ನವದೆಹಲಿ : ನೈಋತ್ಯ ಮುಂಗಾರು ದೇಶದ ಬಹುತೇಕ ಭಾಗಗಳಿಗೆ ಅಧಿಕೃತವಾಗಿ ಪ್ರವೇಶಿಸಿದ್ದರೂ, ಮಧ್ಯ, ಪಶ್ಚಿಮ ಹಾಗೂ ವಾಯವ್ಯ ಭಾರತದ ವಿಶಾಲ ಪ್ರದೇಶಗಳಲ್ಲಿ ಅಸಾಮಾನ್ಯವಾಗಿ ಕಂಡುಬರುವ ಮೋಡರಹಿತ ವಾತಾವರಣ ಮುಂದುವರಿದಿದೆ. ಇತ್ತೀಚಿನ ಉಪಗ್ರಹ ಚಿತ್ರಗಳು ದೇಶದ ಬಹುಭಾಗದಲ್ಲಿ ವ್ಯಾಪಕ ಮಳೆ ಸುರಿಸುವ ದಟ್ಟ ಮಳೆಮೋಡಗಳು ಕಾಣಿಸದಿರುವುದನ್ನು ಸ್ಪಷ್ಟವಾಗಿ ತೋರಿಸಿವೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂಕಿಅಂಶಗಳ ಪ್ರಕಾರ, ಜೂನ್ 4ರಿಂದ ಜೂನ್ 26ರ ವರೆಗೆ ದೇಶದಲ್ಲಿ ವಾಡಿಕೆ ಮಳೆಗಿಂತ ಶೇ.45ರಷ್ಟು ಮಳೆಯ ಕೊರತೆ ದಾಖಲಾಗಿದೆ. ಮುಂಗಾರು ನಿಧಾನಗತಿಯಲ್ಲಿರುವುದು ಕೃಷಿ ಹಾಗೂ ನೀರಿನ ಲಭ್ಯತೆಯ ಮೇಲೂ ಆತಂಕ ಮೂಡಿಸಿದೆ.
ಗುರುವಾರ ಬೆಳಿಗ್ಗೆ ಸೆರೆಹಿಡಿದ INSAT-3DR ಇನ್ಫ್ರಾರೆಡ್ ಉಪಗ್ರಹ ಚಿತ್ರವು ಜೂನ್ ಅಂತ್ಯದ ವೇಳೆಗೆ ಭಾರತದ ಮೇಲೆ ಕಂಡುಬರುವ ಮೋಡದ ಚಿತ್ರಗಳನ್ನು ಅನಾವರಣಗೊಳಿಸಿದೆ. ಈ ಚಿತ್ರಗಳಲ್ಲಿ ಈಶಾನ್ಯ ರಾಜ್ಯಗಳು, ಉತ್ತರ ಬಂಗಾಳ ಕೊಲ್ಲಿ ಹಾಗೂ ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಮಾತ್ರ ದಟ್ಟ ಮೋಡಗಳ ಪಟ್ಟಿಗಳು ಗೋಚರಿಸುತ್ತಿದ್ದು, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ದೆಹಲಿ-ಎನ್ಸಿಆರ್ ಸೇರಿದಂತೆ ವಿಶಾಲ ಪ್ರದೇಶಗಳಲ್ಲಿ ಸಕ್ರಿಯ ಮುಂಗಾರು ಸಕ್ರಿಯವಾಗಲು ಬೇಕಾದ ಬಲವಾದ ಮಳೆಮೋಡಗಳು ಬಹುತೇಕವಾಗಿ ಕಾಣುತ್ತಿಲ್ಲ.
ಉಪಗ್ರಹ ಚಿತ್ರಗಳಿಗೆ ಅನುಗುಣವಾಗಿಯೇ ಮಳೆಯ ಹಂಚಿಕೆಯೂ ಕಂಡುಬಂದಿದೆ. ಭಾರತೀಯ ಹವಾಮಾನ ಇಲಾಖೆಯು ರಾಜ್ಯವಾರು ಮಳೆ ನಕ್ಷೆಯ ಪ್ರಕಾರ ಮಧ್ಯ ಮತ್ತು ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ವ್ಯಾಪಕ ಮಳೆ ಕೊರತೆ ಮುಂದುವರಿದಿದೆ. ಮಧ್ಯಪ್ರದೇಶದಲ್ಲಿ ಸಾಮಾನ್ಯ ಪ್ರಮಾಣದ ಅರ್ಧದಷ್ಟು ಮಾತ್ರ ಮಳೆಯಾಗಿದ್ದರೆ, ಉತ್ತರ ಪ್ರದೇಶ, ಬಿಹಾರ, ಒಡಿಶಾ, ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿಯೂ ಗಮನಾರ್ಹ ಪ್ರಮಾಣದ ಮಳೆ ಕೊರತೆ ಕಂಡುಬಂದಿದೆ ಎಂದು ಹೇಳಿದೆ. ಅತ್ಯಂತ ತೀವ್ರವಾಗಿ ಬಾಧಿತ ರಾಜ್ಯಗಳಲ್ಲಿ ಗುಜರಾತ್ ಪ್ರಮುಖವಾಗಿದ್ದು, ಈ ಅವಧಿಯಲ್ಲಿ ವಾಡಿಕೆಗಿಂತ ಸುಮಾರು ಶೇ.84ರಷ್ಟು ಕಡಿಮೆ ಮಳೆಯಾಗಿದೆ.
ಹವಾಮಾನ ತಜ್ಞರ ಪ್ರಕಾರ, ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಪ್ರಬಲ ಮುಂಗಾರು ವ್ಯವಸ್ಥೆಗಳು ರೂಪುಗೊಳ್ಳದಿರುವುದೇ ಮೋಡಗಳ ಕೊರತೆಗೆ ಪ್ರಮುಖ ಕಾರಣವಾಗಿದೆ. ಕಡಿಮೆ ಒತ್ತಡದ ಪ್ರದೇಶಗಳು ಭೂಭಾಗದತ್ತ ಚಲಿಸದ ಕಾರಣ ಮಳೆಯಾಗಲು ಬೇಕಾದ ತೇವಾಂಶದ ಸಾಗಣೆ ಸೀಮಿತಗೊಂಡಿದ್ದು, ಇದರಿಂದಾಗಿ ದೇಶದ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ಮಳೆ ವ್ಯಾಪಕವಾಗಿ ಕುಂಠಿತವಾಗಿದೆ.
ದೇಶದಲ್ಲಿ ಮುಂಗಾರು ದುರ್ಬಲವಾಗಿರುವುದಕ್ಕೆ ಸಮುದ್ರದಲ್ಲಿನ ತೇವಾಂಶದ ಕೊರತೆಯೇ ಕಾರಣವಲ್ಲ. ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎರಡರಲ್ಲೂ ಸಾಕಷ್ಟು ಪ್ರಮಾಣದ ನೀರಿನ ಆವಿ (ತೇವಾಂಶ) ಲಭ್ಯವಿದೆ. ಆದರೆ, ಭೂಮಿಯ ಮೇಲ್ಮೈಯಿಂದ ಹಲವು ಕಿಲೋಮೀಟರ್ ಎತ್ತರದಲ್ಲಿ ನಡೆಯುತ್ತಿರುವ ಬೃಹತ್ ಪ್ರಮಾಣದ ವಾತಾವರಣದ ಹಗ್ಗಜಗ್ಗಾಟ (Atmospheric Tug-of-War) ಈ ಸಮಸ್ಯೆಗೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ.
ವಾತಾವರಣದ ಮೇಲ್ಮಟ್ಟದಲ್ಲಿ ಅತಿ ವೇಗವಾಗಿ ಹರಿಯುವ ಪಶ್ಚಿಮದ ಗಾಳಿಯ ಪ್ರವಾಹವಾದ ವೆಸ್ಟರ್ಲಿ ಜೆಟ್ ಸ್ಟ್ರೀಮ್ (Westerly Jet Stream) ತನ್ನ ಸಾಮಾನ್ಯ ಸ್ಥಾನಕ್ಕಿಂತ ಹೆಚ್ಚು ದಕ್ಷಿಣದತ್ತ ಸರಿದಿದೆ. ಈ ಅಸಾಮಾನ್ಯ ಬದಲಾವಣೆಯು ಮುಂಗಾರು ಪರಿಚಲನೆಯನ್ನು (Monsoon Circulation) ಮುನ್ನಡೆಸುವ ಪ್ರಮುಖ ಶಕ್ತಿಯಾಗಿರುವ ಮೇಲ್ಮಟ್ಟದ ಪೂರ್ವದ ಜೆಟ್ ಸ್ಟ್ರೀಮ್ (Upper-Level Easterly Jet) ಅನ್ನು ದುರ್ಬಲಗೊಳಿಸುತ್ತಿದೆ ಹಾಗೂ ಅದರ ಚಲನೆಗೆ ಅಡ್ಡಿಪಡಿಸುತ್ತಿದೆ.
ಈ ಪೂರ್ವದ ಜೆಟ್ ಸ್ಟ್ರೀಮ್ ಸಾಮಾನ್ಯ ಪರಿಸ್ಥಿತಿಯಲ್ಲಿ ಗಾಳಿಯನ್ನು ಮೇಲಕ್ಕೆ ಏರುವಂತೆ ಪ್ರೇರೇಪಿಸುತ್ತದೆ. ಇದರಿಂದ ದೇಶದಾದ್ಯಂತ ವ್ಯಾಪಕ ಗುಡುಗು-ಸಹಿತ ಮಳೆಮೋಡಗಳು ರೂಪುಗೊಂಡು ಉತ್ತಮ ಮಳೆಯಾಗುತ್ತದೆ. ಆದರೆ, ದಕ್ಷಿಣದತ್ತ ಸರಿದಿರುವ ವೆಸ್ಟರ್ಲಿ ಜೆಟ್ ಸ್ಟ್ರೀಮ್ ಗಾಳಿಯು ಈ ಪ್ರಕ್ರಿಯೆಯನ್ನು ಹತ್ತಿಕ್ಕುತ್ತಿರುವುದರಿಂದ, ಕೆಳಭಾಗದಲ್ಲಿ ಸಾಕಷ್ಟು ತೇವಾಂಶವಿದ್ದರೂ ಮಳೆಮೋಡಗಳು ರೂಪುಗೊಳ್ಳುತ್ತಿಲ್ಲ. ಈ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತಿರುವ ಮತ್ತೊಂದು ಅಂಶವೆಂದರೆ ಜಾಗತಿಕ ಹವಾಮಾನದಲ್ಲಿನ ಬದಲಾವಣೆ. ತನ್ನ ಅಧಿಕೃತ ಮೌಲ್ಯಮಾಪನದಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು, ಸಾಗರಗಳ ಉಷ್ಣಾಂಶದಲ್ಲಿನ ಏರಿಕೆಯು ಪ್ರಾದೇಶಿಕ ಮುಂಗಾರು ಚಕ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದೆ.
“ಪ್ರಸ್ತುತ ಸಮಭಾಜಕ ವಲಯದ ಪ್ರಶಾಂತ ಮಹಾಸಾಗರದಲ್ಲಿ ಎಲ್ ನಿನೋ (El Niño) ಪರಿಸ್ಥಿತಿಗಳು ಅಸ್ತಿತ್ವದಲ್ಲಿದ್ದು, ಮುಂದಿನ ದಿನಗಳಲ್ಲಿ ಅವು ಇನ್ನಷ್ಟು ಬಲಗೊಳ್ಳುವ ನಿರೀಕ್ಷೆಯಿದೆ” ಎಂದು ಐಎಂಡಿ ತಿಳಿಸಿದೆ.
ಆದರೆ, ಈ ಸ್ಥಿತಿ ಶೀಘ್ರದಲ್ಲೇ ಬದಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಮಾದರಿಗಳು ಸೂಚಿಸಿವೆ. ಪ್ರಸ್ತುತ ಭೂಮಧ್ಯ ರೇಖೆಯ ಉತ್ತರ ಭಾಗದಲ್ಲಿರುವ ಪೂರ್ವ ಹಿಂದೂ ಮಹಾಸಾಗರದಲ್ಲಿ ದೊಡ್ಡ ಉಷ್ಣವಲಯದ ಹವಾಮಾನ ವ್ಯವಸ್ಥೆ ರೂಪುಗೊಳ್ಳುತ್ತಿದ್ದು, ಮುಂದಿನ ನಾಲ್ಕರಿಂದ ಏಳು ದಿನಗಳಲ್ಲಿ ಅದು ಉತ್ತರದತ್ತ ಚಲಿಸಿ ಬಂಗಾಳ ಕೊಲ್ಲಿಯನ್ನು ಪ್ರವೇಶಿಸುವ ಸಾಧ್ಯತೆ ಇದೆ. ಈ ವ್ಯವಸ್ಥೆ ಬಲಗೊಳ್ಳುತ್ತಿದ್ದಂತೆ ಅಪಾರ ಪ್ರಮಾಣದ ಉಷ್ಣವಲಯದ ತೇವಾಂಶವನ್ನು ಮುಂಗಾರು ಗಾಳಿಗಳಿಗೆ ಪೂರೈಸಲಿದ್ದು, ದೇಶದಾದ್ಯಂತ ಹೊಸ ಮಳೆಯ ಅಲೆಗೆ ಅಗತ್ಯವಾದ ಅನುಕೂಲಕರ ಪರಿಸ್ಥಿತಿಯನ್ನು ಸೃಷ್ಟಿಸಲಿದೆ ಎಂದು ಅದು ಹೇಳಿದೆ. ಇದರ ಜೊತೆಗೆ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಳ್ಳಲು ಸಹ ಅನುಕೂಲಕರ ವಾತಾವರಣ ನಿರ್ಮಾಣವಾಗುವ ನಿರೀಕ್ಷೆಯಿದೆ.
ಇದೇ ವೇಳೆ, ವಾತಾವರಣ ಮಾದರಿಗಳು ಪಶ್ಚಿಮ ಭಾರತದಲ್ಲಿ ಮಧ್ಯ ಟ್ರೋಪೋಸ್ಫಿಯರಿಕ್ ವರ್ಟೆಕ್ಸ್ (Middle-Tropospheric Vortex – MTV) ಎಂಬ ಹವಾಮಾನ ವ್ಯವಸ್ಥೆ ರೂಪುಗೊಳ್ಳುವ ಸಾಧ್ಯತೆಯನ್ನೂ ಸೂಚಿಸಿವೆ. ಈ ವ್ಯವಸ್ಥೆಯು ಸಾಮಾನ್ಯವಾಗಿ ಮಹಾರಾಷ್ಟ್ರ, ಗುಜರಾತ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂಗಾರು ಅವಧಿಯಲ್ಲಿ ಮಳೆಯ ತೀವ್ರತೆಯನ್ನು ಹೆಚ್ಚಿಸುವ ಲಕ್ಷಣ ಹೊಂದಿದೆ.
ಈ ಎಲ್ಲಾ ಹವಾಮಾನ ವ್ಯವಸ್ಥೆಗಳು ನಿರೀಕ್ಷೆಯಂತೆ ರೂಪುಗೊಂಡರೆ, ಸ್ಥಗಿತಗೊಂಡಿರುವ ಮುಂಗಾರು ಮತ್ತೆ ಚುರುಕುಗೊಂಡು, ಜುಲೈ ಮೊದಲ ವಾರದಲ್ಲಿ ವಾಯವ್ಯ ಭಾರತದ ಉಳಿದ ಭಾಗಗಳಿಗೂ ವೇಗವಾಗಿ ಮುನ್ನಡೆಯಲು ನೆರವಾಗಲಿದೆ. ಈ ಬೆಳವಣಿಗೆಗಳನ್ನು ಹವಾಮಾನ ತಜ್ಞರು ನಿಕಟವಾಗಿ ಗಮನಿಸುತ್ತಿದ್ದಾರೆ. ಆದಾಗ್ಯೂ, ಮುಂಗಾರು ಪುನಶ್ಚೇತನದ ನಿಖರ ಸಮಯ ಹಾಗೂ ಅದರ ತೀವ್ರತೆ ಮುಂದಿನ ಕೆಲವು ದಿನಗಳಲ್ಲಿ ಉಷ್ಣವಲಯದ ಈ ಹವಾಮಾನ ವ್ಯವಸ್ಥೆ ಹೇಗೆ ಬೆಳವಣಿಗೆ ಹೊಂದುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ