ಹೊನ್ನಾವರ : ಪ್ರಸಿದ್ಧ ಯಕ್ಷಗಾನ ವೇಷಧಾರಿ ಕಪ್ಪೆಕೆರೆ ಮಹಾದೇವ ಹೆಗಡೆ ನಿಧನ

ಹೊನ್ನಾವರ : ಬಡಗು ತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಪ್ಪೆಕೆರೆ ಮಹಾದೇವ ಹೆಗಡೆ(74) ಮಂಗಳವಾರ ರಾತ್ರಿ (ಜುಲೈ 9) ಹೊನ್ನಾವರದಲ್ಲಿ ನಿಧನರಾದರು.
ಮೃತರು ಪತ್ನಿ, ನಾಲ್ವರು ಪುತ್ರರನ್ನು ಅಗಲಿದ್ದಾರೆ. ಪ್ರಸಿದ್ಧ ಭಾಗವತರಾದ ಅಣ್ಣ ಕಪ್ಪೆಕೆರೆ ಸುಬ್ರಾಯ ಹೆಗಡೆ ಅವರಿಂದ ಯಕ್ಷಗಾನ ಕಲಿತು, ನಂತರ ಯಕ್ಷಗಾನದ ದಿಗ್ಗಜ ಕೆರೆಮನೆ ಮಹಾಬಲ ಹೆಗಡೆ ಅವರ ಗರಡಿಯಲ್ಲಿ ಶ್ರೇಷ್ಠ ಕಲಾವಿದರಾಗಿ ರೂಪುಗೊಂಡಿದ್ದ ಅವರು ಪ್ರತಿನಾಯಕ ಹಾಗೂ ನಾಯಕ ಎರಡೂ ಬಗೆಯ ಪಾತ್ರಗಳನ್ನೂ ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸುತ್ತಿದ್ದರು.
ಹೊನ್ನಾವರ ತಾಲೂಕಿನ ಹಡಿನಬಾಳ ಎಂಬಲ್ಲಿ 1950ರಲ್ಲಿ ‌ಈಶ್ವರ ಹೆಗಡೆ ಮತ್ತು ಗೋಪಿ ದಂಪತಿ ಪುತ್ರನಾಗಿ ಜನಿಸಿದ ಮಹಾದೇವ ಹೆಗಡೆ ತಮ್ಮ 18ನೇ ವಯಸ್ಸಿನಲ್ಲಿ ಬಣ್ಣದ ಲೋಕ ಪ್ರವೇಶಿಸಿದ್ದರು. ಅವರ ಅಣ್ಣ ಕಪ್ಪೆಕೆರೆ ಸುಬ್ರಾಯ ಹೆಗಡೆ ಹೆಸರಾಂತ ಭಾಗವತರು. ಯಕ್ಷಗಾನ ಕಲಾವಿದರ ಪ್ರೇರಣಾ ಸ್ಥಳವಾದ ಗುಂಡಬಾಳ ಮೇಳದಿಂದ ಹಿಡಿದು
ಇಡಗುಂಜಿ, ಬಚ್ಚಗಾರು, ಶಿರಸಿ, ಪಂಚಲಿಂಗ, ಮಂದಾರ್ತಿ, ಕಮಲಶಿಲೆ ಮೊದಲಾದ ಮೇಳಗಳಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಬಣ್ಣ ಹಚ್ಚಿದ್ದರು. ಶಿರಸಿ ಮೇಳದಲ್ಲಿ ವ್ಯವಸ್ಥಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು.
ವಿಶೇಷವಾಗಿ ಪ್ರತಿನಾಯಕ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ಅವರು ಕೆಲವು ಪಾತ್ರಗಳಿಗೆ ಮಹಾದೇವ ಹೆಗಡೆಯವರೇ ಸಾಕ್ಷಿ ಎಂಬಷ್ಟು ಆ ಪಾತ್ರಗಳಿಗೆ ಹೆಸರಾಗಿದ್ದರು. ಮಹೋಗ್ರ, ಜಮದಗ್ನಿ, ರಾವಣ, ಮಾಗಧ, ವಿಶ್ವಾಮಿತ್ರ ಭೀಮ, ವಲಲ, ಸುಗ್ರೀವ, ವಾಲಿ, ರಾಮ, ಶತ್ರುಘ್ನ ಮುಂತಾದ ಪಾತ್ರಗಳ ಮೂಲಕ ಹೆಸರು ಪಡೆದಿದ್ದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದರು.

ಪ್ರಮುಖ ಸುದ್ದಿ :-   ಯುವತಿಯರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ; ವೀಡಿಯೊ ಮಾಡಿ ಬೆದರಿಸುತ್ತಿದ್ದ ಆರೋಪಿಗಳ ಬಂಧನ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement