಾಪಿಸುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

ಜೂನ್ 4 ರಿಂದ ಜೂನ್ 9 ರ ಅವಧಿಯಲ್ಲಿ ಕೇರಳದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಕೆಲವು ಪ್ರದೇಶಗಳಲ್ಲಿ ಕನಿಷ್ಠ 7 ಸೆಂಟಿಮೀಟರ್‌ನಿಂದ ಗರಿಷ್ಠ 20 ಸೆಂಟಿಮೀಟರ್‌ವರೆಗೆ ದಾಖಲೆ ಪ್ರಮಾಣದ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಈ ಹಿನ್ನೆಲೆಯಲ್ಲಿ ತೀವ್ರ ಮಳೆ ಮತ್ತು ಸಾರ್ವಜನಿಕ ಜೀವನಕ್ಕೆ ಉಂಟಾಗಬಹುದಾದ ಅಡಚಣೆಗಳನ್ನು ಪರಿಗಣಿಸಿ, ಗುರುವಾರದಂದು ರಾಜ್ಯದ ಪ್ರಮುಖ 8 ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ರಾಜ್ಯದ ತಿರುವನಂತಪುರಂ, ಕೊಲ್ಲಂ, ಪಥನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ ಹಾಗೂ ತ್ರಿಶೂರ್ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿರುವುದರಿಂದ ಆರೆಂಜ್‌ ಅರ್ಟ್‌ ಘೋಷಿಸಲಾಗಿದೆ.
ಉತ್ತರ ಕೇರಳದತ್ತ ಮುನ್ನಡೆಯಲಿರುವ ಮಳೆ:
ಈ ಹಿಂದೆ ಹವಾಮಾನ ಇಲಾಖೆ ಮೇ 26ರಂದು ಮುಂಗಾರು ಕೇರಳವನ್ನು ತಲುಪಲಿದೆ ಎಂದು ಅಂದಾಜಿಸಿತ್ತು. ನಂತರ ಜೂನ್‌ 1ರಂದು ಪ್ರವೇಶಿಸಲಿದೆ ಎಂದು ಹೇಳಿತ್ತು. ಆದರೆ ವಿವಿಧ ಹವಾಮಾನ ಕಾರಣಗಳಿಂದ ಅದರ ಆಗಮನದಲ್ಲಿ ವಿಳಂಬ ಉಂಟಾಯಿತು.ನಂತರ ಜೂನ್‌ 4-5ರಂದು ಪ್ರವೇಶಿಸಲಿದೆ ಎಂದು ಹೇಳಿತ್ತು.  ಮುಂಬರುವ ದಿನಗಳಲ್ಲಿ ಮುಂಗಾರು ಮಾರುತಗಳ ತೀವ್ರತೆ ಮತ್ತಷ್ಟು ಹೆಚ್ಚಾಗಲಿದ್ದು, ಮಳೆಯು ಕ್ರಮೇಣ ಉತ್ತರ ಕೇರಳದತ್ತ ಮುಖ ಮಾಡಲಿದೆ. ವಾರದ ಉತ್ತರಾರ್ಧದಲ್ಲಿ ರಾಜ್ಯಾದ್ಯಂತ ಮುಂಗಾರು ಪರಿಸ್ಥಿತಿ ಬಲಗೊಳ್ಳುತ್ತಿದ್ದಂತೆ ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ ಪ್ರಮಾಣ ವಚನ, 13 ಸಚಿವರಿಂದಲೂ ಪ್ರಮಾಣವಚನ ಸ್ವೀಕಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement