ಜೈಷ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ನ ಬಂಧನಕ್ಕೆ ನೆರವಾಗುವ ಮಾಹಿತಿ ನೀಡುವವರಿಗೆ ಪಾಕಿಸ್ತಾನ ಸರ್ಕಾರ ₹70 ಲಕ್ಷ ಪಾಕಿಸ್ತಾನಿ ರೂಪಾಯಿ (ಸುಮಾರು ₹24.09 ಲಕ್ಷ ಭಾರತೀಯ ಕರೆನ್ಸಿ) ಬಹುಮಾನ ನೀಡುವುದಾಗಿ ಘೋಷಿಸಿದೆ. ಅಜರ್ ಮೇಲಿನ ಬಹುಮಾನದ ಮೊತ್ತವನ್ನು 20 ಲಕ್ಷ ಪಾಕಿಸ್ತಾನ ರೂಪಾಯಿಯಿಂದ ಪಿಕೆಆರ್ ₹70 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಆದಾಗ್ಯೂ, ಮೂಲಗಳು ಈ ಕ್ರಮವನ್ನು ಅಂತಾರಾಷ್ಟ್ರೀಯ ಸಮುದಾಯವನ್ನು ದಿಕ್ಕುತಪ್ಪಿಸಲು ಪಾಕಿಸ್ತಾನ ನಡೆಸಿರುವ ಒಂದು ಡ್ರಾಮಾ ಎಂದು ಬಣ್ಣಿಸಿವೆ, ವಿಶೇಷವಾಗಿ ಅಕ್ಟೋಬರ್ನಲ್ಲಿ ನಡೆಯಲಿರುವ ಹಣಕಾಸು ಕ್ರಿಯಾ ಕಾರ್ಯಪಡೆ (FATF)ಯ ಸಮಗ್ರ ಸಭೆಗೆ ಮುಂಚಿತವಾಗಿ, ಪಾಕಿಸ್ತಾನವು ತಾನು ಬೂದು ಪಟ್ಟಿಗೆ ಮತ್ತೆ ಸೇರಿಸಲ್ಪಡುವುದನ್ನು ತಪ್ಪಿಸಲು ತೋರಿಕೆಗಾಗಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ವಿಶೇಷವೆಂದರೆ, ಅಜರ್ ಪಾಕಿಸ್ತಾನದಲ್ಲೇ ಇಲ್ಲ ಎಂದು ಹಲವು ವರ್ಷಗಳಿಂದ ಹೇಳಿಕೊಂಡು ಬಂದಿರುವ ಪಾಕಿಸ್ತಾನ ಸರ್ಕಾರವು, ತನ್ನ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (FIA)ಯ ಅಧಿಕೃತ ದಾಖಲೆಗಳಲ್ಲಿ ಆತನನ್ನು ಈಗಲೂ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿ ಇರಿಸಿದೆ.
ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ 2026ರ ‘ರೆಡ್ ಬುಕ್ ಆಫ್ ಮೋಸ್ಟ್ ವಾಂಟೆಡ್ ಹೈ-ಪ್ರೊಫೈಲ್ ಟೆರರಿಸ್ಟ್ಸ್’ ಪಟ್ಟಿಯಲ್ಲೂ ಮಸೂದ್ ಅಜರ್ನ ಹೆಸರು ಮುಂದುವರಿದಿದೆ. ಅಜರ್ ಪಾಕಿಸ್ತಾನದಲ್ಲಿಲ್ಲ, ಆತ ಅಫ್ಘಾನಿಸ್ತಾನಕ್ಕೆ ಪರಾರಿಯಾಗಿದ್ದಾನೆ ಎಂದು ಪಾಕಿಸ್ತಾನವು ಹಲವು ವರ್ಷಗಳಿಂದ ಹೇಳಿಕೊಂಡು ಬಂದಿದೆ. ಹೀಗಿದ್ದರೂ ಆತನ ಹೆಸರು ಪಾಕಿಸ್ತಾನದ ಅಧಿಕೃತ ಮೋಸ್ಟ್ ವಾಂಟೆಡ್ ದಾಖಲೆಗಳಲ್ಲಿ ಉಳಿದಿರುವುದು ಇದೀಗ ಗಮನ ಸೆಳೆದಿದೆ.
ಈ ಬೆಳವಣಿಗೆ ಅಕ್ಟೋಬರ್ 26ರಿಂದ 30ರವರೆಗೆ ಪ್ಯಾರಿಸ್ನಲ್ಲಿ ನಡೆಯಲಿರುವ ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (FATF) ಪ್ಲೆನರಿ ಸಭೆಗೆ ಕೆಲವೇ ವಾರಗಳ ಮುನ್ನ ನಡೆದಿದೆ. ಭಯೋತ್ಪಾದನೆಗೆ ಹಣಕಾಸು ಪೂರೈಕೆ ಮತ್ತು ಹಣ ಅಕ್ರಮ ವರ್ಗಾವಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (FATF) ಸಭೆಗಳಲ್ಲಿ ಚರ್ಚೆ ನಡೆಯಲಿದ್ದು, ನಿಗಾ ವಹಿಸಲಾಗುತ್ತಿರುವ ದೇಶಗಳ ಸ್ಥಿತಿಯನ್ನೂ ಪರಿಶೀಲಿಸಲಾಗುತ್ತದೆ.
58 ವರ್ಷದ ಮಸೂದ್ ಅಜರ್ ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಸ್ಥಾಪಕ ಹಾಗೂ ಮುಖ್ಯಸ್ಥ. ಕಳೆದ ಎರಡು ದಶಕಗಳಲ್ಲಿ ಭಾರತದ ಮೇಲೆ ನಡೆದ ಹಲವು ಗಂಭೀರ ಭಯೋತ್ಪಾದಕ ದಾಳಿಗಳ ಹಿಂದೆ ಈ ಸಂಘಟನೆಯ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಪಾಕಿಸ್ತಾನದಿಂದಲೇ ಕಾರ್ಯಾಚರಿಸುವ ಈ ಉಗ್ರ ಸಂಘಟನೆಯ ಪ್ರಮುಖ ನೆಲೆ ಬಹಾವಲ್ಪುರದಲ್ಲಿ ಇದೆ ಎಂದು ಸಾಮಾನ್ಯವಾಗಿ ಗುರುತಿಸಲಾಗಿದ್ದು, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತ ತೀವ್ರ ದಾಳಿ ನಡೆಸಿದ ಸ್ಥಳಗಳಲ್ಲೂ ಬಹಾವಲ್ಪುರವೂ ಸೇರಿತ್ತು.
ಮಸೂದ್ ಅಜರ್ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿದೆ. ಭಾರತದ ಗಡಿಯಾಚೆಗಿನ ಭಯೋತ್ಪಾದನೆ ಕುರಿತ ದಾಖಲೆಯಲ್ಲಿ ಅಜರ್ ಬಹುಕಾಲದಿಂದ ಕುಖ್ಯಾತ ಸ್ಥಾನ ಪಡೆದಿದ್ದಾನೆ. 2001ರ ಸಂಸತ್ ಭವನದ ಮೇಲಿನ ದಾಳಿ, 2008ರ ಮುಂಬೈ ಭಯೋತ್ಪಾದಕ ದಾಳಿ, 2016ರ ಪಠಾಣ್ಕೋಟ್ ವಾಯುನೆಲೆ ದಾಳಿ ಹಾಗೂ 2019ರ ಪುಲ್ವಾಮಾ ಬಾಂಬ್ ದಾಳಿ ಸೇರಿದಂತೆ ಹಲವು ಪ್ರಮುಖ ದಾಳಿಗಳ ಜೊತೆ ಆತನ ಉಗ್ರ ಸಂಘಟನೆಯ ಹೆಸರು ತಳಕು ಹಾಕಿಕೊಂಡಿದೆ.
2025ರ ನವೆಂಬರ್ 10ರಂದು ದೆಹಲಿಯ ಕೆಂಪುಕೋಟೆ ಸಮೀಪ ನಡೆದ ಸ್ಫೋಟದ ಬಳಿಕವೂ ಮಸೂದ್ ಅಜರ್ನ ಹೆಸರು ಮತ್ತೆ ಮುನ್ನೆಲೆಗೆ ಬಂದಿತ್ತು.
ಯಾರು ಈ ಮಸೂದ್ ಅಜರ್?
ಮಸೂದ್ ಅಜರ್ ಒಮ್ಮೆ ಭಾರತದ ವಶದಲ್ಲಿದ್ದ ಉಗ್ರ. 1999ರ ಡಿಸೆಂಬರ್ನಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಯ ಐಸಿ-814 (IC-814) ವಿಮಾನ ಅಪಹರಣಗೊಂಡ ಬಳಿಕ ಆತನನ್ನು ಭಾರತ ಬಿಡುಗಡೆ ಮಾಡಿತ್ತು. ಕಠ್ಮಂಡುವಿನಿಂದ ದೆಹಲಿಗೆ ಹಾರುತ್ತಿದ್ದ ಈ ವಿಮಾನವನ್ನು ಐವರು ಉಗ್ರರು ಅಪಹರಿಸಿದ್ದರು.
ಅಪಹರಣಕಾರರು ವಿಮಾನವನ್ನು ಮೊದಲು ಅಮೃತಸರಕ್ಕೆ, ಬಳಿಕ ಲಾಹೋರ್ ಹಾಗೂ ದುಬೈಗೆ ತಿರುಗಿಸಿ, ಅಂತಿಮವಾಗಿ ಅಫ್ಘಾನಿಸ್ತಾನದ ಕಂದಹಾರ್ಗೆ ಕೊಂಡೊಯ್ದಿದ್ದರು. ಆಗ ಕಂದಹಾರ್ ತಾಲಿಬಾನ್ ನಿಯಂತ್ರಣದಲ್ಲಿತ್ತು. ಸುದೀರ್ಘ ಒತ್ತೆಯಾಳು ಬಿಕ್ಕಟ್ಟಿನ ಬಳಿಕ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಿಡಿಸಿಕೊಳ್ಳಲು ಭಾರತವು ಮಸೂದ್ ಅಜರ್ ಸೇರಿದಂತೆ ಜೈಲಿನಲ್ಲಿದ್ದ ಮೂವರು ಉಗ್ರರನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿತ್ತು.
ಬಿಡುಗಡೆಯಾದ ಬಳಿಕ 1999-2000ರ ಅವಧಿಯಲ್ಲಿ ಅಜರ್ ಜೈಷ್-ಎ-ಮೊಹಮ್ಮದ್ ಸಂಘಟನೆಯನ್ನು ಸ್ಥಾಪಿಸಿ ಅದರ ಮುಖ್ಯಸ್ಥನಾದ.
ಆಪರೇಷನ್ ಸಿಂಧೂರದಲ್ಲಿ ಕುಟುಂಬದ ಹಲವರ ಸಾವು
ಆಪರೇಷನ್ ಸಿಂಧೂರ್ ವೇಳೆ ಮಸೂದ್ ಅಜರ್ ಬದುಕುಳಿದಿದ್ದರೂ, ಆತನ ಕುಟುಂಬದ ಹಲವರು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಮೇ 7ರಂದು ಭಾರತವು ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಒಂಬತ್ತು ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಗಳಲ್ಲಿ ಅಜರ್ನ ಕುಟುಂಬದ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಆತನ ನಾಲ್ವರು ಆಪ್ತ ಸಹಚರರೂ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.
ಮೃತರಲ್ಲಿ ಅಜರ್ನ ಹಿರಿಯ ಸಹೋದರಿ, ಆಕೆಯ ಪತಿ, ಒಬ್ಬ ಸೋದರಳಿಯ, ಆತನ ಪತ್ನಿ, ಒಬ್ಬ ಸೊಸೆ ಹಾಗೂ ವಿಸ್ತೃತ ಕುಟುಂಬದ ಐವರು ಮಕ್ಕಳು ಸೇರಿದ್ದಾರೆ ಎಂದು ವರದಿಗಳು ತಿಳಿಸಿವೆ.
ಒಂದೆಡೆ ಮಸೂದ್ ಅಜರ್ ಪಾಕಿಸ್ತಾನದಲ್ಲಿಲ್ಲ ಎಂದು ಪಾಕಿಸ್ತಾನ ಹೇಳುತ್ತಿದ್ದರೆ, ಮತ್ತೊಂದೆಡೆ ಆತನ ಹೆಸರನ್ನು ತನ್ನದೇ ಅಧಿಕೃತ ‘ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲಿ ಮುಂದುವರಿಸಿರುವುದು ಹಾಗೂ ಇದೀಗ ಆತನ ಬಂಧನಕ್ಕೆ ಬಹುಮಾನ ಮೊತ್ತ ಹೆಚ್ಚಿಸಿರುವುದು ಹಲವು ಪ್ರಶ್ನೆಗಳನ್ನು ಎತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ