
ನವದೆಹಲಿ: ತನ್ನ ಕುಟುಂಬ ಮತ್ತು ರಾಷ್ಟ್ರೀಯ ಜನತಾ ದಳ (RJD) ಪಕ್ಷದೊಂದಿಗಿನ ಸಂಬಂಧವನ್ನು ಕಡಿದುಕೊಂಡ ಒಂದು ದಿನದ ನಂತರ, ಆರ್ಜೆಡಿ (RJD) ಮುಖ್ಯಸ್ಥ ಲಾಲು ಪ್ರಸಾದ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ತಮ್ಮ ಮೇಲೆ ವಿನಾಕಾರಣ ಅವಮಾನ, ನಿಂದನೆ ಮತ್ತು “ಕೊಳೆತ ಕಿಡ್ನಿ” ಎಂದು ಕರೆಯುವಂತಹ ಕೆಟ್ಟ ವರ್ತನೆ ತೋರಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಆತ್ಮಗೌರವವನ್ನು ಅಥವಾ ಸತ್ಯವನ್ನು ಬಿಡಲು ನಿರಾಕರಿಸಿದ್ದರಿಂದಲೇ ಈ ರೀತಿಯ ವರ್ತನೆ ಎದುರಿಸಬೇಕಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.
ಭಾನುವಾರ ‘X’ (ಹಿಂದಿನ ಟ್ವಿಟರ್) ನಲ್ಲಿ ಸರಣಿ ಪೋಸ್ಟ್ಗಳನ್ನು ಹಂಚಿಕೊಂಡಿರುವ ಲಾಲು ಪುತ್ರಿ ರೋಹಿಣಿ ಆಚಾರ್ಯ ಅವರು, “ನಿನ್ನೆ ಒಬ್ಬ ಮಗಳು, ಒಬ್ಬ ಸಹೋದರಿ, ವಿವಾಹಿತ ಮಹಿಳೆ, ತಾಯಿಗೆ ಅವಮಾನ ಮಾಡಲಾಯಿತು, ಅಸಭ್ಯ ನಿಂದನೆಗಳನ್ನು ಮಾಡಲಾಯಿತು. ಚಪ್ಪಲಿ ಎತ್ತಿ ಹೊಡೆಯಲು ಪ್ರಯತ್ನಿಸಲಾಯಿತು. ನಾನು ನನ್ನ ಆತ್ಮಗೌರವಕ್ಕೆ ಧಕ್ಕೆಯಾಗಲು ಬಿಡಲಿಲ್ಲ, ಸತ್ಯವನ್ನು ಬಿಡಲಿಲ್ಲ. ಈ ಕಾರಣಕ್ಕಾಗಿಯೇ ನಾನು ಈ ಅವಮಾನವನ್ನು ಸಹಿಸಬೇಕಾಯಿತು. ಅನಿವಾರ್ಯವಾಗಿ ಅಳುತ್ತ ನಿಂತಿದ್ದ ಪೋಷಕರು ಮತ್ತು ಸಹೋದರಿಯರನ್ನು ಬಿಟ್ಟು ಆ ಮಗಳು ಹೊರಬಂದಿದ್ದಾಳೆ; ಅವರು ನನ್ನನ್ನು ನನ್ನ ತವರು ಮನೆಯಿಂದ ದೂರ ಮಾಡಿದರು. ನನ್ನನ್ನು ಅನಾಥೆಯನ್ನಾಗಿ ಮಾಡಿದರು,” ಎಂದು ನೋವಿನಿಂದ ಬರೆದಿದ್ದಾರೆ.

ಒಂದು ಗಂಟೆಯ ನಂತರದ ಮತ್ತೊಂದು ಪೋಸ್ಟ್ನಲ್ಲಿ, “ನಿನ್ನೆ, ನನ್ನನ್ನು ಶಪಿಸಲಾಯಿತು ಮತ್ತು ನನ್ನ ಕೊಳೆತ ಕಿಡ್ನಿಯನ್ನು ನನ್ನ ತಂದೆಗೆ ಕಸಿ ಮಾಡಿಸಿ, ಅದಕ್ಕಾಗಿ ಕೋಟಿಗಟ್ಟಲೆ ಹಣ ಪಡೆದು ಟಿಕೆಟ್ ಖರೀದಿಸಿ, ನಂತರ ಆ ಕೊಳೆತ ಕಿಡ್ನಿಯನ್ನು ಹಾಕಿಸಿದೆ ಎಂದು ಆರೋಪಿಸಲಾಯಿತು,” ಎಂದು ರೋಹಿಣಿ ಆಚಾರ್ಯ ಅವರು ಆಘಾತಕಾರಿ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
“ವಿವಾಹಿತೆಯರಾದ ಎಲ್ಲಾ ಸಹೋದರಿಯರಿಗೆ ನಾನು ಹೇಳುವುದೇನೆಂದರೆ, ನಿಮ್ಮ ತವರು ಮನೆಯಲ್ಲಿ ಒಬ್ಬ ಮಗ ಅಥವಾ ಸಹೋದರ ಇದ್ದಾಗ, ನಿಮ್ಮ ದೇವರಂತಿರುವ ತಂದೆಯನ್ನು ಎಂದಿಗೂ, ಎಂದಿಗೂ ರಕ್ಷಿಸಬೇಡಿ. ಬದಲಾಗಿ, ನಿಮ್ಮ ಸಹೋದರನನ್ನು, ಆ ಮನೆಯ ಮಗನನ್ನು, ತನ್ನದೇ ಕಿಡ್ನಿ ಅಥವಾ ಹರಿಯಾಣದ ಸ್ನೇಹಿತರ ಕಿಡ್ನಿಯನ್ನು ಕಸಿ ಮಾಡಿಸಲು ಹೇಳಿ. ಎಲ್ಲಾ ಸಹೋದರಿಯರು ಮತ್ತು ಹೆಣ್ಣುಮಕ್ಕಳು ತಮ್ಮದೇ ಮನೆ, ಕುಟುಂಬ ಮತ್ತು ಮಕ್ಕಳ ಬಗ್ಗೆ ಮಾತ್ರ ನೋಡಿಕೊಳ್ಳಬೇಕು, ಪೋಷಕರ ಬಗ್ಗೆ ಯೋಚಿಸಬಾರದು, ತಮ್ಮ ಬಗ್ಗೆ ಮಾತ್ರ ಯೋಚಿಸಬೇಕು,” ಎಂದು ರೋಹಿಣಿ ಬರೆದಿದ್ದಾರೆ.
ತಮ್ಮ ತಂದೆಯನ್ನು ರಕ್ಷಿಸಲು ಕಿಡ್ನಿ ದಾನ ಮಾಡಿದ್ದು ಒಂದು ದೊಡ್ಡ ತಪ್ಪು, ಅದು ಪಾಪವಾಯಿತು. ಅದನ್ನು ಇಂದು ‘ಕೊಳೆತದ್ದು’ ಎಂದು ಕರೆಯಲಾಗಿದೆ ಎಂದು ಅವರು ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
ರಾಜಕೀಯ ತ್ಯಜಿಸಿ, ಕುಟುಂಬದ ಸಂಬಂಧ ಕಡಿದುಕೊಂಡ ರೋಹಿಣಿ
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಆರ್ಜೆಡಿ (RJD) ಕೇವಲ 25 ಸ್ಥಾನಗಳಿಗೆ ಕುಸಿದ ನಂತರ, ರೋಹಿಣಿ ಆಚಾರ್ಯ ಅವರು ಶನಿವಾರ ತಾವು ರಾಜಕೀಯವನ್ನು ತೊರೆಯುವುದಾಗಿ ಮತ್ತು ತಮ್ಮ ಕುಟುಂಬದಿಂದ ಸಂಬಂಧ ಕಡಿದುಕೊಂಡು ದೂರ ಇರುವುದಾಗಿ ಘೋಷಿಸಿದ್ದರು. “ಸಂಜಯ ಯಾದವ್ ಮತ್ತು ರಮಿಸ್ ನನಗೆ ಇದನ್ನೇ ಮಾಡಲು ಹೇಳಿದ್ದರು. ಎಲ್ಲಾ ತಪ್ಪಿನ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ,” ಎಂದು ಅವರು ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
ಸಂಜಯ ಯಾದವ್ ಅವರು ಆರ್ಜೆಡಿ ರಾಜ್ಯಸಭಾ ಸಂಸದರಾಗಿದ್ದು, ಲಾಲು ಪ್ರಸಾದ ಅವರ ಮಗ ಮತ್ತು ಪಕ್ಷದ ಉತ್ತರಾಧಿಕಾರಿ ತೇಜಸ್ವಿ ಯಾದವ್ ಅವರ ಆಪ್ತ ಸಹಾಯಕರಾಗಿದ್ದಾರೆ. ರಮಿಸ್ ಅವರು ತೇಜಸ್ವಿ ಅವರ ಹಳೆಯ ಸ್ನೇಹಿತರಾಗಿದ್ದು, ನೆರೆಯ ಉತ್ತರ ಪ್ರದೇಶದ ರಾಜಕೀಯ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ರೋಹಿಣಿ ಆಚಾರ್ಯ ಅವರು ಡಿಸೆಂಬರ್ 2022 ರಲ್ಲಿ ಸಿಂಗಾಪುರ ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ತಮ್ಮ ತಂದೆ ಲಾಲು ಪ್ರಸಾದ ಯಾದವ್ ಅವರಿಗೆ ಒಂದು ಕಿಡ್ನಿಯನ್ನು ದಾನ ಮಾಡಿದ್ದರು. ದಾನ ಮಾಡಿದ ಕಿಡ್ನಿಯನ್ನು ಅವರು “ಕೇವಲ ಮಾಂಸದ ತುಂಡು” ಎಂದು ಬಣ್ಣಿಸಿ, ಇದು ರಾಜಕೀಯ ಲಾಭಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದರು.
ಕುಟುಂಬದಲ್ಲಿ ಬಿರುಕು
ಈ ಬೆಳವಣಿಗೆಯಿಂದ ಲಾಲು ಯಾದವ್ ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ಮತ್ತಷ್ಟು ಹೆಚ್ಚಾಗಿವೆ. ಈ ಹಿಂದೆ, ರೋಹಿಣಿ ಅವರ ಹಿರಿಯ ಸಹೋದರ ತೇಜ ಪ್ರತಾಪ ಯಾದವ್ ಅವರೂ ಸಹ ಪಕ್ಷದಿಂದ ಮತ್ತು ಕುಟುಂಬದಿಂದ ಹೊರಹಾಕಲ್ಪಟ್ಟಿದ್ದರು ಮತ್ತು ತಮ್ಮದೇ ಆದ ‘ಜನಶಕ್ತಿ ಜನತಾ ದಳ (JJD)’ ಪಕ್ಷವನ್ನು ಪ್ರಾರಂಭಿಸಿ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ತೇಜ ಪ್ರತಾಪ ಅವರು ಕೂಡ ಸಂಜಯ ಯಾದವ್ ಅವರನ್ನು “ಜಯಚಂದ” (ದ್ರೋಹಿ) ಎಂದು ಕರೆದಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ