ಚಂಡೀಗಢ : ವೃದ್ಧರೊಬ್ಬರು ಯಾತ್ರೆಯ ವೇಳೆ ದಾರಿ ತಪ್ಪಿ ತಮ್ಮ ಮನೆಯಿಂದ ಸುಮಾರು 1,200 ಕಿಲೋಮೀಟರ್ ದೂರದ ಬಿಹಾರದ ಗಯಾ ನಗರಕ್ಕೆ ತಲುಪಿದ್ದರೂ, ಅಪರಿಚಿತ ವ್ಯಕ್ತಿಯ ಮಾನವೀಯತೆ, ನಿರಂತರ ಪ್ರಯತ್ನ ಮತ್ತು ಚಾಟ್ಜಿಪಿಟಿ (ChatGPT) ಸೇರಿದಂತೆ ಆನ್ಲೈನ್ ಹುಡುಕಾಟದ ನೆರವಿನಿಂದ ಕೊನೆಗೂ ಸುರಕ್ಷಿತವಾಗಿ ಕುಟುಂಬದವರನ್ನು ಸೇರಿರುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.
ಪಂಜಾಬ್ನ ಲೂಧಿಯಾನಾ ಜಿಲ್ಲೆಯ ಫತೇಹ್ಗಢ ಗುಜ್ರಾನ್ ಗ್ರಾಮದ ನಿವಾಸಿ ಚಮನ್ ಲಾಲ ಅವರು ಸೆಪ್ಟೆಂಬರ್ 11ರಂದು ಪಂಜಾಬ್ ಸರ್ಕಾರದ ಮುಖ್ಯಮಂತ್ರಿ ತೀರ್ಥಯಾತ್ರಾ ಯೋಜನೆಯಡಿ ಶ್ರೀ ಹರಮಂದಿರ ಸಾಹಿಬ್ (ಸ್ವರ್ಣ ಮಂದಿರ) ದರ್ಶನಕ್ಕಾಗಿ ಅಮೃತಸರಕ್ಕೆ ತೆರಳಿದ್ದರು. ಕುಟುಂಬದವರ ಪ್ರಕಾರ, ಅವರಿಗೆ ಹಲವು ವರ್ಷಗಳಿಂದ ಮರೆವಿನ ಸಮಸ್ಯೆ ಇತ್ತು. ಅಮೃತಸರದಲ್ಲಿ ಯಾತ್ರಿಕರ ತಂಡದಿಂದ ದೂರವಾದ ಚಮನ್ ಲಾಲ ಅವರು ದಾರಿ ತಪ್ಪಿ ರೈಲು ನಿಲ್ದಾಣದ ಸಮೀಪಕ್ಕೆ ತಲುಪಿದ್ದರು. ಅಲ್ಲಿಂದ ಅವರು ಬಿಹಾರಕ್ಕೆ ತೆರಳುತ್ತಿದ್ದ ರೈಲನ್ನು ಹತ್ತಿದ್ದು, ಸುಮಾರು 1,200 ಕಿಲೋಮೀಟರ್ ದೂರದ ಗಯಾ ನಗರಕ್ಕೆ ತಲುಪಿದ್ದರು.
ಗಯಾದಲ್ಲಿ ದಿಕ್ಕು ತೋಚದೆ ಕುಳಿತಿದ್ದ ಚಮನ್ ಲಾಲ ಅವರನ್ನು ಸ್ಥಳೀಯ ನಿವಾಸಿ ನೀರಜ ಎಂಬವರು ಮೊದಲ ಬಾರಿಗೆ ಗಮನಿಸಿದರು. ಲಾಲ ಅವರು ರೈಲು ನಿಲ್ದಾಣದ ಬಳಿ ಅಲೆದಾಡುತ್ತಾ ಆಹಾರಕ್ಕಾಗಿ ಕೇಳುತ್ತಿದ್ದರು. ಆತಂಕಗೊಂಡಿದ್ದ ಮತ್ತು ಹಸಿವಿನಿಂದ ಬಳಲುತ್ತಿದ್ದ ವೃದ್ಧನಿಗೆ ತಾನು ಯಾರು, ಎಲ್ಲಿಂದ ಬಂದವನು ಎಂಬುದನ್ನು ಸರಿಯಾಗಿ ವಿವರಿಸಲು ಸಾಧ್ಯವಾಗುತ್ತಿರಲಿಲ್ಲ. ಅವರಿಗೆ ಹೇಳಲು ಸಾಧ್ಯವಾದ ಏಕೈಕ ಮಾಹಿತಿ ಎಂದರೆ ತಮ್ಮ ಗ್ರಾಮದ ಹೆಸರು ‘ಫತೇಹ್ಗಢ ಗುಜ್ರಾನ್’ ಎಂಬುದು.
ಇದನ್ನು ಸುಳಿವಾಗಿಸಿಕೊಂಡ ನೀರಜ ಅವರು, ವೃದ್ಧರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಊಟದ ವ್ಯವಸ್ಥೆ ಮಾಡಿದರು. ಅಲ್ಲದೆ, ನಾಲ್ಕು ದಿನಗಳ ಕಾಲ ತಮ್ಮ ಮನೆಯಲ್ಲೇ ಆಶ್ರಯ ನೀಡಿ ಅವರ ಮೂಲ ಊರನ್ನು ಪತ್ತೆಹಚ್ಚಲು ಪ್ರಯತ್ನ ಆರಂಭಿಸಿದರು.
ಚಮನ್ ಲಾಲ ಅವರಿಗೆ ಪಂಜಾಬಿ ಭಾಷೆ ಮಾತ್ರ ಗೊತ್ತಿದ್ದ ಕಾರಣ, ಅವರು ಪಂಜಾಬ್ನವರಿರಬಹುದು ಎಂಬ ಮೊದಲ ಸುಳಿವು ನೀರಜ ಅವರಿಗೆ ದೊರೆಯಿತು. ಗ್ರಾಮದ ಹೆಸರನ್ನು ಆಧಾರವಾಗಿಸಿಕೊಂಡು ಅವರು ಇಂಟರ್ನೆಟ್ನಲ್ಲಿ ಹುಡುಕಾಟ ಆರಂಭಿಸಿದರು. ನಂತರ ಚಾಟ್ಜಿಪಿಟಿ (ChatGPT) ಸೇರಿದಂತೆ ವಿವಿಧ ಆನ್ಲೈನ್ ಮೂಲಗಳ ನೆರವಿನಿಂದ ಗ್ರಾಮದ ವಿವರಗಳನ್ನು ಪತ್ತೆಹಚ್ಚಲು ಅವರು ಪ್ರಯತ್ನಿಸಿದರು.
ಸುಮಾರು ಮೂರು ದಿನಗಳ ನಿರಂತರ ಹುಡುಕಾಟದ ಬಳಿಕ, ಲೂಧಿಯಾನಾ ಜಿಲ್ಲೆಯ ಮಚ್ಚಿವಾರಾ ಸಾಹಿಬ್ ಸಮೀಪದಲ್ಲಿರುವ ಫತೇಹ್ಗಢ ಗುಜ್ರಾನ್ ಗ್ರಾಮವೇ ಚಮನ್ ಲಾಲ ಅವರ ಊರು ಎಂಬುದನ್ನು ಪತ್ತೆಹಚ್ಚಿದರು.
ಗ್ರಾಮದ ಮಾಹಿತಿ ದೊರೆತ ಬಳಿಕ ವೃದ್ಧರನ್ನು ಒಬ್ಬರೇ ಕಳುಹಿಸುವ ಬದಲು, ನೀರಜ ಅವರು ಸ್ವತಃ ಅವರ ಜೊತೆ ಗಯಾದಿಂದ ಲೂಧಿಯಾನಾಕ್ಕೆ ಹಾಗೂ ಅಲ್ಲಿಂದ ಮಚ್ಚಿವಾರಾಗೆ ಪ್ರಯಾಣ ಬೆಳೆಸಿದರು.
ಮಚ್ಚಿವಾರಾ ತಲುಪಿದ ಬಳಿಕವೂ ಹುಡುಕಾಟ ಮುಂದುವರಿಸಿದ ಅವರು, ಚಮನ್ ಲಾಲ ಅವರ ಛಾಯಾಚಿತ್ರವನ್ನು ಸ್ಥಳೀಯರಿಗೆ ತೋರಿಸಿ ಅವರ ಗುರುತು ಪತ್ತೆಹಚ್ಚಲು ಯತ್ನಿಸಿದರು. ಈ ವೇಳೆ ಸ್ಥಳೀಯ ನಿವಾಸಿ ಮಾಸ್ಟರ್ ಕೃಷ್ಣ ಲಾಲಎಂಬವರು ವೃದ್ಧರನ್ನು ಗುರುತಿಸಿದರು.
ಅವರಿಂದ ಮಾಹಿತಿ ತಕ್ಷಣವೇ ಕುಟುಂಬದವರಿಗೆ ತಲುಪಿತು. ಚಮನ್ ಲಾಲ ಅವರ ಮೊಮ್ಮಗ ಸುಖಚೈನ್ ಸಿಂಗ್ ಮಚ್ಚಿವಾರಾಕ್ಕೆ ಧಾವಿಸಿ, ವೃದ್ಧರು ತಮ್ಮ ಅಜ್ಜನೇ ಎಂಬುದನ್ನು ದೃಢಪಡಿಸಿಕೊಂಡರು.
ಸುಖಚೈನ್ ಸಿಂಗ್ ಅವರ ಪ್ರಕಾರ, ಚಮನ್ ಲಾಲ ಕಾಣೆಯಾಗಿದ್ದ ಬಳಿಕ ಕುಟುಂಬದವರು ಅಮೃತಸರದಲ್ಲಿ ವ್ಯಾಪಕ ಹುಡುಕಾಟ ನಡೆಸಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಲ್ಲದೆ, ಸಂಬಂಧಿಕರು ಹಾಗೂ ಗ್ರಾಮಸ್ಥರು ಸಾಮಾಜಿಕ ಜಾಲತಾಣಗಳಲ್ಲಿಯೂ ಅವರ ಛಾಯಾಚಿತ್ರವನ್ನು ಹಂಚಿಕೊಂಡು ಹುಡುಕಾಟ ನಡೆಸುತ್ತಿದ್ದರು.
ತಮ್ಮ ಅಜ್ಜನನ್ನು ಸುರಕ್ಷಿತವಾಗಿ ಕಾಪಾಡಿ, ಗಯಾದಿಂದ ಪಂಜಾಬ್ ವರೆಗೆ ಕರೆತಂದು ಕುಟುಂಬದವರನ್ನು ಸೇರಿಸಿದ ನೀರಜ ಅವರ ಮಾನವೀಯತೆಗೆ ಸುಖಚೈನ್ ಸಿಂಗ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.ಇದಾದ ಬಳಿಕ ಚಮನ್ ಲಾಲ್ ಅವರ ಕುಟುಂಬದವರು ನೀರಜ ಅವರನ್ನು ತಮ್ಮ ಮನೆಗೆ ಆಹ್ವಾನಿಸಿ ಹೂಮಾಲೆ ಹಾಕಿ ಸನ್ಮಾನಿಸಿದರು.
ಗಯಾದಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನೀರಜ ಅವರು, ತನಗೆ ಸಂಕಷ್ಟದಲ್ಲಿದ್ದ ವೃದ್ಧನನ್ನು ಕಂಡು ನಿರ್ಲಕ್ಷ್ಯ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಗ್ರಾಮದ ಹೆಸರು ತಿಳಿದ ಬಳಿಕ ಕುಟುಂಬದವರನ್ನು ಪತ್ತೆಹಚ್ಚುವುದು ತಮ್ಮ ವೈಯಕ್ತಿಕ ಜವಾಬ್ದಾರಿಯಂತೆ ಭಾಸವಾಯಿತು ಎಂದು ಅವರು ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿಯೊಬ್ಬರ ಮಾನವೀಯತೆ, ತಂತ್ರಜ್ಞಾನದ ನೆರವು ಮತ್ತು ನಿರಂತರ ಪ್ರಯತ್ನದಿಂದ ಸಾವಿರಾರು ಕಿಲೋಮೀಟರ್ ದೂರ ತಪ್ಪಿಹೋದ ವೃದ್ಧರು ಮತ್ತೆ ತಮ್ಮ ಕುಟುಂಬದ ಮಡಿಲು ಸೇರಿದ ಈ ಘಟನೆ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ