
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರು ತಮ್ಮ ವಿಚಿತ್ರ ವರ್ತನೆಯಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪಾಟ್ನಾದ ಕೃಷಿ ಭವನದಲ್ಲಿ ನಡೆದ ನೇಮಕಾತಿ ಪತ್ರ ವಿತರಣಾ ಸಮಾರಂಭದಲ್ಲಿ ಅವರು ವೇದಿಕೆಯನ್ನು ತಲುಪಿದ ತಕ್ಷಣ, ಬಿಹಾರ ಸರ್ಕಾರದ ಕ್ಯಾಬಿನೆಟ್ ತಲೆ ಮೇಲೆ ಹೂ ಕುಂಡ ಇಟ್ಟಿರುವ ಘಟನೆಯ ವೀಡಿಯೊ ಈಗ ಸಾಕಷ್ಟು ಚರೆಗೆ ಗ್ರಾಸವಾಗಿದೆ.
ಅವರು ವೇದಿಕೆಗೆ ಬರುತ್ತಿದ್ದಂತೆಯೇ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್. ಸಿದ್ಧಾರ್ಥ ಸ್ವಾಗತಿಸಲು ಹೂವಿನ ಕುಂಡದೊಂದಿಗೆ ಬಂದರು. ಯಾವುದೇ ಹಿಂಜರಿಕೆಯಿಲ್ಲದೆ, ನಿತೀಶಕುಮಾರ ಆ ಕುಂಡವನ್ನು ಕೈಯಲ್ಲಿ ತೆಗೆದುಕೊಂಡು ನೇರವಾಗಿ ಅಧಿಕಾರಿ ಎಸ್. ಸಿದ್ಧಾರ್ಥ ಅವರ ತಲೆಯ ಮೇಲೆ ಇಟ್ಟರು. ಸಿದ್ಧಾರ್ಥ ತಕ್ಷಣವೇ ಹೂವಿನ ಕುಂಡವನ್ನು ತೆಗೆದು ಇನ್ನೊಬ್ಬ ಅಧಿಕಾರಿಗೆ ಒಪ್ಪಿಸಿದರೂ, ಆ ಹೊತ್ತಿಗೆ ಅಲ್ಲಿದ್ದ ಕ್ಯಾಮೆರಾಗಳು ಆ ಕ್ಷಣವನ್ನು ಸೆರೆಹಿಡಿದಿದ್ದವು. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಕೆಲವರು ಇದನ್ನು ‘ಬಿಹಾರ ಮಾದರಿ’ಯ ಹೊಸ ರೂಪ ಎಂದು ಕರೆದರೆ, ಇನ್ನು ಕೆಲವರು ಮುಖ್ಯಮಂತ್ರಿ ನಿತೀಶಕುಮಾರ ಅವರ ಮಾನಸಿಕ ಸ್ಥಿತಿಯನ್ನು ಪ್ರಶ್ನಿಸಿದರು. ಲಾಲು ಪ್ರಸಾದ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಈ ವೀಡಿಯೊ ಹಂಚಿಕೊಂಡು ಅಂಕಲ್ ತಮ್ಮ ಅಧಿಕಾರಿಯ ತಲೆಯ ಮೇಲೆ ಹೂವಿನ ಕುಂಡ ಇಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.
ಈ ವಿಡಿಯೋ ವೈರಲ್ ಆದ ನಂತರ, ಅದನ್ನು ರಾಷ್ಟ್ರೀಯ ಜನತಾ ದಳದ ಎಕ್ಸ್ ಹ್ಯಾಂಡಲ್ನಿಂದಲೂ ಹಂಚಿಕೊಂಡಿದೆ. ಪಕ್ಷವು Xನಲ್ಲಿ ‘ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರ ಮಾನಸಿಕ ಸ್ಥಿತಿ!’ ಎಂದು ಬರೆದಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿಯೊಬ್ಬರು ಮುಖ್ಯಮಂತ್ರಿಯನ್ನು ಸ್ವಾಗತಿಸುತ್ತಿರುವಾಗ, ಎಲ್ಲಾ ಶಿಷ್ಟಾಚಾರಗಳನ್ನು ನಿರ್ಲಕ್ಷಿಸಿ ಮುಖ್ಯಮಂತ್ರಿಗಳು ಅಧಿಕಾರಿಯ ತಲೆಯ ಮೇಲೆ ಹೂವಿನ ಕುಂಡ ಇಡುತ್ತಾರೆ. ರಾಜ್ಯದ ಮುಖ್ಯಮಂತ್ರಿಯ ಈ ದಯನೀಯ ಸ್ಥಿತಿ ರಾಜ್ಯವನ್ನು ಪಾತಾಳಕ್ಕೆ ಕೊಂಡೊಯ್ಯುತ್ತಿದೆ ಎಂದು ಆರ್ಜೆಡಿ ಟೀಕಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ