ನವದೆಹಲಿ: ಪಹಲ್ಗಾಮ್ ದಾಳಿಕೋರರಿಗೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಬಿಹಾರದ ಮಧುಬನಿಯಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟದ ಬಲವಾದ ಸಂದೇಶವನ್ನು ಸಾರ್ವಜನಿಕ ವೇದಿಕೆಯಿಂದ ಇಡೀ ಜಗತ್ತಿಗೆ ರವಾನಿಸಲು ಹಿಂದಿಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಇಂಗ್ಲಿಷ್ಗೆ ಬದಲಾಯಿಸಿಕೊಂಡರು.
“ಬಿಹಾರದ ಮಣ್ಣಿನಿಂದ, ನಾನು ಜಗತ್ತಿಗೆ ಹೇಳುತ್ತಿದ್ದೇನೆ, ಭಾರತವು ಪ್ರತಿಯೊಬ್ಬ ಭಯೋತ್ಪಾದಕನನ್ನು ಮತ್ತು ಅವರ ಹಿಂದೆ ಇರುವವರನ್ನು ಗುರುತಿಸಿ ಶಿಕ್ಷಿಸುತ್ತದೆ” ಎಂದು ಅವರು ಇಂಗ್ಲಿಷ್ನಲ್ಲಿ ಹೇಳಿದರು, ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ 48 ಗಂಟೆಗಳ ನಂತರ ಅವರು ಜಾಗತಿಕ ಸಮುದಾಯಕ್ಕೆ ಸಂದೇಶ ರವಾನಿಸಲು ಇಂಗ್ಲಿಷ್ನಲ್ಲಿ ಮಾತನಾಡಿ, ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
“ನಾವು ಅವರನ್ನು ವಿಶ್ವದ ತುದಿಗಳವರೆಗೆ ಬೆನ್ನಟ್ಟುತ್ತೇವೆ… ಭಾರತದ ಚೈತನ್ಯವನ್ನು ಎಂದಿಗೂ ಬ್ರೇಕ್ ಮಾಡಲು ಸಾಧ್ಯವಿಲ್ಲ. ಭಯೋತ್ಪಾದನೆಯನ್ನು ಶಿಕ್ಷಿಸದೆ ಬಿಡುವುದಿಲ್ಲ. ಇದರಿಂದ ನೊಂದವರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು. ಇಡೀ ರಾಷ್ಟ್ರವು ಈ ಸಂಕಲ್ಪದಲ್ಲಿ ದೃಢವಾಗಿದೆ ಮತ್ತು ಮಾನವೀಯತೆಯನ್ನು ನಂಬುವ ಪ್ರತಿಯೊಬ್ಬರೂ ನಮ್ಮೊಂದಿಗಿದ್ದಾರೆ…” ಎಂದು ಪ್ರಧಾನಿ ಹೇಳಿದರು.
“ನಾನು ಬಹಳ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ… ಈ ಭಯೋತ್ಪಾದಕರು ಮತ್ತು ಈ ದಾಳಿಗೆ ಸಂಚು ರೂಪಿಸಿದವರಿಗೆ ಅವರು ಊಹಿಸುವುದಕ್ಕಿಂತ ದೊಡ್ಡ ಶಿಕ್ಷೆಯಾಗಲಿದೆ…”ಎಂದು ಮೋದಿ ಗುಡುಗಿದರು.
ಬಿಹಾರದ ಮಧುಭನಿಯಲ್ಲಿ ಭಯೋತ್ಪಾದಕರಿಗೆ ಅವರ ಎಚ್ಚರಿಕೆ ತೀವ್ರವಾಗಿತ್ತು, ಆದರೆ ಅವರು ಹಿಂದಿಯಿಂದ ಇಂಗ್ಲಿಷ್ಗೆ ಭಾಷೆಗೆ ತಮ್ಮ ಮಾತನ್ನು ಬದಲಾಯಿಸಿ ಭಯೋತ್ಪಾದಕರಿಗೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದು ಹೆಚ್ಚು ಗಮನಸೆಳೆಯಿತು.
ಈ ಕ್ರೂರ ದಾಳಿಯನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ, ಇದಕ್ಕೆ ತಕ್ಕ ಪರಿಣಾಮಗಳು ಆಗಿಯೇ ಆಗುತ್ತವೆ ಮತ್ತು ಭಯೋತ್ಪಾದಕರನ್ನು ಗಮನಿಸಲಾಗಿದೆ ಎಂದು ಭಾರತವು ಜಗತ್ತಿಗೆ ಹೇಳುತ್ತಿರುವಂತೆ ಈ ಹೇಳಿಕೆಗಳು ಕಂಡುಬರುತ್ತವೆ. ಯುರೋಪಿಯನ್ ಯೂನಿಯನ್, ಅಮೆರಿಕ, ಇಸ್ರೇಲ್, ರಷ್ಯಾ ಮತ್ತು ಚೀನಾ ಸೇರಿದಂತೆ ಪಹಲ್ಗಾಮ್ ದಾಳಿಯನ್ನು ಖಂಡಿಸುವಲ್ಲಿ ಒಗ್ಗೂಡಿದ ದೇಶಗಳಿಗೆ ಕೃತಜ್ಞತೆಯ ವ್ಯಕ್ತಪಡಿಸುವುದು ಸಹ ಅವರ ಇಂಗ್ಲಿಷ್ ಭಾಷಣವು ಒಳಗೊಂಡಿತ್ತು.
ಪ್ರವಾಸಿಗರು ಮತ್ತು ನಾಗರಿಕರು ಸೇರಿದಂತೆ 26 ಜನರನ್ನು ಕೊಂದ, ಸುಂದರವಾದ ಬೈಸರನ್ ಕಣಿವೆಯನ್ನು ರಕ್ತಪಾತವನ್ನಾಗಿ ಮಾಡಿದ ಮಂಗಳವಾರ ಮಧ್ಯಾಹ್ನದ ದಾಳಿಗೆ ಭಾರತವು ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಹಾಗೂ ಜಲ ಯುದ್ಧ ಸಾರಿದೆ. ಪಾಕಿಸ್ತಾನದ ಆರ್ಥಿಕತೆಗೆ ನಿರ್ಣಾಯಕವೆಂದು ಪರಿಗಣಿಸಲಾದ ಸಿಂಧೂ ನದಿ ವ್ಯವಸ್ಥೆಯ ನೀರನ್ನು ಹಂಚಿಕೊಳ್ಳಲು 65 ವರ್ಷಗಳ ಹಳೆಯ ಒಪ್ಪಂದವಾದ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದು ಸಹ ಅವುಗಳಲ್ಲಿ ಸೇರಿವೆ.
ದಾಳಿ ನಡೆದಾಗ ಸೌದಿ ಅರೇಬಿಯಾದಲ್ಲಿದ್ದ ಪ್ರಧಾನಿ ಮೋದಿ, ಮರುದಿನ ಹಿಂತಿರುಗಿ, ಪಾಕ್ ವಾಯುಪ್ರದೇಶವನ್ನು ತಪ್ಪಿಸಿ ಭಾರತಕ್ಕೆ ಬಂದರು. ಜಮ್ಮು ಮತ್ತು ಕಾಶ್ಮೀರದಲ್ಲಿನ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತು ಭಾರತದ ಪ್ರತಿಕ್ರಿಯೆಗಳನ್ನು ಯೋಜಿಸಲು ಹಲವಾರು ಸಭೆಗಳನ್ನು ನಡೆಸಿದ್ದಾರೆ. ಪಾಕ್ ಮೂಲದ ನಿಷೇಧಿತ ಲಷ್ಕರ್-ಎ-ತೈಬಾ ಭಯೋತ್ಪಾದಕ ಗುಂಪಿನ ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಸಂಘಟನೆ ಈ ದಾಳಿಗೆ ಹೊಣೆ ಹೊತ್ತುಕೊಂಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ