ಟೊರೊಂಟೊ: ಭಾರತ ಮತ್ತು ಕೆನಡಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊಗೆ ಸಂಕಷ್ಟ ಕಡಿಮೆಯಾಗುತ್ತಿಲ್ಲ.
ಈಗ ಮತ್ತೊಂದು ಪ್ರಸಂಗದಲ್ಲಿ ಟ್ರೂಡೊ ಮತ್ತೆ ಮುಜುಗರಕ್ಕೆ ಒಳಗಾಗಿದ್ದು, ಮುಜುಗರ ತಪ್ಪಿಸಿಕೊಳ್ಳಲು ತಮ್ಮದೇ ದೇಶದ ಗುಪ್ತಚರ ಸಂಸ್ಥೆ ಅಧಿಕಾರಿಗಳನ್ನು ‘ಅಪರಾಧಿಗಳು’ ಎಂದು ಕರೆದಿದ್ದಾರೆ.
ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ತಮ್ಮದೇ ದೇಶದ ರಾಷ್ಟ್ರೀಯ ಭದ್ರತಾ ಅಧಿಕಾರಿಗಳನ್ನು ಖಂಡಿಸಿದ್ದಾರೆ. ಮಾಧ್ಯಮಗಳಿಗೆ ಉನ್ನತ-ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕಾಗಿ ಅವರನ್ನು “ಅಪರಾಧಿಗಳು” ಎಂದು ಕರೆದರು., ಅವರು “ಸತತವಾಗಿ ಮಾಹಿತಿಗಳನ್ನು ತಪ್ಪಾಗಿ ಪಡೆದುಕೊಂಡಿದ್ದಾರೆ” ಎಂದು ಹೇಳಿದ್ದಾರೆ.
ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ ಅವರ ಬಗ್ಗೆ ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಟ್ರೂಡೊ ತಮ್ಮದೇ ಅಧಿಕಾರಿಗಳನ್ನು ʼಅಪರಾಧಿಗಳುʼ ಎಂದು ಕರೆದಿದ್ದಾರೆ.
ಕೆನಡಾದ ಪ್ರಮುಖ ಪತ್ರಿಕೆ ‘ಗ್ಲೋಬ್ ಅಂಡ್ ಮೇಲ್’ ವರದಿಯೊಂದನ್ನು ಪ್ರಕಟಿಸಿತ್ತು. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಗ್ಗೆ ಪ್ರಧಾನಿ ಮೋದಿಗೆ ಮೊದಲೇ ಮಾಹಿತಿ ಇತ್ತು ಎಂದು ವರದಿಯಲ್ಲಿ ಹೇಳಲಾಗಿತ್ತು. ಅದೇ ವರದಿಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ ಮತ್ತು ಭಾರತೀಯ ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೂ ಇದರ ಬಗ್ಗೆ ಅರಿವಿತ್ತು ಎಂದು ಕೆನಡಾದ ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ ಈ ವರದಿಯನ್ನು ಪ್ರಕಟಿಸಲಾಗಿತ್ತು. ಇದರಿಂದ ತೀವ್ರ ಮುಜುಗರಕ್ಕೆ ಒಳಗಾದ ಟ್ರೂಡೊ ಈಗ ಇದನ್ನು ಆಧಾರರಹಿತ ಎಂದು ಹೇಳಿದ್ದಾರೆ. ಹಾಗೂ ತಮ್ಮದೇ ಭದ್ರತಾ ಅಧಿಕಾರಿಗಳನ್ನು ಅಪರಾಧಿಗಳು ಎಂದು ಕರೆದಿದ್ದಾರೆ.
ಬ್ರಾಂಪ್ಟನ್ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಜಸ್ಟಿನ್ ಟ್ರುಡೊ, “ದುರದೃಷ್ಟವಶಾತ್ ಆ ಅಪರಾಧಿಗಳು ಮಾಧ್ಯಮಗಳಿಗೆ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿರುವುದನ್ನು ನಾವು ನೋಡಿದ್ದೇವೆ. ಮಾಧ್ಯಮಗಳು ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿವೆ. ಅಪರಾಧಿಗಳು ಮಾಧ್ಯಮಗಳಿಗೆ ಸುಳ್ಳು ಮಾಹಿತಿಯನ್ನು ಸೋರಿಕೆ ಮಾಡುತ್ತಾರೆ ಎಂದು ಭದ್ರತಾ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ನಿಜ್ಜರ್ ಹತ್ಯೆಯಲ್ಲಿ ಮೋದಿ-ಅಜಿತ್ ದೋವಲ್ ಕೈವಾಡ ಗೊತ್ತಿತ್ತು ಎಂಬ ಕೆನಡಾದ ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿದ ಮಾಧ್ಯಮದ ವರದಿ ಬಗ್ಗೆ ಭಾರತದ ತೀವ್ರ ಆಕ್ಷೇಪದ ಬೆನ್ನಲ್ಲೇ ವರದಿ ನಿರಾಕರಿಸಿದ ಕೆನಡಾ ಸರ್ಕಾರ ‘ಗ್ಲೋಬ್ ಅಂಡ್ ಮೇಲ್’ ವರದಿಯನ್ನು ಸಂಪೂರ್ಣವಾಗಿ ಸುಳ್ಳು ಎಂದು ಕೆನಡಾದ ರಾಷ್ಟ್ರೀಯ ಭದ್ರತಾ ಸಂಸ್ಥೆ ಬಣ್ಣಿಸಿದೆ. ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್. ಜೈಶಂಕರ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಅವರ ಪಾತ್ರದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
‘ಗ್ಲೋಬ್ ಅಂಡ್ ಮೇಲ್’ ವರದಿ ಪ್ರಕಟವಾದ ನಂತರ ಭಾರತೀಯ ವಿದೇಶಾಂಗ ಸಚಿವಾಲಯ ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿತ್ತು. ಭಾರತವು ಇದನ್ನು ಮಾನಹಾನಿ ಮಾಡುವ ಕೆನಡಾದ ಅಭಿಯಾನ ಎಂದು ಕರೆದಿದೆ. ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, “ಇಂತಹ ಮಾನಹಾನಿಕರ ಪ್ರಚಾರಗಳು ಈಗಾಗಲೇ ಹದಗೆಟ್ಟಿರುವ ನಮ್ಮ ಸಂಬಂಧಗಳನ್ನು ಮತ್ತಷ್ಟು ಹಾಳುಮಾಡುತ್ತವೆ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ