ಚೆನ್ನೈ: ತಮಿಳುನಾಡಿನ ತಿರುವಣ್ಣಾಮಲೈ ಪಟ್ಟಣದಲ್ಲಿ ಫೆಂಗಲ್ ಚಂಡಮಾರುತದ ನಂತರ ಮಣ್ಣು ಕುಸಿದಿರುವ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿವೆ. ವೀಡಿಯೊದಲ್ಲಿ ಕೆಸರು, ನೀರು ಮತ್ತು ಅವಶೇಷಗಳ ಮಿಶ್ರಣವು ಮೆಟ್ಟಿಲುಗಳ ಕೆಳಗೆ ಹರಿಯುವುದು ಮತ್ತು ಜನರ ಮನೆಗಳಿಗೆ ಪ್ರವೇಶಿಸುವುದು ಕಂಡುಬಂದಿದೆ. ಕೆಸರು ನೀರಿನ ಪ್ರವಾಹ ದುರ್ಬಲಗೊಳ್ಳುವ ವರೆಗೂ ಅದು ತನ್ನ ದಾರಿಯಲ್ಲಿ ಬರುವ ಪ್ರತಿಯೊಂದು ವಸ್ತುವನ್ನು ತನ್ನೊಂದಿಗೆ ಎಳೆದೊಯ್ಯುವುದನ್ನು ಕಾಣಬಹುದು.
ತಮಿಳುನಾಡಿನ ತಿರುವಣ್ಣಾಮಲೈ ಪಟ್ಟಣದಲ್ಲಿ ಭಾರೀ ಮಳೆಯಾಗಿದೆ. ಈ ದೃಶ್ಯಾವಳಿ ಭಾನುವಾರ ತಿರುವಣ್ಣಾಮಲೈನಿಂದ ಒಂದು ಕಿಮೀ ದೂರದ ಪಾವಲ ಕುಂಡ್ರು ಪ್ರದೇಶಕ್ಕೆ ಸಂಬಂಧಿಸಿದೆ ಎನ್ನಲಾಗಿದೆ. ತಿರುವಣ್ಣಾಮಲೈ ಪ್ರದೇಶದಲ್ಲಿ ಗುಡ್ಡದ ತುದಿಯಿಂದ ಬಂಡೆಯೊಂದು ಉರುಳಿ ಭೂಕುಸಿತ ಉಂಟಾಗಿ ಮಣ್ಣು ಮನೆಯ ಮೇಲೆ ಬಿದ್ದು ಏಳು ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಫೆಂಗಲ್ ಚಂಡಮಾರುತ ಸೋಮವಾರ ದುರ್ಬಲಗೊಂಡ ನಂತರವೂ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 10 ಜನರು ಸಾವಿಗೀಡಾಗಿದ್ದಾರೆ.
ಧಾರಾಕಾರ ಮಳೆಗೆ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ರಸ್ತೆಗಳು ಹಾಳಾಗಿವೆ. ತಮಿಳುನಾಡು ಸರ್ಕಾರದ ಅಂದಾಜಿನ ಪ್ರಕಾರ, ಚಂಡಮಾರುತವು 14 ಜಿಲ್ಲೆಗಳಲ್ಲಿ ಅಭೂತಪೂರ್ವ ವಿನಾಶವನ್ನು ಉಂಟುಮಾಡಿದೆ. ರಸ್ತೆಗಳು, ವಿದ್ಯುತ್ ಮಾರ್ಗಗಳನ್ನು ಹಾನಿಗೊಳಿಸಿದೆ ಮತ್ತು ಭಾರೀ ಪ್ರವಾಹವನ್ನು ಉಂಟುಮಾಡಿದೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರಾಜ್ಯದ ಪರಿಸ್ಥಿತಿಯ ಅವಲೋಕನ ಮಾಡಿದ್ದಾರೆ. ಅವರು ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ್ದರು ಮತ್ತು ಚಂಡಮಾರುತದಿಂದ ಉಂಟಾದ ಹಾನಿಯನ್ನು ಮೌಲ್ಯಮಾಪನ ಮಾಡಿದರು. ಭೂಕುಸಿತದಿಂದ ಮೃತಪಟ್ಟ ಕುಟುಂಬದವರಿಗೆ ₹ 5 ಲಕ್ಷ ಪರಿಹಾರ ಮತ್ತು ವಿಲ್ಲುಪುರಂ, ಕಡಲೂರು ಮತ್ತು ಕಲ್ಲಕುರಿಚಿ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರತಿ ಕುಟುಂಬಕ್ಕೆ ₹ 2,000 ಪರಿಹಾರವನ್ನು ಅವರು ಘೋಷಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ