ಎಐಎಡಿಎಂಕೆಗೆ ಮತ್ತೆ ಆಘಾತ ; ಟಿವಿಕೆ ಸೇರಿದ 4 ಮಾಜಿ ಸಚಿವರು, 6 ಮಾಜಿ ಶಾಸಕರು

ಚೆನ್ನೈ: ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷದಲ್ಲಿನ ಬಿಕ್ಕಟ್ಟು ಮುಂದುವರಿದಿದೆ. ಎಐಎಡಿಎಂಕೆಗೆ (AIADMK) ಶನಿವಾರ ಮತ್ತೊಂದು ಭಾರಿ ಆಘಾತ ಎದುರಾಗಿದ್ದು, ಪಕ್ಷದ ನಾಲ್ವರು ಪ್ರಭಾವಿ ಮಾಜಿ ಸಚಿವರು ಹಾಗೂ ಮಾಜಿ ಶಾಸಕರು ಸೇರಿದಂತೆ 300ಕ್ಕೂ ಹೆಚ್ಚು ಪ್ರಮುಖ ಪದಾಧಿಕಾರಿಗಳು ಆಡಳಿತಾರೂಢ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಇದು ಎಐಎಡಿಎಂಕೆಯ ಸಾಂಸ್ಥಿಕ ಬಲವನ್ನು ಮತ್ತಷ್ಟು ಕುಗ್ಗಿಸಿದೆ.
ಚೆನ್ನೈ ಸಮೀಪದ ಪಣೈಯೂರ್‌ನಲ್ಲಿರುವ ಟಿವಿಕೆ ಪ್ರಧಾನ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಎಐಎಡಿಎಂಕೆಯ ಹಿರಿಯ ನಾಯಕರಾದ ಉಡುಮಲೈ ಕೆ. ರಾಧಾಕೃಷ್ಣನ್, ಎಂ. ಸಿ. ಸಂಪತ್, ಕಡಂಬೂರ್ ಸಿ. ರಾಜು ಮತ್ತು ಎನ್. ಆರ್. ಶಿವಪತಿ ಅವರು ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್. ಆನಂದ ಹಾಗೂ ಚುನಾವಣಾ ಪ್ರಚಾರ ನಿರ್ವಹಣಾ ಪ್ರಧಾನ ಕಾರ್ಯದರ್ಶಿ ಆದವ ಅರ್ಜುನ ಅವರ ಸಮ್ಮುಖದಲ್ಲಿ ಇವರೆಲ್ಲ ಅಧಿಕೃತವಾಗಿ ಪಕ್ಷದ ಧ್ವಜ ಸ್ವೀಕರಿಸಿದರು.

300ಕ್ಕೂ ಹೆಚ್ಚು ಕಾರ್ಯಕರ್ತರ ಸೇರ್ಪಡೆ
ಮಾಜಿ ಸಚಿವರ ಜೊತೆಗೆ ಮಾಜಿ ಸಚಿವ ವೆಲ್ಲಮಂಡಿ ನಟರಾಜನ್, ಅಣ್ಣಾ ಕಾರ್ಮಿಕ ಸಂಘಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಕಮಲಕಣ್ಣನ್, ಮೈಲಾಪುರದ ಮಾಜಿ ಶಾಸಕ ನಟರಾಜ, ಮಾಜಿ ಸಚಿವ ಆನಂದನ್, ಪರಮಕುಡಿಯ ಮಾಜಿ ಶಾಸಕರಾದ ಸಾಧನ ಪ್ರಭಾಕರ, ತಿರುಪತ್ತೂರು ನಗರ ಕಾರ್ಯದರ್ಶಿ ಡಿ. ಟಿ. ಕುಮಾರ ಸೇರಿದಂತೆ ನೂರಾರು ಪ್ರಮುಖ ಕಾರ್ಯಕರ್ತರು ಎಐಎಡಿಎಂಕೆ ತೊರೆದು ಟಿವಿಕೆ ಸೇರಿದರು. ಪ್ರಸ್ತುತ ಎಐಎಡಿಎಂಕೆ ನಾಯಕತ್ವದ ಅಡಿಯಲ್ಲಿ ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಪಕ್ಷಾಂತರ ಮಾಡಿದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಜಯಲಲಿತಾ ಆಡಳಿತದಲ್ಲಿ ಶಿಸ್ತಿತ್ತು’: ಉಡುಮಲೈ ರಾಧಾಕೃಷ್ಣನ್
ಟಿವಿಕೆ ಸೇರಿದ ಬಳಿಕ ಮಾತನಾಡಿದ ಮಾಜಿ ಸಚಿವ ಉಡುಮಲೈ ರಾಧಾಕೃಷ್ಣನ್, “ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ನಾಯಕತ್ವದಲ್ಲಿ ಎಐಎಡಿಎಂಕೆ ಪದಾಧಿಕಾರಿಗಳು ಕಟ್ಟುನಿಟ್ಟಿನ ಶಿಸ್ತು ಕಾಪಾಡಿಕೊಂಡಿದ್ದರು. ಅವರ ನಿಧನದಿಂದ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ಅದರಿಂದ ಚೇತರಿಸಿಕೊಳ್ಳಲು ಪಕ್ಷ ಇಂದಿಗೂ ಹೆಣಗಾಡುತ್ತಿದೆ. ಕಳೆದ 5 ವರ್ಷಗಳಿಂದ ನಾವು ಪಕ್ಷದಲ್ಲೇ ಉಳಿದಿದ್ದರೂ, ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಬೇಕಾಯಿತು. ಈಗ ನಮಗೆ ಮುಖ್ಯಮಂತ್ರಿ ವಿಜಯ ಅವರ ನಾಯಕತ್ವದಲ್ಲಿ ಎಂಜಿಆರ್ ಮತ್ತು ಜಯಲಲಿತಾ ಅವರ ಆದರ್ಶಗಳು ಕಾಣಿಸುತ್ತಿವೆ. ಟಿವಿಕೆಯಲ್ಲಿ ನಮಗೆ ಸಿಕ್ಕ ಗೌರವ ಮತ್ತು ಮನ್ನಣೆ ನಮ್ಮನ್ನು ಈ ನಿರ್ಧಾರಕ್ಕೆ ಪ್ರೇರೇಪಿಸಿತು” ಎಂದರು.

ಪ್ರಮುಖ ಸುದ್ದಿ :-   ₹6,000ಕ್ಕೆ ಕೆಲಸಕ್ಕೆ ಸೇರಿದ್ದ ಸರ್ಕಾರಿ ಇಂಜಿನಿಯರ್ ಬ್ಯಾಂಕ್ ಲಾಕರ್‌ನಲ್ಲಿ ₹2 ಕೋಟಿ ನಗದು ಪತ್ತೆ ; 13 ಸೈಟು, 5 ಬಹುಮಹಡಿ ಕಟ್ಟಡ ಜಪ್ತಿ !

ಚುನಾವಣಾ ಹಿನ್ನಡೆ ಮತ್ತು ಆಂತರಿಕ ಭಿನ್ನಮತ
ಏಪ್ರಿಲ್ 23 ರಂದು ನಡೆದ ಚುನಾವಣೆಯಲ್ಲಿ ಎಐಎಡಿಎಂಕೆ ತೀವ್ರ ಕಳಪೆ ಪ್ರದರ್ಶನ ನೀಡಿದ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿವೆ. ಚುನಾವಣಾ ಸೋಲಿನ ಬೆನ್ನಲ್ಲೇ ಎಐಎಡಿಎಂಕೆಯ 25 ಬಂಡಾಯ ಶಾಸಕರ ಗುಂಪೊಂದು ಪಕ್ಷದ ವಿಪ್‌ (Whip) ಮೀರಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿ. ವಿಜಯ ಮಂಡಿಸಿದ ವಿಶ್ವಾಸಮತ ನಿರ್ಣಯವನ್ನು ಬೆಂಬಲಿಸಿತ್ತು. ಆ ಬಂಡಾಯ ಶಾಸಕರಲ್ಲಿ ನಾಲ್ವರು ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಟಿವಿಕೆ ಸೇರಿದ್ದರು. ಉಳಿದ ಶಾಸಕರು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರೊಂದಿಗೆ ರಾಜಿ ಮಾಡಿಕೊಂಡಿದ್ದರೂ, ಇದೀಗ ಪಕ್ಷದ ಹಿರಿಯ ನಾಯಕರೇ ಸಾಮೂಹಿಕವಾಗಿ ವಲಸೆ ಹೋಗಿರುವುದು ಎಐಎಡಿಎಂಕೆಯನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement