
ಪಾಕಿಸ್ತಾನದಲ್ಲಿ ನಾಲ್ಕನೇ ಸೇನಾ ‘ದಂಗೆ’ (Coup) ತೆರೆಮರೆಯಲ್ಲಿ ನಡೆಯುತ್ತಿದೆ. ಇದು ಹಿಂದಿನ ದಂಗೆಗಳಂತೆ ಮಧ್ಯರಾತ್ರಿ ಅಥವಾ ಬಂದೂಕುಗಳ ಬಲದಿಂದ ನಡೆಯುವ ಬದಲಾಗಿ, ಇದು ಕೈಗೊಂಬೆ ಸರ್ಕಾರದ ಮೂಲಕ ನಡೆಯುತ್ತಿರುವ ‘ಸಂವಿಧಾನ’ದ ಅಡಿಯಲ್ಲಿ ಸರ್ಕಾರದ ಸಾಂವಿಧಾನಾತ್ಮಕ ಅಧಿಕಾರ ಕಿತ್ತುಕೊಳ್ಳುವ ದಂಗೆ ಎನ್ನಲಾಗಿದೆ. ಈ ‘ಶಸ್ತ್ರ ರಹಿತ ದಂಗೆ’ಯು ಪಾಕಿಸ್ತಾನವನ್ನು ಆಂತರಿಕವಾಗಿ ಮತ್ತಷ್ಟು ದುರ್ಬಲಗೊಳಿಸಲಿದೆ ಎಂದು ವಿಶ್ಲೇಷಿಸಲಾಗಿದೆ.
ಸೋಮವಾರ ಪಾಕಿಸ್ತಾನದ ಸೆನೆಟ್ನಲ್ಲಿ ಅಂಗೀಕರಿಸಲಾದ 27ನೇ ಸಂವಿಧಾನ ತಿದ್ದುಪಡಿ ಕಾಯ್ದೆಯು ಸೇನೆಗೆ ಸರ್ವೋಚ್ಚ ಅಧಿಕಾರವನ್ನು ಕಾನೂನುಬದ್ಧಗೊಳಿಸುವ ಉದ್ದೇಶ ಹೊಂದಿದೆ. ಈ ತಿದ್ದುಪಡಿಯು ಸೈನ್ಯದ ಚೈನ್ ಆಫ್ ಕಮಾಂಡ್, ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣ ಮತ್ತು ನ್ಯಾಯಾಂಗದ ಮೇಲೆ ಕೂಡ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರಿಗೆ ಅಧಿಕಾರ ಹಾಗೂ ನಿಯಂತ್ರಣ ನೀಡುವ ಸಾಧ್ಯತೆ ಇದೆ.
ಭಾರತಕ್ಕೆ ಇದು ಅಪಾಯಕಾರಿಯಾಗಿ ಕಾಣುತ್ತಿದೆ. ಏಕೆಂದರೆ, ಭಾರತದಲ್ಲಿ ರಕ್ಷಣಾ ಪಡೆಗಳ ಕಾರ್ಯಾಚರಣೆಯ ನಿಯಂತ್ರಣ ನಾಗರಿಕ ನಾಯಕತ್ವದ ಕೈಯಲ್ಲಿದೆ. ಆದರೆ, ಪಾಕಿಸ್ತಾನದಲ್ಲಿ ಸೇನೆಯೇ ಎಲ್ಲವನ್ನೂ ನಿಯಂತ್ರಿಸುವ ಮೂಲಕ ಗಂಭೀರವಾದ ಅಸಮತೋಲನ ಸೃಷ್ಟಿಯಾಗುವ ಸಾಧ್ಯತೆಯಿದೆ.

ಜಿಯಾ, ಮುಷರಫ್ಗಿಂತಲೂ ಅಪಾಯಕಾರಿ
ಪಾಕಿಸ್ತಾನವು ಈ ಹಿಂದೆ ಜನರಲ್ ಅಯೂಬ್ ಖಾನ್ (1958), ಜಿಯಾ-ಉಲ್-ಹಕ್ (1977) ಮತ್ತು ಪರ್ವೇಜ್ ಮುಷರಫ್ (1999) ನೇತೃತ್ವದಲ್ಲಿ ಮೂರು ಸೇನಾ ದಂಗೆಗಳನ್ನು ಕಂಡಿದೆ. ಆದರೆ ಅಸಿಮ್ ಮುನೀರ್ ನಡೆಸುತ್ತಿರುವ ಈ ನಾಲ್ಕನೇ ‘ದಂಗೆ’ಯು ಈವರೆಗಿನ ಯಾವುದೇ ಸೇನಾ ನಾಯಕನ ಬಲವರ್ಧನೆಗಿಂತಲೂ ಹೆಚ್ಚು ಧೈರ್ಯಶಾಲಿಯಾದ ನಡೆ ಎನ್ನಲಾಗಿದೆ. ಜಿಯಾ ಮತ್ತು ಮುಷರಫ್ ಅವರಿಗೆ ಕೂಡ ಇದನ್ನು ಸಾಧಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಲಾಗುತ್ತಿದೆ.
ಈ ‘ಸಂವಿಧಾನಾತ್ಮಕ ದಂಗೆ’ಯಲ್ಲಿ ಪ್ರಧಾನಿ ಶಹಬಾಜ್ ಷರೀಫ್ ಅವರು ಮುನೀರ್ಗೆ ಸಹಕಾರಿಯಾಗಿದ್ದಾರೆ. ತಿದ್ದುಪಡಿಯು ಮಿಲಿಟರಿ ಶ್ರೇಣಿಯನ್ನು ಮುನೀರ್ ಅಡಿಯಲ್ಲಿ ಮರುಸಂಘಟಿಸಲು ಮತ್ತು ಅವರ ಪ್ರತಿಸ್ಪರ್ಧಿ ಹುದ್ದೆಗಳನ್ನು ತೆಗೆದುಹಾಕಲು ಪ್ರಯತ್ನಿಸುತ್ತದೆ. ಕೆಲವು ವರದಿಗಳ ಪ್ರಕಾರ, ಈ ತಿದ್ದುಪಡಿಯು ಐದು-ಸ್ಟಾರ್ ಜನರಲ್ಗಳಿಗೆ ಎಲ್ಲಾ ರೀತಿಯ ಕಾನೂನು ಪ್ರಕ್ರಿಯೆಗಳಿಂದ ವಿನಾಯಿತಿ ನೀಡುತ್ತದೆ.
ನ್ಯಾಯಾಂಗದ ಮೇಲೆ ಸೇನೆಯ ಹಿಡಿತ
ಈ ತಿದ್ದುಪಡಿಯು ಪಾಕಿಸ್ತಾನದ ನ್ಯಾಯಾಂಗವನ್ನೂ ಸೇನೆಯ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುವ ಸಾಧ್ಯತೆಯಿದೆ.
ತಿದ್ದುಪಡಿಯು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಬದಲು, ನ್ಯಾಯಾಧೀಶರು ಕಡಿಮೆ ಇರುವ ನ್ಯಾಯಾಂಗ ಆಯೋಗಕ್ಕೆ (JCP) ಸಾಂವಿಧಾನಿಕ ಪೀಠಗಳ ಪ್ರಕರಣಗಳ ಹಂಚಿಕೆಯ ಅಧಿಕಾರ ನೀಡುತ್ತದೆ. ಹೊಸ ಫೆಡರಲ್ ಸಾಂವಿಧಾನಿಕ ನ್ಯಾಯಾಲಯಕ್ಕೆ (FCC) ಕೆಲವು ಸರ್ವೋಚ್ಚ ನ್ಯಾಯಾಲಯದ ಪ್ರಮುಖ ಅಧಿಕಾರಗಳು ವರ್ಗಾವಣೆಯಾಗಲಿವೆ. ಇದರಿಂದ ಸರ್ವೋಚ್ಚ ನ್ಯಾಯಾಲಯವು ಕೇವಲ ಸಿವಿಲ್ ಮತ್ತು ಕ್ರಿಮಿನಲ್ ಮೇಲ್ಮನವಿಗಳನ್ನು ನಿರ್ವಹಿಸುವ ‘ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ’ದ ಮಟ್ಟಕ್ಕೆ ಕುಸಿಯಲಿದೆ ಎಂದು ವಿಶ್ಲೇಷಿಸಲಾಗಿದೆ.
ಪರಮಾಣು ನಿಯಂತ್ರಣವೂ ಮುನೀರ್ ಕೈಗೆ
ಸಂವಿಧಾನ ತಿದ್ದುಪಡಿಯು ರಾಷ್ಟ್ರೀಯ ಕಾರ್ಯತಂತ್ರದ ಕಮಾಂಡ್ನ ಕಮಾಂಡರ್ ಹುದ್ದೆಯನ್ನು ಸ್ಥಾಪಿಸುತ್ತದೆ. ಈ ಕಮಾಂಡರ್ ಪಾಕಿಸ್ತಾನದ ಪರಮಾಣು ಶಸ್ತ್ರಾಗಾರವನ್ನು ಮೇಲ್ವಿಚಾರಣೆ ಮಾಡುತ್ತಾರೆ. ಈ ಹುದ್ದೆಯನ್ನು ಪ್ರಧಾನಿಯು ಸೇನಾ ಮುಖ್ಯಸ್ಥರ ಶಿಫಾರಸಿನ ಮೇರೆಗೆ ನೇಮಕ ಮಾಡುತ್ತಾರೆ ಮತ್ತು ಇದು ಕೇವಲ ಸೇನಾಧಿಕಾರಿಗಳಿಗೆ ಮಾತ್ರ ಸೀಮಿತವಾಗಿದೆ. “ಅಂದರೆ, ಎಲ್ಲಾ ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಅವುಗಳನ್ನು ಒಯ್ಯುವ ವ್ಯವಸ್ಥೆಗಳು ಸೇನೆಯ ನಿಯಂತ್ರಣಕ್ಕೆ ಬರಲಿವೆ” ಎಂದು ಹೇಳಲಾಗುತ್ತಿದೆ.
ಐದು-ಸ್ಟಾರ್ ಜನರಲ್ಗಳಿಗೆ ಕಾನೂನು ವಿನಾಯಿತಿ
ಈ ತಿದ್ದುಪಡಿಯ ಅತ್ಯಂತ ಆತಂಕಕಾರಿ ಅಂಶವೆಂದರೆ ಐದು-ಸ್ಟಾರ್ ಶ್ರೇಣಿಯ ಅಧಿಕಾರಿಗಳಿಗೆ (ಫೀಲ್ಡ್ ಮಾರ್ಷಲ್, ಏರ್ ಫೋರ್ಸ್ ಮಾರ್ಷಲ್, ಫ್ಲೀಟ್ ಅಡ್ಮಿರಲ್) ಜೀವನವಿಡೀ ಸಂವಿಧಾನಾತ್ಮಕ ರಕ್ಷಣೆ ನೀಡುವುದು. ಈ ಅಧಿಕಾರಿಗಳು ಶ್ರೇಣಿ, ಸವಲತ್ತುಗಳನ್ನು ಉಳಿಸಿಕೊಂಡು ಜೀವನಪರ್ಯಂತ ಸಮವಸ್ತ್ರದಲ್ಲಿ ಇರುತ್ತಾರೆ.
ಪಾಕಿಸ್ತಾನಿ ಪತ್ರಕರ್ತ ಇಮ್ರಾನ್ ರಿಯಾಜ್ ಖಾನ್ ಪ್ರಕಾರ, “ಇವರ ವಿರುದ್ಧ ಅವರ ಜೀವಿತಾವಧಿಯಲ್ಲಿ ಯಾವುದೇ ಕಾನೂನು ಪ್ರಕರಣ ದಾಖಲಿಸಲಾಗುವುದಿಲ್ಲ. ಅಸಿಮ್ ಮುನೀರ್ ಅವರು ಜೀವಿತಾವಧಿಯಲ್ಲಿ ಏನೇ ಮಾಡಿದರೂ, ಕೊಲೆ, ಅತ್ಯಾಚಾರ, ದೌರ್ಜನ್ಯ ಮಾಡಿದರೂ ಪಾಕಿಸ್ತಾನದ ಕಾನೂನುಗಳು ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಅವರಿಗೆ ಜೀವಮಾನದ ವಿನಾಯಿತಿ ನೀಡಲಾಗಿದೆ” ಎಂದು ವರದಿ ಮಾಡಿದ್ದಾರೆ.
ಪಾಕಿಸ್ತಾನದಲ್ಲಿ ಸೇನೆ, ಪರಮಾಣು ನಿಯಂತ್ರಣದಿಂದ ಹಿಡಿದು ನ್ಯಾಯಾಂಗದವರೆಗೆ ಬಹುತೇಕ ಎಲ್ಲಾ ಸಂಸ್ಥೆಗಳ ಮೇಲೆ ಮುನೀರ್ ಕಾನೂನುಬದ್ಧ ನಿಯಂತ್ರಣ ಸಾಧಿಸುತ್ತಿದ್ದಾರೆ. ಈ ನಡೆಯು ಜಿಯಾ-ಉಲ್-ಹಕ್ ಕನಸು ಕಂಡಿದ್ದನ್ನು ಮತ್ತು ಪರ್ವೇಜ್ ಮುಷರಫ್ ಸಾಧಿಸಲು ವಿಫಲರಾಗಿದ್ದನ್ನು ಪೂರ್ಣಗೊಳಿಸುವ ಪ್ರಯತ್ನವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ