ಭಾನುವಾರ ಕೆನಡಾದ ಬ್ರಾಂಪ್ಟನ್ನಲ್ಲಿರುವ ಹಿಂದೂ ದೇವಾಲಯದ ಮೇಲೆ ಖಲಿಸ್ತಾನ್ ಪರ ಗುಂಪು ದಾಳಿ ಮಾಡಿದ ನಂತರ, ಪೊಲೀಸರು ದೇವಸ್ಥಾನಕ್ಕೆ ಹೋಗುವವರ ಜೊತೆ ಘರ್ಷಣೆ ನಡೆಸುತ್ತಿರುವ ವೀಡಿಯೊಗಳು ಆನ್ಲೈನ್ನಲ್ಲಿ ಕಾಣಿಸಿಕೊಂಡವು. ಟೊರೊಂಟೊ ಬಳಿಯ ದೇವಸ್ಥಾನದ ಮೇಲೆ “ಭಾರತ ವಿರೋಧಿ” ಖಲಿಸ್ತಾನ ಪ್ರತ್ಯೇಕತಾವಾದಿಗಳು ದಾಳಿಯನ್ನು ಪ್ರತಿಭಟಿಸಿದ ಹಿಂದೂ ಭಕ್ತರ ಜೊತೆಯೇ ಕೆನಡಾದ ಪೊಲೀಸರು ಘರ್ಷಣೆ ನಡೆಸಿದರು. ಪೊಲೀಸರು ದೇವಾಲಯಕ್ಕೆ ತೆರಳುವ ಹಿಂದೂ ಭಕ್ತರ ಮೇಲೆ ಹಲ್ಲೆ ನಡೆಸಿದರು, ಅವರಲ್ಲಿ ಹಲವರು ಭಾರತೀಯ ಧ್ವಜವನ್ನು ಬೀಸುತ್ತಿರುವುದು ಕೆನಡಾದ ಪತ್ರಕರ್ತರೊಬ್ಬರು ಹಂಚಿಕೊಂಡ ವೀಡಿಯೊದಲ್ಲಿ ಕಂಡುಬಂದಿದೆ. ಪ್ರತಿಭಟನಕಾರನ ಮೇಲೆ ಪೋಲೀಸ್ ಚಾರ್ಜ್ ಮಾಡುವುದನ್ನು ಮತ್ತು ಅವರ ಮೇಲೆ ಅನೇಕ ಬಾರಿ ಗುದ್ದುವ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ. . ಪತ್ರಕರ್ತ ಬೋರ್ಡ್ಮನ್ ಪ್ರಕಾರ, ಖಲಿಸ್ತಾನಿ ಬೆಂಬಲಿಗರು ಮತ್ತು ಹಿಂದೂ ಸಮುದಾಯದ ಸದಸ್ಯರ ನಡುವಿನ ವಾಗ್ವಾದದ ನಂತರ ಕಾನೂನು ವ್ಯವಸ್ಥೆ ಮರುಸ್ಥಾಪಿಸಲು ಅಧಿಕಾರಿಗಳು ದೇವಸ್ಥಾನದಲ್ಲಿದ್ದರು. ಆದರೆ ದೇವಸ್ಥಾನಕ್ಕೆ ಹೋಗುವವರನ್ನು “ಗುದ್ದುವುದು” ಮತ್ತು “ಲಾಠಿಗಳಿಂದ ಹೊಡೆಯುವುದು” ಕಂಡುಬಂದಿದೆ.
“ಆತ ದೊಣ್ಣೆಯಿಂದ ಹೊಡೆಯುತ್ತಿದ್ದಾನೆ” ಎಂದು ವೀಡಿಯೊವನ್ನು ಚಿತ್ರೀಕರಿಸಿದ ಮಹಿಳೆಯು ಅಧಿಕಾರಿಯೊಬ್ಬರನ್ನು ತೋರಿಸುತ್ತಾ, ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಕೋಪಗೊಂಡ ಜನಸಮೂಹವು “ಅವನನ್ನು ತಕ್ಷಣವೇ ಹೊರಹಾಕಿ” ಎಂದು ಕೂಗಲು ಪ್ರಾರಂಭಿಸುತ್ತದೆ. ದೀಪಾವಳಿಯಂದು ದೇವಸ್ಥಾನಕ್ಕೆ ಹೋಗುವವರಿಗೆ ಕಿರುಕುಳ ನೀಡಲು ಬಂದ ಖಲಿಸ್ತಾನಿಗಳನ್ನು” ರಕ್ಷಿಸಲು ಪೊಲೀಸರು ಹಿಂದೂ ಭಕ್ತರ ಜೊತೆ ಘರ್ಷಣೆಗೆ ಇಳಿದಿದ್ದಾರೆ ಎಂದು ವೀಡಿಯೊವನ್ನು ಹಂಚಿಕೊಂಡ ಪತ್ರಕರ್ತರು ಹೇಳಿದ್ದಾರೆ.
ಹಿಂದಿನ ದಿನ ಬ್ರಾಂಪ್ಟನ್ನಲ್ಲಿರುವ ಹಿಂದೂ ಸಭಾ ದೇವಾಲಯಕ್ಕೆ ನುಗ್ಗಿದ ಗುಂಪೊಂದು ಭಕ್ತರ ಮೇಲೆ ದಾಳಿ ಮಾಡಿತು, ಇದನ್ನು ಪ್ರಧಾನಿ ಜಸ್ಟಿನ್ ಟ್ರುಡೊ ಖಂಡಿಸಿದರು. “ಬ್ರಾಂಪ್ಟನ್ನಲ್ಲಿರುವ ಹಿಂದೂ ಸಭಾ ಮಂದಿರದಲ್ಲಿ ನಡೆದ ಹಿಂಸಾಚಾರವು ಸ್ವೀಕಾರಾರ್ಹವಲ್ಲ. ಪ್ರತಿಯೊಬ್ಬ ಕೆನಡಾದವರಿಗೆ ತಮ್ಮ ನಂಬಿಕೆಯನ್ನು ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಅಭ್ಯಾಸ ಮಾಡುವ ಹಕ್ಕಿದೆ” ಎಂದು ಟ್ರೂಡೊ ಎಕ್ಸ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಭಾರತೀಯ ರಾಯಭಾರ ಕಚೇರಿಯು “ಭಾರತ ವಿರೋಧಿ ಅಂಶಗಳು” ದೇವಾಲಯದ ಆವರಣದಲ್ಲಿ ತನ್ನ ಕಾನ್ಸುಲರ್ ಶಿಬಿರದ ಹೊರಗೆ ಹಿಂಸಾಚಾರವನ್ನು ನಡೆಸಿವೆ ಎಂದು ಹೇಳಿದೆ. ಇದು “ತೀವ್ರವಾಗಿ ನಿರಾಶೆಗೊಳಿಸಿದೆ” ಎಂದು ಹೇಳಿದ ಭಾರತದ ರಾಯಭಾರ ಕಚೇರಿಯು ಕಳೆದ ಎರಡು ದಿನಗಳಲ್ಲಿ ಸರ್ರೆ ಮತ್ತು ವ್ಯಾಂಕೋವರ್ನಲ್ಲಿ ತನ್ನ ಕಾನ್ಸುಲರ್ ಶಿಬಿರಗಳನ್ನು ಅಡ್ಡಿಪಡಿಸಲು ಇದೇ ರೀತಿಯ ಪ್ರಯತ್ನಗಳು ನಡೆದಿವೆ ಎಂದು ಹೇಳಿದೆ.
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂಬ ಟ್ರುಡೊ ಆರೋಪದಿಂದ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯ ನಡುವೆ ಈ ಘಟನೆಗಳು ಸಂಭವಿಸಿವೆ. ನಿರಾಧಾರ ಆರೋಪ ಹೇಳಿರುವ ಭಾರತವು, ಕೆನಡಾ ಭಯೋತ್ಪಾದಕರು ಮತ್ತು ಉಗ್ರಗಾಮಿಗಳಿಗೆ ಸುರಕ್ಷಿತ ಆಶ್ರಯ ನೀಡುತ್ತಿದೆ ಎಂದು ಆರೋಪಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ