ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ಸಿಸೇರಿಯನ್ ಹೆರಿಗೆ ಶಸ್ತ್ರಚಿಕಿತ್ಸೆ ಬಳಿಕ ಹೊಟ್ಟೆಯಲ್ಲೇ ಉಳಿದ ಗ್ಲೌಸ್‌, ನ್ಯಾಪ್ಕಿನ್‌ : ಯುವತಿ ಸ್ಥಿತಿ ಗಂಭೀರ

ಬೀಡ್ : ಮಹಾರಾಷ್ಟ್ರದ ಬೀಡ್ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಿಸೇರಿಯನ್ ಹೆರಿಗೆ ಶಸ್ತ್ರಚಿಕಿತ್ಸೆಯ ಬಳಿಕ ಶಸ್ತ್ರಚಿಕಿತ್ಸೆಗೆ ಬಳಸುವ ಕೈಗವಸುಗಳು (ಸರ್ಜಿಕಲ್ ಗ್ಲೌಸ್) ಹಾಗೂ ಪೇಪರ್‌ ನ್ಯಾಪ್ಕಿನ್‌ಗಳು ಹೊಟ್ಟೆಯೊಳಗೆ ಉಳಿದುಕೊಂಡಿದ್ದರಿಂದ 19 ವರ್ಷದ ಮಹಿಳೆಯೊಬ್ಬರು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾಳೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದ ಬೀಡ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಬಳಿಕ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪ್ರಕರಣದ ಕುರಿತು ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ. ಬೀಡ್ ಜಿಲ್ಲೆಯ ನಿವಾಸಿ ಸಂಧ್ಯಾ ಸೂರಜ ಗಾಯಕ್ವಾಡ್ ಅವರು ಹೆರಿಗೆಗಾಗಿ ಆಗಸ್ಟ್‌ 1ರಂದು ಬೀಡ್ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರಿಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆಯ ನಾಲ್ಕು ದಿನಗಳ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.
ಆದರೆ ಮನೆಗೆ ಮರಳಿದ ಕೆಲವೇ ದಿನಗಳಲ್ಲಿ ಸಂಧ್ಯಾ ಅವರಿಗೆ ತೀವ್ರ ಹಾಗೂ ಸಹಿಸಲಾಗದ ಹೊಟ್ಟೆನೋವು ಕಾಣಿಸಿಕೊಂಡಿತು. ದಿನದಿಂದ ದಿನಕ್ಕೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಅವರ ಹೊಟ್ಟೆಯೊಳಗೆ ‘ಅಪರಿಚಿತ ವಸ್ತು’ ಇರುವುದನ್ನು ಪತ್ತೆಹಚ್ಚಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸಂಧ್ಯಾ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಅವರನ್ನು ಪುಣೆಗೆ ಕರೆದೊಯ್ದರು. ಪುಣೆಯ ಆಸ್ಪತ್ರೆಯಲ್ಲಿ ವೈದ್ಯರು ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಿ, ಅವರ ಹೊಟ್ಟೆಯೊಳಗಿದ್ದ ಸರ್ಜಿಕಲ್ ಗ್ಲೌಸ್‌ಗಳು ಮತ್ತು ಪೇಪರ್‌ ನ್ಯಾಪ್ಕಿನ್‌ಗಳನ್ನು ಹೊರತೆಗೆದಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಸದ್ಯ ಸಂಧ್ಯಾ ಅವರು ಪುಣೆಯ ಸಸೂನ್ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೈದ್ಯಕೀಯ ನಿರ್ಲಕ್ಷ್ಯದ ಆರೋಪ
ಸಂಧ್ಯಾ ಅವರ ಪತಿ ಸೂರಜ ಗಾಯಕ್ವಾಡ್, ತಮ್ಮ ಪತ್ನಿಯ ಈ ದುಸ್ಥಿತಿಗೆ ಮೊದಲ ಶಸ್ತ್ರಚಿಕಿತ್ಸೆಯ ವೇಳೆ ನಡೆದ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ಘಟನೆಗೆ ಕಾರಣರಾದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
“ನನ್ನ ಪತ್ನಿ ಅನುಭವಿಸುತ್ತಿರುವ ಈ ನೋವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ಹೊಣೆಗಾರರಾದ ವೈದ್ಯರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಸೂರಜ್ ಹೇಳಿದ್ದಾರೆ.
ಸಂಧ್ಯಾ ಅವರ ತಾಯಿಯೂ ಶಸ್ತ್ರಚಿಕಿತ್ಸೆಯ ನಂತರ ನಡೆದ ಘಟನೆಗಳ ಕುರಿತು ಮಾಹಿತಿ ನೀಡಿದ್ದಾರೆ. ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಬಳಿಕ ಸಂಧ್ಯಾ ಅವರಿಗೆ ವಾಂತಿ ಆಗುತ್ತಿತ್ತು. ಈ ವಿಚಾರವನ್ನು ತಾವು ಆಸ್ಪತ್ರೆಯ ನರ್ಸ್‌ಗೆ ತಿಳಿಸಿದ್ದಾಗಿ ಅವರು ಹೇಳಿದ್ದಾರೆ.
ತಮ್ಮ ಮಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದರು. ಆದರೆ ಸಂಧ್ಯಾಳ ಆರೋಗ್ಯದ ಬಗ್ಗೆ ಆತಂಕಗೊಂಡಿದ್ದ ತಾವು ತಕ್ಷಣವೇ ಅವರನ್ನು ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿದ್ದಾಗಿ ತಾಯಿ ತಿಳಿಸಿದ್ದಾರೆ. ಬಳಿಕ ಸಂಧ್ಯಾಳನ್ನು ಮನೆಗೆ ಕರೆತಂದರೂ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತು ಎಂದು ಅವರು ಹೇಳಿದ್ದಾರೆ.
ಆ ನಂತರ ಕುಟುಂಬಸ್ಥರು ಸಂಧ್ಯಾಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಚಿಕಿತ್ಸೆಗಾಗಿ ಹೆಚ್ಚಿನ ಮೊತ್ತದ ಹಣ ಖರ್ಚಾಗಬಹುದು ಎಂದು ತಿಳಿಸಲಾಯಿತು ಎನ್ನಲಾಗಿದೆ. ಹೀಗಾಗಿ ಕುಟುಂಬಸ್ಥರು ಹೆಚ್ಚಿನ ಚಿಕಿತ್ಸೆಗಾಗಿ ಪುಣೆಗೆ ತೆರಳಿದರು.
ಪುಣೆಯಲ್ಲಿ ಮತ್ತೊಂದು ಆಸ್ಪತ್ರೆಗೂ ಸಂಧ್ಯಾಳನ್ನು ಕರೆದೊಯ್ಯಲಾಗಿತ್ತು. ಆದರೆ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಆ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಿಕೊಳ್ಳಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ನಂತರ ಅವರನ್ನು ಸಸೂನ್ ಆಸ್ಪತ್ರೆಗೆ ದಾಖಲಿಸಲಾಯಿತು. ಸಸೂನ್ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ತಮ್ಮ ಮಗಳ ಹೊಟ್ಟೆಯಿಂದ “ಕೈ ಗ್ಲೌಸ್‌ ಮತ್ತು ಪೇಪರ್” ತೆಗೆದಿದ್ದಾರೆ ಎಂದು ಸಂಧ್ಯಾ ಅವರ ತಾಯಿ ಹೇಳಿದ್ದಾರೆ. ಮಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ಜಲ ಮಂಡಳಿ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ : ಎಎಪಿ ನಾಯಕ ಸತ್ಯೇಂದ್ರ ಜೈನ್ ಸೇರಿ 6 ಮಂದಿ ಬಂಧನ

ತನಿಖೆಗೆ ಆದೇಶ, ಸಿಬ್ಬಂದಿಗೆ ನೋಟಿಸ್
ಈ ಆರೋಪಗಳು ಬೆಳಕಿಗೆ ಬಂದ ಬಳಿಕ ಬೀಡ್ ಜಿಲ್ಲಾಡಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಮುಂದಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳಾ ವೈದ್ಯೆ ಸೇರಿದಂತೆ ಇತರ ಆರೋಗ್ಯ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ (ಶೋಕಾಸ್ ನೋಟಿಸ್) ಜಾರಿ ಮಾಡಲಾಗಿದೆ. ಸಂಧ್ಯಾ ಅವರ ಹೊಟ್ಟೆಯೊಳಗೆ ಶಸ್ತ್ರಚಿಕಿತ್ಸೆಗೆ ಬಳಸಿದ ವಸ್ತುಗಳು ಹೇಗೆ ಉಳಿದುಕೊಂಡವು ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ.
ಬೀಡ್ ಜಿಲ್ಲಾ ಶಸ್ತ್ರಚಿಕಿತ್ಸಾಧಿಕಾರಿ ಡಾ. ಸತೀಶಕುಮಾರ ಸೋಲಂಕೆ ಅವರು ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ತನಿಖೆಯಲ್ಲಿ ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧ ಕಠಿಣ ಕಾನೂನು ಮತ್ತು ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಸಂಧ್ಯಾ ಅವರ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ವೇಳೆ ಏನಾಯಿತು, ಶಸ್ತ್ರಚಿಕಿತ್ಸೆಯ ಬಳಿಕ ಅವರ ಆರೋಗ್ಯ ಹದಗೆಟ್ಟಿದ್ದರೂ ಅವರನ್ನು ಯಾವ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು ಮತ್ತು ಹೊಟ್ಟೆಯೊಳಗೆ ಶಸ್ತ್ರಚಿಕಿತ್ಸಾ ಸಾಮಗ್ರಿಗಳು ಹೇಗೆ ಉಳಿದವು ಎಂಬ ಹಲವು ಗಂಭೀರ ಪ್ರಶ್ನೆಗಳು ಇದೀಗ ಎದ್ದಿವೆ. ತನಿಖೆಯ ವರದಿ ಬಂದ ಬಳಿಕವೇ ಆರೋಪಗಳ ಸತ್ಯಾಸತ್ಯತೆ ಹಾಗೂ ಹೊಣೆಗಾರಿಕೆ ಸ್ಪಷ್ಟವಾಗಲಿದೆ.

ಪ್ರಮುಖ ಸುದ್ದಿ :-   20 ರೂ. ಲಂಚದ ಆರೋಪಕ್ಕೆ 30 ವರ್ಷಗಳ ಕಾನೂನು ಹೋರಾಟ : ಸುಪ್ರೀಂಕೋರ್ಟಿನಿಂದ ಇಬ್ಬರು ಸರ್ಕಾರಿ ನೌಕರರ ಖುಲಾಸೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement