ವಿಡಿಯೊಗಳು | ಬಿಕಾನೇರ್‌ನಲ್ಲಿ ಪ್ರಳಯಸದೃಶ ಧೂಳಿನ ಬಿರುಗಾಳಿ ; ನೋಡನೋಡುತ್ತಿದ್ದಂತೆ ಹಗಲು ಕತ್ತಲಾಗಿ ಪರಿವರ್ತನೆ…!

ಬಿಕಾನೇರ್: ರಾಜಸ್ಥಾನದ ಬಿಕಾನೇರ್ ನಗರದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಭೀಕರ ಧೂಳಿನ ಬಿರುಗಾಳಿಯು ಇಡೀ ನಗರವನ್ನೇ ನಡುಗಿಸಿದೆ. ದಟ್ಟವಾದ ಧೂಳಿನ ಮೋಡಗಳು ಇಡೀ ಆಕಾಶವನ್ನು ಆವರಿಸಿದ್ದರಿಂದ, ನೋಡನೋಡುತ್ತಿದ್ದಂತೆಯೇ ಹಗಲು ರಾತ್ರಿಯಂತೆ ಕಂಡುಬಂದಿದೆ. ಬೃಹತ್ ಗಾತ್ರದ ಹಳದಿ ಬಣ್ಣದ ಧೂಳಿನ ಗೋಡೆಯೊಂದು ನಗರದತ್ತ ನುಗ್ಗಿ ಬರುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಳಯಸದೃಶ ವಾತಾವರಣವನ್ನು ನೆನಪಿಸುವಂತಿದ್ದವು.
ಈ ಭೀಕರ ಧೂಳಿನ ಬಿರುಗಾಳಿಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ದೃಶ್ಯಗೋಚರತೆ (Visibility) ತೀವ್ರವಾಗಿ ಕುಸಿದಿತ್ತು. ಇಡೀ ನಗರವು ದಟ್ಟವಾದ ಧೂಳಿನ ಮಂಜಿನಿಂದ ಮುಚ್ಚಿಹೋಗಿದ್ದು, ವಾತಾವರಣವೆಲ್ಲಾ ಭಯಾನಕ ಹಳದಿ-ಕಂದು ಬಣ್ಣಕ್ಕೆ ತಿರುಗಿತ್ತು. ಇದರಿಂದಾಗಿ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸಬೇಕಾಯಿತು ಮತ್ತು ಅಪಘಾತದ ಭೀತಿಯಿಂದಾಗಿ ಜನರು ತಕ್ಷಣವೇ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದರು.

ಮಾರುಕಟ್ಟೆಗಳಲ್ಲಿ ಗೊಂದಲ, ಮುಚ್ಚಿದ ಅಂಗಡಿ ಮುಂಗಟ್ಟುಗಳು
ಏಕಾಏಕಿ ಅಪ್ಪಳಿಸಿದ ಬಿರುಗಾಳಿಯಿಂದಾಗಿ ಮಾರುಕಟ್ಟೆಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ವ್ಯಾಪಾರಿಗಳು ಗಡಿಬಿಡಿಯಿಂದ ತಮ್ಮ ಅಂಗಡಿಗಳ ಶಟರ್‌ಗಳನ್ನು ಎಳೆದುಕೊಂಡರೆ, ರಸ್ತೆಯಲ್ಲಿದ್ದ ಪಾದಚಾರಿಗಳು ಧೂಳಿನಿಂದ ರಕ್ಷಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದರು. ಬಿರುಗಾಳಿಯ ತೀವ್ರತೆಗೆ ನಗರದಾದ್ಯಂತ ಸಾಮಾನ್ಯ ಜನಜೀವನ ಸಂಪೂರ್ಣವಾಗಿ ಸ್ತಬ್ಧಗೊಂಡಿತು. ಬಲವಾದ ಗಾಳಿಗೆ ಹಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿದ್ದು, ಸ್ಥಳೀಯವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ವರದಿಯಾಗಿದೆ. ಯಾವುದೇ ಯಾರಿಗೂ ಘಂಬೀರ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಆದಾಗ್ಯೂ, ನಿವಾಸಿಗಳು ಜಾಗರೂಕರಾಗಿರಿ ಮತ್ತು ಮನೆಯೊಳಗೇ ಇರುವಂತೆ ಸೂಚಿಸಲಾಗಿದೆ.
ಬಿಕಾನೆರ್‌ನ ಈ ನಾಟಕೀಯ ದೃಶ್ಯಗಳು ಉತ್ತರ ಭಾರತದಾದ್ಯಂತ ವಿಶಾಲವಾದ ಹವಾಮಾನ ಪರಿವರ್ತನೆ ಜೊತೆ ಹೊಂದಿಕೆಯಾಗುತ್ತವೆ, ಅಲ್ಲಿ ಸುಡುವ ಶಾಖವು ಬಲವಾದ ಗಾಳಿ, ಧೂಳಿನ ಬಿರುಗಾಳಿಗಳು ಮತ್ತು ಪ್ರತ್ಯೇಕವಾದ ಗುಡುಗು ಸಹಿತ ಮಾನ್ಸೂನ್ ಪೂರ್ವ ಚಟುವಟಿಕೆಗೆ ಕಾರಣವಾಗಿದೆ.

ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ:
ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರ ಜಾಗರೂಕರಾಗಿರಬೇಕು ಮತ್ತು ಅನಗತ್ಯ ಪ್ರಯಾಣವನ್ನು ಕೈಗೊಳ್ಳಬಾರದು ಎಂದು ಹವಾಮಾನ ಇಲಾಖೆಯು ನಿವಾಸಿಗಳಿಗೆ ಕಟ್ಟುನಿಟ್ಟಿನ ಸಲಹೆ ನೀಡಿದೆ.
ಕಳೆದ 24 ಗಂಟೆಗಳಲ್ಲಿ ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಧೋಲ್‌ಪುರ ಜಿಲ್ಲೆಯ ಬಾರಿ ಎಂಬಲ್ಲಿ ಅತ್ಯಧಿಕ 58 ಮಿಮೀ ಮಳೆ ದಾಖಲಾಗಿದೆ.

ಜೈಪುರದ ಹವಾಮಾನ ಕೇಂದ್ರದ ಮುನ್ಸೂಚನೆಯ ಪ್ರಕಾರ, ಶನಿವಾರದಂದು ಬಿಕಾನೇರ್, ಜೈಪುರ, ಅಜ್ಮೀರ್, ಭರತ್‌ಪುರ, ಕೋಟಾ, ಜೋಧ್‌ಪುರ ಮತ್ತು ಉದಯಪುರ ವಿಭಾಗಗಳ ಹಲವು ಭಾಗಗಳಲ್ಲಿ ಗಂಟೆಗೆ 60 ರಿಂದ 70 ಕಿಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ತೀವ್ರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಇದರೊಂದಿಗೆ, ಕೆಲವು ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಇನ್ನು ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆ ಮತ್ತು ಸಿಡಿಲು ಬಡಿಯುವ ಸಾಧ್ಯತೆಯೂ ಇದೆ. ಹವಾಮಾನ ಇಲಾಖೆಯ ಪ್ರಕಾರ, ಮಧ್ಯಾಹ್ನದ ನಂತರ ಆರಂಭವಾಗುವ ಈ ಗುಡುಗು ಮತ್ತು ಮಳೆಯ ಪ್ರಕ್ರಿಯೆಯು ಮುಂದಿನ ನಾಲ್ಕರಿಂದ ಐದು ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಮುಂದುವರಿಯುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement