ಭಾರತದಲ್ಲಿ ಮುಸ್ಲಿಮರು ಇರಲೇಬಾರದು ಎನ್ನುವಾತ ಹಿಂದೂ ಅಲ್ಲ ; ಅಮೆರಿಕದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್

ನ್ಯೂಯಾರ್ಕ್: ರಾಷ್ಟ್ರಿಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ ಭಾಗವತ್ ಅವರು ಶನಿವಾರ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ‘ಒನ್ ವರ್ಲ್ಡ್: ಒನ್ ಹ್ಯೂಮ್ಯಾನಿಟಿ’ (ಒಂದು ವಿಶ್ವ: ಒಂದು ಮಾನವತೆ) ಧಾರ್ಮಿಕ ನಾಯಕರ ಸಮ್ಮೇಳನದಲ್ಲಿ ಮಾತನಾಡಿ, ವಿವಿಧ ಧರ್ಮಗಳ ನಡುವೆ ಏಕತೆ ಮತ್ತು ಸೌಹಾರ್ದತೆಯ ಅಗತ್ಯವನ್ನು ಒತ್ತಿ ಹೇಳಿದರು.
ವಿವಿಧ ಧರ್ಮಗಳ ನಾಯಕರ ಜೊತೆ ವೇದಿಕೆ ಹಂಚಿಕೊಂಡು ಮಾತನಾಡಿದ ಭಾಗವತ್, ಇಂದಿನ ದಿನಗಳಲ್ಲಿ ಧರ್ಮಗಳು ಹೆಚ್ಚಾಗಿ ಆಚರಣೆಗಳು ಮತ್ತು ವಿಧಿವಿಧಾನಗಳಿಂದ ಗುರುತಿಸಲ್ಪಡುತ್ತಿವೆ ಎಂದು ಹೇಳಿದರು. “ಧಾರ್ಮಿಕ ಶಿಸ್ತನ್ನು ಅನುಸರಿಸಿ ದೈವತ್ವದ ಮಾರ್ಗದಲ್ಲಿ ಸಾಗಲು ಈ ವಿಧಿವಿಧಾನಗಳು ಅಗತ್ಯವೇ ಸರಿ. ಆದರೆ ಧರ್ಮದ ಮೂಲ ಉದ್ದೇಶವೇನು? ಅದು ನಮ್ಮನ್ನು ಸತ್ಯದತ್ತ ಕೊಂಡೊಯ್ಯುತ್ತದೆ,” ಎಂದು ಅವರು ಹೇಳಿದರು.
“ನಾನು ಕಾರ್ಯನಿರ್ವಹಿಸುತ್ತಿರುವ ಸಮಾಜವು ಪರಂಪರೆಯಿಂದಲೇ ‘ಧರ್ಮಗಳು ವಿಭಿನ್ನವಾಗಿರಬಹುದು, ಆದರೆ ಮಾನವತೆ ಒಂದೇ’ ಎಂಬ ತತ್ವವನ್ನು ಸಾರುತ್ತದೆ. ಸತ್ಯ ಒಂದೇ ಆಗಿದ್ದು, ಮಾನವತೆ ಆ ಸತ್ಯದ ಅಭಿವ್ಯಕ್ತಿಯಾಗಿದೆ” ಎಂದು ಹೇಳಿದರು.
ಭಾರತದ ಪರಂಪರೆಗಳ ಮಹತ್ವ
ಸಮಾಜಕ್ಕೆ ಪ್ರಾಚೀನ ಪರಂಪರೆಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಭಾಗವತ್‌ ಹೇಳಿದರು. ಭಾರತದ ಪರಂಪರೆಗಳು ವಿದೇಶಿ ಆಕ್ರಮಣಗಳ ನಡುವೆಯೂ ಉಳಿದುಕೊಂಡಿವೆ. ಈ ಪರಂಪರೆಗಳೇ ‘ಒಂದು ವಿಶ್ವ, ಒಂದು ಮಾನವತೆ’ ಎಂಬ ಸಂದೇಶವನ್ನು ಜನರಿಗೆ ಕಲಿಸಿವೆ ಎಂದು ಅವರು ಅಭಿಪ್ರಾಯಪಟ್ಟರು.

‘ಹಿಂದೂ ರಾಷ್ಟ್ರ’ ಕುರಿತು ಸ್ಪಷ್ಟನೆ
2018ರಲ್ಲಿ ಕೆಲವು ಮುಸ್ಲಿಮರು ತಮ್ಮನ್ನು ‘ಆರ್‌ಎಸ್‌ಎಸ್‌ನ ಹಿಂದೂ ರಾಷ್ಟ್ರದ ಗುರಿ ಏನು?’ ಎಂದು ಪ್ರಶ್ನಿಸಿದ್ದನ್ನು ತಮ್ಮ ಭಾಷಣದಲ್ಲಿ ಭಾಗವತ್ ನೆನಪಿಸಿಕೊಂಡರು.
“ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಯಾವ ಹಿಂದುವಾದರೂ ಭಾವಿಸಿದರೆ, ಆತ ಹಿಂದೂ ಧರ್ಮದ ನಿಜವಾದ ಸಾರವನ್ನು ಅರ್ಥಮಾಡಿಕೊಂಡವನಲ್ಲ” ಎಂದು ಅವರು ಸ್ಪಷ್ಟವಾಗಿ ಹೇಳಿದರು.
. “ನೀವು ನಿಮ್ಮನ್ನು ಹಿಂದೂ ಎಂದು ಕರೆದುಕೊಳ್ಳಲು ಬಯಸಿದರೆ, ಎಲ್ಲಾ ಮಾರ್ಗಗಳು ಒಂದೇ (ಗುರಿಯ) ಕಡೆಗೆ ಕರೆದೊಯ್ಯುತ್ತವೆ ಎಂದು ನೀವು ನಂಬಬೇಕು. ಮತ್ತು ಪ್ರತಿಯೊಬ್ಬ ಮನುಷ್ಯನಿಗೂ ಘನತೆ ಇರುತ್ತದೆ. ಮನುಷ್ಯರ ನಡುವೆ ಯಾವುದೇ ವ್ಯತ್ಯಾಸವಿಲ್ಲ” ಎಂದು ಭಾಗವತ್ ಹೇಳಿದರು.
ನಂತರ ಅವರು ಒಂದು ಉದಾಹರಣೆಯನ್ನು ನೆನಪಿಸಿಕೊಂಡರು. “ನಾನು ಒಂದು ಉಪನ್ಯಾಸ ನೀಡಿದ್ದೆ, ಮತ್ತು ಮುಸ್ಲಿಂ ಸಹೋದರರು ಸಹ ಅಲ್ಲಿದ್ದರು. ಮತ್ತು ಅವರು ನನಗೆ ಒಂದು ಪ್ರಶ್ನೆ ಕೇಳಿದರು: ‘ನೀವು ಹಿಂದೂ ಸಂಘಟನೆ, ನೀವು ಹಿಂದೂ ರಾಷ್ಟ್ರ ಎಂದು ಹೇಳುತ್ತೀರಿ, ಮುಸ್ಲಿಮರ ಬಗ್ಗೆ ಏನು? ನೀವು ನಮ್ಮನ್ನು ಓಡಿಸುತ್ತೀರಾ?’ ಎಂದು ಪ್ರಶ್ನಿಸಿದರು. ನಾನು, ‘ಇಲ್ಲ, ಅದು ಹಿಂದುತ್ವವಲ್ಲ’ ಎಂದು ಹೇಳಿದೆ” ಎಂದು ಅವರು ನೆನಪಿಸಿಕೊಂಡರು.
ಹಿಂದೂ ಧರ್ಮದ ಮಾರ್ಗವನ್ನು ಅನುಸರಿಸಲು ಹಲವು ದಾರಿಗಳಿರಬಹುದು. ಆದರೆ ಅವೆಲ್ಲವೂ ಅಂತಿಮವಾಗಿ ಒಂದೇ ಸತ್ಯದತ್ತ ಕೊಂಡೊಯ್ಯುತ್ತವೆ. ಮಾನವರ ನಡುವೆ ಮೂಲಭೂತವಾಗಿ ಯಾವುದೇ ಭೇದವಿಲ್ಲ. ಪ್ರತಿಯೊಬ್ಬರಿಗೂ ಗೌರವಯುತ ಬದುಕಿನ ಹಕ್ಕು ಇದೆ ಎಂದು ಒತ್ತಿ ಹೇಳಿದರು.

ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳೊಂದಿಗೆ ಸಂವಾದ
ಭಾರತದಲ್ಲಿ ವಾಸಿಸುತ್ತಿರುವ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳೊಂದಿಗೆ ಆರ್‌ಎಸ್‌ಎಸ್ ಸಂವಾದ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಭಾಗವತ್ ತಿಳಿಸಿದರು.
“ಸಂವಾದವೇ ಮೊದಲ ಹೆಜ್ಜೆ. ಸೇವೆಯೂ ಮತ್ತೊಂದು ಪ್ರಮುಖ ಅಂಶ. ಆದರೆ ಅದು ಸಂವಾದದ ನಂತರ ನಡೆಯಬೇಕೆಂದೇನಿಲ್ಲ. ಎರಡೂ ಒಂದೇ ಸಮಯದಲ್ಲಿ ನಡೆಯಬೇಕು. ನಾವು ಸೇವೆ ಮಾಡುತ್ತಿದ್ದೇವೆ. ಸೇವೆ ಮಾಡುವಾಗ ಯಾವುದೇ ರೀತಿಯ ಭೇದಭಾವ ಮಾಡುವುದಿಲ್ಲ” ಎಂದು ಹೇಳಿದರು.
ಸಂಘದ ಕಾರ್ಯಗಳ ಬಗ್ಗೆ ತಪ್ಪು ಕಥನಗಳು ಮತ್ತು ತಪ್ಪು ಕಲ್ಪನೆಗಳು ನಿರ್ಮಾಣಗೊಂಡಿವೆ ಎಂದು ಹೇಳಿದ ಅವರು, “ಅದಕ್ಕಾಗಿಯೇ ಪ್ರಚಾರದ ವಿಷಯದಲ್ಲಿ ನಾವು ಹಿಂದೆ ಇದ್ದೇವೆ. ಆದರೆ ಜನರು ನಮ್ಮ ಕಾರ್ಯಗಳನ್ನು ನೇರವಾಗಿ ಬಂದು ಅರ್ಥಮಾಡಿಕೊಂಡಾಗ, ಆ ತಪ್ಪು ಕಲ್ಪನೆಗಳು ಬಹಳ ಬೇಗ ದೂರವಾಗುತ್ತವೆ,” ಎಂದು ಹೇಳಿದರು.

ಪ್ರಮುಖ ಸುದ್ದಿ :-   ವಿಡಿಯೋ | ನೇಪಾಳ ಭೀಕರ ಪ್ರವಾಹದ ಕೆಸರಿನಡಿ ಹೂತುಹೋಗಿದ್ದ 97ರ ವೃದ್ಧೆ; ಆದ್ರೂ ಸಾವನ್ನು ಗೆದ್ದು ಬಂದ ಗಟ್ಟಿಗಿತ್ತಿ !

ಆಧುನಿಕ ರಾಜಕೀಯದ ಕುರಿತೂ ಭಾಗವತ್ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯವು ಬಹುಮಟ್ಟಿಗೆ ಜನಾಭಿಪ್ರಾಯದ ಮೇಲೆ ಅವಲಂಬಿತವಾಗಿದೆ. ಯಾವುದೇ ರಾಜಕಾರಣಿಯೂ ಜನಾಭಿಪ್ರಾಯಕ್ಕೆ ಸಂಪೂರ್ಣ ವಿರುದ್ಧವಾಗಿ ನಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
“ಘಟನೆಗಳು ಸಂಭವಿಸುವ ಮುನ್ನವೇ ರಾಜಕೀಯದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವುದನ್ನು ನಾವು ಬಯಸುತ್ತೇವೆ. ಸರಿಯಾದ ದಿಕ್ಕಿನಲ್ಲಿ ರಾಜಕೀಯವನ್ನು ಪ್ರೇರೇಪಿಸಲು ಬಯಸುತ್ತೇವೆ. ಯುದ್ಧಗಳನ್ನು ತಡೆಯಲು ಹಾಗೂ ಸಮಾಜದ ಒಳಿತಿಗಾಗಿ ಕೆಲಸ ಮಾಡಲು ರಾಜಕೀಯದ ಮೇಲೆ ಪ್ರಭಾವ ಬೀರುವುದು ಕೆಲವೊಮ್ಮೆ ಅಗತ್ಯವಾಗುತ್ತದೆ” ಎಂದು ಹೇಳಿದರು.
ಆದರೆ ಧಾರ್ಮಿಕ ಸೌಹಾರ್ದತೆಯ ಕೊರತೆಗೆ ರಾಜಕೀಯವೂ ಒಂದು ಕಾರಣವಾಗಿದೆ ಎಂಬ ಅರ್ಥದಲ್ಲಿ ಮಾತನಾಡಿದ ಭಾಗವತ್, “ಕ್ಷಮಿಸಿ, ಆದರೆ ಸತ್ಯವೆಂದರೆ ರಾಜಕೀಯ ಇಂದು ಸ್ವಾರ್ಥದ ಆಟವಾಗಿ ಮಾರ್ಪಟ್ಟಿದೆ. ‘ನಾನು ಮತ್ತು ನನ್ನದು’ ಎನ್ನುವ ಮನೋಭಾವ ಇರುವಲ್ಲಿ ಪರಿಹಾರವಿಲ್ಲ. ‘ನಾವು ಮತ್ತು ನಮ್ಮದು’ ಎನ್ನುವ ಚಿಂತನೆಯೇ ಪರಿಹಾರ. ಭಾರತದಲ್ಲಿ ನಮ್ಮ ಅನುಭವವೇನೆಂದರೆ ಬದಲಾವಣೆ ಸಮಾಜದಿಂದಲೇ ಆರಂಭವಾಗಬೇಕು. ನಾವು ಈಗಾಗಲೇ ಆ ಕಾರ್ಯವನ್ನು ಆರಂಭಿಸಿದ್ದೇವೆ,” ಎಂದು ಹೇಳಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement