ಶಹಜಹಾನಪುರ : ಪಾಕಿಸ್ತಾನದಲ್ಲಿನ ಭಯೋತ್ಪಾದಕ ಕೇಂದ್ರಗಳ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂಧೂರ ವೈಮಾನಿಕ ದಾಳಿಯ ನಂತರ, ಉತ್ತರ ಪ್ರದೇಶದ ಶಹಜಹಾನಪುರ ಜಿಲ್ಲೆಯ ಹಳ್ಳಿಯಲ್ಲಿ ನಡೆದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.
ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರದ ಮೇಲೆ ಭಾರತ ನಡೆಸಿದ ವಾಯುದಾಳಿಯ ನಂತರ ಸಾರ್ವಜನಿಕರ ಸಂಭ್ರಮದ ವೇಳೆ ಎಂಟು ವರ್ಷದ ಬಾಲಕನಿಗೆ ಇಬ್ಬರು ವ್ಯಕ್ತಿಗಳು ಇರಿದಿದ್ದಾರೆ ಎಂದು ಆರೋಪಿಸಲಾಗಿದೆ.
ಭಾರತೀಯ ಪಡೆಗಳು ಬುಧವಾರ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ ಒಂಬತ್ತು ಶಂಕಿತ ಭಯೋತ್ಪಾದಕ ಅಡಗುತಾಣಗಳ ಮೇಲೆ ವಾಯುದಾಳಿ ನಡೆಸಿವೆ. ಕೇವಲ 25 ನಿಮಿಷಗಳ ಕಾಲ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ದೇಶಾದ್ಯಂತ ವ್ಯಾಪಕವಾಗಿ ಆಚರಿಸಲಾಗುತ್ತಿದೆ.
ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಪ್ರವಾಸಿಗರನ್ನು ಕೊಂದ ಕೇವಲ ಎರಡು ವಾರಗಳ ನಂತರ ಭಾರತವು ಈ ಕಾರ್ಯಾಚರಣೆ ನಡೆಸಿದ್ದು, ನಾಗರಿಕರು ಬೀದಿಗಿಳಿದು ಪಟಾಕಿಗಳನ್ನು ಹಚ್ಚಿದ್ದಾರೆ.
ಆದರೆ ಉತ್ತರ ಪ್ರದೇಶದ ಶಹಜಾನಪುರ ಜಿಲ್ಲೆಯ ಧರ್ಮಗಡಪುರ ಗ್ರಾಮದಲ್ಲಿ ಬಾಲಕನಿಗೆ ಚಾಕುವಿನಿಂದ ಇರಿಯಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸುರ್ಜೀತ್ ಎಂಬ ಮಗು “ಹಿಂದೂಸ್ತಾನ ಜಿಂದಾಬಾದ್” ಮತ್ತು “ಪಾಕಿಸ್ತಾನ ಮುರ್ದಾಬಾದ್” ಘೋಷಣೆಗಳನ್ನು ಕೂಗಲು ಪ್ರಾರಂಭಿಸಿತು. ಆಗ ಸ್ಥಳೀಯರು ಹೇಳುವಂತೆ, ಮೊಹಿದ್ ಖಾನ್ ಮತ್ತು ಆತನ ಸಹಚರ ವಾಸಿಮ್ ಎಂದು ಗುರುತಿಸಲಾದ ಇಬ್ಬರು ಯುವಕರು ಆ ಹುಡುಗನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
ಈ ಘಟನೆಯಿಂದ ಕೋಪಗೊಂಡ ಜನರು ದಾಳಿಕೋರರಿಬ್ಬರನ್ನೂ ಹಿಡಿದು ಥಳಿಸಿದ್ದಾರೆ. ನಂತರ ಇಬ್ಬರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ. ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆತ ಪ್ರಸ್ತುತ ವೈದ್ಯಕೀಯ ಆರೈಕೆಯಲ್ಲಿದ್ದಾನೆ ಹಾಗೂ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಹಜಹಾನಪುರ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದೃಢಪಡಿಸಿದ್ದಾರೆ, ಅವರು ಬಂಧನದಲ್ಲಿದ್ದಾರೆ. ಹಲ್ಲೆಯ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ