ಬಲೂಚಿಸ್ತಾನದಲ್ಲಿ ಚೀನಾ ಸೇನೆ ನಿಯೋಜನೆ ಆತಂಕ : ವಿದೇಶಾಂಗ ಸಚಿವ ಜೈಶಂಕರಗೆ ಪತ್ರ ಬರೆದ ಬಲೂಚ್ ನಾಯಕ

ನವದೆಹಲಿ/ಕ್ವೆಟ್ಟಾ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಮುಂದಿನ ಕೆಲವು ತಿಂಗಳುಗಳಲ್ಲಿ ಚೀನಾ ತನ್ನ ಸೇನಾ ಪಡೆಗಳನ್ನು ನಿಯೋಜಿಸುವ ಸಾಧ್ಯತೆಯಿದೆ ಎಂದು ಬಲೂಚ್ ನಾಯಕ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಮಿರ್ ಯಾರ್ ಬಲೂಚ್ ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ ಅವರಿಗೆ ಅವರು ಬಹಿರಂಗ ಪತ್ರ ಬರೆದಿದ್ದಾರೆ.
ಚೀನಾ ಮತ್ತು ಪಾಕಿಸ್ತಾನದ ನಡುವೆ ಬೆಳೆಯುತ್ತಿರುವ ಆಳವಾದ ಮೈತ್ರಿಯು ಈ ಪ್ರದೇಶಕ್ಕೆ ಅಪಾಯಕಾರಿ. ಬಲೂಚ್ ಜನರ ಇಚ್ಛೆಗೆ ವಿರುದ್ಧವಾಗಿ ಚೀನಾ ಸೇನೆ ಇಲ್ಲಿ ಬೀಡುಬಿಟ್ಟರೆ ಅದು ಭಾರತ ಮತ್ತು ಬಲೂಚಿಸ್ತಾನ ಎರಡರ ಭವಿಷ್ಯಕ್ಕೂ ಸವಾಲಾಗಲಿದೆ ಎಂದು ಮಿರ್ ಯಾರ್ ಎಚ್ಚರಿಸಿದ್ದಾರೆ.
ಆಪರೇಷನ್ ಸಿಂಧೂರಕ್ಕೆ ಶ್ಲಾಘನೆ: 
2025ರ ಏಪ್ರಿಲ್‌ನಲ್ಲಿ ಪಹಲ್ಗಾಮ್ ಮೇಲೆ ನಡೆದ ಭಯೋತ್ಪಾದನಾ ದಾಳಿಯ ನಂತರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸರ್ಕಾರ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ಬಲೂಚ್ ನಾಯಕ ಕೊಂಡಾಡಿದ್ದಾರೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಭಾರತ ತೋರಿದ ಧೈರ್ಯ ಅನುಕರಣೀಯ ಎಂದು ಹೇಳಿದ್ದಾರೆ.
 2025ರ ಮೇ ತಿಂಗಳಲ್ಲಿ ಪಾಕಿಸ್ತಾನದಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿರುವುದಾಗಿ ತಿಳಿಸಿರುವ ಬಲೂಚ್ ರಾಷ್ಟ್ರೀಯವಾದಿಗಳು, 2026ರ ಜನವರಿ ಮೊದಲ ವಾರದಲ್ಲಿ “ಬಲೂಚಿಸ್ತಾನ ಜಾಗತಿಕ ರಾಜತಾಂತ್ರಿಕ ವಾರ” ಆಚರಿಸುವುದಾಗಿ ಘೋಷಿಸಿದ್ದಾರೆ. ಇದರ ಮೂಲಕ ವಿಶ್ವದ ವಿವಿಧ ದೇಶಗಳೊಂದಿಗೆ ನೇರ ಸಂಪರ್ಕ ಸಾಧಿಸುವುದು ಅವರ ಗುರಿಯಾಗಿದೆ.
https://twitter.com/miryar_baloch/status/2006759716190564661?ref_src=twsrc%5Etfw%7Ctwcamp%5Etweetembed%7Ctwterm%5E2006759716190564661%7Ctwgr%5E8009f09b1c933bbac0f2908c46c2f12de3ea230d%7Ctwcon%5Es1_&ref_url=https%3A%2F%2Fwww.ndtv.com%2Fworld-news%2Fop-sindoor-praise-and-china-concern-india-gets-open-letter-from-pakistan-soil-10194424
ಭಾರತಕ್ಕೆ ಬೆಂಬಲ
ಬಲೂಚಿಸ್ತಾನದ 6 ಕೋಟಿ ಜನರ ಪರವಾಗಿ ಭಾರತದ 140 ಕೋಟಿ ಜನರಿಗೆ ಹೊಸ ವರ್ಷದ ಶುಭಾಶಯ ಕೋರಿರುವ ಅವರು, ಭಾರತ ಮತ್ತು ಬಲೂಚಿಸ್ತಾನದ ನಡುವೆ ಶತಮಾನಗಳ ಇತಿಹಾಸವಿದೆ ಎಂದು ಸ್ಮರಿಸಿದ್ದಾರೆ. ಹಿಂಗ್ಲಾಜ್ ಮಾತಾ ಮಂದಿರವು (ನಾನಿ ಮಂದಿರ) ನಮ್ಮ ಸಾಂಸ್ಕೃತಿಕ ಸಂಬಂಧದ ಸಂಕೇತವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
“ಶಾಂತಿ, ಸಮೃದ್ಧಿ, ಅಭಿವೃದ್ಧಿ, ವ್ಯಾಪಾರ, ರಕ್ಷಣೆ, ಭದ್ರತೆ, ಭವಿಷ್ಯದ ಇಂಧನ ಸವಾಲುಗಳು ಮತ್ತು ಗುಪ್ತ ಬೆದರಿಕೆಗಳನ್ನು ತಗ್ಗಿಸುವಂತಹ ಸ್ನೇಹ, ವಿಶ್ವಾಸ ಮತ್ತು ಪರಸ್ಪರ ಹಿತಾಸಕ್ತಿಗಳನ್ನು” ಬೆಳೆಸುವಲ್ಲಿ ಭಾರತ ಮತ್ತು ಅದರ ಸರ್ಕಾರಕ್ಕೆ ಮಾನವ ಹಕ್ಕುಗಳ ಕಾರ್ಯಕರ್ತ ಅಚಲ ಬೆಂಬಲವನ್ನು ಪುನರುಚ್ಚರಿಸಿದ್ದಾರೆ.
“ಬಲೂಚಿಸ್ತಾನದ ಜನರು ಕಳೆದ ಎಪ್ಪತ್ತೊಂಬತ್ತು ವರ್ಷಗಳಿಂದ ಪಾಕಿಸ್ತಾನದ ರಾಜ್ಯ ಆಕ್ರಮಣ, ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ಮತ್ತು ಮಾನವ ಹಕ್ಕುಗಳ ದೌರ್ಜನ್ಯಗಳನ್ನು ಸಹಿಸಿಕೊಂಡಿದ್ದಾರೆ. ನಮ್ಮ ರಾಷ್ಟ್ರಕ್ಕೆ ಶಾಶ್ವತ ಶಾಂತಿ ಮತ್ತು ಸಾರ್ವಭೌಮತ್ವವನ್ನು ಖಚಿತಪಡಿಸಿಕೊಳ್ಳಲು, ಈ ಉಲ್ಬಣಗೊಳ್ಳುತ್ತಿರುವ ಪಿಡುಗನ್ನು ಅದರ ಮೂಲದಿಂದಲೇ ನಿರ್ಮೂಲನೆ ಮಾಡುವ ಸಮಯ ಈಗ ಬಂದಿದೆ” ಎಂದು ಅವರು ಬರೆದಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement