ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ಥಾನಗಳೆರಡೂ ಒಂದೇ ದಿನ ಸ್ವತಂತ್ರವಾದವು. ಆದರೆ ಇಂದು ಭಾರತ ಸೂಪರ್ ಪವರ್ ಆಗಲು ಕನಸು ಕಾಣುತ್ತಿರುವ ಹೊತ್ತಲ್ಲಿ ಪಾಕಿಸ್ತಾನವು ದಿವಾಳಿತನದಿಂದ ಹೊರಬರಲು ಭಿಕ್ಷೆ ಬೇಡುತ್ತಿದೆ ಎಂದು ಪಾಕಿಸ್ಥಾನದ ಧರ್ಮ ಗುರು, ಜೆಯುಐ-ಎಫ್ ಸಂಸದ ಮೌಲಾನಾ ಫಜ್ಲುರ್ ರೆಹಮಾನ್ ಹೇಳಿದ್ದಾರೆ.
ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಅವರು, ಭಾರತ ಮತ್ತು ನಮ್ಮನ್ನು ಹೋಲಿಸಿ ನೋಡಿ. ಎರಡೂ ದೇಶಗಳಿಗೆ ಸ್ವಾತಂತ್ರ್ಯ ಸಿಕ್ಕಿದ್ದು ಒಂದೇ ದಿನ. ಆದರೆ ಇಂದು ಅವರು (ಭಾರತ) ಸೂಪರ್ ಪವರ್ ಆಗುವ ಕನಸು ಕಾಣುತ್ತಿದ್ದಾರೆ. ಆದರೆ ನಾವು ದಿವಾಳಿ ಆಗುವುದನ್ನು ತಪ್ಪಿಸಿಕೊಳ್ಳಲು ಭಿಕ್ಷೆ ಬೇಡುತ್ತಿದ್ದೇವೆ ಎಂದು ಹೇಳಿದ್ದಾರೆ. ನಿರ್ಧಾರಗಳನ್ನು ಬೇರೆಯವರು ಮಾಡುತ್ತಾರೆ ಆದರೆ ಸಮಸ್ಯೆಗಳಿಗೆ ರಾಜಕಾರಣಿಗಳೇ ಕಾರಣ ಎಂದು ಹೇಳಿದ್ದಾರೆ.
ನಾವು ಇಸ್ಲಾಂ ಹೆಸರಿನಲ್ಲಿ ದೇಶವನ್ನು ಪಡೆದುಕೊಂಡಿದ್ದೇವೆ. ಇಸ್ಲಾಮಿಕ್ ತತ್ವಗಳನ್ನು ಎತ್ತಿಹಿಡಿಯುವ ಪ್ರಾಮುಖ್ಯತೆ ಬಗ್ಗೆ ಒತ್ತಿಹೇಳುವ ಕೌನ್ಸಿಲ್ ಆಫ್ ಇಸ್ಲಾಮಿಕ್ ಐಡಿಯಾಲಜಿ (ಸಿಐಐ)ಯಿಂದ ಮಾಡಿದ ಶಿಫಾರಸುಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದ್ದೇವೆ ನಾವು ಇಸ್ಲಾಮಿಕ್ ದೇಶವಾಗುವುದು ಹೇಗೆ? ಎಂದು ಅವರು ಪ್ರಶ್ನಿಸಿದರು.
ದಿವಾಳಿತನ ತಪ್ಪಿಸಲು ಪಾಕಿಸ್ತಾನ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮೊರೆ ಹೋಗುತ್ತಿದೆ ಎಂದೂ ಅವರು ಹೇಳಿದ್ದಾರೆ.
ಜೆಯುಐ-ಎಫ್ ಪಿಟಿಐನ ಪ್ರತಿಸ್ಪರ್ಧಿಯಾಗಿದ್ದು, ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸುವ ಕ್ರಮವನ್ನು ಮುನ್ನಡೆಸಿತ್ತು. ಅವರ ಪತನದ ನಂತರ, JUI-F ಸಮ್ಮಿಶ್ರ ಸರ್ಕಾರದ ಭಾಗವಾಯಿತು. ಆದಾಗ್ಯೂ, ಚುನಾವಣೆಯ ನಂತರ ಅವರು ಪಿಎಂಎಲ್-ಎನ್ ಮತ್ತು ಪಿಪಿಪಿಯಿಂದ ದೂರವಾಯಿತು. ಏಕೆಂದರೆ ಈ ಪಕ್ಷಗಳು ತಮ್ಮ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಚುನಾವಣೆಗಳನ್ನು ರಿಗ್ ಮಾಡಿವೆ ಎಂದು ಆರೋಪಿಸಿದರು.
ಪಾಕಿಸ್ತಾನದ ಪ್ರಮುಖ ಬಲಪಂಥೀಯ ಇಸ್ಲಾಮಿಕ್ ನಾಯಕ ಮೌಲಾನಾ ಫಜ್ಲುರ್ ರೆಹಮಾನ್ ಸೋಮವಾರ ತಮ್ಮ ಮಾಜಿ ಪ್ರತಿಸ್ಪರ್ಧಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಬೆಂಬಲಕ್ಕೆ ಬಂದರು ಮತ್ತು ವಿರೋಧ ಪಕ್ಷಕ್ಕೆ ರ್ಯಾಲಿಗಳನ್ನು ಆಯೋಜಿಸುವ ಮತ್ತು ಸರ್ಕಾರ ರಚಿಸುವ ಹಕ್ಕಿದೆ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ