ಇಸ್ಲಾಮಾಬಾದ್/ನವದೆಹಲಿ: ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನ ಮತ್ತೊಮ್ಮೆ ಮುಖಭಂಗಕ್ಕೀಡಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ಭಾರತ ನಡೆಸಿದ ʼಆಪರೇಶನ್ ಸಿಂಧೂರʼ ಕಾರ್ಯಾಚರಣೆಯ ‘ನಿಖರ ವೈಮಾನಿಕ ದಾಳಿ’ಯಿಂದ (Precision Strikes) ತನ್ನ ಸೇನಾ ನೆಲೆಗಳಿಗೆ ಭಾರಿ ಹಾನಿಯಾಗಿರುವುದನ್ನು ಪಾಕಿಸ್ತಾನ ಕೊನೆಗೂ ಒಪ್ಪಿಕೊಂಡಿದೆ.
ಶನಿವಾರ ನಡೆದ ವರ್ಷಾಂತ್ಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಮತ್ತು ಉಪ ಪ್ರಧಾನಿ ಇಶಾಕ್ ದಾರ್ ಅವರು, ರಾವಲ್ಪಿಂಡಿಯ ಚಕಲಾದಲ್ಲಿರುವ ‘ನೂರ್ ಖಾನ್ ವಾಯುನೆಲೆ’ ಮೇಲೆ ಭಾರತೀಯ ಡ್ರೋನ್ಗಳು ದಾಳಿ ನಡೆಸಿರುವುದನ್ನು ಖಚಿತಪಡಿಸಿದ್ದಾರೆ.
36 ಗಂಟೆಗಳಲ್ಲಿ 80 ಡ್ರೋನ್ ದಾಳಿ:
ಭಾರತವು ಕೇವಲ 36 ಗಂಟೆಗಳ ಅವಧಿಯಲ್ಲಿ ಪಾಕಿಸ್ತಾನದತ್ತ ಕನಿಷ್ಠ 80 ಡ್ರೋನ್ಗಳನ್ನು ಕಳುಹಿಸಿತ್ತು. “ನಾವು 79 ಡ್ರೋನ್ಗಳನ್ನು ಹೊಡೆದುರುಳಿಸಿದೆವು, ಆದರೆ ಒಂದು ಡ್ರೋನ್ ಸೇನಾ ನೆಲೆಯ ಮೇಲೆ ಬಿದ್ದು ಅಲ್ಲಿನ ಸಿಬ್ಬಂದಿಗೆ ಗಾಯವಾಗಿದೆ ಮತ್ತು ವಾಯು ನೆಲೆಗೆ ಹಾನಿಯಾಗಿದೆ” ಎಂದು ದಾರ್ ತಿಳಿಸಿದ್ದಾರೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ (26 ನಾಗರಿಕರ ಸಾವು) ಭಾರತ ಪ್ರತೀಕಾರವಾಗಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕ ನೆಲೆಗಳ ಮೇಲೆ ಕಾರ್ಯಾಚರಣೆ ಕೈಗೊಂಡಿತ್ತು. ಮೇ 7 ರಂದು ಆರಂಭವಾದ ಈ ಕಾರ್ಯಾಚರಣೆಯಲ್ಲಿ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (PoJK) 9 ಭಯೋತ್ಪಾದನಾ ಶಿಬಿರಗಳನ್ನು ಧ್ವಂಸಗೊಳಿಸಿತ್ತು.
ಉಪಗ್ರಹ ಚಿತ್ರಗಳಿಂದ ಸಾಕ್ಷ್ಯ:
ಮ್ಯಾಕ್ಸರ್ ಟೆಕ್ನಾಲಜೀಸ್ (Maxar Technologies) ಮೇ 13 ರಂದು ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳು ಪಾಕಿಸ್ತಾನದ ನಾಲ್ಕು ಪ್ರಮುಖ ವಾಯುನೆಲೆಗಳಾದ ನೂರ್ ಖಾನ್, ಮುಷಾಫ್, ಭೋಲಾರಿ ಮತ್ತು ಶಹಬಾಜ್ ನೆಲೆಗಳಿಗೆ ತೀವ್ರ ಹಾನಿಯಾಗಿರುವುದನ್ನು ಸಾಬೀತುಪಡಿಸಿದ್ದವು. ಆರಂಭದಲ್ಲಿ ನಿರಾಕರಿಸಿದ್ದ ಪಾಕಿಸ್ತಾನ, ಈಗ ಅಧಿಕೃತವಾಗಿ ಹಾನಿಯನ್ನು ಒಪ್ಪಿಕೊಂಡಿದೆ.
ಭಾರತದ ಆಕ್ರಮಣಕಾರಿ ದಾಳಿಯಿಂದ ಕಂಗೆಟ್ಟಿದ್ದ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO), ಭಾರತದ ಡಿಜಿಎಂಒ (DGMO)ಗೆ ಕರೆ ಮಾಡಿ ಕದನ ವಿರಾಮ ಪ್ರಸ್ತಾಪಿಸಿದ್ದರು. ಇದನ್ನು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಕೂಡ ಈ ಹಿಂದೆ ಖಚಿತಪಡಿಸಿದ್ದರು.
ಈ ಹಿಂದೆ ಪಾಕ್ ಪ್ರಧಾನಿ ಶಹಬಾಜ್ ಶರೀಫ್ ಕೂಡ ಮೇ 10ರಂದು ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ತಮ್ಮ ವಾಯುನೆಲೆಗಳಿಗೆ ಅಪ್ಪಳಿಸಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದರು. ಮೇ 16 ರಂದು ಪಾಕಿಸ್ತಾನ ಸ್ಮಾರಕದಲ್ಲಿ ನಡೆದ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಷರೀಫ್, “ಮೇ 10 ರಂದು ಬೆಳಗಿನ ಜಾವ 2:30 ರ ಸುಮಾರಿಗೆ, ಜನರಲ್ ಸೈಯದ್ ಅಸಿಮ್ ಮುನೀರ್ ನನಗೆ ಸುರಕ್ಷಿತ ಮಾರ್ಗದಲ್ಲಿ ಕರೆ ಮಾಡಿ ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ನೂರ್ ಖಾನ್ ವಾಯುನೆಲೆ ಮತ್ತು ಇತರ ಪ್ರದೇಶಗಳನ್ನು ಹೊಡೆದಿವೆ ಎಂದು ಹೇಳಿದ್ದರು.
ಸದಾ ಭಾರತದ ಮಿಲಿಟರಿ ಸಾಧನೆಗಳನ್ನು ಅಲ್ಲಗಳೆಯುವ ಪಾಕಿಸ್ತಾನಕ್ಕೆ ಈಗ ತನ್ನದೇ ಸಚಿವರ ಹೇಳಿಕೆಗಳು ಭಾರೀ ಮುಜುಗರ ತಂದಿವೆ.


ನಿಮ್ಮ ಕಾಮೆಂಟ್ ಬರೆಯಿರಿ